Friday, July 16, 2010

ಶಿರಡಿಯಲ್ಲಿ ನೋಡಬೇಕಾದ ಸ್ಥಳ - ಶಿರಡಿ ಸಾಯಿಬಾಬಾ ಪ್ರಸಾದಾಲಯ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ

ಶಿರಡಿ ಸಾಯಿಬಾಬಾ ಸಂಸ್ಥಾನದವರು ಹೊಸದಾಗಿ ಬೃಹತ್ ಪ್ರಸಾದಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇದು ಏಷಿಯಾದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಸಾದಾಲಯವೆಂದು ಹೇಳಲಾಗುತ್ತದೆ. ಈ ಭವನದೊಳಗೆ ಬೃಹತ್ ಭೋಜನ ಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು ಒಂದೇ ಬಾರಿಗೆ ೫೫೦೦ ಜನರಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪ್ರತಿನಿತ್ಯ ಸುಮಾರು ೧ ಲಕ್ಷ ಜನರು ಇಲ್ಲಿ ಭೋಜನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾಯಿಬಾಬಾ ಸಂಸ್ಥಾನದವರು ಪ್ರತಿ ವರ್ಷ ಸರಿ ಸುಮಾರು ೧೯೦ ದಶಲಕ್ಷಗಳನ್ನು ಶಿರಡಿಗೆ ಬರುವ ಭಕ್ತರ ಭೋಜನ ವ್ಯವಸ್ಥೆಗಾಗಿ ಖರ್ಚು ಮಾಡುತ್ತಾರೆ.

ಪ್ರಸಾದಾಲಯದ ಹೊರಗಡೆ ಸಾಯಿಬಾಬಾರವರು ತಾವೇ ಸ್ವತಃ ಅಡುಗೆ ಮಾಡುತ್ತಿರುವ ಸುಂದರ ವಿಗ್ರಹವನ್ನು ಕೆತ್ತಲಾಗಿದೆ.
ಸಾಯಿಬಾಬಾರವರು ಅಡುಗೆ ಮಾಡುತ್ತಿರುವ ಭವ್ಯ ವಿಗ್ರಹ


ಪ್ರಸಾದಾಲಯದ ಹೊರನೋಟ


ಸಮಾಧಿ ಮಂದಿರದಿಂದ ಭಕ್ತರನ್ನು ಕರೆತರಲು ಉಚಿತ ಬಸ್ ವ್ಯವಸ್ಥೆ


ಪ್ರಸಾದಾಲಯದಲ್ಲಿ ಭಕ್ತರು ಊಟ ಮಾಡುತ್ತಿರುವ ದೃಶ್ಯ 

ಭಕ್ತರಿಗೆ ನೀಡುವ ಊಟದ ತಟ್ಟೆಯಲ್ಲಿರುವ ವಿವಿಧ ಭಕ್ಷ್ಯಗಳು 

 
ಪ್ರಸಾದಾಲಯದ ಅಡುಗೆ ಮನೆಯ ದೃಶ್ಯ             

ಈ ಪ್ರಸಾದಾಲಯವನ್ನು ೨೪೦ ದಶಲಕ್ಷ ವಿನಿಯೋಗಿಸಿ ನಿರ್ಮಾಣ ಮಾಡಲಾಗಿದೆ. ೭.೫ ಎಕರೆ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು ೧,೮೩,೦೦೦ ಚದರ ಅಡಿಗಳನ್ನು ನಿರ್ಮಾಣ ಮಾಡಲಾಗಿದೆ. ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಿಂದ ಪ್ರಸಾದಾಲಯವು ೭೦೦ ಮೀಟರ್ ದೂರದಲ್ಲಿದೆ. 

ಕೆಳಮಹಡಿಯಲ್ಲಿ ಒಂದು ಬೃಹತ್ ಭೋಜನ ಶಾಲೆಯನ್ನು ನಿರ್ಮಿಸಲಾಗಿದ್ದು ಇದರಲ್ಲಿ ಸುಮಾರು ೩೫೦೦ ಜನರಿಗೆ ಸ್ಥಳಾವಕಾಶವಿದೆ. ಮೊದಲನೆಯ ಮಹಡಿಯಲ್ಲಿ ೨ ಬೇರೆ ಬೇರೆ ಭೋಜನ ಶಾಲೆಯನ್ನು ನಿರ್ಮಿಸಲಾಗಿದ್ದು ಒಂದೊಂದರಲ್ಲಿ ಸುಮಾರು ೧೦೦೦ ಜನರಿಗೆ ಸ್ಥಳಾವಕಾಶವಿದೆ.

ಮಂಗಳೂರು ಹೆಂಚಿನಿಂದ ವಿಶೇಷವಾಗಿ ೧೪ ಗೋಪುರದ ಮಾದರಿಯಲ್ಲಿ ಮೇಲ್ಚಾವಣಿಯನ್ನು ನಿರ್ಮಿಸಲಾಗಿದ್ದು ಭೋಜನ ಶಾಲೆಗೆ ನೈಸರ್ಗಿಕವಾಗಿ ಗಾಳಿ ಬೆಳಕು ಚೆನ್ನಾಗಿ ಇರುವಂತೆ ಕಟ್ಟಲಾಗಿದೆ. ಇದರಿಂದ ವಿದ್ಯುತ್ ಇಲ್ಲದಿದ್ದರೂ ಕೂಡ ಇಡೀ ಪ್ರಸದಾಲಯದಲ್ಲಿ ಎಲ್ಲೂ ಕೂಡ ಕತ್ತಲು ಎಂದೆನಿಸುವುದಿಲ್ಲ.

ಸಾಯಿಬಾಬಾ ಸಂಸ್ಥಾನದವರು ಪ್ರಸಾದ ಭೋಜನಕ್ಕೆ ಕೇವಲ ೧೦/- ರೂಪಾಯಿಗಳ ಶುಲ್ಕವನ್ನು ಇಟ್ಟಿರುತ್ತಾರೆ. ಬೃಹತ್  ಶೈತ್ಯಾಗಾರವನ್ನು ಭೋಜನ ಶಾಲೆಯು ಹೊಂದಿದ್ದು ತರಕಾರಿಗಳು ಕೆಡದಂತೆ ಎಚ್ಚರವಹಿಸಲಾಗಿದೆ. ಅಡುಗೆಯನ್ನು ವಿದ್ಯುತ್ ಅಥವಾ ಅಡುಗೆ ಇಂಧನ ಹೆಚ್ಚಿಗೆ ಬಳಸದೆ ಸೌರಶಕ್ತಿಯನ್ನು ಬಳಸಿ ಮಾಡಲಾಗುತ್ತದೆ. ಇಲ್ಲಿ ಇರುವ ಸೌರಶಕ್ತಿಯ ವಾಹಕಗಳು ಭಾರತದಲ್ಲೇ ಪ್ರಥಮ ಎನ್ನಲಾಗಿದೆ. ಭೋಜನ ಶಾಲೆಯ ಮೇಲ್ಚಾವಣಿಯ ಹಲವಾರು ಬೃಹತ್ ಸೌರ ಶಕ್ತಿಯ ವಾಹಕಗಳನ್ನು ನಿರ್ಮಿಸಲಾಗಿದೆ.

ಅಡುಗೆಗೆ ಎಲ್ಲ ಹೊಸ ಮಾದರಿಯ ಪರಿಕರಗಳನ್ನು ಬಳಸುತ್ತಾರೆ ಮತ್ತು ರುಚಿ ಮತ್ತು ಶುಚಿಗೆ ಪ್ರಥಮ ಆದ್ಯತೆಯನ್ನು ನೀಡುತ್ತಾರೆ. ಶಿರಡಿಗೆ ಪ್ರತಿದಿನ ೨೦೦೦೦ ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ವಿಶೇಷ ಹಬ್ಬಗಳು ಮತ್ತು ಉತ್ಸವದ ದಿನಗಳಲ್ಲಿ ಶಿರಡಿಗೆ ಬರುವ ಯಾತ್ರಿಕರ ಸಂಖ್ಯೆ ೬೦೦೦೦ ವನ್ನು ಮುಟ್ಟುತ್ತದೆ.

ಪ್ರಸಾದಲಯದಲ್ಲಿ ಕೊಡುವ ಭೋಜನವು ಮಹಾರಾಷ್ಟ್ರ ಭೋಜನದ ಪದ್ದತಿಯಲ್ಲಿರುತ್ತದೆ ಮತ್ತು ಸರಳವಾಗಿರುತ್ತದೆ. ಅನ್ನ, ದಾಲ್, ಚಪಾತಿ, ೨ ಬಗೆಯ ತರಕಾರಿಯ ಪಲ್ಯಗಳು ಮತ್ತು ಒಂದು ಸಿಹಿತಿಂಡಿ ಯನ್ನು ಭೋಜನದೊಂದಿಗೆ ನೀಡಲಾಗುತ್ತದೆ. ಭೋಜನವನ್ನು ಮೊದಲು ಸಾಯಿಬಾಬಾರವರಿಗೆ ನೈವೇದ್ಯ ಮಾಡಿ ನಂತರ ಭಕ್ತರಿಗೆ ಬಡಿಸುತ್ತಾರೆ.

ಈ ಭೋಜನ ಶಾಲೆಯಲ್ಲಿ ಅವಿರತವಾಗಿ ಕೆಲಸ ಮಾಡಲು ಬಹಳ ಮಂದಿ ಕೆಲಸಗಾರರನ್ನು ಸಾಯಿಬಾಬಾ ಸಂಸ್ಥಾನ ನೇಮಕ ಮಾಡಿರುತ್ತದೆ. ಕೇವಲ ಚಪಾತಿಯನ್ನು ಮಾಡಲು ೧೦೦ ಜನ ಕೆಲಸಗಾರರಿದ್ದಾರೆ.ಶಿರಡಿಗೆ ಬರುವ ಯಾವ ಭಕ್ತರು ಕೂಡ ಹಸಿವಿನಿಂದ ಬಳಲಬಾರದೆಂಬುದು ಸಾಯಿಬಾಬಾ ಸಂಸ್ಥಾನದ ಉದ್ದೇಶವಾಗಿದೆ.

ಸಾಯಿಬಾಬಾ ಪ್ರಸಾದಾಲಯವು ಬೆಳಗ್ಗೆ ೧೦ ಘಂಟೆಯಿಂದ ರಾತ್ರಿ ೧೦ ಘಂಟೆಯವರೆಗೆ ತೆರೆದಿರುತ್ತದೆ.

No comments:

Post a Comment