Thursday, January 6, 2011

ಬಹು ಮುಖ ಪ್ರತಿಭೆಯ ಸಾಯಿ ಬಂಧು - ಸಾಯಿಬಿಂದು ಶ್ರೀ.ಹೆಚ್.ವಿ.ಶ್ರೀನಿವಾಸ್ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿಬಿಂದು ಶ್ರೀ.ಹೆಚ್.ವಿ.ಶ್ರೀನಿವಾಸ್ 

ಬಹು ಮುಖ ಪ್ರತಿಭೆಯುಳ್ಳ ಸಾಯಿಬಿಂದು ಶ್ರೀ.ಹೆಚ್.ವಿ.ಶ್ರೀನಿವಾಸ್ ರವರು 1943 ನೇ ಇಸವಿಯಲ್ಲಿ ಶಿರಾ ತಾಲ್ಲೂಕಿನ ಕಾಳಾಪುರದಲ್ಲಿ ಶ್ರೀ.ಹೊಸಕೆರೆ ವೆಂಕಟಕೃಷ್ಣಯ್ಯ ಮತ್ತು ಶ್ರೀಮತಿ.ನಾಗವೇಣಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರದ್ದು ಸಂಪ್ರದಾಯಸ್ಥ ಮನೆತನವಾಗಿದ್ದರೂ ಕೂಡ ವಿಚಾರ, ಚಿಂತನೆಗಳಲ್ಲಿ ನವ್ಯತೆಯನ್ನು ಅಳವಡಿಸಿಕೊಂಡಿದ್ದ ಶಾಲಾ ಅಧ್ಯಾಪಕರ ಕುಟುಂಬವಾಗಿತ್ತು. ಆದ ಕಾರಣ ಬಾಲ್ಯದಿಂದಲೇ ಆಧ್ಯಾತ್ಮಿಕ ವಿಚಾರಗಳು ಇವರ ಮನದಲ್ಲಿ ಸುಳಿದಾಡುತ್ತಿದ್ದವು. ಅವು 1978 ರಲ್ಲಿ ಸದ್ಗುರು ಶಂಕರಲಿಂಗ ಭಗವಾನರ ಸಮಾಧಿ ದರ್ಶನ ಪಡೆಯಲು ಹೋದ ಸ್ಥಳದಲ್ಲಿ ಪ್ರಬುದ್ದವಾಗಿ ಬೆಳಕು ಕಾಣಲು ಪ್ರಾರಂಭಿಸಿತು. ಗುರುಮಾತೆ, ಪುಣ್ಯಜೀವಿ ಹಾಗೂ ಶಂಕರ ಲಿಂಗ ಭಗವಾನರ ಪರಮ ಆಪ್ತ ಶಿಷ್ಯೆಯಾದ ಜಾನಕ್ಕರವರ ಸಾನಿಧ್ಯದಲ್ಲಿ ಅಗಾಧವಾದ ಮಾತೃ ಪ್ರೇಮವನ್ನು ಪಡೆದು, ಆ ದಿನ ಕೊಮಾರನಹಳ್ಳಿಯ ಆ ಪುಣ್ಯಸ್ಥಳದಲ್ಲಿ ಆಧ್ಯಾತ್ಮ ಜಗತ್ತಿಗೆ ಕಾಲಿರಿಸಿದ ಸಾಯಿಬಿಂದು ಶ್ರೀನಿವಾಸ್ ರವರು ಅಲ್ಲಿಂದ ಹಿಂತಿರುಗಿ ನೋಡುವ ಗೋಜಿಗೆ ಹೋಗಲಿಲ್ಲ. 


