Monday, August 1, 2011

ನಂದಕುಮಾರ್ ರೇವನ್ನಾಥ್  ದೇಶಪಾಂಡೆ (ನಿಮೋಣ್ಕರ್) - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ (ನಿಮೋಣ್ಕರ್) ಯವರು ಸಾಯಿ ಮಹಾಭಕ್ತರಾದ ಶ್ರೀ.ಶಂಕರ ರಾವ್ ರಘುನಾಥ್ ದೇಶಪಾಂಡೆ ಆಲಿಯಾಸ್  ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ಮರಿ ಮಗನಾಗಿದ್ದಾರೆ ( 4ನೇ ಪೀಳಿಗೆ). ಇವರು ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ 1898ನೇ ಇಸವಿಯಲ್ಲಿ  ನೀಡಿದ್ದ ಪವಿತ್ರ ಪಾದುಕೆಗಳನ್ನು ಹೊಂದಿರುತ್ತಾರೆ. 

ಸಾಯಿಬಾಬಾರವರ ಪವಿತ್ರ ಪಾದುಕೆಗಳು

"ದೇಶಪಾಂಡೆ" ಎನ್ನುವುದು ಇವರ ವಂಶದಲ್ಲಿ ಜನಿಸುವ ಎಲ್ಲರಿಗೂ ಅನ್ವಯವಾಗುವ ವಂಶಾವಳಿಯ ಹೆಸರಾಗಿರುತ್ತದೆ. ಇವರ ವಂಶಸ್ಥರು ಅನೇಕ ತಲೆಮಾರುಗಳಿಂದ ಶಿರಡಿಗೆ ಸರಿ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ "ನಿಮೋಣ್" ಗ್ರಾಮದಲ್ಲಿ ನೆಲೆಸಿರುವುದರಿಂದ ಇವರ ವಂಶದಲ್ಲಿ ಜನಿಸುವ ಪ್ರತಿಯೊಬ್ಬರ ಹೆಸರಿನ ಕೊನೆಯಲ್ಲಿ "ನಿಮೋಣ್ಕರ್" ಎನ್ನುವ ಅನ್ವರ್ಥನಾಮ ಸೇರಿಕೊಂಡಿದೆ. 

ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆಯವರು 15ನೇ ಏಪ್ರಿಲ್ 1959 ರಂದು ಮಹಾರಾಷ್ಟ್ರದ ಶಿರಡಿಯ ಸಮೀಪದಲ್ಲಿರುವ ಶ್ರೀರಾಮಪುರದಲ್ಲಿ ಜನಿಸಿದರು.  ಇವರ ತಂದೆಯವರು ದಿವಂಗತ ಶ್ರೀ.ರೇವನ್ನಾಥ್ ನಾಗನಾಥ್ ದೇಶಪಾಂಡೆ ಮತ್ತು ತಾಯಿಯವರು ದಿವಂಗತ ಶ್ರೀಮತಿ.ಇಂದುಮತಿ. ಇವರು ನಿಮೋಣ್ ಗ್ರಾಮದಲ್ಲಿ ವಂಶಪಾರಂಪರ್ಯವಾಗಿ ಬಂದ ಮನೆ ಮತ್ತು ಹಲವಾರು ಎಕರೆ ಭೂಮಿಯನ್ನು ಹೊಂದಿದ್ದು ವ್ಯವಸಾಯದಿಂದ ಜೀವನವನ್ನು ನಡೆಸುತ್ತಿದ್ದಾರೆ. ಇವರು ಶ್ರೀಮತಿ.ಸೀಮಾ ನಂದಕುಮಾರ್ ರವರನ್ನು ವಿವಾಹವಾಗಿದ್ದು ಶ್ರೀ.ಶಂತನು ಮತ್ತು ಕುಮಾರಿ.ಸೈಲೀ ಎಂಬ ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿದ್ದು ಶಿರಡಿಗೆ ಸಮೀಪ ಇರುವ ನಿಮೋಣ್ ಗ್ರಾಮದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  

ಶ್ರೀ.ನಂದಕುಮಾರ್ ನಿಮೋಣ್ಕರ್  ತಮ್ಮ ಪತ್ನಿಯೊಂದಿಗೆ

ಸಾಯಿಬಾಬಾರವರು ಈ ಪವಿತ್ರ ಪಾದುಕೆಗಳನ್ನು 1898 ನೇ  ಇಸವಿಯಲ್ಲೇ ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ ನೀಡಿದ್ದರೂ ಸಹ 2008 ನೇ ಇಸವಿಯ ತನಕ ಇದನ್ನು ಸಾರ್ವಜನಿಕವಾಗಿ ದರ್ಶನಕ್ಕೆ ಇಟ್ಟಿರಲಿಲ್ಲ. 2008 ರಲ್ಲಿ ಒಮ್ಮೆ ಸಾಯಿಬಾಬಾರವರು ನಂದಕುಮಾರ್ ರವರ ಕನಸಿನಲ್ಲಿ ದರ್ಶನ ನೀಡಿ ಪವಿತ್ರ ಪಾದುಕೆಗಳನ್ನು ಸಾರ್ವಜನಿಕರಿಗೆ ದರ್ಶನಕ್ಕೆ ಇಡಬೇಕೆಂದು ಆಜ್ಞಾಪಿಸಿದ್ದರಿಂದ ಶ್ರೀ.ನಂದಕುಮಾರ್ ರವರು ಸಾಯಿಬಾಬಾರವರ ಆಜ್ಞೆಯನ್ನು ಶಿರಸಾವಹಿಸಿ 2008  ನೇ ಇಸವಿಯ ಶ್ರಾವಣ ಮಾಸದಿಂದ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಟ್ಟರು. 

2011 ನೇ ಇಸವಿಯ ಶ್ರೀರಾಮನವಮಿಗೆ ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವ ಆರಂಭವಾಗಿ 100 ವರ್ಷಗಳು ಸಂದಿತು. ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆಯವರಿಗೆ ಈ ಶ್ರೀರಾಮನವಮಿ ಉತ್ಸವದ ದಿನದಂದು ದ್ವಾರಕಾಮಾಯಿಯ ಮೇಲೆ ಪವಿತ್ರ ಧ್ವಜವನ್ನು ಹಾರಿಸುವ ಸುವರ್ಣಾವಕಾಶ ದೊರಕಿತು.



ಶ್ರೀ ಸಾಯಿ ಸಚ್ಚರಿತ್ರೆಯ ಅನೇಕ ಅಧ್ಯಾಯಗಳಲ್ಲಿ ಸಾಯಿ ಮಹಾಭಕ್ತ ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ಹೆಸರು ಕಂಡುಬರುತ್ತದೆ. ಅದರ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ಶ್ರೀ.ಶಂಕರ ರಾವ್ ರಘುನಾಥ ದೇಶಪಾಂಡೆ ಆಲಿಯಾಸ್ ನಾನಾ ಸಾಹೇಬ್ ನಿಮೋಣ್ಕರ್ ರವರು ಮೊದಲನೇ ತಲೆಮಾರಿಗೆ ಸೇರಿದವರು. ಇವರಿಗೆ ಸೋಮನಾಥ್, ನಾಗನಾಥ್ ಮತ್ತು ರಾಮನಾಥ್ ಎಂಬ ಹೆಸರಿನ 3 ಜನ ಗಂಡು ಮಕ್ಕಳಿದ್ದರು. ಈ 3 ಜನ ಮಕ್ಕಳು ಎರಡನೇ ತಲೆಮಾರಿಗೆ ಸೇರಿದವರು. ನಾಗನಾಥ್ ದೇಶಪಾಂಡೆಯವರ ಮಗ ಶ್ರೀ.ರೇವನ್ನಾಥ್ ನಾಗನಾಥ್ ದೇಶಪಾಂಡೆ. ಇವರು 3ನೇ ತಲೆಮಾರಿಗೆ ಸೇರಿದವರು. ಶ್ರೀ.ರೇವನ್ನಾಥ್ ನಾಗನಾಥ್ ದೇಶಪಾಂಡೆಯವರ ಮಗ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ. ಇವರು 4ನೇ ತಲೆಮಾರಿಗೆ ಸೇರಿದವರು. ಶ್ರೀ.ನಂದಕುಮಾರ್ ರವರು ಇವರ ಮುತ್ತಾತನವರಾದ ನಾನಾಸಾಹೇಬ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿಗೂ ನಡೆಯುತ್ತಿದ್ದಾರೆ.

ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರು ಸಂಗಮ್ನೇರ್ ನ ವಿಶೇಷ ಮ್ಯಾಜಿಸ್ಟ್ರೇಟ್ ಆಗಿದ್ದರು ಮತ್ತು ನಿಮೋಣ್ ನ ಅಕ್ಕ ಪಕ್ಕದ 5 ಹಳ್ಳಿಗಳ ಮುಖ್ಯಸ್ಥರಾಗಿದ್ದರು. ಇವರು ನಿಮೋಣ್ ನಲ್ಲಿ ಸ್ವಂತ ಮನೆಯನ್ನು ಮತ್ತು ಹಲವಾರು ಎಕರೆ ಜಮೀನನ್ನು ಹೊಂದಿ ಆಗರ್ಭ ಶ್ರೀಮಂತರಾಗಿದ್ದರು. ಇವರು ಬೇಲಾಪುರದ ಜಾಯಾಯಿ ಎಂಬುವರನ್ನು ವಿವಾಹವಾಗಿದ್ದರು. ಇವರು ನಿಮೋಣ್ ನಲ್ಲಿಯ ತಮ್ಮ ಮನೆ, ಜಮೀನು ಮತ್ತು ತಮ್ಮ ಇತರ ಎಲ್ಲ ಆಸ್ತಿಗಳನ್ನೂ, ಬಂಧುಗಳನ್ನೂ ಬಿಟ್ಟು ಶಿರಡಿಗೆ ತಮ್ಮ ಪತ್ನಿಯೊಡನೆ ಬಂದು ನೆಲೆಸಿ ತಮ್ಮ ಕೊನೆಯ ಉಸಿರಿರುವ ತನಕ ಸಾಯಿಬಾಬಾರವರ ಸೇವೆಯನ್ನು ಮಾಡಿಕೊಂಡಿದ್ದರು. ಇವರು ಸಾಯಿ ಮಹಾಭಕ್ತರಲ್ಲಿ ಅಗ್ರಗಣ್ಯರೆನಿಸಿದ್ದರು. ಇವರ ಹೆಸರಿನ ಉಲ್ಲೇಖ ಸಾಯಿ ಸಚ್ಚರಿತೆಯ 6, 12, 20, 23, 25, 29, 37,38, 43,44 ಅಧ್ಯಾಯಗಳಲ್ಲಿ ನೋಡಬಹುದು. ಅಲ್ಲದೆ, ಪರಮ ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರು ಬರೆದಿರುವ ಶ್ರೀ.ಸಾಯಿ ಸಹಸ್ರನಾಮದ 521 ನೇ  ಶ್ಲೋಕದಲ್ಲಿ ಕೂಡ ಇವರ ಹೆಸರಿನ ಉಲ್ಲೇಖ ಬರುತ್ತದೆ.


ಶ್ರೀ.ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ ನೀಡಿದ ಪವಿತ್ರ ಪಾದುಕೆಗಳ ದರ್ಶನ ಪಡೆಯಬೇಕೆಂದು ಇಚ್ಚಿಸುವ ಸಾಯಿ ಭಕ್ತರ ಅನುಕೂಲಕ್ಕಾಗಿ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆಯವರ ಸಂಪರ್ಕದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

ವಿಳಾಸ: 

ನಿಮೋಣ್ ಗ್ರಾಮ, ಸಂಗಮ್ನೇರ್ ತಾಲ್ಲೂಕು, ಅಹಮದ್ ನಗರ ಜಿಲ್ಲೆ-422 611, ಮಹಾರಾಷ್ಟ್ರ, ಭಾರತ.


ದೂರವಾಣಿ ಸಂಖ್ಯೆ: 

+91 99220 60733

ಪಾದುಕಾ ಪೂಜೆಯ ವೀಡಿಯೋಗಳು:

(ಕೃಪೆ: ಪಲ್ಲವಿ ವಾರ್ತೆ, ಬಂಗಾರಪೇಟೆ)

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment