Tuesday, January 24, 2012

ಜಾರ್ಖಂಡ್ ರಾಜ್ಯದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಸೈಂಟ್  ಫ್ರಾನ್ಸಿಸ್  ರಸ್ತೆ , ಕೈಸ್ಟರ್ಸ     ಟೌನ್, ಬಾಬಾ ಬೈದ್ಯನಾಥ್ ದೇವಘರ್, ಜಾರ್ಖಂಡ್ -814 112, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ 


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಜಾರ್ಖಂಡ್ ರಾಜ್ಯದಲ್ಲಿರುವ ವೈದ್ಯನಾಥೇಶ್ವರದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಬಾಬಾ ಬೈದ್ಯನಾಥ್ ದೇವಘರ್ ನಲ್ಲಿ ಮತ್ತು ಹೌರಾ-ನವದೆಹಲಿ ರೈಲ್ವೇ ಮಾರ್ಗದಲ್ಲಿರುವ ಜಾಸಿದಿ ಜಂಕ್ಷನ್ ನ ಹತ್ತಿರವಿರುತ್ತದೆ. 


ದೇವಾಲಯದ ಭೂಮಿಪೂಜೆಯನ್ನು 3ನೇ ಏಪ್ರಿಲ್ 2009 ರ ಪವಿತ್ರ ಶ್ರೀರಾಮನವಮಿಯ ದಿವಸ ನೆರವೇರಿಸಲಾಯಿತು. 


ದೇವಾಲಯದ ಉದ್ಘಾಟನೆಯನ್ನು 6ನೇ ಅಕ್ಟೋಬರ್ 2011 ರ ಪವಿತ್ರ ವಿಜಯದಶಮಿಯ ದಿನದಂದು ಪ್ರಸಿದ್ದ ಸಾಯಿ ಭಕ್ತರಾದ ಶ್ರೀ.ಚಂದ್ರಮೌಳೀಶ್ವರ ಪ್ರಸಾದ್ ಸಿಂಗ್ ರವರು ನೆರವೇರಿಸಿದರು. 


ದೇವಾಲಯವನ್ನು ಶ್ರೀ.ಮಹೇಶ್ ಕುಮಾರ್ ಸಿಂಗ್ ರವರು ಸ್ಥಾಪಿಸಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 


ದೇವಾಲಯವು ಬೆಳಗಿನ ಜಾವ 6 ಗಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 9 ಗಂಟೆಗೆ ಶೇಜಾರತಿಯಾದ ನಂತರ ಮುಚ್ಚುತ್ತದೆ. 


ದೇವಾಲಯದಲ್ಲಿ ಸುಮಾರು 1.25 ಅಡಿ ಎತ್ತರದ ಅಮೃತಶಿಲೆಯ ಸಿಂಹಾಸನದ ಮೇಲೆ ಕುಳಿತಿರುವ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ ಪಾದುಕೆಗಳನ್ನು ಕೂಡ ಸ್ಥಾಪಿಸಲಾಗಿದೆ.










ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 


ಆರತಿಯ ಸಮಯ: 

ಕಾಕಡಾ ಆರತಿ: ಬೆಳಿಗ್ಗೆ 6 ಗಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ: ಸಂಜೆ 6 ಗಂಟೆಗೆ  
ಶೇಜಾರತಿ: ರಾತ್ರಿ 9:00 ಕ್ಕೆ  

ಗುರುವಾರದಂದು ಮಾತ್ರ ಧೂಪಾರತಿಯನ್ನು ಸಂಜೆ 6:30 ಕ್ಕೆ ಮಾಡಲಾಗುತ್ತದೆ.

ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಯ ವಿವರ: 

ಪೂರಿ ಹಲ್ವಾ ಭೋಗ್                       10001 ರುಪಾಯಿ
ಪೂರಿ ಹಲ್ವಾ ಸಬ್ಜಿ ಭೋಗ್                 12551 ರುಪಾಯಿ
ಕಿಚಡಿ ಭೋಗ್                                7551 ರುಪಾಯಿ
ಪೂರಿ ಖೀರ್ ಭೋಗ್                       10001 ರುಪಾಯಿ
ಗುರುವಾರದ ಸಾಧಾರಣ ಭೋಗ್      1001 ರುಪಾಯಿ

ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು: 

ಹೊಸ ವರ್ಷದ ಆಚರಣೆ.
ವಸಂತ ಪಂಚಮಿ.
ಹೋಳಿ ಹಬ್ಬ.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ - ದೇವಾಲಯದ ವಾರ್ಷಿಕೋತ್ಸವ
ದೀಪಾವಳಿ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಸೈಂಟ್  ಫ್ರಾನ್ಸಿಸ್ ಶಾಲೆಯ ಹತ್ತಿರ, ಕೈಸ್ಟರ್ಸ ಟೌನ್, ಬಾಬಾ ಬೈದ್ಯನಾಥ್ ದೇವಘರ್.

ವಿಳಾಸ: 


ಶ್ರೀ ಶಿರಡಿ ಸಾಯಿ ಮಂದಿರ,
ಸೈಂಟ್  ಫ್ರಾನ್ಸಿಸ್  ರಸ್ತೆ ,
ಕೈಸ್ಟರ್ಸ ಟೌನ್, ಬಾಬಾ ಬೈದ್ಯನಾಥ್ ದೇವಘರ್,
ಜಾರ್ಖಂಡ್ -814 112, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ. ಮಹೇಶ್ ಕುಮಾರ್ ಸಿಂಗ್ / ಶ್ರೀ.ಮನೋಜ್ ಕುಮಾರ್

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+ 91 86038 04017 / +91 97987 77420 / +91 94313 84678

ಇ ಮೇಲ್ ವಿಳಾಸ: 

saimandirdeoghar@gmail.com / adityamahesh001@yahoo.com 


ಮಾರ್ಗಸೂಚಿ: 


ಬೈದ್ಯನಾಥ್ ದೇವಘರ್ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ರೈಲ್ವೇ ನಿಲ್ದಾಣದಿಂದ ಸುಭಾಷ್ ವೃತ್ತದವರೆಗೆ ಸುಮಾರು ಅರ್ಧ ಕಿಲೋಮೀಟರ್ ಕ್ರಮಿಸಿದರೆ ಸೈಂಟ್ ಫ್ರಾನ್ಸಿಸ್ ಶಾಲೆ ಸಿಗುತ್ತದೆ. ಅಲ್ಲಿಂದ ಸುಮಾರು 150 ಮೀಟರ್ ನಡೆದರೆ ಸಾಯಿಬಾಬಾ ಮಂದಿರ ಸಿಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಅಮೇರಿಕಾದ ಟೆಕ್ಸಾಸ್ ನ ಕೊಪ್ಪೆಲ್  ನಗರದಲ್ಲಿ ಹೊಸ ಶಿರಡಿ ಸಾಯಿಬಾಬಾ ಮಂದಿರದ ಉದ್ಘಾಟನೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಅಮೇರಿಕಾದ ಟೆಕ್ಸಾಸ್ ನ ಕೊಪ್ಪೆಲ್  ನಗರದಲ್ಲಿ ಇದೇ ತಿಂಗಳ 29ನೇ ಜನವರಿ 2012, ಭಾನುವಾರದಂದು ಹೊಸ ಶಿರಡಿ ಸಾಯಿಬಾಬಾ ಮಂದಿರದ ಉದ್ಘಾಟನೆಯಾಗುತ್ತಿದೆ. ಈ ಮಂದಿರವನ್ನು ಕೊಪ್ಪೆಲ್ ನ ಶ್ರೀ ಹರಿಹರ ಪೀಠದ ವತಿಯಿಂದ ನಿರ್ಮಿಸಲಾಗಿದೆ. ಸಾಯಿಬಾಬಾ ಮಂದಿರದ  ಉದ್ಘಾಟನೆಯ ಕಾರ್ಯಕ್ರಮಗಳು ಇದೇ ತಿಂಗಳ 27, 28 ಮತ್ತು 29ನೇ ಜನವರಿ 2012 ರಂದು ನಡೆಯಲಿದ್ದು  ವಿಗ್ರಹದ ಪ್ರಾಣ ಪ್ರತಿಷ್ಟಾಪನೆಯ ಕಾರ್ಯಕ್ರಮವು 29ನೇ ಜನವರಿ 2012, ಭಾನುವಾರದಂದು ಬೆಳಿಗ್ಗೆ 9:50 ಕ್ಕೆ ನೆರವೇರಲಿದೆ. 

ಕಾರ್ಯಕ್ರಮ ವಿವರಗಳಿಗೆ ಈ ಕೆಳಗೆ ಲಗತ್ತಿಸಿರುವ ಆಮಂತ್ರಣ ಪತ್ರಿಕೆಯನ್ನು ಸಾಯಿಭಕ್ತರು ನೋಡಬಹುದು: 


ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಶ್ರೀ ಸಾಯಿಬಾಬಾ ಮಂದಿರ ಟ್ರಸ್ಟ್ - ಕೊರಾಳೆ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ಇತಿಹಾಸ: 

ಶಿರಡಿಯ ಸಮೀಪದಲ್ಲಿರುವ ಕೊರಾಳೆ ಗ್ರಾಮದಲ್ಲಿ ವಾಸಿಸುತ್ತಿದ್ದ ಶ್ರೀ.ಆಡಂ ಜಾನ್ ಪಟಾಣ್ ರವರಿಗೆ ಮೊದಲಿನಿಂದಲೂ ಸಾಯಿಬಾಬಾ ಮಂದಿರವನ್ನು ಕಟ್ಟಿಸಬೇಕೆಂಬ ಆಸೆ ಮನಸ್ಸಿನಲ್ಲಿ ಬೇರೂರಿತ್ತು.ಏಕೆಂದರೆ ಇವರ ತಾತನವರು ಸಾಯಿಬಾಬಾರವರ ಸಮಕಾಲೀನರಾಗಿದ್ದರು ಹಾಗೂ ನಿಕಟವರ್ತಿಗಳಾಗಿದ್ದರು   ಮತ್ತು ಸಾಯಿಬಾಬಾರವರೇ ಅವರಿಗೆ ಕೊರಾಳೆ ಗ್ರಾಮದಲ್ಲಿ ವಾಸಿಸುವಂತೆ ಆಜ್ಞೆ ಮಾಡಿದ್ದರು. ಕೊರಾಳೆ ಗ್ರಾಮವು  ಶಿರಡಿಯ ಪಶ್ಚಿಮಕ್ಕೆ ಸುಮಾರು 12  ಕಿಲೋಮೀಟರ್ ದೂರದಲ್ಲಿದೆ. 19ನೇ ಶತಮಾನದ ಜುಲೈ ತಿಂಗಳಿನಲ್ಲಿ ಅವರು ಒಂದು ಸಣ್ಣ ಸಾಯಿಬಾಬಾ ಮಂದಿರವನ್ನು ಕಟ್ಟಿಸಬೇಕೆಂದು ಸಂಕಲ್ಪ ಮಾಡಿದರು. ಅದರಂತೆ ಅವರು ಗ್ರಾಮ ಪಂಚಾಯತಿಯ ಅಧಿಕಾರಿಗಳನ್ನು ಭೇಟಿ ಮಾಡಿದರು. ಗ್ರಾಮ ಪಂಚಾಯತಿಯವರು ಕೊರಾಳೆ ಗ್ರಾಮದ ಸರಹದ್ದಿನಲ್ಲಿರುವ ಮುಖ್ಯ ರಸ್ತೆಯಲ್ಲಿ ಒಂದು ಸಣ್ಣ ಭೂಮಿಯನ್ನು ನೀಡಿದರು. ಕಟ್ಟಡವನ್ನು ಕಟ್ಟಲು ಬೇಕಾದ ಸಾಮಗ್ರಿಗಳನ್ನು ತರಲು ಹಣದ ಅವಶ್ಯಕತೆ ಇತ್ತು.

ಶ್ರೀ.ಆಡಂ ಜಾನ್ ಪಟಾಣ್ ರವರು ಶಿರಡಿಯ ಸನ್ ಅಂಡ್ ಸ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಂದಿರವನ್ನು ಕಟ್ಟಲು ಬಹಳ ಹಣ ಬೇಕಾಗಿದ್ದರಿಂದ ಚಂದಾ ವಸೂಲಿ ಮಾಡಲು ಪ್ರಾರಂಭಿಸಿದರು. ಆದರೆ, ಅವರಿಗೆ ಚಂದಾ ಎತ್ತಿದ್ದರಿಂದ ಹೆಚ್ಚಿಗೆ ಹಣ ದೊರೆಯಲಿಲ್ಲ. ಆ ಸಮಯದಲ್ಲಿ ಇವರಿಗೆ ಅತ್ಯಂತ ಹಿರಿಯ ಸಾಯಿಭಕ್ತೆಯಾದ ಶ್ರೀಮತಿ.ವಾರಿಜಾ ಪ್ರಭುರವರೊಡನೆ ಅತ್ಯಂತ ಹೆಚ್ಚಿನ ಪರಿಚಯವಿದ್ದಿತು. ಆದ ಕಾರಣ ಶ್ರೀ.ಆಡಂ ರವರು ತಾವು ಕೈಗೆತ್ತಿಗೊಂಡ ಕಾರ್ಯದ ಬಗ್ಗೆ ಮತ್ತು ಅದಕ್ಕೆ ಬೇಕಾದ ಹಣದ ತೊಂದರೆಯಿರುವ ಬಗ್ಗೆ ಆಕೆಯೊಡನೆ ಹೇಳಿಕೊಂಡರು. ಶ್ರೀಮತಿ.ವಾರಿಜಾ ಪ್ರಭುರವರಿಗೆ ಒಬ್ಬ ಮುಸ್ಲಿಂ ಭಕ್ತನೊಬ್ಬ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡಲು ಹೊರಟಿರುವುದನ್ನು ಕಂಡು ಅತ್ಯಂತ ಆಶ್ಚರ್ಯ ಮತ್ತು ಸಂತೋಷವಾಯಿತು. ಆದ ಕಾರಣ ತಮಗೆ ಬರುತ್ತಿದ ಪಿಂಚಣಿ ಹಣವನ್ನು 3 ತಿಂಗಳುಗಳ ಕಾಲ ಕೂಡಿ ಹಾಕಿ ಒಟ್ಟು ಹತ್ತು ಸಾವಿರ ರುಪಾಯಿಗಳನ್ನು ನೀಡಿದರು. ಅವರ ಮಕ್ಕಳಾದ ಸಾಯಿಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿ ಮತ್ತು ಶ್ರೀಮತಿ.ಆಶಾಲತಾರವರು ಕೂಡ ದೇಣಿಗೆಯನ್ನು ನೀಡಿದ್ದರಿಂದ ಕಟ್ಟಡ ನಿರ್ಮಾಣದ ಕೆಲಸ ಆರಂಭವಾಯಿತು. ಗುರುಪೂರ್ಣಿಮೆ ಉತ್ಸವಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿತ್ತು. ಶ್ರೀ.ಆಡಂ ರವರು ಗುರುಪೂರ್ಣಿಮೆಯನ್ನು ತಮ್ಮ ಮಂದಿರದಲ್ಲಿ ಆಚರಿಸಲು ನಿರ್ಧರಿಸಿದ್ದರು. ಆದ್ದರಿಂದ ಕೊರಾಳೆ ಗ್ರಾಮದ ಮಕ್ಕಳು ಮತ್ತು ಗ್ರಾಮಸ್ಥರೆಲ್ಲ ಒಂದೇ ಮನಸ್ಸಿನಿಂದ ಹಗಲು ರಾತ್ರಿ ಕೆಲಸ ಮಾಡಿ ಮಣ್ಣಿನಲ್ಲಿ ಮಂದಿರವನ್ನು ಕಟ್ಟಿದರು. ತಮ್ಮ ಬಳಿಯಿದ್ದ ಸ್ವಲ್ಪ ಹಣದಿಂದ ಮಂದಿರದ ಒಳಗಡೆಯ ಗೋಡೆಯನ್ನು ಸಿಮೆಂಟ್ ನಿಂದ ಲೇಪನ ಮಾಡಿದರು. ಗುರುಪೂರ್ಣಿಮೆ ಉತ್ಸವವನ್ನು 3 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಮೊದಲ ದಿನ ಶ್ರೀ.ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಮಾಡಲಾಯಿತು. ಪಲ್ಲಕ್ಕಿ ಉತ್ಸವ ಹಾಗೂ ಅನ್ನದಾನವನ್ನು ಕೂಡ ಉತ್ಸವದ 3 ದಿನಗಳೂ ಮಾಡಲಾಯಿತು.

ಕೊರಾಳೆ ಸಾಯಿಬಾಬಾ ಮಂದಿರಕ್ಕೆ ಸಾಯಿಬಾಬಾರವರ ಪಾದುಕೆಗಳು ಬಂದ ಬಗೆ:

1998 ನೇ ಇಸವಿಯಲ್ಲಿ ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ತಮ್ಮ "ಆಮ್ಬ್ರೋಸಿಯ ಇನ್ ಶಿರಡಿ" ಪುಸ್ತಕವನ್ನು ಬರೆಯಲು ಬೇಕಾದ ಕೆಲವು ವಿಷಯಗಳಿಗಾಗಿ ಹುಡುಕಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಬಳಿಯಿದ್ದ ಸಾಯಿಲೀಲಾ ಮಾಸಪತ್ರಿಕೆಯಲ್ಲಿ ಬಂದ ಅಂಕಣವೊಂದರಲ್ಲಿ ಶಿರಡಿಯ ನರಸಿಂಹ ಲಾಡ್ಜ್ ನ ಹತ್ತಿರ ಸಾಯಿಬಾಬಾರವರ ಪಾದುಕೆಯನ್ನು ಸ್ಥಾಪಿಸಲಾಗಿರುವ ವಿಷಯವನ್ನು ಓದಿದ್ದರು. ಈ ವಿಷಯವನ್ನು ಪ್ರತಿನಿತ್ಯ ಸಾಯಿಬಾಬಾರವರು ಭಿಕ್ಷೆಯನ್ನು ಸ್ವೀಕರಿಸುತ್ತಿದ್ದ ಸಾಯಿ ಮಹಾಭಕ್ತ ಶ್ರೀ.ವಾಮನ್ ರಾವ್ ಗೊಂದ್ಕರ್ ರವರ ಮೊಮ್ಮಗ ಶ್ರೀ.ಅಮೃತ್ ರಾವ್ ಗೊಂದ್ಕರ್ ರವರು ಕೂಡ ದೃಢೀಕರಿಸಿದರು. 

ಆ ದಿನಗಳಲ್ಲಿ  ಶಿರಡಿಯು ಸಮಾನವಾದ ರಸ್ತೆಗಳಿಂದ ಕೂಡಿರದೇ ಹಳ್ಳ ದಿಣ್ಣೆಗಳಿಂದ ತುಂಬಿತ್ತು. ಈ ತರಹದ ಒಂದು ದಿಣ್ಣೆಯ
ಮೇಲೆ ಸಾಯಿಬಾಬಾರವರು ನಿಲ್ಲುತ್ತಿದ್ದರು ಮತ್ತು ತಮ್ಮ ಭಿಕ್ಷಾಜೋಳಿಗೆಯಿಂದ ಆಹಾರವನ್ನು ತೆಗೆದುಕೊಂಡು ಬೆಕ್ಕು, ನಾಯಿ ಮತ್ತು ಪಕ್ಷಿಗಳಿಗೆ ನೀಡುತ್ತಿದ್ದರು. ಸಾಯಿಬಾಬಾರವರು ನೀಡುವ ಆಹಾರದಿಂದಲೇ ಆ ಪ್ರಾಣಿ ಪಕ್ಷಿಗಳು ಬದುಕುತ್ತಿದ್ದವು. ಪರಬ್ರಹ್ಮ ಸ್ವರೂಪಿಯಾದ ಸಾಯಿಬಾಬಾರವರಿಂದ ಆಹಾರವನ್ನು ಸ್ವೀಕರಿಸಿದ ಆ ಪ್ರಾಣಿ ಪಕ್ಷಿಗಳೂ ನಿಜಕ್ಕೂ ಅದೃಷ್ಟಶಾಲಿಗಳೇ ಸರಿ!!!!


ಶ್ರೀ.ಸದಾನಂದ ಎಸ್.ಗೋಡೆ ಮತ್ತು ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ಶಿರಡಿಯಲ್ಲಿದ್ದ ಎಲ್ಲಾ ಹಳ್ಳ ದಿಣ್ಣೆಗಳಲ್ಲಿ ಸಾಯಿಬಾಬಾರವರ ಆ ಪವಿತ್ರ ಪಾದುಕೆಗಳಿಗಾಗಿ ಹುಡುಕಾಡುತ್ತಿದ್ದರು. ಒಂದು ದಿನ ಅವರಿಬ್ಬರೂ ದ್ವಾರಕಾಮಾಯಿಯಿಂದ ಮನೆಗೆ ವಾಪಸಾಗುತ್ತಿದ್ದಾಗ ಶ್ರೀ.ಸದಾನಂದ ಎಸ್.ಗೋಡೆ ಮೇಲ್ಬಾಗದಲ್ಲಿ ದೇವಾಲಯದ ಗೋಪುರವಿದ್ದಂತೆ  ಕಂಡುಬರುತ್ತಿದ್ದ  ಒಂದು ಗೋಡೆಯನ್ನು ವಿನ್ನಿಯವರಿಗೆ ತೋರಿಸಿದರು. ಶ್ರೀಮತಿ.ವಿನ್ನಿಯವರು ನರಸಿಂಹ ಲಾಡ್ಜ್ ನ ಆ ಗೋಡೆಯಲ್ಲಿ ಸೇರಿಕೊಂಡಿದ್ದ ಆ ಪವಿತ್ರ ಪಾದುಕೆಗಳನ್ನು ನೋಡಿ ದಿಗ್ಬ್ರಾಂತರಾದರು. ಆ ಕ್ಷಣವೇ ಅವರಿಬ್ಬರೂ ಸೇರಿ ಆ ಗೋಡೆಗೆ ಅಂಟಿಕೊಂಡಿದ್ದ ಕಲ್ಲು ಮತ್ತು ಮಣ್ಣಿನ ಹೆಂಟೆಗಳನ್ನು ತೆಗೆದುಹಾಕಿದರು. ಅದರ ಕೆಳಗೆ ಈ ಪವಿತ್ರ ಪಾದುಕೆಗಳು ಕಂಡು ಬಂದಿತು. ಆ ದಿನದಿಂದ ಪಾದುಕೆಗಳಿಗೆ ನಿತ್ಯವೂ ಅಭಿಷೇಕ ಮಾಡಿ, ಊದುಬತ್ತಿಯನ್ನು ಹಚ್ಚಿ, ದೀಪವನ್ನು ಬೆಳಗಿಸಾಲು ಪ್ರಾರಂಭಿಸಲಾಯಿತು. ನರಸಿಂಹ ಲಾಡ್ಜ್ ನ ಮಾಲೀಕರು ಆ ಸ್ಥಳದಲ್ಲಿ ಬೆಳಕಿನ ದೀಪದ ವ್ಯವಸ್ಥೆಯನ್ನು ಮಾಡಿದರು. ಆ ಪಾದುಕೆಯಿದ್ದ  ಸ್ಥಳಕ್ಕೆ ಹತ್ತಿರದಲ್ಲಿ ಇದ್ದ ಶಿರಡಿಯ ವ್ಯಾಪಾರಿಗಳು  ಬಂದು ಪ್ರತಿನಿತ್ಯವೂ ಊದುಬತ್ತಿಯನ್ನು ಹಚ್ಚುತ್ತಿದ್ದರು. 


ಪಲ್ಲಕ್ಕಿ  ರಸ್ತೆಯ  ಅಗಲೀಕರಣದ ವೃತ್ತಾಂತ: 


6ನೇ ಮೇ 2004 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದವರು ಪಲ್ಲಕಿ ರಸ್ತೆಯ ಅಗಲೀಕರಣ ಕಾರ್ಯವನ್ನು ಕೈಗೆತ್ತಿಕೊಂಡರು. ಆ ಸಂದರ್ಭದಲ್ಲಿ ನನರಸಿಂಹ ಲಾಡ್ಜ್ ನ ಮುಂಭಾಗವನ್ನು ಒಡೆಯಬೇಕಾದ ಸಂದರ್ಭ ಒದಗಿಬಂದಿತ್ತು. ಅದೇ ಸ್ಥಳದಲ್ಲಿ ಪವಿತ್ರ ಪಾದುಕೆಗಳು ಗೋಡೆಯಲ್ಲಿ ಸೇರಿಕೊಂಡಿದ್ದವು. ಶ್ರೀ.ಸದಾನಂದ ಎಸ್.ಗೋಡೆ, ಶ್ರೀಮತಿ.ವಿನ್ನಿ  ಚಿಟ್ಲೂರಿ ಮತ್ತು ಲಾಡ್ಜ್ ನ ಮಾಲೀಕರು ಮತ್ತು  ಆ ಪವಿತ್ರ ಪಾದುಕೆಗಳು ಎಲ್ಲಿ ಭಿನ್ನವಾಗುವುದೋ ಎಂಬ ಆತಂಕದಿಂದ ಇದ್ದರು. ಅವರೆಲ್ಲರೂ ಸೇರಿ ಆ ಸಂದರ್ಭ ಬಂದರೆ ಯಾವ ರೀತಿಯ ಕರ್ಮ ಕೈಗೊಳ್ಳಬೇಕೆಂದು ಸ್ಥಳೀಯ ಪುರೋಹಿತರನ್ನು ವಿಚಾರಿಸಿದರು.

3 ದಿನಗಳ ಕಾಲ ಶ್ರೀಮತಿ.ವಿನ್ನಿ  ಚಿಟ್ಲೂರಿ ಮತ್ತು ಶ್ರೀ.ಆಡಂ ರವರು ಅಗಲೀಕರಣ ಕಾರ್ಯ ನಡೆಯುವ ಸ್ಥಳದಲ್ಲೇ ನಿಂತು ಏನಾಗುವುದೋ ಎಂಬ ಆತಂಕದಿಂದ ನೋಡುತ್ತಿದ್ದರು. ಕೊನೆಗೂ ಭೂಮಿಯನ್ನು ಸಮತಲಗೊಳಿಸುವ ಮಾಡುವ ಬೃಹತ್ ಯಂತ್ರ ಬಂದು ಆ ಪಾದುಕೆಗಳಿದ್ದ ಗೋಡೆಯನ್ನು ಕೆಡವಿ ಹಾಕಿತು. ಆ ಸಂದರ್ಭದಲ್ಲಿ ಪಾದುಕೆಗಳ ಮೇಲೆ ನೂರಾರು ಇಟ್ಟಿಗೆಗಳು ಬಿದ್ದವು ಆಗ ನಡೆದ ಘಟನೆ ಎಲ್ಲರನ್ನೂ ಭಾವೋದ್ವೇಗಕ್ಕೆ ಒಳಗಾಗಿಸಿ ಮಾತೇ ಹೊರಡದಂತೆ ಮಾಡಿತು. ಸಖಾರಾಮ್ ಶೆಲ್ಕೆ ಯವರ ಮನೆತನಕ್ಕೆ ಸೇರಿದ 3 ಜನ ಯುವಕರು ಮುಂದೆ ಬಂದು ಆ ಪವಿತ್ರ ಪಾದುಕೆಗಳನ್ನು ಶ್ರೀಮತಿ.ವಿನ್ನಿ ಚಿಟ್ಲೂರಿಯವರಿಗೆ ನೀಡಿದರು. 

ಶ್ರೀಮತಿ.ವಿನ್ನಿ  ಚಿಟ್ಲೂರಿ ಮತ್ತು ಶ್ರೀ.ಆಡಂ ರವರು ಒಂದು ವ್ಯಾನ್ ಬಾಡಿಗೆಗೆ ಪಡೆದು ಅದರಲ್ಲಿ ಪವಿತ್ರ ಪಾದುಕೆಗಳನ್ನು ಇರಿಸಿ ಜೋಪಾನವಾಗಿ ಈಗ ಕೊರಾಳೆ ಮಂದಿರವಿರುವ ಸ್ಥಳಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಅದಕ್ಕೆ ಪ್ರತಿನಿತ್ಯ ಅಭಿಷೇಕ ಮತ್ತು ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ಪಾದುಕೆಗಳನ್ನು ಹಾಗೆ ಬಿಡಲು ಆಗದ ಕಾರಣ ಆ ಸ್ಥಳದಲ್ಲಿ ಮಂದಿರವನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಪವಿತ್ರ ಪಾದುಕೆಗಳ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಗುರುಪೂರ್ಣಿಮೆಯ ದಿನ ಮಾಡಲು ಎಲ್ಲರೂ ಒಮ್ಮತದಿಂದ ತೀರ್ಮಾನಿಸಿದರು. ಅದರಂತೆ 3 ತಿಂಗಳುಗಳ ಕಾಲ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಹಗಲೂ ರಾತ್ರಿ ಕೆಲಸ ಮಾಡಿ ಮಂದಿರವನ್ನು ನಿರ್ಮಾಣ ಮಾಡಿದರು. ಈ ರೀತಿಯಲ್ಲಿ 2004ನೇ ಇಸವಿಯ ಪವಿತ್ರ ಗುರುಪೂರ್ಣಿಮೆಯ ದಿನ ಪಾದುಕೆಗಳ ಪ್ರತಿಷ್ಟಾಪನೆ ಕಾರ್ಯ ವಿಧ್ಯುಕ್ತವಾಗಿ ನೆರವೇರಿತು. 

ಈ ಪಾದುಕೆಗಳು ಸುಮಾರು 100 ವರ್ಷಕ್ಕೂ ಹೆಚ್ಚು ಹಳೆಯದಾಗಿರುತ್ತದೆ. ಈ ಪಾದುಕೆಗಳನ್ನು ಕಲ್ಲಿನಲ್ಲಿ ಕೆತ್ತಲಾಗಿರುತ್ತದೆ. ಶಿರಡಿ ಸಾಯಿಬಾಬಾರವರು ಆ ಸ್ಥಳದಲ್ಲಿ ನಿಂತಾಗ ಶಿಲ್ಪಿಯು ಅವರ ಪಾದಗಳ ಅಳತೆಯನ್ನು ತೆಗೆದುಕೊಂಡು ಮಾಡಿದ ಹಾಗೆ ಬಹಳ ಸುಂದರವಾಗಿ ಪಾದುಕೆಗಳನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ಪಾದುಕೆಗಳ ಮುಂಭಾಗದಲ್ಲಿ ಬಟ್ಟಲಿನ ಆಕಾರದಲ್ಲಿ ಒಂದು ಸಣ್ಣ ಹಳ್ಳವಿರುತ್ತದೆ. ಸಾಯಿಬಾಬಾರವರು ಭಿಕ್ಷೆಗೆ ಹೋಗುತ್ತಿದ್ದ ಸಮಯದಲ್ಲಿ ಆ ಪಾದುಕೆಗಳಿದ್ದ  ಸ್ಥಳದಲ್ಲಿ ನಿಂತು ತಮ್ಮ ಜೋಳಿಗೆಯಿಂದ ನಾಯಿಗಳಿಗೆ, ಕಾಗೆಗಳಿಗೆ ಮತ್ತು ಇತರ ಪಕ್ಷಿಗಳಿಗೆ ತಮ್ಮ ಸ್ವಹಸ್ತದಿಂದ ಆಹಾರವನ್ನು ನೀಡುತ್ತಿದ್ದರೆಂದು ತಿಳಿದುಬಂದಿರುತ್ತದೆ. ನಂತರ ಆ ಬಟ್ಟಲಿನ ಆಕಾರದಲ್ಲಿದ್ದ ಹಳ್ಳದಲ್ಲಿ ತಾವು ಭಿಕ್ಷೆಯಾಗಿ ಪಡೆದಿದ್ದ ಸಾರು, ಹುಳಿ ಮುಂತಾದ ದ್ರವ್ಯ ವನ್ನು ಮತ್ತು ಕೆಲವು ಬಾರಿ ನೀರನ್ನು ತುಂಬಿಸುತ್ತಿದ್ದರೆಂದು ತಿಳಿದುಬಂದಿದೆ. ಪಕ್ಷಿಗಳು ಬಂದು ಆ ನೀರನ್ನು ಕುಡಿದು ಹೋಗುತ್ತಿದ್ದವೆಂದು ಗೊತ್ತಾಗಿದೆ. 

ದುರದೃಷವಶಾತ್ ದೇವಾಲಯದ ಉದ್ಘಾಟನೆಯಾದ ಕೆಲವು ದಿನಗಳಲ್ಲೇ ಶ್ರೀ.ಆಡಂ ರವರು ತೀರಿಕೊಂಡರು. ಅವರ ಅಕಾಲಿಕ ಮರಣದ ನಂತರ ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀ.ಸದಾನಂದ ಎಸ್.ಗೋಡೆಯವರು ವಹಿಸಿಕೊಂಡರು. ದೇವಾಲಯವು ಶಿರಡಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದ್ದು ಹೋಗಲು ಸರಿಯಾದ ವಾಹನದ ವ್ಯವಸ್ಥೆ ಇರುವುದಿಲ್ಲ. ಆದ ಕಾರಣ, ಸ್ವಂತ ವಾಹನದಲ್ಲಿ ಅಥವಾ ಯಾವುದಾದರೂ ಆಟೋ ಅಥವಾ ವಾಹನವನ್ನು ಶಿರಡಿಯಿಂದ ಈ ಸ್ಥಳಕ್ಕೆ ಹೋಗಿ ಬರುವುದಕ್ಕೆ ಮೊದಲೇ ಗೊತ್ತು ಮಾಡಿಕೊಂಡು ಹೋಗಿ ಬರುವುದು ಒಳಿತು. 












ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ವರ್ಷದ ಉದ್ದಕೂ ಅದರಲ್ಲೂ ವಿಶೇಷವಾಗಿ ರಾಮನವಮಿ ಉತ್ಸವದ ಸಮಯದಲ್ಲಿ ಮುಂಬೈ ಮತ್ತು ಪುಣೆಯಿಂದ ಲಕ್ಷಾಂತರ ಮಂದಿ ಪಾದಯಾತ್ರಿಗಳು ಶಿರಡಿಗೆ ಈ ಮಾರ್ಗದಲ್ಲೇ ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ಸ್ಥಳ, ಸ್ನಾನದ ವ್ಯವಸ್ಥೆ ಮತ್ತು  ಯಾವುದೇ ಸಮಯದಲ್ಲಿ ಆಗಲಿ ಕುಡಿಯಲು ಟೀ ವ್ಯವಸ್ಥೆಯನ್ನು ಟ್ರಸ್ಟ್ ನ ಸದಸ್ಯರು ಉಚಿತವಾಗಿ ಮಾಡಿಕೊಡುತ್ತಾರೆ. ಟೀ ಮಾಡಲು ಕೆಲವು ವೇಳೆ ಹಾಲು ಸಾಕಾಗುತ್ತಿರಲಿಲ್ಲ. ಆಗ ಟ್ರಸ್ಟ್ ನ ಸದಸ್ಯರು ಗ್ರಾಮದಲ್ಲಿದ್ದ ಮನೆಗಳಿಗೆ ಹೋಗಿ ಅಪರಾತ್ರಿಯಲ್ಲಿ ಹಸುವಿನ ಹಾಲನ್ನು ಕರೆದುಕೊಂಡು ಬಂದು ಟೀ ಮಾಡಿ ಕೊಡುತ್ತಿದ್ದರು. ಪಾದಯಾತ್ರಿಗಳು ನಡೆದು ಬರುವುದರಿಂದ ಆಗುವ ಆಯಾಸವನ್ನು ಹೋಗಲಾಡಿಸಲು ಟೀ ನಲ್ಲಿ ಹೆಚ್ಚಿಗೆ ಸಕ್ಕರೆಯನ್ನು ಸೇರಿಸಿ ಕೊಡಲಾಗುತ್ತದೆ. ಸ್ವಲ್ಪ ಹೊತ್ತು ಈ ಸ್ಥಳದಲ್ಲಿ ದಣಿವಾರಿಸಿಕೊಂಡು ನಂತರ ಮುಂದಿನ 12 ಕಿಲೋಮೀಟರ್ ದೂರವನ್ನು ಪಾದಯಾತ್ರಿಗಳು ಕ್ರಮಿಸುತ್ತಾರೆ ಮತ್ತು ಶಿರಡಿಯನ್ನು ಸೇರುತ್ತಾರೆ. ಅವರಿಗೆ ದಾರಿಗೆ ಬೇಕಾಗುವ ಹಣ್ಣು ಹಂಪಲು ಮತ್ತು ತಿಂಡಿಗಳನ್ನು ಕೂಡ ಟ್ರಸ್ಟ್ ನ ವತಿಯಿಂದ ನೀಡಲಾಗುತ್ತದೆ. ಯಾತ್ರಿಗಳು ಈ ಸ್ಥಳದಲ್ಲಿ 7 ರಿಂದ 15 ದಿನಗಳ ಕಾಲ ತಂಗಲು ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತಿದೆ. ಹೀಗೆ ಉಳಿದುಕೊಳ್ಳುವ ಪಾದಯಾತ್ರಿಗಳು ಈ ಸ್ಥಳದಲ್ಲಿ ಸಾಯಿ ಸಚ್ಚರಿತ್ರೆಯ ಪಾರಾಯಣ ಮತ್ತು ಇತರ ಪವಿತ್ರ ಗ್ರಂಥಗಳ ಪಾರಾಯಣವನ್ನು ಮಾಡುತ್ತಾರೆ. ಪಾದಯಾತ್ರಿಗಳಷ್ಟೇ ಅಲ್ಲದೆ, ಈ ಸ್ಥಳವು ಗಾಯಗೊಂಡ ನಾಯಿ, ಬೆಕ್ಕು, ಹಸು ಮತ್ತಿತರ ಪ್ರಾಣಿಗಳಿಗೂ ಕೂಡ ಆಶ್ರಯ ತಾಣವಾಗಿರುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು ಗಾಯಗೊಂಡ ಪ್ರಾಣಿಗಳನ್ನು ಈ ಸ್ಥಳಕ್ಕೆ ತಂದು ಬಿಡುತ್ತಾರೆ. ಅಲ್ಲದೆ, ಪ್ರತಿನಿತ್ಯ ಈ ಮಂದಿರದಲ್ಲಿ ನಾಯಿ, ಬೆಕ್ಕು, ಹಸು ಮತ್ತಿತರ ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ. 

ಈ ಮಂದಿರದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೇ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತದೆ. ಶಿರಡಿಯಲ್ಲಿ ನಡೆಯುವ 3 ವಿಶೇಷ ಉತ್ಸವಗಳನ್ನು ಇಲ್ಲಿ ಕೂಡ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

ಖಾಯಿಲೆಯಿಂದ ಬಳಲುತ್ತಿರುವ ಸುತ್ತಮುತ್ತಲಿನ ಗ್ರಾಮದ ರೋಗಿಗಳನ್ನು ಟ್ರಸ್ಟ್ ನ ಸದಸ್ಯರು ಅಂಬ್ಯುಲೆನ್ಸ್ ನಲ್ಲಿ  ಕರೆದುಕೊಂಡು ಹೋಗಿ ಶಿರಡಿಯಲ್ಲಿರುವ ಸಾಯಿಬಾಬಾ ಆಸ್ಪತ್ರೆಗೆ ಸೇರಿಸುತ್ತಾರೆ. 

ವರ್ಷದಲ್ಲಿ ಎರಡು ಬಾರಿ ಮಂದಿರದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಶಿಬಿರದಲ್ಲಿ ಕೊರಾಳೆ ಮತ್ತು ಸುತ್ತಮುತ್ತಲಿನ ಗ್ರಾಮದ ಯುವಕರು ಮತ್ತು ಟ್ರಸ್ಟ್ ನ ಸದಸ್ಯರೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. 

ಪ್ರತಿ ತಿಂಗಳ ಒಂದು ದಿವಸ ಟ್ರಸ್ಟ್ ನ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ತಜ್ಞ  ವೈದ್ಯರು ಬಂದು ಸುತ್ತಮುತ್ತಲಿನ ಗ್ರಾಮದ ರೋಗಿಗಳನ್ನು ಪರೀಕ್ಷಿಸಿ ಉಚಿತವಾಗಿ ಔಷಧಿಗಳನ್ನೂ ಕೂಡ ನೀಡುತ್ತಾರೆ. 

ಆಗಾಗ್ಗೆ ತಜ್ಞ ನೇತ್ರ ವೈದ್ಯರನ್ನು ಕರೆಯಿಸಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ನೇತ್ರ ತಪಾಸಣಾ ಉಪಕರಣಗಳು ಬಹಳ ದೊಡ್ಡ ಪ್ರಮಾಣದ್ದಾಗಿರುವುದರಿಂದ ಅವುಗಳನ್ನು ದೂರದ ಊರುಗಳಿಂದ ಈ ಗ್ರಾಮಕ್ಕೆ ತರಲು ಕಷ್ಟವಾಗುವ ಕಾರಣ ಈ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸಲಾಗುತ್ತಿಲ್ಲ. 

ಟ್ರಸ್ಟ್ ನ ಸದಸ್ಯರೆಲ್ಲರೂ ಪ್ರತಿ ವರ್ಷ ರಾಮನವಮಿಗೆ ಒಂದು ವಾರ ಮುಂಚೆಯೇ ಮುಂಬೈಗೆ ಅಂಬ್ಯುಲೆನ್ಸ್, ಔಷಧಿಗಳು ಮತ್ತು ಪ್ರಥಮ ಚಿಕಿತ್ಸೆಯ ಎಲ್ಲಾ ಪರಿಕರಗಳನ್ನು ತೆಗೆದುಕೊಂಡು ಹೋಗಿ ಪಾದಯಾತ್ರೆಯ ಪ್ರಾರಂಭದಿಂದ ಶಿರಡಿಯನ್ನು ತಲುಪುವವರೆಗೆ ಯಾತ್ರಿಗಳ ಜೊತೆಗೇ ಇದ್ದು ಅವರ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಾ ಬಂದಿದ್ದಾರೆ. 

ಕೊರಾಳೆ ಗ್ರಾಮದಲ್ಲಿ ಬಹಳ ಹಾವುಗಳು ಮತ್ತು ಚೇಳುಗಳಿದ್ದು ಅದರ ಕಡಿತಕ್ಕೆ ಒಳಗಾದ ಗ್ರಾಮಸ್ಥರನ್ನು ಕೂಡಲೇ ಶಿರಡಿಯ ಆಸ್ಪತ್ರೆಗೆ ಕರೆದುಕೊಂಡು ಬಂದು ನಂಜು ವಿರೋಧಿ ಚುಚ್ಚು ಮದ್ದು ಕೊಡಿಸಿ ಅನೇಕ ಗ್ರಾಮಸ್ಥರ ಪ್ರಾಣವನ್ನು ಉಳಿಸಿದ್ದಾರೆ. 

ಮಂದಿರದ ಟ್ರಸ್ಟ್ ಗ್ರಾಮದ ಪ್ರಥಮ ಚಿಕಿತ್ಸಾ ಕೇಂದ್ರದೊಡನೆ ಸಹಯೋಗವನ್ನು ಹೊಂದಿರುತ್ತದೆ. ಗ್ರಾಮದಲ್ಲಿ ಕ್ಷಯ ರೋಗದಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಕ್ಷಯರೋಗ ನಿವಾರಣಾ ಕೇಂದ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲದೆ, ಖಾಯಿಲೆಯಿಂದ ಆಸ್ಪತ್ರೆಗೆ ಬರಲು ಆಗದ ರೋಗಿಗಳಿಗೆ ತಾವೇ ಔಷಧಿಗಳನ್ನು ತಂದು ಕೊಡುತ್ತಾರೆ. ಅಷ್ಟೇ ಅಲ್ಲದೇ, ವಯಸ್ಸಾದ  ಮತ್ತು ನಡೆಯಲು ಆಗದ ರೋಗಿಗಳನ್ನು ತಮ್ಮ ಟ್ರಸ್ಟ್ ನ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಾರೆ. 

ಕೊರಾಳೆ ಗ್ರಾಮದಲ್ಲಿ ಬೇರೆ ಕಡೆಯಿಂದ ವಲಸೆ ಬಂದ ಅನೇಕ ಕೂಲಿ ಕಾರ್ಮಿಕರು ಮತ್ತು ಗಾರೆ ಕೆಲಸದವರು ವಾಸ ಮಾಡುತ್ತಿದ್ದು ಅವರ ಮಕ್ಕಳು ಒಳ್ಳೆಯ ಪೋಷಣೆ ಇಲ್ಲದೇ ವಿದ್ಯೆ ಮತ್ತು ಕೆಲಸ ಇಲ್ಲದೇ ದಿನೇ ದಿನೇ ಸೊರಗುತ್ತಿದ್ದಾರೆ. ಅಂತಹ ಮಕ್ಕಳನ್ನು ಟ್ರಸ್ಟ್ ನ ಸದಸ್ಯರು ಪ್ರೋತ್ಸಾಹ ನೀಡಿ ಶಿರಡಿಯಲ್ಲಿರುವ ಐ.ಟಿ.ಐ.ಗೆ ಸೇರುವಂತೆ ಮಾಡಿ ಅಲ್ಲಿ ಅವರು ಚೆನ್ನಾಗಿ ವಿದ್ಯೆ ಕಲಿತು ಎಲೆಕ್ತ್ರೀಶಿಯನ್, ಬೆಸುಗೆಗಾರ ಮತ್ತು ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಶಿರಡಿ ಬಾಬಾರವರ ಉಪದೇಶವನ್ನು ಅನುಸರಿಸಿ ಅನ್ನದಾನಕ್ಕೆ ಟ್ರಸ್ಟ್ ನ ಸದಸ್ಯರು ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದಾರೆ. ಗ್ರಾಮದ ಶಾಲೆಯ ಮಕ್ಕಳಿಗೆ ಆಗಾಗ್ಗೆ  ಹಾಲು, ಊಟ, ಉಪಹಾರವನ್ನು ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. 

ಕೆಲವು ವರ್ಷಗಳ ಹಿಂದೆ ಕೊರಾಳೆ  ಗ್ರಾಮದ ಬಾವಿಯಲ್ಲಿ ಕಾಲರಾ ಕ್ರಿಮಿಗಳು ಸೇರಿಕೊಂಡು ನೂರಾರು ಗ್ರಾಮಸ್ಥರು ಕಾಲರಾ ರೋಗದಿಂದ ಬಳಲುತ್ತಿದ್ದರು. ಕೊರಾಳೆ ಗ್ರಾಮವಷ್ಟೇ ಅಲ್ಲದೇ ಪಕ್ಕದ ದೊರಾಳೆ ಮತ್ತು ರಹಾತಾ ಗ್ರಾಮಕ್ಕೂ ಕಾಲರಾ  ರೋಗವು ಹರಡಿತು. ಈ ಗ್ರಾಮದ ಗ್ರಾಮಸ್ಥರು ಶಿರಡಿಗೆ ಚಿಕಿತ್ಸೆಗೆ ಹೋಗಲು ಸಮ್ಮತಿಸಲಿಲ್ಲ. ಆಗ ಶಿರಡಿ ಮತ್ತು ಅಹಮದ್ ನಗರದಿಂದ ವೈದ್ಯರುಗಳು ಗ್ರಾಮಕ್ಕೆ ಬರುವಂತಾಯಿತು. ಆ ವೈದ್ಯರುಗಳಿಗೆ ಮತ್ತು ರೋಗಿಗಳಿಗೆ ಮಂದಿರದ ಆವರಣದಲ್ಲೇ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಯಿತು. ಹಗಲೂ ರಾತ್ರಿ ಟೀ, ಊಟ ಮತ್ತು ವೈದ್ಯಕೀಯ ಉಪಚಾರಗಳನ್ನು ರೋಗಿಗಳಿಗೆ ಟ್ರಸ್ಟ್ ನ ಸದಸ್ಯರು ಮಾಡಿಕೊಟ್ಟು ಚೆನ್ನಾಗಿ ನೋಡಿಕೊಂಡರು. ಟ್ರಸ್ಟ್ ನ ವ್ಯವಸ್ಥೆಗಳನ್ನು ನೋಡಿ ವೈದ್ಯರೂ ಕೂಡ ರಾತ್ರಿಯ ವೇಳೆ ಶಿರಡಿ ಮತ್ತು ಅಹಮದ್ ನಗರಕ್ಕೆ ವಾಪಸ್ ತೆರಳದೆ ದೇವಾಲಯದಲ್ಲೇ ಉಳಿದುಕೊಂಡು ರೋಗಿಗಳ ಸೇವೆಯನ್ನು ಮಾಡಿದುದು ವಿಶೇಷವೇ ಸರಿ!!!! 

ಕೊರಾಳೆ ಸಾಯಿ ಮಂದಿರ ಟ್ರಸ್ಟ್ ನ ಯುವ ಸ್ವಯಂ ಸೇವಕರು ಮಾಡುತ್ತಿರುವ ಈ ಅತ್ಯುತ್ತಮ ಸೇವೆಯನ್ನು ಕೊಂಡಾಡಿ ಶಿರಡಿಯ ಸ್ಥಳೀಯ ಪತ್ರಿಕೆಗಳಾದ ಲೋಕಮಾತಾ ಮತ್ತು ಸರೋಮಥ್ ಗಳು ಒಳ್ಳೆಯ ಪ್ರಶಂಸೆಯ ಲೇಖನಗಳನ್ನು ಪ್ರಕಟಿಸಿದ್ದವು. 

ಕೊರಾಳೆ ಸಾಯಿ ಮಂದಿರ ಟ್ರಸ್ಟ್ ಗೆ ಬರುವ ದೇಣಿಗೆ ಹಣದಿಂದ ಶಾಲೆಯ ಬ್ಯಾಗ್, ಪುಸ್ತಕಗಳು, ಪೆನ್ಸಿಲ್ ಗಳು ಮತ್ತು ಸಮವಸ್ತ್ರಗಳನ್ನು ಕೊಂಡು ಬಡ ಮಕ್ಕಳಿಗೆ ನೀಡಲಾಗುತ್ತಿದೆ. ಅಲ್ಲದೇ, ಬಡ ಹೆಣ್ಣು ಮಕ್ಕಳಿಗೆ ಓದಲು ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಅಲ್ಲದೇ, ಗ್ರಾಮದ ಅನೇಕ ಹೆಣ್ಣು ಮಕ್ಕಳಿಗೆ ಹೊಲಿಗೆಯ ತರಬೇತಿಯನ್ನು ಕಲಿಯಲು ಪ್ರೋತ್ಸಾಹ ನೀಡಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುತ್ತಿದೆ. 

ಕೊರಾಳೆ ಸಾಯಿ ಮಂದಿರ ಟ್ರಸ್ಟ್ ನ ಮುಂದಿನ ಯೋಜನೆಗಳು: 

ದೇವಾಲಯದ ಟ್ರಸ್ಟ್ ಮಂದಿರದ ಮುಂದೆ ಇರುವ ಸ್ಥಳದಲ್ಲಿ ಸ್ವಲ್ಪ ಜಾಗವನ್ನು ಖರೀದಿ ಮಾಡಿರುತ್ತದೆ. ಈ ಸ್ಥಳದಲ್ಲಿ ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕವಿರುವಂತೆ ಎರಡು ದೊಡ್ಡದಾದ ಹಾಲ್ ಗಳನ್ನು ನಿರ್ಮಿಸುತ್ತಿದೆ. ಅಲ್ಲದೇ, ಕೆಲವು ಸಣ್ಣ ಸಣ್ಣ ಕೋಣೆಗಳನ್ನು ಕೂಡ ನಿರ್ಮಿಸುತ್ತಿದೆ. ಅಲ್ಲದೇ, ಬೇರೆ ಬೇರೆ ಪ್ರಸಾಧನ ಮತ್ತು ಸ್ನಾನ ಗೃಹಗಳನ್ನು ಕೂಡ ನಿರ್ಮಿಸುತ್ತಿದೆ. ರಾಮನವಮಿಯ ಸಮಯದಲ್ಲಿ ಸಾವಿರಾರು ಪಾದಯಾತ್ರಿಗಳು ಬಂದಾಗ ಉಳಿದುಕೊಳ್ಳಲು ತೊಂದರೆಯಾಗದಿರಲಿ ಎಂದು ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. 

ಕೊರಾಳೆ ಗ್ರಾಮಸ್ಥರ ಅನುಕೂಲಕ್ಕಾಗಿ ಉಚಿತ ದವಾಖಾನೆಯನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. 

ಉಚಿತ ಬೋರ್ಡಿಂಗ್ ವ್ಯವಸ್ಥೆ ಇರುವ ಆಂಗ್ಲ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿ ಅಲ್ಲಿ ಅನಾಥ ಮಕ್ಕಳು,   ಏಡ್ಸ್ ರೋಗಿಗಳ ಮಕ್ಕಳು ಮತ್ತು ವೈಶ್ಯೆಯರಿಂದ ಪರಿತ್ಯಕ್ತರಾದ ಮಕ್ಕಳ ಕಲ್ಯಾಣಕ್ಕಾಗಿ ಊಟ, ವಸತಿ ಮತ್ತು ಶಿಕ್ಷಣವನ್ನು ನೀಡುವ ಅತ್ಯುತ್ತಮ ಯೋಜನೆಯನ್ನು ಹೊಂದಿದೆ.  

ಅಹಮದ್ ನಗರದಲ್ಲಿ ನೋಂದಣಿ ಕ್ರಮ ಸಂಖ್ಯೆ: A1197 ನ ಅಡಿಯಲ್ಲಿ   "ಶ್ರೀ ಸಾಯಿಬಾಬಾ ಮಂದಿರ ಟ್ರಸ್ಟ್, ಕೊರಾಳೆ" ಎಂಬ ಹೆಸರಿನಲ್ಲಿ ದತ್ತಿ ಸಂಸ್ಥೆಯಾಗಿ ನೋಂದಣಿ ಮಾಡಲಾಗಿರುತ್ತದೆ. 

ಟ್ರಸ್ಟ್ ಆಡಳಿತ ಮಂಡಳಿಯ ವಿವರ: 

ಶ್ರೀ.ಸದಾನಂದ ಎಸ್.ಗೋಡೆ -  ಅಧ್ಯಕ್ಷರು 
ಶ್ರೀಮತಿ. ಹೇಮಾ ಶಿರ್ಕೆ - ಉಪಾಧ್ಯಕ್ಷೆ 
ಶ್ರೀ.ಸಂಜಯ್ ದರನ್ದಲೇ - ಕಾರ್ಯದರ್ಶಿ 
ಶ್ರೀ.ವಿನಾಯಕ್ ವರ್ಗಾಡೆ - ಸದಸ್ಯರು 
ಶ್ರೀ.ಪ್ರದೀಪ್ ಭಾಯಿ ಪಂಚಾಲ್ - ಸದಸ್ಯರು 
ಶ್ರೀ.ಸಂಜಯ್ ಸವಾಲೇ - ಸದಸ್ಯರು 
ಶ್ರೀ.ಕಲೀಮ್ ಭಾಯಿ ಪಟಾಣ್ - ಸದಸ್ಯರು 

ದೇಣಿಗೆಯನ್ನು ಸ್ವೀಕರಿಸುವ ವಿಶೇಷ ಪರಿ: 

ದೇಣಿಗೆಯನ್ನು ಹಣದ ಅಥವಾ ವಸ್ತುಗಳ ರೂಪದಲ್ಲಿ ಸಾಯಿಭಕ್ತರಿಂದ ಪಡೆಯಲಾಗುತ್ತಿದೆ. ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ರಸೀತಿಯನ್ನು ನೀಡಲಾಗುತ್ತಿದೆ ಮತ್ತು "ವಂದನಾ ಪತ್ರ" ವನ್ನು ಕೂಡ ಕಳಿಸಲಾಗುತ್ತಿದೆ. ಆದರೆ ಟ್ರಸ್ಟ್ ನ ಯಾವ ಸದಸ್ಯರೂ ಮಂದಿರಕ್ಕೆ ಬರುವ ಸಾಯಿ ಭಕ್ತರಿಂದ ದೇಣಿಗೆಗಾಗಿ ಮನವಿ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ದೇಣಿಗೆಯನ್ನು ನೀಡಿದವರ ಹೆಸರನ್ನು ಮಂದಿರದಲ್ಲಿ ಎಲ್ಲೂ ಹಾಕಲಾಗುವುದಿಲ್ಲ ಅಥವಾ ಅವರು ನೀಡಿದ ಕಾಣಿಕೆಯ ಮೇಲೆ ಹೆಸರನ್ನು ಬರೆಯಿಸಿದರೆ ಅದನ್ನು ಸ್ವೀಕರಿಸಲಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಈ ಜಗತ್ತಿನಲ್ಲಿ ಶಿರಡಿ ಸಾಯಿಬಾಬಾ ಒಬ್ಬರೇ ಕೊಡುವವರು ಮತ್ತು ಪಡೆಯುವವರು ಮತ್ತು ಸಾಯಿಬಾಬಾರವರ ಒಪ್ಪಿಗೆಯಿಲ್ಲದೆ ಯಾರೂ ಕೂಡ ಯಾವುದನ್ನೇ ಆಗಲಿ ದಾನವಾಗಿ ನೀಡಲು ಸಾಧ್ಯವಿಲ್ಲ ಎಂದು ಟ್ರಸ್ಟ್ ನ ಸದಸ್ಯರು ಅಭಿಪ್ರಾಯ ಪಡುತ್ತಾರೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ನಂದುರ್ಬಿ ಹತ್ತಿರ, ಕೊರಾಳೆ ಗ್ರಾಮ, ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ. 

ವಿಳಾಸ: 

ಶ್ರೀ ಸಾಯಿಬಾಬಾ ಮಂದಿರ ಟ್ರಸ್ಟ್, 
ಕೊರಾಳೆ ಗ್ರಾಮ,  ರಹತಾ ತಾಲ್ಲೂಕು, 
ಅಹಮದ್ ನಗರ, ಜಿಲ್ಲೆ, ಮಹಾರಾಷ್ಟ್ರ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಸದಾನಂದ ಎಸ್.ಗೋಡೆ -  ಅಧ್ಯಕ್ಷರು 

ದೂರವಾಣಿ ಸಂಖ್ಯೆಗಳು: 

+91 99754 55835 / +91 98228 56666

ಇ ಮೇಲ್ ವಿಳಾಸ: 



ಅಂತರ್ಜಾಲ ತಾಣ: 



ಮಾರ್ಗಸೂಚಿ: 

ನಂದುರ್ಬಿ ಹತ್ತಿರ. ಶಿರಡಿಯಲ್ಲಿರುವ ದ್ವಾರಾವತಿ ಭಕ್ತನಿವಾಸ ಮತ್ತು ಸಾಯಿಬಾಬಾ ಆಸ್ಪತ್ರೆಯ ಎದುರುಗಡೆ ರಸ್ತೆಯಲ್ಲಿ ಸುಮಾರು 12  ಕಿಲೋಮೀಟರ್ ಕ್ರಮಿಸಿದರೆ ಕೊರಾಳೆ ಗ್ರಾಮ ಸಿಗುತ್ತದೆ. ಸ್ವಂತ ವಾಹನದಲ್ಲಿ ಅಥವಾ ಯಾವುದಾದರೂ ಆಟೋ ಅಥವಾ ವಾಹನವನ್ನು ಶಿರಡಿಯಿಂದ ಈ ಸ್ಥಳಕ್ಕೆ ಹೋಗಿ ಬರುವುದಕ್ಕೆ ಮೊದಲೇ ಗೊತ್ತು ಮಾಡಿಕೊಂಡು ಹೋಗಿ ಬರುವುದು ಸೂಕ್ತ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಖ್ಯಾತ ಹಿಂದಿ ಚಿತ್ರನಟ ಅಕ್ಷಯ್ ಖನ್ನ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಹಿಂದಿ ಚಿತ್ರನಟ ಶ್ರೀ.ಅಕ್ಷಯ್ ಖನ್ನರವರು ಇದೇ ತಿಂಗಳ 24ನೇ ಜನವರಿ 2012, ಮಂಗಳವಾರದಂದು  ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, January 22, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಅಂಗವಿಕಲರಿಗೆ ಉಚಿತ ವೈದ್ಯಕೀಯ ಉಪಕರಣಗಳ ನೀಡಿಕೆ  ಶಿಬಿರದ ಆಯೋಜನೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸಂಸ್ಥಾನದ ಆವರಣದಲ್ಲಿ ಅಂಗವಿಕಲರಿಗೆ ಉಚಿತ ವೈದ್ಯಕೀಯ ಉಪಕರಣಗಳ ನೀಡಿಕೆ  ಶಿಬಿರವನ್ನು ಇದೇ ತಿಂಗಳ 22ನೇ ಜನವರಿ 2012, ಭಾನುವಾರದಂದು ಆಯೋಜಿಸಲಾಗಿತ್ತು. ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಕಾರ್ಯಕ್ರಮದಲ್ಲಿ ಈ ಭಾಗವಹಿಸಿ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಅಂಗವಿಕಲರಿಗೂ ಉಚಿತವಾಗಿ ವೈದ್ಯಕೀಯ ಉಪಕರಣಗಳನ್ನು ವಿತರಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, January 20, 2012

ಪ್ರಖ್ಯಾತ ಕೈಗಾರಿಕೋದ್ಯಮಿ ಶ್ರೀಮತಿ.ಕೋಕಿಲಾಬೆನ್ ಅಂಬಾನಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 
ಪ್ರಖ್ಯಾತ ಕೈಗಾರಿಕೋದ್ಯಮಿ ಶ್ರೀಮತಿ.ಕೋಕಿಲಾಬೆನ್ ಅಂಬಾನಿಯವರು ಇದೇ ತಿಂಗಳ 20ನೇ ಜನವರಿ 2012, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, January 19, 2012

ಚೆನ್ನೈನ ಶ್ರೀ ಸಾಯಿನಾಥ ಧ್ಯಾನ ಮಂಟಪಂ ವತಿಯಿಂದ ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ - ಕೃಪೆ: ಸಾಯಿ ಅಮೃತಧಾರಾ.ಕಾಂ  

ಚೆನ್ನೈ ನ ಶ್ರೀ ಸಾಯಿನಾಥ ಧ್ಯಾನ ಮಂಟಪಂ ಮುಂದಿನ ತಿಂಗಳ 16ನೇ ಫೆಬ್ರವರಿ 2012 (ಗುರುವಾರ) ಮತ್ತು 17ನೇ ಫೆಬ್ರವರಿ 2012 (ಶುಕ್ರವಾರ) ದಂದು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ಕಾರ್ಯಕ್ರಮದ ವಿವರಗಳನ್ನು ಈ ಕೆಳಗೆ ಲಗತ್ತಿಸಿರುವ ಆಮಂತ್ರಣ ಪತ್ರದಲ್ಲಿ ಸಾಯಿ ಭಕ್ತರು ನೋಡಬಹುದಾಗಿದೆ. 



ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಆಡಳಿತ ಮಂಡಳಿಯು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, January 14, 2012

ಶಿರಡಿ ಸಾಯಿಬಾಬಾನಿಗೆ ಚಿನ್ನದ ತಟ್ಟೆ ಮತ್ತು ಲೋಟಗಳನ್ನು ಕಾಣಿಕೆಯಾಗಿ ನೀಡಿದ ಮುಂಬೈನ  ಸಾಯಿಭಕ್ತ - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈನ ಸಾಯಿಭಕ್ತರಾದ ಶ್ರೀ.ಗೋಯಂಕಾರವರು ಇದೇ ತಿಂಗಳ 14ನೇ ಜನವರಿ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾನಿಗೆ 2586 ಗ್ರಾಂ ತೂಕದ 63.34 ಲಕ್ಷ ಬೆಳೆಬಾಳುವ ಚಿನ್ನದ ತಟ್ಟೆ ಮತ್ತು ಲೋಟಗಳನ್ನು ಕಾಣಿಕೆಯಾಗಿ ನೀಡಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, January 12, 2012

ಹಿರಿಯ ಸಾಯಿಭಕ್ತ ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ (ಡಿಸೆಂಬರ್ 1917  - ಜನವರಿ 2012)

ಹಿರಿಯ ಸಾಯಿಭಕ್ತರಾದ ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು ಇದೇ ತಿಂಗಳ 11ನೇ ಜನವರಿ 2012, ಬುಧವಾರದಂದು ಶಿರಡಿಯಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ತಮ್ಮ ಹುಟ್ಟೂರಾದ ನಿಮೋಣ್ಗಾವ್ ನಲ್ಲಿ ಕೊನೆಯುಸಿರೆಳೆದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಇವರು "ದತ್ತ" ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಇವರು ಶಿರಡಿ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ ನೀಡಿದ್ದ ಪವಿತ್ರ ಪಾದುಕೆಗಳನ್ನು ಹೊಂದಿರುವ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ ನಿಮೋಣ್ಕರ್ ರವರ ಚಿಕ್ಕಪ್ಪನವರು. 

ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು ತಮ್ಮ ಮರಣವನ್ನು ಒಂದು ವಾರದ ಮೊದಲೇ ಅರಿತಿದ್ದರು. ಕಳೆದ ವಾರವಷ್ಟೇ ಅವರು ಶಿರಡಿಗೆ ಹೋಗಿ ತಮಗೆ ತೀರ ಹತ್ತಿರದವರಾದ ಸ್ನೇಹಿತರೊಬ್ಬರನ್ನು ಭೇಟಿ ಮಾಡಿ ಅವರಿಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸಿದ್ದರು. ಆದರೆ, ಸಮಾಧಿ ಮಂದಿರಕ್ಕೆ ಮಾತ್ರ ದರ್ಶನಕ್ಕೆ ಹೋಗಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗ ಅವರು "ಇನ್ನು ಸ್ವಲ್ಪ ದಿನಗಳಲ್ಲೇ ನಾನು ಸಾಯಿಬಾಬಾರವರ ಬಳಿಯೇ ಹೋಗುತ್ತಿರುವಾಗ, ಸಮಾಧಿ ಮಂದಿರಕ್ಕೆ ಏಕೆ ಹೋಗಬೇಕು?" ಎಂದು ಮರುಪ್ರಶ್ನೆ ಮಾಡಿದ್ದರು ಎಂದು ಅವರ ಮನೆಯವರು ಮತ್ತು ಸ್ನೇಹಿತರು ಈ ಅಂತರ್ಜಾಲ ತಾಣಕ್ಕೆ ತಿಳಿಸಿರುತ್ತಾರೆ.

ಇವರ ಅಂತಿಮ ವಿಧಿ ವಿಧಾನಗಳನ್ನು ವಿಧ್ಯುಕ್ತವಾಗಿ ನಿಮೋಣ್ಗಾವ್ ನಲ್ಲಿ ನೆರವೇರಿಸಲಾಯಿತು. ಇವರ ಅಂತಿಮ ಯಾತ್ರೆಗೆ ಕೆಲವೇ ಗಳಿಗೆ ಮುಂಚಿತವಾಗಿ ಶಿರಡಿ ಸಾಯಿಬಾಬಾರವರು ಯಾರೋ ಒಬ್ಬ ಅನಾಮಧೇಯ ಭಕ್ತರೊಬ್ಬರ ರೂಪದಲ್ಲಿ ಶಿರಡಿ ಗ್ರಾಮದಿಂದ ಬಂದು ಸಾಯಿಬಾಬಾರವರ ವಿಗ್ರಹದ ಮೇಲಿನ ಚಂದನ ಹಾಗೂ ಸಾಯಿಬಾಬಾರವರ ಸಮಾಧಿಯ ಮೇಲಿದ್ದ ಶೇಷವಸ್ತ್ರವನ್ನು ಅರ್ಪಿಸಿದ ಮೇಲೆ ಅಂತಿಮ ಯಾತ್ರೆಯ ಮೆರವಣಿಗೆ ಪ್ರಾರಂಭವಾಗಿದ್ದು ಸಾಯಿಬಾಬಾರವರ ಒಂದು ಪವಾಡವೇ ಸರಿ!!!!!!

ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು 1917 ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಸಾಯಿಬಾಬಾರವರ ದಯೆಯಿಂದ ಪವಾಡಸದೃಶ ರೀತಿಯಲ್ಲಿ ಜನಿಸಿದರು. ಅದರ ಸಾರಾಂಶವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ: 

1917 ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಪುಣೆಯಲ್ಲಿ ಪ್ಲೇಗ್ ಮಹಾಮಾರಿ ಪ್ರಾರಂಭವಾಗಿ ಎಲ್ಲೆಡೆ ವಿಪರೀತ ಹಾನಿಯನ್ನು ಮಾಡಿತ್ತು. ನಾನಾ ಸಾಹೇಬ್ ನಿಮೋಣ್ಕರ್ ರವರ ಪುತ್ರರಾದ ಸೋಮನಾಥ್ ರವರು ತಮ್ಮ ಎರಡು ವರ್ಷದ ಮಗ ಗೋಪಾಲ್ ರಾವ್ ನೊಂದಿಗೆ ನಿಮೋಣ್ ಗೆ ಹೋಗಿ ಬರಲು ನಿರ್ಧರಿಸಿದರು. ಮಾರ್ಗ ಮಧ್ಯದಲ್ಲಿ ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಪಡೆದರು. ಶಿರಡಿಯನ್ನು ಬಿಟ್ಟು ಹೊರಡುವಾಗ ಸಾಯಿಬಾಬಾರವರು "ಪೋರ ಲಾ ಜೀವ್ ಲಾವ್" (ಮಗುವನ್ನು ಉಳಿಸು) ಎಂದು ಹೇಳಿ ಉಧಿಯನ್ನು ನೀಡಿದರು. ಸೋಮನಾಥ್ ರವರು ಸಾಯಿಯವರು ತಮ್ಮ ಮಗ ಗೋಪಾಲ್ ರಾವ್ ಬಗ್ಗೆ ಹೇಳುತ್ತಿದ್ದಾರೆಂದು ತಿಳಿದು ಆ ಉಧಿಯನ್ನು ತಮ್ಮ ಮಗನಿಗೆ ನೀಡಿದರು.

ಸೋಮನಾಥ್ ಮತ್ತು ಅವರ ಮಗ ಗೋಪಾಲ್ ರಾವ್ ರವರು ನಿಮೋಣ್ಗಾವ್ ತಲುಪಿದಾಗ ಅವರ ಸೋದರನ ಮಗ ದತ್ತಾತ್ರೇಯ ಸಾವಿನ ದವಡೆಯಲ್ಲಿದ್ದರು. ಕೇವಲ 12 ದಿವಸದ ಮಗುವಾದ ದತ್ತಾತ್ರೇಯರವರ ಇಡೀ ದೇಹವು ನೀಲಿ ಬಣ್ಣಕ್ಕೆ ತಿರುಗಿತ್ತು ಮತ್ತು ಮಗುವು ಉಸಿರಾಡಲು ಬಹಳ ಕಷ್ಟಪಡುತ್ತಿತ್ತು. ಆಗ ಸೋಮನಾಥ್ ರವರಿಗೆ ಬಾಬಾರವರು ಉಧಿಯನ್ನು ತಮಗೆ ನೀಡಿದ್ದು ಆ ಮಗುವನ್ನು ಉಳಿಸಲು ಎಂದು ಅರ್ಥವಾಯಿತು. ಆಗ ದಿಕ್ಕೆಟ್ಟ ಸೋಮನಾಥ್ ರವರು ಉಧಿಗಾಗಿ ಬಹಳ ಹುಡುಕಾಡಿದರು. ಆದರೆ, ಪ್ರಯಾಣದ ಮಾರ್ಗ ಮಧ್ಯದಲ್ಲಿ ಆ ಉಧಿಯ ಪೊಟ್ಟಣ ಎಲ್ಲಿಯೋ ಬಿದ್ದು ಹೋಗಿತ್ತು. ಸೋಮನಾಥ್ ರವರು ಧೃತಿಗೆಡದೇ ಮಗುವನ್ನು ತಮ್ಮ ಕೈನಲ್ಲಿ ಎತ್ತಿಕೊಂಡು ಆ ಮಗುವನ್ನು ಉಳಿಸಿಕೊಡುವಂತೆ ಸಾಯಿಬಾಬಾರವರನ್ನು ಅತ್ಯಂತ ದೀನರಾಗಿ ಪ್ರಾರ್ಥಿಸಿದರು. ಸಾಯಿಯವರನ್ನು ಪ್ರಾರ್ಥಿಸಿದ ಕೇವಲ 15 ನಿಮಿಷಗಳಲ್ಲಿ ಮಗುವಿನ ದೇಹವು ಬಿಸಿಯಾಗಲು ಪ್ರಾರಂಭಿಸಿ ಸಾಮಾನ್ಯ ಸ್ಥಿತಿಗೆ ಬಂದಿತು. ಸಹಜ ಉಸಿರಾಟ ಪ್ರಾರಂಭವಾಗಿ ಮಗುವಿನ ದೇಹಸ್ಥಿತಿಯಲ್ಲಿ ಸುಧಾರಣೆ ಕಂಡಿತು. ಸಾಯಿಬಾಬಾರವರ ದಯೆ ಹಾಗೂ ಆಶೀರ್ವಾದದಿಂದ ಮಗುವಿಗೆ ಜೀವ ಮರಳಿ ಬಂದಿದ್ದರಿಂದ ಮಗುವಿಗೆ ಮನೆಯವರೆಲ್ಲರೂ ಸೇರಿ "ದತ್ತ" ಎಂದು ನಾಮಕರಣ ಮಾಡಿದರು. 

ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ ಮತ್ತು ಅದರ ಕನ್ನಡ ರೂಪಾಂತರ  ಸಾಯಿಅಮೃತವಾಣಿ.ಬ್ಲಾಗ್ಸ್ಪಾಟ್.ಕಾಮ್ ನ ಬಳಗವು ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಶಿರಡಿ ಸಾಯಿಬಾಬಾರವರನ್ನು ಅತ್ಯಂತ ವಿನಯದಿಂದ ಪ್ರಾರ್ಥಿಸುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, January 11, 2012

ಸಾಯಿ ಮಹಾಭಕ್ತ - ಶ್ರೀ.ಚೋಟು ಭಯ್ಯಾ ಪಾರುಲ್ಕರ್ ಆಲಿಯಾಸ್ ಕೃಷ್ಣಾಜಿ ನಾರಾಯಣ್ ಪಾರುಲ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಚೋಟು ಭಯ್ಯಾ ಪಾರುಲ್ಕರ್ ಆಲಿಯಾಸ್ ಕೃಷ್ಣಾಜಿ ನಾರಾಯಣ್ ಪಾರುಲ್ಕರ್ ರವರು ಅನನ್ಯ ಸಾಯಿಭಕ್ತರಾಗಿದ್ದರು. ಸಾಯಿಬಾಬಾರವರು ಕೂಡ ಇವರನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಸಾಯಿಬಾಬಾರವರ ದಿವ್ಯ ತೇಜಸನ್ನು ಕಂಡು ರೋಮಾಂಚನಗೊಂಡ ಮುಂಬೈನ ಸಾಯಿಭಕ್ತ ಹಾಗೂ ಕಲಾವಿದರಾದ ಶ್ರೀ.ಎಂ.ರಾಧಾಕೃಷ್ಣ ರಾವ್ ರವರು 7ನೇ ಜೂನ್ 1914 ರಂದು ಸಾಯಿಬಾಬಾರವರ ಒಂದು ರೇಖಾಚಿತ್ರವನ್ನು ಬಿಡಿಸಿದರು. ರೇಖಾಚಿತ್ರವನ್ನು ನೋಡಿ ಕಾಕಾ ಸಾಹೇಬ್ ದೀಕ್ಷಿತ್, ಕಾಕಾ ಮಹಾಜನಿ ಮತ್ತು ಎಲ್ಲಾ ಭಕ್ತರೂ ಬಹಳ ಇಷ್ಟಪಟ್ಟರು. ಆದರೆ, ಬಾಬಾರವರು ಆ ಚಿತ್ರವನ್ನು ನೋಡಿದರೆ ಬಹಳ ಕೋಪಗೊಳ್ಳುವರು ಎಂದೂ ಕೂಡ ಚೆನ್ನಾಗಿ ಮನಗಂಡಿದ್ದರು. ಆದುದರಿಂದ ಆ ಚಿತ್ರವನ್ನು ದ್ವಾರಕಾಮಾಯಿಯಲ್ಲಿ ಇಟ್ಟು ಅದರ ಮೇಲೆ ಯಾರಿಗೂ ಕಾಣದಂತೆ ಒಂದು ಬಿಳಿಯ ಬಟ್ಟೆಯನ್ನು ಹೊದಿಸಿದರು. ಸಾಯಿಬಾಬಾರವರ ಮನಸ್ಥಿತಿ ಸರಿಯಾಗಿರುವಾಗ ಅದನ್ನು ತೋರಿಸಬೇಕೆಂದು ನಿರ್ಧರಿಸಿದ್ದರು. ಒಂದು ದಿನ ಮಧ್ಯಾನ್ಹ ಆರತಿಯಾದ ನಂತರ ಸಾಯಿಬಾಬಾರವರು ಪ್ರಸನ್ನವದನರಾಗಿದ್ದರು. ಇದೇ ಸರಿಯಾದ ಸಮಯ ಎಂದು ಮನಗಂಡ ಶ್ಯಾಮರವರು "ದೇವಾ, ಮುಂಬೈನ ಕಲಾವಿದರೊಬ್ಬರು ನಿಮ್ಮ ರೇಖಾಚಿತ್ರವನ್ನು ಬಿಡಿಸಿದ್ದಾರೆ. ನೀವು ಅದನ್ನು ನೋಡಬೇಕೆಂಬುದು ನಮ್ಮೆಲ್ಲರ ಆಶಯ" ಎಂದರು. ಶ್ಯಾಮರವರು ಮಾತನ್ನು ಮುಗಿಸುವ ಮೊದಲೇ ಬಾಬಾರವರು "ಎಲ್ಲಿದೆ ಆ ರೇಖಾಚಿತ್ರ? ಈ ಕೂಡಲೇ ಅದನ್ನು ನನ್ನ ಬಳಿಗೆ ತನ್ನಿ. ನನ್ನ ರೇಖಾಚಿತ್ರವನ್ನು ಏಕೆ ಬಿಡಿಸಿದ್ದೀರಿ?" ಗರ್ಜಿಸಿದರು. 

ದ್ವಾರಕಾಮಾಯಿಯಲ್ಲಿ ನೆರೆದಿದ್ದ ಭಕ್ತರು ಸಾಯಿಬಾಬಾರವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಬೇಕೆಂದು ಕೂಡಲೇ ಹೋಗಿ ಆ ರೇಖಾಚಿತ್ರವನ್ನು ತಂದು ಬಾಬಾರವರ ಮುಂದೆ ಇರಿಸಿದರು. ಆ ರೇಖಾಚಿತ್ರವನ್ನು ನೋಡಿದ ಸಾಯಿಬಾಬಾರವರು ತಮ್ಮ ಕಣ್ಣುಗಳನ್ನು ತಿರುಗಿಸುತ್ತಾ ಸಟಕಾವನ್ನು ತೆಗೆದುಕೊಂಡು ಆ ರೇಖಾಚಿತ್ರವನ್ನು ಹೊಡೆಯುವಂತೆ ಸನ್ನೆ ಮಾಡುತ್ತಾ ತಮ್ಮ ಕೈಗಳನ್ನು ಹತ್ತಿರ ತೆಗೆದುಕೊಂಡು ಹೋದರು. ಆದರೆ, ಆ ಕೂಡಲೇ ಅವರು ಶಾಂತರಾದರು. ಶ್ಯಾಮರವರು "ದೇವಾ, ಈ ರೇಖಾಚಿತ್ರವನ್ನು ಏನು ಮಾಡಬೇಕು" ಎಂದು ಕೇಳಿದರು. ಅಲ್ಲಿ ನೆರೆದಿದ್ದ ಭಕ್ತರು ಸಾಯಿಬಾಬಾ ಏನು ಹೇಳುತ್ತಾರೆ ಎಂದು ಕಾತುರದಿಂದ ನಿಂತು ನೋಡುತ್ತಿದ್ದರು. ಸಾಯಿಬಾಬಾರವರು ನಾಲ್ಕೂ ದಿಕ್ಕುಗಳಲ್ಲಿ ಮತ್ತು ಅಲ್ಲಿ ನೆರೆದಿದ್ದ ಎಲ್ಲ ಭಕ್ತರನ್ನೂ ಒಮ್ಮೆ ಅವಲೋಕನೆ ಮಾಡಿದರು. ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರು ಸಾಯಿಬಾಬಾರವರ ಪಕ್ಕದಲ್ಲೇ ನಿಂತಿದ್ದರು. ಸಾಯಿಬಾಬಾರವರು ಅವರ ಕಡೆಗೆ ತಿರುಗಿ ಮೃದುವಾದ ದನಿಯಲ್ಲಿ "ಈ ರೇಖಾಚಿತ್ರವನ್ನು ನಿನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗು. ನಿನ್ನ ಹತ್ತಿರುವ ಎಲ್ಲವೂ ಬಂಗಾರವಾಗುತ್ತದೆ" ಎಂದು ನುಡಿದರು. ಆ ರೇಖಾಚಿತ್ರವು 2 1/2 x 3 1/2 ಇಂಚು ಆಯಾಮದ್ದಾಗಿರುತ್ತದೆ. ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರು ಆ ರೇಖಾಚಿತ್ರವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ನಿತ್ಯವೂ ಪೂಜಿಸಲು ಆರಂಭಿಸಿದರು. 

2 1/2 x 3 1/2 ಆಯಾಮದ ಸಾಯಿಯವರ ರೇಖಾಚಿತ್ರ

ಇನ್ನೊಂದು ಬಾರಿ ಪುಣೆಯ ಸಾಯಿಭಕ್ತರೊಬ್ಬರು ಸಾಯಿಬಾಬಾರವರಿಗೆ ಪಾದುಕೆಗಳನ್ನು ಕಾಣಿಕೆಯಾಗಿ ಅರ್ಪಿಸಿದರು. ಆ ದಿನ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಎಂದಿನಂತೆ ಬರಿ ಕಾಲಿನಲ್ಲಿ ಹೋಗದೇ ಆ ಪಾದುಕೆಗಳನ್ನು ಹಾಕಿಕೊಂಡು ಹೋದರು. ಲೇಂಡಿ ಉದ್ಯಾನವನದಿಂದ ಬಂದ ನಂತರ ಆ ಪಾದುಕೆಗಳನ್ನು ಕಾಲಿನಿಂದ ತೆಗೆದು, ತಮ್ಮ ಕಾಲುಗಳನ್ನು ತೊಳೆದುಕೊಂಡು ದ್ವಾರಕಾಮಾಯಿಯ ಪೂಜಾಸ್ಥಳಕ್ಕೆ ಹೋದರು. ನಂತರ ಆ ಪವಿತ್ರ ಪಾದುಕೆಗಳನ್ನು ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರಿಗೆ ನೀಡಿದರು. 

 ಸಾಯಿಬಾಬಾರವರ ಪಾದುಕೆಗಳು

ಪವಿತ್ರ ಪಾದುಕೆಗಳ ವೀಡಿಯೋ ದೃಶ್ಯಾವಳಿ 

ಈ ರೇಖಾಚಿತ್ರ ಹಾಗೂ ಪವಿತ್ರ ಪಾದುಕೆಗಳು ಈಗಲೂ ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರ ವಂಶಸ್ಥರ ಬಳಿ ಇರುತ್ತದೆ. ಮಧ್ಯಪ್ರದೇಶದ ಹರ್ದಾದಲ್ಲಿರುವ ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರ ವಂಶಸ್ಥರ ಮನೆಯಲ್ಲಿ ಈ ರೇಖಾಚಿತ್ರ ಹಾಗೂ ಪವಿತ್ರ ಪಾದುಕೆಗಳನ್ನು ಪ್ರತಿನಿತ್ಯ ವಿಧ್ಯುಕ್ತವಾಗಿ ಪೂಜಿಸಲಾಗುತ್ತಿದೆ. 

ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರ 3ನೇ ತಲೆಮಾರಿಗೆ ಸೇರಿದವರಾದ ಶ್ರೀ.ಕಿಶೋರ್ ರಂಗನಾಥ್ ಪಾರುಲ್ಕರ್ ರವರು ಕಳೆದ ತೊಂಬತ್ತು ವರ್ಷದಿಂದ ಪೂಜಿಸುತ್ತಿದ್ದಂತೆ ಈ ಪವಿತ್ರ ಪಾದುಕೆ ಮತ್ತು ರೇಖಾಚಿತ್ರವನ್ನು ತಾವು ಕೂಡ ಪ್ರತಿನಿತ್ಯವೂ ಅದೇ ರೀತಿಯ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸುತ್ತಿದ್ದಾರೆ. ಈ ಪವಿತ್ರ ಪಾದುಕೆಗಳನ್ನು ಪೂಜಿಸುವ ಅವಕಾಶ ಮತ್ತು ಯೋಗ ತಮಗೆ ಸಿಕ್ಕಿದ್ದಕ್ಕೆ ಅತ್ಯಂತ ಸಂತೋಷ  ಹಾಗೂ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿಭಕ್ತ ಸೇವಾ ಧುರೀಣ - ಶ್ರೀ.ಆರ್.ಎ.ಕುಮಾರಸ್ವಾಮೀಜಿ - ಕೃಪೆ: ಸಾಯಿಅಮೃತಧಾರಾ.ಕಾಂ 


ವಿನಯಶೀಲ,ಸಗುಣವಂತ ಸಾಯಿಭಕ್ತರಾದ ಶ್ರೀ.ಆರ್.ಎ.ಕುಮಾರಸ್ವಾಮೀಜಿಯವರು ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಹಾರಾಷ್ಟ್ರದ ಶಿರಡಿಯಲ್ಲಿರುವ ಶ್ರೀ.ಶಿರಡಿ ಸಾಯಿ ಸೇವಾ ಸದನ ಆಶ್ರಮದ ಸಂಸ್ಥಾಪಕರಾಗಿರುತ್ತಾರೆ. ಇವರು 6ನೇ ಡಿಸೆಂಬರ್ 1955   ರಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪೆದ್ದರಾಜುಪಲ್ಲಿಯಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ವಿಶ್ವನಾಥನ್ ಮತ್ತು ತಾಯಿಯವರು ದಿವಂಗತ ಶ್ರೀಮತಿ.ಲಕ್ಷ್ಮಿ ನರಸಮ್ಮನವರು. ಇವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯದಿದ್ದರೂ ಕೂಡ ಬಾಲ್ಯದಲ್ಲಿಯೇ ಇವರ ತಾತನವರಾದ ಶ್ರೀ.ಶ್ರೀ.ಶ್ರೀ.ಸ್ವಾಮಿ ಸಂಜೀವಯ್ಯ ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ಪ್ರಗತಿಯನ್ನು ಹೊಂದಿದರು. ನಂತರ 1978 ನೇ ಇಸವಿಯಲ್ಲಿ ಸಾಯಿ ಮಹಾಭಕ್ತರಾದ ಪರಮ ಪೂಜ್ಯ ಶ್ರೀ.ಎಕ್ಕಿರಾಲ ಭಾರದ್ವಾಜ ರವರ ಸಂಪರ್ಕಕ್ಕೆ ಬಂದು ಅವರ ಮಾರ್ಗದರ್ಶನದಲ್ಲಿ ಇವರು ಅನನ್ಯ ಸಾಯಿಭಕ್ತರಾಗಿ ರೂಪುಗೊಂಡರು. ಇವರು ಸಾಯಿಬಾಬಾರವರ ಮೇಲೆ ರಚನೆಯಾಗಿರುವ ಅನೇಕ ಉದ್ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರಿಂದ ಪಡೆದ ಜ್ಞಾನದಿಂದ ಸಾವಿರಾರು ಸಾಯಿಭಕ್ತರಿಗೆ ಬಾಬಾರವರ ಜೀವನ ಮತ್ತು ಉಪದೇಶಗಳನ್ನು ತಲುಪಿಸುವ ಬಹಳ ಒಳ್ಳೆಯ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಾ ಬಂದಿರುತ್ತಾರೆ. 

ಇವರು 2003ನೇ ಇಸವಿಯಲ್ಲಿ ಶಿರಡಿಯಲ್ಲಿ ಶ್ರೀ ಶಿರಡಿ ಸಾಯಿ ಸೇವಾ ಸದನ ಎಂಬ ಆಶ್ರಮವನ್ನು ಆರಂಭಿಸಿದರು. ಶಿರಡಿಗೆ ಬರುವ ಸಾಯಿ ಭಕ್ತರಿಗೆ ಅತಿ ಕಡಿಮೆ ದರದಲ್ಲಿ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸುವುದು ಈ ಆಶ್ರಮ ಸ್ಥಾಪನೆಯ ಮುಖ್ಯ ಉದ್ದೇಶ. ಈ ಆಶ್ರಮವು ಒಟ್ಟು ಇಪ್ಪತ್ತು ಸುಸಜ್ಜಿತ ಕೋಣೆಗಳು ಹಾಗೂ ಧ್ಯಾನ ಮಂದಿರವನ್ನು ಹೊಂದಿರುತ್ತದೆ. ಈ ಧ್ಯಾನ ಮಂದಿರವನ್ನು ಸತ್ಸಂಗಗಳಿಗೆ, ಧ್ಯಾನ ಶಿಬಿರಕ್ಕೆ, ಮದುವೆ, ಹುಟ್ಟಿದ ಹಬ್ಬ, ಅನ್ನಪ್ರಾಶನ, ಭಜನೆ, ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮತ್ತು ನವವಿಧ ಭಕ್ತಿ ತತ್ವಗಳನ್ನು ಆಧರಿಸಿ ಉಪದೇಶ ನೀಡುವ ವಿದ್ವಾಂಸರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಈ ಆಶ್ರಮದಲ್ಲಿ ಅನ್ನದಾನಕ್ಕೆ ದೇಣಿಗೆಯನ್ನು ನೀಡಲು ಕೂಡ ಸಾಯಿ ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. 

ಶ್ರೀ.ಆರ್.ಎ.ಕುಮಾರಸ್ವಾಮೀಜಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 

ಶ್ರೀ.ಶಿರಡಿ ಸಾಯಿ ಸೇವಾ ಸದನ, 
112/24, ಗಾಯಕವಾಡಿ ವಸ್ತಿ, 
ಕಾಳಿಕಾ ನಗರ, ಶಿರಡಿ-423  109, ಮಹಾರಾಷ್ಟ್ರ, ಭಾರತ. 

ದೂರವಾಣಿ ಸಂಖ್ಯೆಗಳು: 

+91 2423 325911 / +91 93259 12011 / +91 94402 76643


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ಬೆಂಗಳೂರು ವತಿಯಿಂದ ಶಿರಡಿ ಪ್ರವಾಸದ ಆಯೋಜನೆ - ಕೃಪೆ: ಶ್ರೀ.ರಾಜೇಶ್, ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರಿನ ವತಿಯಿಂದ ಬರುವ 19ನೇ ಏಪ್ರಿಲ್ 2012,   ಗುರುವಾರದಿಂದ 23ನೇ ಏಪ್ರಿಲ್ 2012, ಸೋಮವಾರದವರಗೆ ಬೆಂಗಳೂರಿನಿಂದ ಶಿರಡಿಗೆ ಪ್ರವಾಸವನ್ನು ಆಯೋಜಿಸಲಾಗಿದೆ. 

ಹೆಚ್ಚಿನ ವಿವರಗಳಿಗೆ ಕೆಳಗೆ ಲಗತ್ತಿಸಿರುವ ಭಿತ್ತಿಪತ್ರವನ್ನು ಸಾಯಿಭಕ್ತರು ನೋಡಬಹುದಾಗಿದೆ.
 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, January 7, 2012

ಪತ್ರಕರ್ತರ ದಿನವನ್ನು ಆಚರಿಸಿದ ಶಿರಡಿ ಸಾಯಿಬಾಬಾ ಸಂಸ್ಥಾನ - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 7ನೇ ಜನವರಿ 2012, ಶನಿವಾರದಂದು ಪತ್ರಕರ್ತರ ದಿನವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ಆಚರಿಸಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಶಿರಡಿಯ ಎಲ್ಲಾ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಅವರುಗಳನ್ನು ಸನ್ಮಾನಿಸಿದರು. 


ಕನ್ನಡ ಅನುವಾದ:ಶ್ರೀಕಂಠ ಶರ್ಮ

Friday, January 6, 2012

ಶಿರಡಿ ಸಾಯಿಬಾಬಾರವರ ಪಾದಧೂಳಿಯಿಂದ ಪರಮಪವಿತ್ರವಾದ ಸ್ಥಳ - ರೂಯಿಗಾವ್ ಸಂಕಟಮೋಚನ ಹನುಮಾನ್ ಮಂದಿರ  - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾರವರು ಆಗಾಗ್ಗೆ ನೀಂಗಾವ್ ನ ಎದುರು ಸಾಲಿನಲ್ಲಿ ಇರುವ ರೂಯಿಗವ್ ಗೆ ಹೋಗಿ ಬರುತ್ತಿದ್ದರೆಂದು ತಿಳಿದುಬಂದಿರುತ್ತದೆ. ಈ ಪರಮಪವಿತ್ರ ಸ್ಥಳದಲ್ಲಿ ಅತ್ಯಂತ ಪುರಾತನವಾದ ಮತ್ತು ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಇದ್ದ ಒಂದು ಬೃಹತ್ "ಔದುಂಬರ ವೃಕ್ಷ" ವಿರುತ್ತದೆ. ಈ ವೃಕ್ಷದ ಕೆಳಗಡೆ ಒಂದು ಭಾಗದಲ್ಲಿ ಕಪ್ಪು ಶಿಲೆಯ "ಶಿವಲಿಂಗ" ಮತ್ತು ಅದರ ಎದುರುಗಡೆ ಇರುವಂತೆ "ನಂದಿ" ಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಔದುಂಬರ ವೃಕ್ಷದ ಕೆಳಗಡೆ ಮತ್ತೊಂದು ಭಾಗದಲ್ಲಿ ಶಿವಲಿಂಗದ ಹಿಂಭಾಗದಲ್ಲಿ "ಏಕಮುಖಿ ದತ್ತಾತ್ರೇಯ" ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಔದುಂಬರ ವೃಕ್ಷದ ಮುಂಭಾಗದಲ್ಲಿ ಅತ್ಯಂತ ಪುರಾತನವಾದ  "ಸಂಕಟಮೋಚನ ಹನುಮಾನ್" ಮಂದಿರವನ್ನು ಸ್ಥಾಪಿಸಲಾಗಿದ್ದು ಇದರ ಸ್ಥಾಪನೆಯ ವರ್ಷ ತಿಳಿದುಬಂದಿರುವುದಿಲ್ಲ. ಹನುಮಾನ್ ಮಂದಿರದ ಪಕ್ಕದಲ್ಲಿರುವಂತೆ "ಸಪ್ತಶೃಂಗಿ ದೇವಿ" ಯ ಮಂದಿರವನ್ನು ಸ್ಥಾಪಿಸಲಾಗಿದೆ. 









ಸಂಕಟಮೋಚನ ಹನುಮಾನ್ ಮಂದಿರ ಮತ್ತು ಔದುಂಬರ ವೃಕ್ಷಗಳು ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಇದ್ದವೆಂದು ತಿಳಿದುಬಂದಿರುತ್ತದೆ. ಸಪ್ತಶೃಂಗಿ ಮಂದಿರವನ್ನು ಏಪ್ರಿಲ್ 2001 ರಲ್ಲಿ ಪವಿತ್ರ ಶ್ರೀರಾಮನವಮಿಯ ದಿವಸ ಶ್ರೀ.ಓಸ್ವಾಲ್ ರವರು ನೀಡಿದ ದೇಣಿಗೆಯ ಸಹಾಯದಿಂದ ಪ್ರತಿಷ್ಟಾಪಿಸಲಾಯಿತು. ಸಾಯಿ ಮಹಾಭಕ್ತರಾದ ಪರಮ ಪೂಜ್ಯ ಶ್ರೀ.ಶಿವನೇಶನ್ ಸ್ವಾಮೀಜಿಯವರ ನೆನಪಿನಲ್ಲಿ ಶ್ರೀ.ಬ್ರಿಜ್ ರಾವ್ ದಲ್ವೇ ಆಲಿಯಾಸ್ ಶ್ರೀ.ಜೈ ಸಿಯಾರಾಂ ರವರ ದೇಣಿಗೆಯ ಸಹಾಯದಿಂದ ನಿರ್ಮಿಸಲಾದ ಏಕಮುಖಿ ದತ್ತಾತ್ರೇಯ, ಶಿವಲಿಂಗ ಮತ್ತು ನಂದಿಯ ವಿಗ್ರಹಗಳನ್ನು ಏಪ್ರಿಲ್ 2001 ರಲ್ಲಿ ಪವಿತ್ರ ಶ್ರೀರಾಮನವಮಿಯ ದಿವಸ ಪ್ರಾರಂಭಿಸಲಾಯಿತು. 






ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ವೆಟ್ ಏನ್ ಜಾಯ್ ವಾಟರ್ ಪಾರ್ಕ್ ಹತ್ತಿರ, ಸಾಯಿನಗರ ರೈಲ್ವೇ ನಿಲ್ದಾಣದ ಹಿಂಭಾಗ, ರೂಯಿಗಾವ್, ಶಿರಡಿ. 

ವಿಳಾಸ: 

ಶ್ರೀ.ಸಂಕಟಮೋಚನ ಹನುಮಾನ್ ಮಂದಿರ, 
ಗವಾಲೆ ವಸ್ತಿ, ನಿಗೋಜ್ ಗ್ರಾಮ, 
ಚಾರಿ ನಂ.11,  ರೂಯಿಗಾವ್, 
ಶಿರಡಿ, ಮಹಾರಾಷ್ಟ್ರ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಸಿಯಾರಾಂ - ದೇವಾಲಯದ ಪುರೋಹಿತರು. 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+91 92261 29081


ಮಾರ್ಗಸೂಚಿ: 

ದೇವಾಲಯವು ಶಿರಡಿಯಿಂದ ಕೇವಲ ಎರಡು ಕಿಲೋಮೀಟರ್ ಗಳ ದೂರದಲ್ಲಿರುತ್ತದೆ. ದೇವಾಲಯವು ವೆಟ್ ಏನ್ ಜಾಯ್ ವಾಟರ್ ಪಾರ್ಕ್ ಹತ್ತಿರ ಮತ್ತು ಸಾಯಿನಗರ ರೈಲ್ವೇ ನಿಲ್ದಾಣದ ಹಿಂಭಾಗದಲ್ಲಿರುವ  ರೂಯಿಗಾವ್ ನಲ್ಲಿರುತ್ತದೆ.ಶಿರಡಿಯಿಂದ ಈ ಸ್ಥಳಕ್ಕೆ ಆಟೋಗಳು ಹೇರಳವಾಗಿ ದೊರೆಯುತ್ತವೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ತಮಿಳುನಾಡಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿನಾಥ ಧ್ಯಾನ ಮಂಟಪಂ, ಮಾದಾವರಂ ಮಿಲ್ಕ್ ಕಾಲೋನಿ  ಅಂಚೆ, ಚನ್ನೈ - 600 051, ತಮಿಳುನಾಡು, ಭಾರತ - ಕೃಪೆ:ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಚನ್ನೈ ಬಳಿಯಿರುವ ಮಾದಾವರಂ ಎಂಬ ಹಳ್ಳಿಯಲ್ಲಿರುವ ಪಾರ್ವತಿನಗರ ಬಸ್ ನಿಲ್ದಾಣದ ಬಳಿ ಇರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 26ನೇ ಜನವರಿ 2008 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 22ನೇ ಆಗಸ್ಟ್ 2008 ರಂದು ಅಂದಿನ ಪಾಂಡಿಚೇರಿಯ ಮುಖ್ಯಮಂತ್ರಿಗಳು ನೆರವೇರಿಸಿದರು. 

ಶ್ರೀ.ಕೆ.ಅರಿವಾಳನ್ ರವರು ಈ ದೇವಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳಾಗಿರುತ್ತಾರೆ. ಇವರು ಮತ್ತು ಇವರ ಪತ್ನಿಯವರಾದ ಶ್ರೀಮತಿ.ಶ್ರೀವಿದ್ಯಾ ಅರಿವಾಳನ್ ರವರುಗಳು ಜಂಟಿಯಾಗಿ ಈ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯವು ಬೆಳಗಿನ ಜಾವ 6 ಗಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಹಾಗೂ ರಾತ್ರಿ 9:45ಕ್ಕೆ ಶೇಜಾರತಿಯ ನಂತರ ಮುಚ್ಚುತ್ತದೆ. 

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತ ಶಿಲೆಯ ವಿಗ್ರಹ, ದತ್ತಾತ್ರೇಯ, ಕಪ್ಪು ಶಿಲೆಯ ಸಾಯಿ ಸಿದ್ಧಿವಿನಾಯಕ ಹಾಗೂ ನಂದಿಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 

ದೇವಾಲಯದಲ್ಲಿ ಪವಿತ್ರ ಧುನಿಯನ್ನು ಕೂಡ ಪ್ರತಿಷ್ಟಾಪಿಸಲಾಗಿದೆ. 









ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ: ಬೆಳಿಗ್ಗೆ 6 ಗಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ: ಸಂಜೆ 6 ಗಂಟೆಗೆ  
ಶೇಜಾರತಿ: ರಾತ್ರಿ 9:45 ಕ್ಕೆ  

ದೇವಾಲಯದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು, ಹಾಲಿನ ಅಭಿಷೇಕ ಮತ್ತು ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

ಪ್ರತಿ ವರ್ಷದ 22 ನೇ ಆಗಸ್ಟ್ ದೇವಾಲಯದ ವಾರ್ಷಿಕೋತ್ಸವ. 
ಶ್ರೀರಾಮನವಮಿ. 
ಗುರುಪೂರ್ಣಿಮೆ. 
ವಿಜಯದಶಮಿ. 
ಮಹಾಶಿವರಾತ್ರಿ. 

ಸಾಮಾಜಿಕ ಕಾರ್ಯಚಟುವಟಿಕೆಗಳು: 

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನದಂದು ಅನ್ನದಾನ ಕಾರ್ಯಕ್ರಮ.
ಶಾಲೆಯ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದ ಆಯೋಜನೆ. 
ಸ್ಥಳೀಯ ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ. 
ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಶಾಲಾ ಸಾಮಗ್ರಿಗಳ ವಿತರಣೆ. 
ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಟ್ರಸ್ಟ್ ಗಳಿಗೆ ಧನಸಹಾಯ ಮಾಡುವುದು. 
ದೇವಾಲಯದಲ್ಲಿ ವಿದ್ವಾಂಸರಿಂದ ಪ್ರವಚನಗಳನ್ನು ನಡೆಸುವುದು. 

ದೇಣಿಗೆಗೆ ಮನವಿ: 

ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ನೀಡಲು ಇಚ್ಚಿಸುವ ಸಾಯಿಭಕ್ತರು "ಶ್ರೀ ಸಾಯಿ ಯಶೋದ ಅಮ್ಮಾಳ್ ಸ್ಪಿರಿಚ್ಯುಯಲ್ ಅಂಡ್ ಚಾರಿಟಬಲ್ ಟ್ರಸ್ಟ್" ಹೆಸರಿನಲ್ಲಿ ಚೆಕ್ ಅಥವಾ ಡಿಡಿ ಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬಹುದು. 

ಶ್ರೀ ಸಾಯಿ ಯಶೋದ ಅಮ್ಮಾಳ್ ಸ್ಪಿರಿಚ್ಯುಯಲ್ ಅಂಡ್ ಚಾರಿಟಬಲ್ ಟ್ರಸ್ಟ್
ಹೊಸ ಸಂಖ್ಯೆ: 44 (ಹಳೆ ಸಂಖ್ಯೆ: 27), ಮೊದಲನೇ ಮುಖ್ಯರಸ್ತೆ, 
ಜವಾಹರ್ ನಗರ, ಚನ್ನೈ- 600 082, ತಮಿಳುನಾಡು, ಭಾರತ. 
ದೂರವಾಣಿ ಸಂಖ್ಯೆ: +91-44-4552 2080
ಬ್ಯಾಂಕ್ ಹೆಸರು: ಆಕ್ಷಿಸ್ ಬ್ಯಾಂಕ್, 
ಶಾಖೆ: ಪುರುಷವಾಕ್ಕಂ
ಖಾತೆ ಸಂಖ್ಯೆ: 189010100101042
ಖಾತೆ: ಉಳಿತಾಯ ಖಾತೆ 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಪಾರ್ವತಿನಗರ ಬಸ್ ನಿಲ್ದಾಣದ ಬಳಿ, ಮಾದಾವರಂ ಮಿಲ್ಕ್ ಕಾಲೋನಿ, ಮುಲಚತ್ರಂ, ಚನ್ನೈ.

ವಿಳಾಸ: 

ಶ್ರೀ ಸಾಯಿನಾಥ ಧ್ಯಾನ ಮಂಟಪಂ, 
ಶ್ರೀ ಸಾಯಿ ಯಶೋದ ಅಮ್ಮಾಳ್ ಸ್ಪಿರಿಚ್ಯುಯಲ್ ಅಂಡ್ ಚಾರಿಟಬಲ್ ಟ್ರಸ್ಟ್ 
ಪ್ಲಾಟ್ ನಂ. ೪೪, ಕೋ-ಆಪರೇಟಿವ್ ನಗರ್,
ಮಾದಾವರಂ ಮಿಲ್ಕ್ ಕಾಲೋನಿ  ಅಂಚೆ, ಚನ್ನೈ - 600 051, ತಮಿಳುನಾಡು, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಕೆ.ಅರಿವಾಳನ್ - ಸಂಸ್ಥಾಪಕರು ಮತ್ತು ಟ್ರಸ್ಟಿ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+ 91 44 4552 2080, +91 98416 34879

ಈ ಮೇಲ್ ವಿಳಾಸ: 



ಅಂತರ್ಜಾಲ ತಾಣ:



ಮಾರ್ಗಸೂಚಿ: 

ಈ ದೇವಾಲಯವು ಚನ್ನೈ ಬಳಿಯಿರುವ ಮಾದಾವರಂ ಎಂಬ ಹಳ್ಳಿಯಲ್ಲಿರುವ ಪಾರ್ವತಿನಗರ ಬಸ್ ನಿಲ್ದಾಣದ ಬಳಿ ಇರುತ್ತದೆ. ಮುಲಕುಡಿ ಜಂಕ್ಷನ್ ನಿಂದ ಏನ್.ಹೆಚ್.5 ರಿಂದ ಹೇರಳವಾಗಿ ಆಟೋರಿಕ್ಷಾಗಳು ಮತ್ತು ಬಸ್ ಗಳು ಸಿಗುತ್ತವೆ.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, January 4, 2012

ಸಾಯಿ ಭಜನ ಗಾಯಕ - ಶ್ರೀ.ರವೀಂದ್ರ ರಮಾಕಾಂತ ಬಿಜೂರ್ - ಕೃಪೆ: ಸಾಯಿಅಮೃತಧಾರಾ.ಕಾಂ 



ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿರುವ ಶ್ರೀ.ರವೀಂದ್ರ ಬಿಜೂರ್ ರವರು ಮಹಾರಾಷ್ಟ್ರದ ಮುಂಬೈನಲ್ಲಿ 26ನೇ ಸೆಪ್ಟೆಂಬರ್ 1957 ರಂದು ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ರಮಾಕಾಂತ ಬಿಜೂರ್ ಮತ್ತು ತಾಯಿಯವರು ಶ್ರೀಮತಿ.ಸಂಧ್ಯಾ. ಇವರು ಎಂಕಾಂ,ಎಲ್.ಎಲ್.ಬಿ.ಪದವೀಧರರಾಗಿರುತ್ತಾರೆ. ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ತಮ್ಮ ತಂದೆಯವರಾದ ದಿವಂಗತ ಶ್ರೀ.ರಮಾಕಾಂತ ಬಿಜೂರ್, ಶ್ರೀ.ಬಾಬನ್ ಮಂಜ್ರೇಕರ್ ಮತ್ತು ದಿವಂಗತ ಶ್ರೀ.ಅರವಿಂದ ಸಫಾಲ್ಕರ್ ರವರ ಬಳಿ ಕಲಿತರು. ಇವರ ತಂದೆಯವರು ಖ್ಯಾತ ಸಾರಂಗಿ ವಾದಕರಾಗಿದ್ದರು. ಇವರು 1980 ನೇ ಇಸವಿಯಿಂದ ಮುಂಬೈ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಲಘು ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಗಾಯಕರಾಗಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಇವರು ಅನೇಕ ಮರಾಠಿ ಧಾರಾವಾಹಿಗಳು, ಮರಾಠಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹಾಡಿರುತ್ತಾರೆ. ಅಷ್ಟೇ ಅಲ್ಲದೆ, ಇವರು ಅನೇಕ ಮರಾಠಿ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. 

ಶ್ರೀ.ರವೀಂದ್ರ ಬಿಜೂರ್ ರವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ: 

ಇವರು ಭಾರತದ ಅನೇಕ ಪ್ರಖ್ಯಾತ ಸಂಗೀತ ನಿರ್ದೇಶಕರ ಗೀತೆಗಳಿಗೆ ತಮ್ಮ ಧ್ವನಿಯನ್ನು ನೀಡಿರುತ್ತಾರೆ. ಅವರಲ್ಲಿ ಪ್ರಮುಖರು ಶ್ರೀ.ಶಂಕರ್ (ಶಂಕರ್-ಜೈಕಿಶನ್ ಜೋಡಿ), ಪ್ರಭಾಕರ ಪಂಡಿತ್, ಕಾನು ಘೋಷ್, ಅಶೋಕ್ ಪಡ್ಕಿ, ರವೀಂದ್ರ ಜೈನ್, ಅನೀಲ್ ಮೋಹಿಲೆ, ರಾಮ್ ಲಕ್ಷ್ಮಣ್, ಅಶೋಕ್ ರಾನಡೆ, ದತ್ತಾ ದವಜೇಕರ್, ಅಭಿಜಿತ್ ಲಿಮಯೆ, ಸ್ನೇಹಾಲ್ ಭಟ್ಕಾರ್, ಉದಯ್ ಮಜುಂದಾರ್, ಭಾಸ್ಕರ್ ಚಂದಾವರಕರ್, ರಾಹುಲ್ ರಾನಡೆ, ಯಶವಂತ್ ದೇವ್ ಮತ್ತು ಉಷಾ ಮಂಗೇಶ್ಕರ್.

ಇವರು ಪ್ರಸಿದ್ಧ ಮರಾಠಿ ಧಾರಾವಾಹಿಗಳಾದ "ಸಾವಲ್ಯಾ" ಮತ್ತು "ತಾರ್ ಕಾಯ್ ಕರಲ್" ಗಳ ಶೀರ್ಷಿಕೆ ಗೀತೆಗಳನ್ನು ಹಾಡಿರುತ್ತಾರೆ.

ಇವರು ಅನೇಕ ಮರಾಠಿ ಚಿತ್ರಗಳಲ್ಲಿ ಹಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಚಿಕತ್ ನವ್ರ, ಸುನಾ ಯೇತಿ ಘರಾ, ಕಮಾಲ್ ಮಾಜ್ಯಾ ಬೈಕೋಚಿ, ಸಂಸಾರ್, ಜೈ ಮಲ್ಹಾರ್ ಬೈಕೋ, ಮಾನಸ್, ಕರ್ಮಯೋಗ್, ಲಕ್ಷ್ಮಿ ಚಲಾಯ್ಚಾ, ಕುಣಿ ತರಿ ಕುಥೆ ತರಿ, ಸಂತ ತುಕಾರಾಮ, ಖತರ್ನಾಕ್, ಶೋಧ, ಹೇ ಖೇಲ್ ನಸೀಬಾಚೆ, ಚಲು ನವ್ರಾ ಭೋಲಿ, ಮಿಲನ್, ಧೋಲ್ಕಿ, ಹೇ ಅಪ್ಲಾ ಅಸಾಚ್ ಮತ್ತು ಉತ್ತರಾಯಣ್.

ಇವರು ಅನೇಕ ಹಿಂದಿ ಚಿತ್ರಗಳಲ್ಲಿ ಹಾಡಿರುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಎನ್ಕೌಂಟರ್ - ದಿ ಕಿಲ್ಲಿಂಗ್, ಸಂತ ತುಕಾರಾಮ ಮತ್ತು ರಾಜಶ್ರೀ ಫಿಲಂಸ್ ರವರ ಹಮ್ ಪ್ಯಾರ್ ತುಮ್ಹೀ ಸೇ ಕರ್ ಬೈಟೆ.

ಇವರು ಕಿರುತೆರೆಯಲ್ಲಿ ಪ್ರಸಾರವಾದ ಹಿಂದಿ ಟೆಲಿ ಚಿತ್ರವಾದ "ಏಕ್ ಬೂಂದ್ ಆಸ್ಮಾನ್" ನಲ್ಲಿ ಹಾಡಿರುತ್ತಾರೆ.

ಇವರು ಭಾರತದ ಪ್ರಖ್ಯಾತ ಗಾಯಕ ಗಾಯಕಿಯರೊಂದಿಗೆ ಹಾಡಿರುತ್ತಾರೆ. ಅವರಲ್ಲಿ ಪ್ರಮುಖರಾದವರು: ಉಷಾ ಮಂಗೇಶ್ಕರ್, ಮಹೇಂದ್ರ ಕಪೂರ್, ಅನೂರಾಧಾ ಪೌಡ್ವಾಲ್, ಸುರೇಶ ವಾಡೇಕರ್, ಕವಿತಾ ಕೃಷ್ಣಮುರ್ತಿ, ಅನೂಪ್ ಜಲೋಟಾ, ಸಾಧನಾ ಸರ್ಗಮ್, ಮೊಹಮ್ಮದ್ ಅಜೀಜ್, ಶ್ರೇಯಾ ಗೋಶಾಲ್, ಸೋನು ನಿಗಮ್, ಮಹಾಲಕ್ಷ್ಮಿ ಅಯ್ಯರ್, ಶಂಕರ್ ಮಹಾದೇವನ್, ಉಷಾ ತಿಮೋಥಿ, ಶಾನ್, ರಂಜನಾ ಜೋಗಳೇಕರ್, ಶೈಲೇಂದ್ರ ಸಿಂಗ್, ಉತ್ತರಾ ಕೇಳ್ಕರ್, ಸುದೇಶ್ ಬೋಂಸ್ಲೆ, ಅನುಪಮಾ ದೇಶಪಾಂಡೆ, ಅರುಣ್ ಡಾಟೆ, ಪದ್ಮಜಾ ಫೆನಾನಿ, ಪ್ರಭಾಕರ್ ಕಾರೇಕರ್, ಶೋಭಾ ಜೋಷಿ, ರವೀಂದ್ರ ಸಾಥೆ, ರಾಣಿ ವರ್ಮಾ, ಅಜಿತ್ ಕಡ್ಕಡೆ, ಜ್ಯೋತ್ಸ್ನಾ ಹರ್ಡೀಕರ್, ಶ್ರೀಧರ್ ಪಡ್ಕೆ, ಜಯಶ್ರೀ ಶಿವರಾಂ, ಸ್ವಪ್ನೀಲ್ ಬಂದೊದ್ಕರ್ ಮತ್ತು ವೈಶಾಲಿ ಸಾಮಂತ್.

ಇವರು ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 70  ಸೋಲೋ ಗೀತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಕ್ಯಾಸೆಟ್ ಮತ್ತು ಸಿಡಿಗಳಲ್ಲಿ ಹಾಡಿದ್ದಾರೆ.

ಇವರು ಅನೇಕ ಸಾಯಿ ಭಜನೆಗಳನ್ನು ಹಾಗೂ ಸಾಯಿ ಧುನ್ ಗಳನ್ನು ಹಾಡಿರುತ್ತಾರೆ. ಅವುಗಳಲ್ಲಿ "ಸಾಯಿರಾಮ್ ಸಾಯಿಶ್ಯಾಂ" ಧುನ್ ಅತ್ಯಂತ ಹೆಚ್ಚಿನ ಜನಪ್ರಿಯತೆಯನ್ನು ಇವರಿಗೆ ತಂದುಕೊಟ್ಟಿದೆ.

ಇವರು "ಸಂಶಯಕಲ್ಲೋಲ್" ಮತ್ತು "ಆಯೇನ್ ವಸಂತ್ ಅರ್ಧ್ಯ ರಾತ್ರಿ" ಎಂಬ ಎರಡು ಜನಪ್ರಿಯ ಮರಾಠಿ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ.

ಇವರು ಮರಾಠಿ ಆಕಾಶವಾಣಿಯವರು ಮುಂಬೈನಲ್ಲಿ ಏರ್ಪಡಿಸಿದ್ದ ಮರಾಠಿ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಹಾಗೂ ಕೊಲ್ಹಾಪುರ, ಸಾಂಗ್ಲಿ, ಶೋಲಾಪುರ ಮತ್ತು ಜಲಗಾವ್ ನಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಇವರು ಭಾರತ ಮತ್ತು ಹೊರದೇಶದ ಅನೇಕ ಕಡೆಗಳಲ್ಲಿ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಗಜಲ್, ಸುಗಮ ಸಂಗೀತ, ಭಜನೆ, ಚಿತ್ರಗೀತೆಗಳ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಇವರಿಗೆ ಸಂದ ಪ್ರಶಸ್ತಿಗಳು ಮತ್ತು ಗೌರವಗಳು: 

ಇವರು 1996-97 ರಲ್ಲಿ ಬಿಡುಗಡೆಯಾದ ಮರಾಠಿ ಚಲನಚಿತ್ರವಾದ "ಸುನಾ ಯೇತಿ ಘರಾ" ಚಲನಚಿತ್ರದಲ್ಲಿ ಹಾಡಿದ ಗೀತೆಗಾಗಿ ಮಹಾರಾಷ್ಟ ಸರ್ಕಾರದ ಶ್ರೇಷ್ಠ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.


ಇವರು 2005 ರಲ್ಲಿ ಬಿಡುಗಡೆಯಾದ ಮರಾಠಿ ಅಲ್ಬಮ್ "ಅಪೂರೆ ಚಂದನೆ" ಯಲ್ಲಿ ಹಾಡಿದ ಗೀತೆಗಾಗಿ ಜೀ ಅಲ್ಫಾ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಶ್ರೀ.ರವೀಂದ್ರ ಬಿಜೂರ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ: 

ನಂ.32, ಬಿಲ್ಡಿಂಗ್ ಸಂಖ್ಯೆ: 4/6, 4ನೇ ಮಹಡಿ, ತಲ್ಮಕಿವಾಡಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ, ಜೆ.ಡಿ.ಮಾರ್ಗ, ತಾರಾದೇವ್, ಮುಂಬೈ-400 007, ಮಹಾರಾಷ್ಟ್ರ, ಭಾರತ. 

ದೂರವಾಣಿ ಸಂಖ್ಯೆಗಳು: 

+91 22 2381 1486 / +91 98200 64453 
  

ಈ ಮೇಲ್ ವಿಳಾಸ: 



ಅಲ್ಬಮ್ ಗಳು: 
ಸಾಯಿ ರಾಮ್, ಸಾಯಿ ಶ್ಯಾಮ್, ಓಂ ಸಾಯಿ ನಮಃ, ಯೇ ಸಾಯಿ ಕಾ ದರ್ಬಾರ್ ಹೈ, ಸಾಯಿ ಅಮೃತಧಾರಾ, ಸಾಯಿಬಾಬಾ ಕೀ ಚಾರ್ ಅನ್ಮೋಲ್ ಧುನ್, ವಾರಿ ಶಿರ್ಡೀರ್ಲಾ ಚಾಲ್ಲಿ ಮತ್ತು ಇನ್ನು ಹತ್ತು ಹಲವು ಅಲ್ಬಮ್ ಗಳು.

ಭಜನೆಯ ವೀಡಿಯೋಗಳು: 




ಕನ್ನಡ ಅನುವಾದ: ಶ್ರೀಕಂಠ ಶರ್ಮ



ಖ್ಯಾತ ಮರಾಠಿ ಮತ್ತು ಹಿಂದಿ ಚಿತ್ರತಾರೆ ಶ್ರೀಮತಿ.ಉಷಾ ಚವಾಣ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಮರಾಠಿ ಮತ್ತು ಹಿಂದಿ ಚಿತ್ರತಾರೆ ಶ್ರೀಮತಿ.ಉಷಾ ಚವಾಣ್ ರವರು ಇದೇ ತಿಂಗಳ 4ನೇ ಜನವರಿ 2012, ಬುಧವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