ಸಾಯಿಬಿಂದು ಶ್ರೀನಿವಾಸ್ ರವರು ಬಿ.ಕಾಂ ಮತ್ತು ಚಾರ್ಟರ್ಡ್ ಅಕೌನ್ಟೆಂಟ್ ಪದವಿಯನ್ನು ಅಭ್ಯಾಸ ಮಾಡಿ ನಂತರ 28 ವರ್ಷಗಳ ಕಾಲ ಕೆನರಾ ಬ್ಯಾಂಕ್ ನಲ್ಲಿ ವಿವಿಧ ಪ್ರತಿಷ್ಟಿತ ಹುದ್ದೆಗಳನ್ನು ಅಲಂಕರಿಸಿದ್ದರು. 1996 ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದು ಆಧ್ಯಾತ್ಮಿಕ ರಂಗದತ್ತ ತಮ್ಮ ದೃಷ್ಟಿಯನ್ನು ಹರಿಸಿದರು. ಕೆನರಾ ಬ್ಯಾಂಕ್ ನಲ್ಲಿ ಇವರ ಸೇವಾ ಅವಧಿಯಲ್ಲಿ ಅನೇಕ ಅಸ್ವಸ್ಥ ಕೈಗಾರಿಕೆಗಳ ಪುನಶ್ಚೇತನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಷ್ಟೇ ಅಲ್ಲದೇ, ಇವರು ಕೆನರಾ ಬ್ಯಾಂಕ್ ನ ನೌಕರರ ತರಬೇತಿ ಸಂಸ್ಥೆಯಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಸೇವಾ ಅವಧಿಯಲ್ಲಿ ಮತ್ತು ಈಗಲೂ ಕೂಡ ಹಣಕಾಸು, ಆಡಳಿತ ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯಗಳ ಬಗ್ಗೆ ಅನೇಕ ಕಾರ್ಯಾಗಾರಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ ಮತ್ತು ನಡೆಸಿಕೊಡುತ್ತಲೂ ಬಂದಿದ್ದಾರೆ. ಇವರು ಭಾರತೀಯ ಶಿಕ್ಷಣ ಮಂಡಲದ ಉಪಾಧ್ಯಕ್ಷರಾಗಿ 2004 ರಿಂದ 2006 ರ ವರೆಗೆ ಸೇವೆಯನ್ನು ಸಲ್ಲಿಸಿದ್ದಾರೆ. ವಿಚಾರ ಮುಕ್ತ ಸಭಾದ ಆಜೀವ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದುವರೆಗೂ ಇವರು ಬೇರೆ ಬೇರೆ ವಿಷಯಗಳ ಬಗ್ಗೆ 11 ಪುಸ್ತಕಗಳನ್ನು ಬರೆದಿದ್ದಾರೆ. ತತ್ವ ಶಾಸ್ತ್ರದ ವಿಷಯಗಳ ಬಗ್ಗೆ 25ಕ್ಕೂ ಹೆಚ್ಚು ವರ್ಣರಂಜಿತ ಚಿತ್ರಗಳನ್ನು ಸ್ವತಃ ರಚಿಸಿ ಅದನ್ನು ತಮ್ಮ ಉಪನ್ಯಾಸ ಕಾರ್ಯಕ್ರಮಗಳ ಸಮಯದಲ್ಲಿ ಬಳಸಿ ಅದರ ಮುಖಾಂತರ ತಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಹೇಳುವುದು ಇವರ ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ. ವಿವಿಧ ವಿಷಯಗಳಾದ ವಾಣಿಜ್ಯ,ಉದ್ಯಮ,ನಾಯಕತ್ವ, ಮೌಲ್ಯಾಧಾರಿತ ಬದುಕು, ಆಡಳಿತ, ಜೀವನ, ಕೆಲಸ, ಶಿಕ್ಷಣ, ದೇವಿ-ದೇವರುಗಳು, ಧರ್ಮ, ಜಪ, ಧ್ಯಾನ, ಮೌನ, ನಿತ್ಯ ಜೀವನದಲ್ಲಿ ತತ್ವ ದರ್ಶನ, ಮಾನವನ ನಾಲ್ಕನೆಯ ಆಯಾಮ, ಮಾನಸಿಕ ಒತ್ತಡಗಳ ನಿರ್ವಹಣೆ ಮತ್ತು ಮನೋವಿಕಾಸ, ದ್ವೈತಾದ್ವೈತ ದರ್ಶನ, ಸಂಸ್ಕೃತಿ-ಜಾಗೃತಿ, ಸತ್ಯ-ಧರ್ಮ ಸಮನ್ವಯ ಮತ್ತು ಇನ್ನು ಹಲವಾರು ವಿಷಯಗಳನ್ನು ಕುರಿತು ಅನೇಕ ಸಂಘ ಸಂಸ್ಥೆಗಳಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡುತ್ತಾ ಉತ್ತಮ ವಾಗ್ಮಿಗಳೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ, ದೂರದರ್ಶನ ಮತ್ತು ಖಾಸಗಿ ವಾಹಿನಿಗಳಲ್ಲಿ ಅನೇಕ ವಿಷಯಗಳ ಬಗ್ಗೆ ತಮ್ಮ ಸಂದರ್ಶನಗಳನ್ನು ನೀಡಿದ್ದಾರೆ.

ಸಾಯಿಬಿಂದು ಶ್ರೀಯುತ.ಶ್ರೀನಿವಾಸ್ ರವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಲೇಖಕರು - ಕೃತಿಗಳು: 

ಇವರು "ಸಾಯಿಬಿಂದು" ಎಂಬ ನಾಮಾಂಕಿತದೊಂದಿಗೆ "ಸಾಯಿ ಸಮಾಗಮ" ಎಂಬ ತಮ್ಮದೇ ಆದ ಸ್ವಂತ ಪ್ರಕಾಶನ ಸಂಸ್ಥೆಯ ಮುಖಾಂತರ ಇದುವರೆಗೂ ವಿವಿಧ ವಿಷಯಗಳ ಬಗ್ಗೆ 11 ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಪುಸ್ತಕಗಳಿಗೆ ಅನೇಕ ಗಣ್ಯರಿಂದ ಮತ್ತು ಪತ್ರಿಕೆಗಳಿಂದ ಒಳ್ಳೆಯ ವಿಮರ್ಶೆ, ಪ್ರಶಂಸೆ ಮತ್ತು ಪ್ರಶಸ್ತಿಗಳು ಬಂದಿರುತ್ತವೆ. ಈ ಪುಸ್ತಕಗಳ ಹೆಸರನ್ನು ಈ ಕೆಳಗೆ ಕೊಡಲಾಗಿದೆ. 

1.ಬ್ಯಾಂಕರ್ಸ್ ಹ್ಯಾಂಡ್ ಬುಕ್ ಆಫ್ ಕ್ರೆಡಿಟ್ ಮ್ಯಾನೇಜಮೆಂಟ್ (1984).
2.ಸೈಂಟಿಫಿಕ್ ಮ್ಯಾನೇಜಮೆಂಟ್ - ಸ್ಪಿರಿಚ್ಯುಯಲ್ ವೇ (1999).
3.ಡಿಸ್ಕವರಿ ಆಫ್ ಸೆಲ್ಫ್ (2003 ಪುನರಾವೃತ್ತಿ).
4.ನಾನು ಮುಕ್ತಿ ಪಡೆಯಬಹುದೇ? (1987).
5.ಅಮ್ಮನ ಮಡಿಲಲ್ಲಿ (1993).
6.ಶ್ರೀ.ಅರಬಿಂದೋರವರ ಸಾವಿತ್ರಿ (ಕಿರು ಪರಿಚಯ).
7.ಭಾವನ - ಚಿಂತನ - ವಿಕಸನ (2005).
8.ಉಲ್ಲಾಸ - ಉತ್ಕರ್ಷ (ನುಡಿ ಮಿಂಚುಗಳು) (2005).
9.ಶ್ರೀ ಗುರುಕೃಪಾಧಾರೆ  (2006).
10.ವಿಶ್ವಬಂಧು -ಸಾಯಿ (2007).
11.ಶಿವ ಶಕ್ತಿ ಲಾಸ್ಯ ತರಂಗ (2009)

ಇವಲ್ಲದೆ, ಸುಂದರ ಪ್ರಕಾಶನದ ಸಂಚಿಕೆಯಲ್ಲಿ ಎಸ್.ಎಲ್.ಭೈರಪ್ಪನವರ "ಆವರಣ" ಕಾದಂಬರಿಯ ವಿಮರ್ಶೆಯನ್ನು ಮಾಡಿರುತ್ತಾರೆ. ಅಲ್ಲದೇ, ಶ್ರೀ.ಜಿ.ವಿ.ಅಯ್ಯರ್ ರವರ ಸ್ಮರಣ ಸಂಚಿಕೆಯಲ್ಲಿ ಲೇಖನವನ್ನು ಬರೆದಿರುತ್ತಾರೆ. 

ದೂರದರ್ಶನ ಮತ್ತು ಖಾಸಗಿ ವಾಹಿನಿಗಳಲ್ಲಿ ಸಂದರ್ಶನ ಕಾರ್ಯಕ್ರಮ:          
1. ಉದಯ ಚಾನೆಲ್ ನಲ್ಲಿ ಪರಿಚಯ ಕಾರ್ಯಕ್ರಮ.
2. ಕಾವೇರಿ ಕನ್ನಡ ಚಾನೆಲ್ ನಲ್ಲಿ ಪರಿಚಯ ಕಾರ್ಯಕ್ರಮ.
3. ಸಿಟಿ ಚಾನೆಲ್ ನ ನೇರ ಪ್ರಸಾರ ಕಾರ್ಯಕ್ರಮ "ವೇದಿಕೆ" ಯಲ್ಲಿ ಮಾನಸಿಕ ಒತ್ತಡಗಳ ನಿರ್ವಹಣೆ ಮತ್ತು ಮನೋವಿಕಾಸ ಕುರಿತು ಸಂದರ್ಶನ.
4. ದೂರದರ್ಶನ ಚಂದನದ ಬೆಳಗಿನ ಕಾರ್ಯಕ್ರಮ "ಬೆಳಗು" ಕಾರ್ಯಕ್ರಮದಲ್ಲಿ ನೇರ ಸಂದರ್ಶನ.

ಉಪನ್ಯಾಸ ಕಾರ್ಯಕ್ರಮ:

ಭಾರತದಲ್ಲಿ ಅಷ್ಟೇ ಅಲ್ಲದೇ, 2004 ರಲ್ಲಿ ಅಮೇರಿಕಾ ಪ್ರವಾಸ ಮಾಡಿ ಅಲ್ಲಿ ಅನೇಕ ಕಡೆಗಳಲ್ಲಿ ಆಡಳಿತ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ದೂರದರ್ಶನ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳು:

1. ದೂರದರ್ಶನದಲ್ಲಿ ಪ್ರಸಾರವಾದ "ಸಂತಪ್ತ" ಧಾರಾವಾಹಿಯಲ್ಲಿ "ಅಗ್ನಿಹೋತ್ರಿ" ಎಂಬ ಪ್ರಮುಖ ಪಾತ್ರದ ನಿರ್ವಹಣೆ.
2. ಶ್ರೀ ಶಂಕರ ಚಾನೆಲ್ ನಲ್ಲಿ ಪ್ರಸಾರವಾದ "ಜ್ವಾಲಾಮುಖಿ" ಎಂಬ ಧಾರಾವಾಹಿಯಲ್ಲಿ ಪ್ರಧಾನ ಪಾತ್ರ ನಿರ್ವಹಣೆ.
3. ದೂರದರ್ಶನ ಚಂದನದ ವತಿಯಿಂದ 1ನೇ ನವೆಂಬರ್ 2008 ರಂದು ರಾಜ್ಯೋತ್ಸವದ ಅಂಗವಾಗಿ  ಪ್ರಸಾರವಾದ ವಿಶೇಷ ಕಾರ್ಯಕ್ರಮ "ನುಡಿ ನಮನ" ದಲ್ಲಿ ಪ್ರಧಾನ ಪಾತ್ರ ನಿರ್ವಹಣೆ.

ಪ್ರಶಸ್ತಿಗಳು ಮತ್ತು ಗೌರವಗಳು: 

1. ಗುರು ಕೇಶವ ಸುಬ್ಬಣ್ಣ ಮೆಮೋರಿಯಲ್ ಟ್ರಸ್ಟ್ ನವರು ಇವರನ್ನು ಲೇಖಕರೆಂದು ಗುರುತಿಸಿ ಸನ್ಮಾನಿಸಿದ್ದಾರೆ.
2. ಶ್ರೀ.ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ.
3. ಭಾರತೀಯ ಭಾಷ ಸಂಗಮದ ವತಿಯಿಂದ ಭಿನ್ನವೆತ್ತಳೆ.
4. ಡಾ.ಹೆಚ್.ನರಸಿಂಹಯ್ಯ ಸದ್ಭಾವನ ಶಿಕ್ಷಕರ ಪರಿಷತ್,ಬೆಂಗಳೂರು ವತಿಯಿಂದ ಸದ್ಭಾವನಾ ಸೇವಾ ಪ್ರಶಸ್ತಿ.
5. ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್ (ರಾಜಾಜಿನಗರ ಘಟಕ) ವತಿಯಿಂದ ಸಾಹಿತ್ಯ ಪ್ರಶಸ್ತಿ.
6. ಸರಸ್ವತಿ ಸಂಗೀತ ವಿದ್ಯಾಲಯದ ವತಿಯಿಂದ "ಸ್ವರ ಕಲಾ ಗೌರವ 2009".
7. ಅತ್ತಿಮಬ್ಬೆ ಪ್ರತಿಷ್ಠಾನದಿಂದ ಪ್ರಶಸ್ತಿ.

ಶ್ರೀ.ಸಾಯಿಬಿಂದು ಶ್ರೀನಿವಾಸ್ ರವರ ಪುಸ್ತಕಗಳಿಗಾಗಿ, ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮಗಳಿಗಾಗಿ ಮತ್ತು ಉಚಿತ ಆಧ್ಯಾತ್ಮಿಕ  ಸಲಹೆಗಳಿಗಾಗಿ ಈ ಕೆಳಕಂಡ ವಿಳಾಸದಲ್ಲಿ ಅವರನ್ನು ಸಾಯಿಭಕ್ತರು ಸಂಪರ್ಕಿಸಬಹುದು. 

ಸಂಪರ್ಕದ ವಿವರಗಳು: 


ವಿಳಾಸ:
ನಂ.1898, “ಮೈತ್ರೆಯೀ”, 7ನೇ  ಮುಖ್ಯರಸ್ತೆ, 
ಇ ಬ್ಲಾಕ್, 2ನೇ ಹಂತ, ಈಸ್ಟ್ ವೆಸ್ಟ್  ಶಾಲೆಯ ಹತ್ತಿರ, 
ರಾಜಾಜಿನಗರ,ಬೆಂಗಳೂರು-560 010.ಕರ್ನಾಟಕ.

ದೂರವಾಣಿ ಸಂಖ್ಯೆ: 
+91 80-2342 4297 / +91 99807 40894

ಈ ಮೇಲ್ ವಿಳಾಸ: 
saibindu@rediffmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment