Thursday, July 8, 2010

ಶ್ರೀ ಶಿರಡಿ ಸಾಯಿಬಾಬಾರವರ ವಿಶ್ರಾಂತಿ ಸ್ಥಳ - ಚಾವಡಿ - ಕೃಪೆ - ಸಾಯಿಅಮೃತಧಾರಾ.ಕಾಂ 


ಹಳೆಯ ಚಾವಡಿಯ ಭಾವಚಿತ್ರ 

ಚಾವಡಿ ಎಂದರೆ ಹಳ್ಳಿಯ ಜನರು ಒಂದೆಡೆ ಸೇರುವ ಸ್ಥಳ ಎಂದು. ಮಹಾರಾಷ್ಟ್ರ  ರಾಜ್ಯದ  ಪ್ರತಿಯೊಂದು  ಹಳ್ಳಿಯಲ್ಲೂ  ಈ  ರೀತಿಯ ಚಾವಡಿಯನ್ನು ನಾವುಗಳು ನೋಡಬಹುದು. ಹಳ್ಳಿಯಲ್ಲಿನ  ಗಂಡಸರು  ಈ  ಸ್ಥಳದಲ್ಲಿ ಪ್ರತಿದಿನ ಸಂಜೆ ಸೇರಿ  ತಮ್ಮ ಹೊಲದಲ್ಲಿ ಬೆಳೆಯುತ್ತಿರುವ ಬೆಳೆಯ, ತಮ್ಮ ದನ ಕರುಗಳ  ಅಥವಾ ತಮ್ಮ ಹಳ್ಳಿಯಲ್ಲಿರುವ  ಇನ್ಯಾವುದೇ  ಸಮಸ್ಯೆಗಳನ್ನು  ಕುಳಿತು ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ವಾಡಿಕೆ ಬಹಳ ಹಿಂದಿನಿಂದ ನೆಡೆದು ಬಂದಿದೆ.  ಶಿರಡಿಯಲ್ಲಿ ಎರಡು ಚಾವಡಿ ಇದೆ. ಒಂದು ಬಾಬಾರವರು ದಿನ ಬಿಟ್ಟು ದಿನ ಮಲಗಲು ಹೋಗುತ್ತಿದ್ದ ದಕ್ಷಿಣ  ದಿಕ್ಕಿಗೆ ಮುಖ ಮಾಡಿರುವ ಚಾವಡಿ.   ಚಾವಡಿಯು ದ್ವಾರಕಮಾಯಿಯ ಎಡಭಾಗಕ್ಕೆ ಅಬ್ದುಲ್ ಬಾಬಾ ಕುಟೀರದ ಎದುರುಗಡೆ ಇರುತ್ತದೆ. ಇದು ದಕ್ಷಿಣ ದಿಕ್ಕಿಗೆ ಇರುತ್ತದೆ. ಸಾಯಿಬಾಬಾರವರು ಮೊದಲು ಶಿರಡಿಗೆ ಬಂದಾಗ ದ್ವಾರಕಾಮಾಯಿ ಮಸೀದಿಯಲ್ಲಿ ತಂಗಿದ್ದರು ಮತ್ತು ಅಲ್ಲೇ ಮಲಗುತ್ತಿದ್ದರು. ಸ್ವಲ್ಪ ದಿನಗಳ ನಂತರ ದಿನ ಬಿಟ್ಟು ದಿನ ಈ ದಕ್ಷಿಣ ಮುಖಿ ಚಾವಡಿಯಲ್ಲಿ ಮಲಗಲು ಪ್ರಾರಂಭಿಸಿದರು. ಒಮ್ಮೆ ಶಿರಡಿಯಲ್ಲಿ ಬಿರುಗಾಳಿ ಸಹಿತ ಮಳೆಯು ಬಂದು ಮಸೀದಿಯೆಲ್ಲ ನೀರಿನಿಂದ ತುಂಬಿಕೊಂಡಿತು. ಮಸೀದಿಯು ಶಿಥಿಲವಾಗಿ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಆಗ ಸಾಯಿಬಾಬಾರವರ ಭಕ್ತರು ಅವರನ್ನು ಬಲವಂತವಾಗಿ ಚಾವಡಿಯಲ್ಲಿ ಮಲಗಲು ಒತ್ತಾಯ ಮಾಡಿ ಒಪ್ಪಿಸಿದರು. ಮೊದಲು ಸಾಯಿಬಾಬಾರವರು ಒಪ್ಪಿಕೊಳ್ಳಲಿಲ್ಲ. ಆದರೆ ನಂತರ ಭಕ್ತರ ಪ್ರೀತಿಗೆ ಮನಸೋತು ಒಪ್ಪಿಕೊಂಡರು. ಇದೇ ಪದ್ದತಿಯನ್ನು ಮುಂದುವರಿಸಿ ಸಾಯಿಬಾಬಾರವರು ದಿನ ಬಿಟ್ಟು ದಿನ ಚಾವಡಿಯಲ್ಲಿ ಮಲಗಲು ಪ್ರಾರಂಭಿಸಿದರು.  ಚಾವಡಿ ಮೆರವಣಿಗೆಯ ವಿವರಗಳನ್ನು ಶ್ರೀ ಸಾಯಿ ಸಚ್ಚರಿತೆಯ 37ನೇ ಅಧ್ಯಾಯದಲ್ಲಿ ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ.



ಮತ್ತೊಂದು ಚಾವಡಿಯು ಉತ್ತರ ದಿಕ್ಕಿಗೆ ಮುಖ ಮಾಡಿರುತ್ತದೆ. ಇದನ್ನು ಬಹಳ ದಿನಗಳವರೆಗೆ ಗ್ರಂಥಾಲಯವಾಗಿ ಉಪಯೋಗಿಸುತ್ತಿದ್ದರು. ಆದರೆ ಈಗ ಇದನ್ನು ಯಾರೂ ಉಪಯೋಗಿಸುತ್ತಿಲ್ಲ. 



ಚಾವಡಿಯ ಒಳಗಡೆ ಬಂದ ಕೂಡಲೇ ಸಾಯಿಭಕ್ತರಿಗೆ "ಶ್ರೀ ಸಾಯಿನಾಥ್ ಬಾಬಾಂಚಿ ಲಕ್ಷ್ಮಿಭಾಯಿ ದಾಮೋದರ ಬಾಬರೆ ಚಿಂಚಿಣೀಕರ್ ಚಾವಡಿ, ಶಕೆ  1859" ಎಂಬ ಫಲಕವನ್ನು ಚಾವಡಿಯ ಬಾಗಿಲ ಮೇಲೆ ನೋಡಬಹುದು. ದಾಮೋದರ ಬಾಬರೆ ಥಾಣ ಜಿಲ್ಲೆಯ ಚಿಂಚಿಣೀಕರ್ ಗ್ರಾಮದವರು. ಆದ್ದರಿಂದ ಶಿರಡಿಯ ಜನರೆಲ್ಲಾ ಇವರನ್ನು ಅಣ್ಣಾ ಚಿಂಚಿಣೀಕರ್ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಇವರು ಮತ್ತು ಇವರ ಪತ್ನಿ ಶಿರಡಿಗೆ ಬಂದು ನೆಲೆಸಿದ್ದರು ಮತ್ತು ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಅನೇಕ ವರ್ಷಗಳು ಸಾಯಿಬಾಬಾರವರ ಸೇವೆಯನ್ನು ಮಾಡಿದರು. ಒಂದು ದಿನ ಸಾಯಿಯವರ ಭಕ್ತರಾದ ಶ್ಯಾಮರವರು ಏಕೆ ಚಿಂಚಿಣೀಕರ್ ದಂಪತಿಗಳಿಗೆ ಇನ್ನು ಸಂತಾನವನ್ನು ದಯಪಾಲಿಸಲಿಲ್ಲ ಎಂದು ಕೇಳಿದರು. ಆಗ ಸಾಯಿಬಾಬಾರವರು "ಏನು ಶ್ಯಾಮ, ಯಾರಾದರೂ ಏನ್ನನ್ನಾದರೂ ಕೇಳಿದರೆ, ಎಂದಾದರೂ ನಾನು ನೀಡದೆ ಇರುವೆನೇ?" ಎಂದರು. ತಮ್ಮ ಅಂತರ್ಜ್ಞಾನದಿಂದ ದಾಮೋದರ ಬಾಬರೆಯ ಮಗನು ಕೇವಲ ಇನ್ನೊಂದು ಪೀಳಿಗೆಯನ್ನು ಮಾತ್ರ ಮುಂದುವರಿಸುತ್ತಾನೆ ಎಂದು ತಿಳಿದಿದ್ದರು.



ಆದರೆ ಬಾಬಾರವರಿಗೆ ದಾಮೋದರ ಬಾಬರೆಯ ಹೆಸರು ಹಲವಾರು ದಶಕಗಳು ಉಳಿಯಬೇಕೆಂಬ ಆಸೆಯಿತ್ತು.

ದಾಮೋದರ ಬಾಬರೆ ಅವರ ಜಮೀನಿನ ವಿಷಯದಲ್ಲಿ ವಿವಾದಗಳು ತಲೆದೋರಿ ವ್ಯಾಜ್ಯವು ದಹಾನುವಿನ ಕೋರ್ಟ್ ಮೆಟ್ಟಿಲೇರಿತು. ದಾಮೋದರ ಬಾಬರೆ ಆಗಾಗ್ಗೆ ಬಂದು ಸಾಯಿಬಾಬಾರವರ ಬಳಿ ವಿವಾದದ ಬಗ್ಗೆ ವಿಚಾರಿಸುತ್ತಿದ್ದರು. ಸಾಯಿಯವರು ಯಾವಾಗಲೂ "ಅಲ್ಲಾ, ಬಲಾ ಕರೇಗಾ" ಎಂದಷ್ಟೇ ಹೇಳುತ್ತಿದ್ದರು. ಅಚ್ಯುತ್ ನಾರಾಯಣ ಖಾರೆ ಎಂಬ ಪ್ರಸಿದ್ದ ವಕೀಲರು ಆ ಕೇಸನ್ನು ನಡೆಸುತ್ತಿದ್ದರು. ಒಮ್ಮೆ ಯಾರೋ ಕಿಡಿಗೇಡಿಗಳು ದಾಮೋದರ ಬಾಬರೆಯವರಿಗೆ ಪತ್ರ ಬರೆದು ಅವರು ವ್ಯಾಜ್ಯವನ್ನು ಸೋತಿದ್ದಾರೆ ಎಂದು ತಿಳಿಸಿದರು. ದಾಮೋದರ ಬಾಬರೆ ಕೂಡಲೇ ಕಾಕ ದೀಕ್ಷಿತ್ ರೊಂದಿಗೆ ಮಸೀದಿಗೆ ಧಾವಿಸಿದರು. ಅವರು ದ್ವಾರಕಾಮಾಯಿ ಒಳಗೆ ಕಾಲಿಟ್ಟ ಕೂಡಲೇ ಸಾಯಿಬಾಬಾರವರು "ಈ ಮುದುಕನಿಗೆ ನನ್ನ ಮೇಲೆ ನಂಬಿಕೆಯಿಲ್ಲ. ಇವನನ್ನು ಮಸೀದಿಯಿಂದ ಹೊರಕ್ಕೆ ದಬ್ಬಿರಿ" ಎಂದು ಒದರಾಡಿದರು. ನಂತರ ದಾಮೋದರ ಬಾಬರೆಯ ವಕೀಲರು ಇವರು ಕೇಸನ್ನು ಗೆದ್ದಿರುವುದೇ ಅಲ್ಲದೇ ಕೋರ್ಟಿನ ವೆಚ್ಚವೆಂದು 1800/- ರೂಗಳ ಪರಿಹಾರವನ್ನು ಕೂಡ ಪಡೆದಿದ್ದಾರೆ ಎಂದು ತಿಳಿಸಿದರು. ದಾಮೋದರ ಬಾಬರೆ ಮತ್ತು ಕಾಕಾ ರವರು ಆ ಕೋರ್ಟಿನ ಪತ್ರವನ್ನು ಹಿಡಿದುಕೊಂಡು ಬಾಬಾರವರ ಬಳಿ ತೆರಳಿದರು. ಸಾಯಿಯವರಿಗೆ ಆ ಪತ್ರವನ್ನು ತೋರಿಸಿದರು. ಆಗ ಸಾಯಿಬಾಬಾರವರು "ಈಗ ನನ್ನ ಮೇಲೆ ನಂಬಿಕೆ ಬಂದಿತೇ" ಎಂದು ಕೇಳಿದರು. ಅದಕ್ಕೆ ದಾಮೋದರ ಬಾಬರೆಯವರು ಸಾಯಿಯವರ ಕಾಲನ್ನು ಹಿಡಿದು "ಈ ಹಣವೆಲ್ಲಾ ನಿಮ್ಮದೇ. ನನಗೆ ಈ ದುಡ್ಡು ಬೇಡ" ಎಂದರು. ಸಾಯಿಯವರು ಆ ಹಣವನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ತಾವು ಫಕೀರರೆಂದು ಮತ್ತು ತಮಗೆ ಹಣದ ಅಗತ್ಯವಿಲ್ಲವೆಂದು ಹೇಳಿದರು. ದಾಮೋದರ ಬಾಬರೆಯವರು ತೆಗೆದುಕೊಳ್ಳಲು ಒತ್ತಾಯ ಮಾಡುತ್ತಲೇ ಇದ್ದರು. ಹೀಗೆ ಸ್ವಲ್ಪ ಹೊತ್ತು ನಡೆಯಿತು. ಆಗ ಅಲ್ಲಿಯೇ ಇದ್ದ ಕಾಕಾರವರು ಆ ಹಣವನ್ನು ಚಾವಡಿಯ ದುರಸ್ತಿ ಕಾರ್ಯಕ್ಕೆ ಬಳಸಿ, ದಾಮೋದರ ಬಾಬರೆ ಮತ್ತು ಲಕ್ಷ್ಮಿಯವರ ಹೆಸರನ್ನು ಅಲ್ಲಿ ಕೆತ್ತಿಸಬಹುದೆಂಬ ಸಲಹೆಯನ್ನು ನೀಡಿದರು. ಕಡೆಗೆ ಸಾಯಿಬಾಬಾ ಅದಕ್ಕೆ ಒಪ್ಪಿಗೆ ನೀಡಿದರು.

1920ನೇ  ಇಸವಿಯಲ್ಲಿ ಚಾವಡಿಗೆ ಹೋಗಲು 3 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗುತ್ತಿತ್ತು. ಚಾವಡಿಯಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡಿದ್ದ 3 ಬಾಗಿಲುಗಳು ಇದ್ದವು. ನಂತರ ಮೆಟ್ಟಿಲುಗಳ ಎರಡೂ ಬದಿಯಲ್ಲಿ ಎರಡು ವರಾಂಡಾಗಳನ್ನು ಕಟ್ಟಲಾಯಿತು. ಪ್ರತಿಯೊಂದು ವರಾಂಡವು 13 ಅಡಿ ಉದ್ದ ಮತ್ತು 8 ಅಡಿ ಅಗಲವಿರುತ್ತದೆ. 1970 ರಲ್ಲಿ ಈ ವರಾಂಡದ ಹೊರ ಆವರಣಕ್ಕೆ ಕಬ್ಬಿಣದ ಸರಳುಗಳನ್ನು ಜೋಡಿಸಲಾಯಿತು. ಚಾವಡಿಯ ಉತ್ಸವದ ದಿನಗಳಲ್ಲಿ ಇಲ್ಲಿ ಬಾಬಾರವರಿಗೆ ಆರತಿಯನ್ನು ಮಾಡಿ ಸೇದಲು ಚಿಲುಮೆಯನ್ನು ನೀಡಲಾಗುತ್ತಿತ್ತು. ಈಗ ಆ ಸ್ಥಳದಲ್ಲಿ ಒಂದು ಬೆಳ್ಳಿಯ ಸಾಯಿಬಾಬಾರವರ ಚಿತ್ರಪಟವನ್ನು ಇತ್ತು ಅದಕ್ಕೆ ಆರತಿಯನ್ನು ಮಾಡಲಾಗುತ್ತಿದೆ. ಚಾವಡಿಯ ಒಳಭಾಗದಲ್ಲಿ ವಿವಿಧ ದೇವರುಗಳ ಮತ್ತು ಅವರ ಲೀಲೆಗಳನ್ನು  ಸಾರುವ ಹಲವಾರು ವರ್ಣಚಿತ್ರಗಳನ್ನು ನಾವು ಕಾಣಬಹುದು. ಇವುಗಳು ಬಾಬಾರವರ ಕಾಲದಿಂದ ಇದ್ದವೆಂದು ಹೇಳಲಾಗುತ್ತದೆ.


1920ನೇ ಇಸವಿಯಲ್ಲಿ ಸಾಯಿಬಾಬಾರವರ ಚಿತ್ರಪಟದ ಮುಂದುಗಡೆ ಗಾಜಿನ ಪೆಟ್ಟಿಗೆಯಲ್ಲಿ ಸಾಯಿಬಾಬಾರವರ ಪಾದುಕೆಗಳನ್ನು ಇರಿಸಲಾಗಿತ್ತು. ಇದು 1970 ನೇ ಇಸವಿಯವರೆಗೂ ಇತ್ತು. ನಂತರ 1970 ರಲ್ಲಿ ಎರಡು ಜೊತೆ ಪಾದುಕೆಗಳನ್ನು ದರ್ಶನಕ್ಕೆ ಇರಿಸಲಾಗಿತ್ತು. ಸ್ವಲ್ಪ ದಿನಗಳ ನಂತರ ಈ ಪಾದುಕೆಗಳನ್ನು ಸಮಾಧಿ ಮಂದಿರದ ಒಳಗಡೆ ಇರುವ ಶೋ ರೂಂ ನಲ್ಲಿ ಇರಿಸಲಾಯಿತು. ಸಾಯಿಬಾಬಾ ವಸ್ತು ಸಂಗ್ರಹಾಲಯ ಕಟ್ಟಿದ ನಂತರ ಈ ಪಾದುಕೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಯಿತು. ಸಾಯಿಬಾಬಾ ಮಹಾಸಮಾಧಿಯ ನಂತರ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಚಾವಡಿ ಉತ್ಸವವನ್ನು ನಡೆಸುವ ಪರಿಪಾಠ ಇಟ್ಟುಕೊಂಡಿದ್ದಾರೆ ಮತ್ತು ಇದನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.


9ನೇ ಡಿಸೆಂಬರ್ 2008 ದಿನವು ಒಂದು ಮಹಾ ಸುದಿನ. ಏಕೆಂದರೆ ಆ ದಿನ ಶಿರಡಿಯಲ್ಲಿ ಆರತಿ ಮತ್ತು ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ಸರಿಯಾಗಿ ನೂರು ವರ್ಷಗಳು. ಈ ಉತ್ಸವವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದವರು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಸಾಯಿಬಾಬಾರವರ ಮಂಗಳ ಸ್ನಾನವಾದ ನಂತರ ಸರಿಯಾಗಿ ಬೆಳಿಗ್ಗೆ 6:45 ಕ್ಕೆ ಒಂದು ದೊಡ್ಡ ಮೆರವಣಿಗೆಯಲ್ಲಿ ಸಮಾಧಿ ಮಂದಿರದಿಂದ ಸಾಯಿಬಾಬಾರವರ ಪವಿತ್ರ ಬೆಳ್ಳಿಯ ಪಾದುಕೆಗಳನ್ನು ಚಾವಡಿಗೆ ತರಲಾಯಿತು. ಅಲ್ಲಿ ಆರತಿಯನ್ನು ನೆರವೇರಿಸಲಾಯಿತು. ನಂತರ ಸಾಯಿ ಸಚ್ಚರಿತೆಯ 37ನೇ ಅಧ್ಯಾಯವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪಾರಾಯಣ ಮಾಡಲಾಯಿತು. ನಂತರ ದಾಸಗಣು ರವರ ಸ್ತವನ ಮಂಜರಿಯ ಪಾರಾಯಣವನ್ನು ಮಾಡಲಾಯಿತು. ನಂತರ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಎಲ್ಲ ಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಯಿತು. 

ಚಾವಡಿ ಉತ್ಸವ

10ನೇ ಡಿಸೆಂಬರ್ 1910 ರಿಂದ ಸಾಯಿ ಭಕ್ತರು ಬಾಬಾರವರನ್ನು ಚಾವಡಿಯಲ್ಲಿ ಪೂಜಿಸಲು ಪ್ರಾರಂಭ ಮಾಡಿದರು. ಸಾಯಿಬಾಬಾರವರನ್ನು ಮೆರವಣಿಗೆಯಲ್ಲಿ ದ್ವಾರಕಾಮಾಯಿಯಿಂದ ಚಾವಡಿಗೆ ಅತ್ಯಂತ ವೈಭವದಿಂದ ಕರೆದುಕೊಂಡು ಹೋಗುತ್ತಿದ್ದರು. ಈಗಲೂ ಕೂಡ ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಚಾವಡಿ ಉತ್ಸವವನ್ನು ನಾವುಗಳು ನೋಡಬಹುದು.


10ನೇ ಡಿಸೆಂಬರ್ 2010 ಸಾಯಿಭಕ್ತರಿಗೆ ಒಂದು ಮಹಾ ಸುದಿನ. ಏಕೆಂದರೆ ಆ ದಿನ ಶಿರಡಿಯಲ್ಲಿ ರಾತ್ರಿ ಆರತಿ ಆರಂಭವಾಗಿ ಸರಿಯಾಗಿ ನೂರು ವರ್ಷಗಳು ಪೂರ್ಣಗೊಂಡಿತು (ಸಾಯಿಭಕ್ತರು ಸಾಯಿ ಸಚ್ಚರಿತೆ 4ನೇ ಅಧ್ಯಾಯ ನೋಡಬಹುದು). ಶಿರಡಿ ಸಾಯಿಬಾಬಾ ಸಂಸ್ಥಾನದವರು ಅಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಅತ್ಯಂತ ವಿಜೃಂಭಣೆಯಿಂದ ಈ ಮಹಾದಿನವನ್ನು ಆಚರಿಸಿದರು. ಚಾವಡಿಯಲ್ಲಿ ಈ ಕೆಳಗೆ ನೀಡಿರುವ ಆರತಿಯನ್ನು ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಹಾಡಲಾಗುತ್ತದೆ. ಅವುಗಳು ಯಾವುವೆಂದರೆ:

   1. ಘೇವುನಿಯಾ ಪಂಚಾರತಿ
   2. ಆರತಿ ಸಾಯಿಬಾಬಾ
   3. ಶಿರಡಿ ಮಾಜೆ ಪಂಡರಾಪುರ
   4. ಘಾಲೀನ ಲೋಟಾಂಗಣ
   5. ಹರೇ ರಾಮ ಹರೇ ರಾಮ



 ಚಾವಡಿಯ ಉತ್ತರದ ಗೋಡೆಯಲ್ಲಿರುವ ಸಾಯಿಬಾಬಾರವರ ತೈಲಚಿತ್ರ


ಸಾಯಿಬಾಬಾರವರ ಸಮಾಧಿಯ ನಂತರ 1953 ರಲ್ಲಿ ನೋವ್ಸಾರಿ ಗ್ರಾಮದ ನಿವಾಸಿಯಾದ ಅಂಬಾರಾಮ್  ರವರಿಗೆ ಸ್ವಪ್ನದಲ್ಲಿ ಸಾಯಿಬಾಬಾರವರು ದರ್ಶನವಿತ್ತರು. ಕನಸಿನಲ್ಲಿ ತಮಗೆ ದರ್ಶನವಿತ್ತ ಹಾಗೆಯೇ ಸಾಯಿಬಾಬಾರವರ ಭಾವಚಿತ್ರವನ್ನು ಬಿಡಿಸಿದರು. ನೋವ್ಸಾರಿಯ ಹಳ್ಳಿಗರು ಆ ಭಾವಚಿತ್ರವನ್ನು ನೋಡಿ ಮತ್ತು ಸಾಯಿಬಾಬಾರವರ ಲೀಲೆಗಳನ್ನು ಕೇಳಿ ಆನಂದಭರಿತರಾದರು. ಅಂಬಾರಾಮ್ ರಿಂದ ಆ ಭಾವಚಿತ್ರವನ್ನು ಪಡೆದು ಅದಕ್ಕೆ ಕಟ್ಟು ಹಾಕಿಸಿ ತಂದು ಸಾಯಿಬಾಬಾ ಸಂಸ್ಥಾನಕ್ಕೆ ಒಪ್ಪಿಸಿದರು. ಮೊದಲು ಈ ಭಾವಚಿತ್ರವನ್ನು ಸಮಾಧಿ ಮಂದಿರದಲ್ಲಿ ಇಡಲು ನಿಶ್ಚಯಿಸಲಾಯಿತು. ಆದರೆ, ಆ ವೇಳೆಗೆ ಸಾಯಿಯವರ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಿದ್ದತೆ ನಡೆದಿತ್ತು. ಆದ್ದರಿಂದ ಈ ಭಾವಚಿತ್ರವನ್ನು ಚಾವಡಿಯಲ್ಲಿ ಇಡಲಾಯಿತು. ಈ ಫೋಟೋ ಇರುವ ಸ್ಥಳದಲ್ಲೇ ಸಾಯಿಬಾಬಾರವರು ಜೀವಂತರಿದ್ದಾಗ ರಾತ್ರಿಯ ಆರತಿ ಮತ್ತು ಬೆಳಗಿನ ಆರತಿಗೆ ಕುಳಿತುಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. 

ಈ ತೈಲಚಿತ್ರವು 6 x 4 ಗಾತ್ರವಿದ್ದು ಬಾಬಾರವರು ಕಲ್ಲಿನ ಮೇಲೆ ಕುಳಿತ ಚಿತ್ರವಾಗಿರುತ್ತದೆ. ಸಾಯಿಬಾಬಾರವರ ಚಿತ್ರದ ಹಿಂಭಾಗದಲ್ಲಿ ಬೃಹತ್ ಗಾತ್ರದ "ಓಂ" ಕೂಡ ರಚಿಸಲಾಗಿದೆ. 

ಮೊದಲು ಈ ಚಿತ್ರಪಟವನ್ನು ಅಂಬಾರಾಮ್ ರವರು ನವ್ಸಾರಿಯ ಮೆಹರ್ ಬಾಬಾ ಆಶ್ರಮಕ್ಕೆ ನೀಡಿದರು. ಈ ಚಿತ್ರಪಟದ ಮುಂದೆ ಭಕ್ತರು ಅಖಂಡ ಸಾಯಿ ನಾಮ ಜಪವನ್ನು ನಿರಂತರವಾಗಿ 2 ದಿನಗಳ ಕಾಲ ನಡೆಸಿದರು. ನಂತರ ಹಳ್ಳಿಯವರೆಲ್ಲರಿಂದ ಹಣವನ್ನು ಸಂಗ್ರಹ ಮಾಡಿ ಚಿತ್ರಪಟಕ್ಕೆ ಸುಂದರವಾದ ಕಟ್ಟನ್ನು ಹಾಕಿಸಿದರು. ನಂತರ ಮೆರವಣಿಗೆಯಲ್ಲಿ ಚಿತ್ರಪಟವನ್ನು ಶಿರಡಿಗೆ ತಂದು ಸಾಯಿಬಾಬಾ ಸಂಸ್ಥಾನಕ್ಕೆ ಕಾಣಿಕೆಯಾಗಿ ನೀಡಿದರು. 

ಚಾವಡಿಯ ಪೂಜಾರಿ ಈ ಚಿತ್ರಪಟಕ್ಕೆ ಪ್ರತಿನಿತ್ಯ ಅಷ್ಟಗಂಧದಿಂದ ಅಲಂಕಾರ ಮಾಡುತ್ತಾರೆ. 

ಬೆಳ್ಳಿಯ ಸಿಂಹಾಸನದ ಮೇಲೆ  ಇರಿಸಿರುವ ಸಾಯಿಬಾಬಾರವರ ಚಿತ್ರಪಟ


ಈ ಚಿತ್ರವು ಸಾಯಿಬಾಬಾರವರ ನೈಜಚಿತ್ರವಾಗಿರುತ್ತದೆ. ಇದಕ್ಕೆ "ರಾಜೋಪಚಾರ ಚಿತ್ರ" ಎಂದು ಕೂಡ ಕರೆಯುತ್ತಾರೆ.   ರಾಜೋಪಚಾರ ಎಂದರೆ 30 ವಿವಿಧ ಬಗೆಯ ಕೈಂಕರ್ಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಅಭಿಷೇಕ ಮತ್ತು ಮಂಗಳ ಸ್ನಾನ ಕೂಡ ಸೇರಿವೆ. ಆದರೆ ಚಿತ್ರಪಟಕ್ಕೆ ಈ ಕೈಂಕರ್ಯಗಳನ್ನೆಲ್ಲ ಮಾಡಲು ಸಾಧ್ಯವಿಲ್ಲವಾದ ಕಾರಣ ಕೇವಲ ಪಂಚೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತಿದೆ.

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವಗಳಾದ ಶ್ರೀರಾಮನವಮಿ, ಗುರುಪೂರ್ಣಿಮೆ ಮತ್ತು ವಿಜಯದಶಮಿ ದಿನಗಳಲ್ಲಿ ಮಧ್ಯಾನ್ಹ ಈ ಭಾವಚಿತ್ರವನ್ನು ಸಮಾಧಿ ಮಂದಿರಕ್ಕೆ ಕೊಂಡೊಯ್ದು ಸಮಾಧಿಯ ಬಳಿ ಇರಿಸಲಾಗುತ್ತದೆ. ಅಲ್ಲಿ ಸಮಾಧಿ ಮಂದಿರದ ಪೂಜಾರಿಯವರು ಪಂಚೋಪಚಾರವಾದ ಅಷ್ಟ ಗಂಧ, ಹೂವು, ಧೂಪ, ದೀಪ  ಮತ್ತು  ನೈವೇದ್ಯ ಅರ್ಪಿಸುತ್ತಾರೆ.  ನಂತರ ಚಿತ್ರಪಟಕ್ಕೆ ರೇಶಿಮೆಯ ವಸ್ತ್ರವನ್ನು   ಹೊದ್ದಿಸಲಾಗುತ್ತದೆ.   ಧೂಪಾರತಿಯಾದ ನಂತರ ಸರಿಯಾಗಿ 8:45 ಕ್ಕೆ ಸಮಾಧಿ ಮಂದಿರದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಈ ಚಿತ್ರಪಟವನ್ನು ಬಾಬಾರವರ ಪಾದುಕೆ  ಮತ್ತು  ಸಟಕಾದೊಂದಿಗೆ     ಚಾವಡಿಗೆ  ತರಲಾಗುತ್ತದೆ. ಚಾವಡಿಯಲ್ಲಿ ಈ ಚಿತ್ರಪಟಕ್ಕೆ ಆರತಿಯನ್ನು ಮಾಡಿ ಬಾಬಾರವರಿಗೆ ಚಿಲ್ಲಂ ನೀಡಿ ಚಿತ್ರಪಟವನ್ನು ಪುನಃ ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ತರಲಾಗುತ್ತದೆ. ನಂತರ ಸಮಾಧಿ ಮಂದಿರದಲ್ಲಿ ಶೇಜಾರತಿ ಪ್ರಾರಂಭವಾಗುತ್ತದೆ. ಮತ್ತೆ ಮಾರನೇ ದಿನ ಕಾಕಡಾ ಆರತಿಯ ನಂತರ ಚಾವಡಿಗೆ ಚಿತ್ರಪಟವನ್ನು ವಾಪಸ್ ತಂದು ಇರಿಸಲಾಗುತ್ತದೆ. 



ಮಹಿಳಾ ಸಾಯಿ ಭಕ್ತರಿಗೆ  ವಿಶೇಷ ಸೂಚನೆ

ಸಾಯಿಬಾಬಾರವರು ತಮ್ಮ ಜೀವಿತ ಕಾಲದಲ್ಲಿ ಹೆಣ್ಣು, ಹೊನ್ನು ಮತ್ತು ಮಣ್ಣು ಇವುಗಳಿಗೆ  ಆಸೆ ಪಡದೆ  ಆಜನ್ಮ ಬ್ರಹ್ಮಚರ್ಯವನ್ನು ಪರಿಪಾಲಿಸುತ್ತಿದ್ದುದರಿಂದ, ಸಾಯಿಯವರು ಚಾವಡಿಯಲ್ಲಿ ಮಲಗುತ್ತಿದ್ದ ಜಾಗಕ್ಕೆ ಸ್ತ್ರೀಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಶಿರಡಿಗೆ ಹೋದಾಗ ಮಹಿಳಾ ಸಾಯಿಭಕ್ತರು ಈ ನಿಯಮವನ್ನು ಕಟ್ಟು-ನಿಟ್ಟಾಗಿ ಪಾಲಿಸತಕ್ಕದ್ದು.

ಮರದ ಮಂಚ 



ಸಾಯಿಬಾಬಾರವರು 15ನೇ ಅಕ್ಟೋಬರ್ 1918 (ಮಂಗಳವಾರ, ಮಧ್ಯಾನ್ಹ 2:30 ರ ಸಮಯ) ಮಹಾಸಮಾಧಿ ಹೊಂದಿದ ಮೇಲೆ ಅವರ ದೇಹವನ್ನು ಈ ಪವಿತ್ರ ಮರದ ಮಂಚದ ಮೇಲೆ 3 ದಿನಗಳ ಕಾಲ ಇರಿಸಲಾಗಿತ್ತು. ಈ ಮಂಚದ ಮೇಲೆಯೇ ಸಾಯಿಬಾಬಾರವರ ಪಾರ್ಥಿವ ಶರೀರಕ್ಕೆ ಕಡೆಯ ಮಂಗಳ ಸ್ನಾನವನ್ನು ಮಾಡಿಸಲಾಯಿತು. ನಂತರ ಮೆರವಣಿಗೆಯಲ್ಲಿ ಸಾಯಿಬಾಬಾರವರ ಪಾರ್ಥಿವ ಶರೀರವನ್ನು ಸಮಾಧಿ ಮಂದಿರಕ್ಕೆ ತರಲಾಯಿತು. ಸಮಾಧಿ ಮಂದಿರದ ಗರ್ಭಗೃಹದಲ್ಲಿ ಮುರಳೀಧರನ ಪ್ರತಿಮೆಗೊಸ್ಕರ ಮೀಸಲಿಟ್ಟಿದ್ದ ಜಾಗದಲ್ಲಿ ಸಾಯಿಬಾಬಾರವರ ದೇಹವನ್ನು ಸಮಾಧಿ ಮಾಡಲಾಯಿತು. 

ಈ ಮರದ ಮಂಚವು ಮೊದಲು ದ್ವಾರಕಾಮಾಯಿಯಲ್ಲಿತ್ತು. ನಂತರ ಚಾವಡಿಯಲ್ಲಿ ತಂದು ಇರಿಸಲಾಗಿತ್ತು. ಈ ಮಂಚವನ್ನು ಚಾವಡಿಯ ಕುಬೇರ ಸ್ಥಾನದಲ್ಲಿ ಇರಿಸಲಾಗಿತ್ತು. ಪ್ರತಿ ಗುರುವಾರ ಈ ಮಂಚವನ್ನು ಚಾವಡಿಯ ಹೊರಗೆ ಇರಿಸಿ ಬಾಬಾರವರ ಪಲ್ಲಕ್ಕಿಯನ್ನು ಇದರ ಮೇಲೆ ಸ್ವಲ್ಪ ಕಾಲ ಇರಿಸಲಾಗುತ್ತಿತ್ತು. ಆರತಿಯಾದ ನಂತರ ಈ ಮಂಚವನ್ನು ಪುನಃ ಕುಬೇರ ಸ್ಥಾನದಲ್ಲಿ ವಾಪಸ್ ಇರಿಸಲಾಗುತ್ತಿತ್ತು. 

ಆದರೆ ಸಾಯಿಬಾಬಾ ವಸ್ತು ಸಂಗ್ರಹಾಲಯ ಕಟ್ಟಿದ ನಂತರ ಈ ಮಂಚವನ್ನು ವಸ್ತು ಸಂಗ್ರಹಾಲಯದ ಕೆಳ ಅಂತಸ್ತಿನ ಮಧ್ಯ ಭಾಗದಲ್ಲಿ  ಇರಿಸಲಾಗಿದೆ. 

ಗಾಲಿ ಕುರ್ಚಿ: 


ಈ ಗಾಲಿ ಕುರ್ಚಿಯನ್ನು ಸಾಯಿಭಕ್ತರೊಬ್ಬರು ಸಾಯಿಬಾಬಾರವರು ವಯಸ್ಸಾದಾಗ ಬಳಸಲು ನೀಡಿದರು. ಆದರೆ, ಬಾಬಾರವರು ತಮ್ಮ ಪಾಡಿಗೆ ತಾವು ಆರಾಮವಾಗಿ ಓಡಾಡಿಕೊಂಡಿದ್ದರು. ಕೆಲವೊಮ್ಮೆ ಮಾತ್ರ ತಮ್ಮ ಭಕ್ತರ ಸಹಾಯದಿಂದ ನಡೆದಾಡುತ್ತಿದ್ದರು. ಆದರೆ ಈ ಕುರ್ಚಿಯನ್ನು ಎಂದಿಗೂ ಉಪಯೋಗಿಸಲೇ ಇಲ್ಲ. ಆದರೆ ತಮ್ಮ ಜೊತೆ ಈ ಕುರ್ಚಿಯನ್ನು ಇಟ್ಟುಕೊಂಡಿದ್ದರು. ಈ ಗಾಲಿ ಕುರ್ಚಿಯನ್ನು ಕುಬೇರ ಸ್ಥಾನದಲ್ಲಿ ಮರದ ಮಂಚದ ಪಕ್ಕದಲ್ಲಿ ಇರಿಸಲಾಗಿತ್ತು.

ಆದರೆ ಸಾಯಿಬಾಬಾ ವಸ್ತು ಸಂಗ್ರಹಾಲಯ ಕಟ್ಟಿದ ನಂತರ ಈ ಗಾಲಿ ಕುರ್ಚಿಯನ್ನು ವಸ್ತು ಸಂಗ್ರಹಾಲಯದ ಕೆಳ ಅಂತಸ್ತಿನ ಮಧ್ಯ ಭಾಗದಲ್ಲಿ  ಇರಿಸಲಾಗಿದೆ. 

ಗಾಜಿನ ಗುಳಾಪು:

ಈ ಗಾಜಿನ ಗುಳಾಪನ್ನು ಕಾಕಾ ಮಹಾಜನಿಯವರು ರಾಧಾಕೃಷ್ಣ ಮಾಯಿಯವರ ಸಲಹೆ ಮೇರೆಗೆ ಸಾಯಿಬಾಬಾರವರ ಚಾವಡಿಯಲ್ಲಿನ ದೀಪಗಳಿಗೋಸ್ಕರ ತಂದು ಕಾಣಿಕೆಯಾಗಿ ನೀಡಿದರು.

ಚಾವಡಿ ದರ್ಶನದ ಸಮಯ:

ಶ್ರೀ ಸಾಯಿಬಾಬಾ ಸಂಸ್ಥಾನದವರು ಚಾವಡಿಯನ್ನು ಬೆಳಗಿನ ಜಾವ 4:30 ರಿಂದ ರಾತ್ರಿ 9:00 ರ ವರೆಗೆ ಸಾಯಿಭಕ್ತರ ದರ್ಶನಕ್ಕಾಗಿ ತೆರೆದಿರುತ್ತಾರೆ.


ಚಾವಡಿಯಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

4:30 AM
ಚಾವಡಿ ತೆರೆಯುತ್ತದೆ ಮತ್ತು ಚಾವಡಿಯನ್ನು ಶುದ್ದಿಗೊಳಿಸಲಾಗುತ್ತದೆ.
4:45 AM
ಲೋಬನ್ (ಸಾಂಬ್ರಾಣಿ) ಸಮರ್ಪಣೆ. 
11:15 AM
ಚಾವಡಿಯನ್ನು ಶುದ್ದಿಗೊಳಿಸಲಾಗುತ್ತದೆ.
11:40 AM
ಲೋಬನ್ (ಸಾಂಬ್ರಾಣಿ) ಸಮರ್ಪಣೆ.
ಸಂಜೆ ಆರತಿಯ ನಂತರ 
ಲೋಬನ್ (ಸಾಂಬ್ರಾಣಿ) ಮತ್ತು ಇದ್ದಿಲನ್ನು ಸಮಾಧಿ ಮಂದಿರದ ಪೂಜಾರಿ ಸಮಾಧಿ ಮಂದಿರದಿಂದ ಚಾವಡಿಗೆ ತಂದು  ಲೋಬನ್ (ಸಾಂಬ್ರಾಣಿ) ಸಮರ್ಪಣೆ ಮಾಡುತ್ತಾರೆ. ಸರಿಯಾಗಿ ಸೂರ್ಯಾಸ್ತಮದ ಸಮಯಕ್ಕೆ ನಂದಾದೀಪಗಳಿಗೆ ಎಣ್ಣೆಯನ್ನು ಹಾಕುತ್ತಾರೆ. 
9:00 PM
ಚಾವಡಿ ಮುಚ್ಚುತ್ತದೆ.


ಗುರುವಾರದ ಚಾವಡಿ ಚಾವಡಿ ಉತ್ಸವದ ಸಂಪೂರ್ಣ ವಿವರ: 

ಪ್ರತಿ ಗುರುವಾರದಂದು ಬೆಳಗಿನ ಜಾವ 4.40 ಕ್ಕೆ ಶ್ರೀ ಸಾಯಿಬಾಬಾರವರ ರಾಜೋಪಚಾರ ಭಾವಚಿತ್ರಕ್ಕೆ ಹೊದಿಸಿರುವ ಪೀತಾಂಬರ ವಸ್ತ್ರವನ್ನು ಸಕಲ ಧಾರ್ಮಿಕ ವಿಧಿ-ವಿಧಾನಗಳೊಡನೆ ಬದಲಾಯಿಸಲಾಗುತ್ತದೆ.

ಮಧ್ಯಾನ್ಹ ಆರತಿಯಾದ ನಂತರ ಸುಮಾರು 12.40 ಕ್ಕೆ ಶ್ರೀ ಸಾಯಿಬಾಬಾರವರ ರಾಜೋಪಚಾರ ಭಾವಚಿತ್ರವನ್ನು ಚಾವಡಿಯಿಂದ ತಂದು ಸಮಾಧಿ ಮಂದಿರದಲ್ಲಿ ಸಮಾಧಿಯ ವೇದಿಕೆಯ ಮೇಲೆ ಬಾಬಾರವರ ಪಾದುಕೆ ಹಾಗೂ ಸಟಕಾದೊಂದಿಗೆ ಇರಿಸಲಾಗುತ್ತದೆ.

ರಾತ್ರಿ 9:15 ಕ್ಕೆ ಸರಿಯಾಗಿ ಸಮಾಧಿ ಮಂದಿರದಿಂದ ಚಾವಡಿ ಉತ್ಸವವು ಈ ಕೆಳಗೆ ನೀಡಿರುವ ಭಜನೆಗಳನ್ನು ಹಾಡುವುದರೊಂದಿಗೆ  ಪ್ರಾರಂಭವಾಗುತ್ತದೆ.

ಅಲಂಕಾಪುರಿ ಪುಣ್ಯಭೂಮಿ ಪವಿತ್ರ
ತಿಥೆ ನಂದಿತೋ ಧ್ಯಾನರಾಜ ಸುಪಾತ್ರ
ತಯಾ ಆತವೀಟ ಮಹಾಪುಣ್ಯ ರಾಶಿ
ನಮಸ್ಕಾರ ಮಾಜ್ಯಾ ಶ್ರೀ ಸದ್ಗುರು ಧ್ಯಾನೇಶ್ವರಾಸಿ

ಪುಂಡಲೀಕ ವರದೇ ಹರಿ ವಿಠಲ
ಶ್ರೀ ಜ್ಞಾನದೇವ, ತುಕಾರಾಮ, ಪಂಢರಿನಾಥ ಮಹಾರಾಜ ಕಿ ಜೈ
ಸದ್ಗುರು ಸಾಯಿನಾಥ ಮಹಾರಾಜ ಕಿ ಜೈ

ಜೈ ಜೈ ರಾಮಕೃಷ್ಣ ಹರಿ
ಜೈ ಜೈ ರಾಮ್ ಜೈ ಜೈ ರಾಮ್ ಕೃಷ್ಣ ಹರಿ
ಜೈ ಜೈ ರಾಮಕೃಷ್ಣ ಹರಿ
ಜೈ ಜೈ ರಾಮ್ ಸಾಯಿ ಹರಿ
ಜೈ ಜೈ ರಾಮ್ ಜೈ ಜೈ ರಾಮ್ ಕೃಷ್ಣ ಹರಿ

ರೂಪ ಪಹತಾ ಲೋಚಾನಿ 
ಸುಖ ಜಾಲೇ ವೋ ಸಜಾನಿ 
ತೋ ಹಾ ವಿಠಲ ಬರಾವ 
ತೋ ಹಾ ಮಾಧವ ಬರಾವ 
ಬಹುತ ಸುಕೃತಾಂಚಿ ಜೋಡಿ 
ಮಣ್ಹುನಿ ವಿಠಲಾಂ ಆವಾಡಿ 
ಸರ್ವ ಸುಖಾಚೇ ಅಗಾರ 
ಬಾಪಾ ರುಕುಮಾದೇವಿವಾರೂ 

ಈ ಮೇಲಿನ ಭಜನೆಗಳನ್ನು ಹಾಗೂ ಮತ್ತಿತರ ಭಜನೆಗಳನ್ನು ಹಾಡುತ್ತಾ ಚಾವಡಿ ಉತ್ಸವವು ಸಮಾಧಿ ಮಂದಿರದಿಂದ ಹೊರಟು ಸುಮಾರು  9:20 ಕ್ಕೆ ದ್ವಾರಕಾಮಾಯಿಗೆ ಬಂದು ಸೇರುತ್ತದೆ. 

ದ್ವಾರಕಾಮಾಯಿಗೆ ಬಂದು ತಲುಪಿದ ನಂತರ ಶ್ರೀ ಸಾಯಿಬಾಬಾರವರ ರಾಜೋಪಚಾರ ಭಾವಚಿತ್ರ, ಪಾದುಕೆಗಳು ಹಾಗೂ ಸಟಕಾಗಳನ್ನು ಶ್ರೀ ಸಾಯಿಬಾಬಾರವರು  ತಮ್ಮ ಅವತರಣ ಕಾಲದಲ್ಲಿ ಕುಳಿತುಕೊಳ್ಳುತ್ತಿದ್ದ ಕಲ್ಲಿನ ಮೇಲೆ ಇರಿಸಲಾಗುತ್ತದೆ. ನಂತರ ಈ ಕೆಳಗಿನ ಭಜನೆಗಳನ್ನು ಹಾಡಲಾಗುತ್ತದೆ:

ಅಲಂಕಾಪುರಿ ಪುಣ್ಯಭೂಮಿ ಪವಿತ್ರ
ತಿಥೆ ನಂದಿತೋ ಧ್ಯಾನರಾಜ ಸುಪಾತ್ರ
ತಯಾ ಆತವೀಟ ಮಹಾಪುಣ್ಯ ರಾಶಿ
ನಮಸ್ಕಾರ ಮಾಜ್ಯಾ ಶ್ರೀ ಸದ್ಗುರು ಧ್ಯಾನೇಶ್ವರಾಸಿ

ಪುಂಡಲೀಕ ವರದೇ ಹರಿ ವಿಠಲ
ಶ್ರೀ ಜ್ಞಾನದೇವ, ತುಕಾರಾಮ, ಪಂಢರಿನಾಥ ಮಹಾರಾಜ ಕಿ ಜೈ
ಸದ್ಗುರು ಸಾಯಿನಾಥ ಮಹಾರಾಜ ಕಿ ಜೈ

ಜೈ ಜೈ ರಾಮಕೃಷ್ಣ ಹರಿ
ಜೈ ಜೈ ರಾಮ್ ಜೈ ಜೈ ರಾಮ್ ಕೃಷ್ಣ ಹರಿ
ಜೈ ಜೈ ರಾಮಕೃಷ್ಣ ಹರಿ
ಜೈ ಜೈ ರಾಮ್ ಸಾಯಿ ಹರಿ
ಜೈ ಜೈ ರಾಮ್ ಜೈ ಜೈ ರಾಮ್ ಕೃಷ್ಣ ಹರಿ

ರೂಪ ಪಹತಾ ಲೋಚಾನಿ 
ಸುಖ ಜಾಲೇ ವೋ ಸಜಾನಿ 
ತೋ ಹಾ ವಿಠಲ ಬರಾವ 
ತೋ ಹಾ ಮಾಧವ ಬರಾವ 
ಬಹುತ ಸುಕೃತಾಂಚಿ ಜೋಡಿ 
ಮಣ್ಹುನಿ ವಿಠಲಾಂ ಆವಾಡಿ 
ಸರ್ವ ಸುಖಾಚೇ ಅಗಾರ 
ಬಾಪಾ ರುಕುಮಾದೇವಿವಾರೂ 

ಸಾಯಿನಾಮ ಸುಖದಾಯಿ 
ಶ್ರೀ ಸಾಯಿನಾಮ ಸುಖದಾಯಿ
ಸಾಯಿನಾಮ ಕೇ ದೋ ಅಕ್ಷರಮೇ 
ಸಬ್ ಸುಖ ಶಾಂತಿ ಸಮಾಯಿ 
ಸಾಯಿನಾಮ ಸುಖದಾಯಿ 
ಶ್ರೀ ಸಾಯಿನಾಮ ಸುಖದಾಯಿ 

ಹಿಂದು ಮುಸ್ಲಿಂ ಸಿಖ್ ಇಸಾಯಿ 
ಸಬಕೋ ಲಾಗೇ ಆಸ್ ತುಮ್ಹಾರಿ 
ಆಶಿಶ್ ದೇಖರ್ ಪಾವನ ಕರದೋ 
ಬಡಾವೋ ನಾಮ್ ಕಿ ಆಸ್ ತುಮ್ಹಾರಿ 
ಸಾಯಿನಾಮ ಸುಖದಾಯಿ 
ಶ್ರೀ ಸಾಯಿನಾಮ ಸುಖದಾಯಿ

ಹರ್ ದಮ್ ತು  ಮೇರೆ ಸಾಥ್
ಹೀನ ದೀನ ಕಾ ಏಕ ಹಿ ನಾಥ್
ಸಾಯಿಧಾಮ್ ಕಿ ಕೃಪಾ ಹೋಗಯಿ
ಪಾವನ ಹೋಗಯಿ ಕಾಯಾ ಮೇರಿ
ಸಾಯಿನಾಮ ಸುಖದಾಯಿ 
ಶ್ರೀ ಸಾಯಿನಾಮ ಸುಖದಾಯಿ

ಗೋಪಾಲನ್ ಹೇ ಕ್ಯಾ ಕಮಾಲ್ ತೇರಿ
ಪಾನಿ ಮೇ ತೂ ಜ್ಯೋತಿ ಜಲಾಯಿ
ಪಾನಿ ಮೇ ತೂ ದೀಪ ಜಲಾಯಿ
ನಾ ಮನ್ ಭೂಲೇ ತೇರಾ ಕೋಯಿ
ಶಿರಡಿವಾಲೇ ಬಾಬಾ ಸಾಯಿ
ಸಾಯಿನಾಮ ಸುಖದಾಯಿ 
ಶ್ರೀ ಸಾಯಿನಾಮ ಸುಖದಾಯಿ

ಸುಂದರ ತೇ ಧ್ಯಾನ ಉಭೆ ವಿಟೇವರಿ
ಕರ ಕಾಟಾವರಿ ತೇಹುನಿಯಾ
ತುಳಸಿ ಹಾರ ಗಲ ಕಾಂಸೇ ಪೀತಾಂಬರ
ಆವಡೇ ನಿರಂತರ ಹೇಚಿ ಧ್ಯಾನ
ಮಕರ ಕುಂಡಲೇ ತಲಪ್ತಿ ಶ್ರಾವಣಿ
ಕಾಂತಿ ಕೌಸ್ತುಭಮಣಿ ವಿರಾಜಿತ
ತುಕಾಮ್ಹಣೆ ಮಾಜೆ ಹೇಚಿ ಸರ್ವ ಸುಖ
ಆ ಪಾಹಿನ ಶ್ರೀಮುಖ ಆವಡಿನೇ

ಶಿರಡಿ ಮಾಜೇ  ಪಂಢರಪುರ ಸಾಯಿಬಾಬಾ ರಾಮಾವರ
ಶುದ್ಧ ಭಕ್ತಿ ಚಂದ್ರಭಾಗ ಭಾವ ಪುಂಡಲೀಕ ಜಾಗ
ಯಹೋ ಯಹೋ ಅವಘೆ ಜನ ಕರು ಬಾಬಾಂಚಿ ವಂದನ
ಗಣು  ಮ್ಹಣೆ ಬಾಬಾ ಸಾಯಿ ಧಾವ ಪಾವ ಮಾಜೇ ಆಯೀ

ಮೇಲಿನ ಭಜನೆಗಳು ಸುಸಂಪನ್ನವಾದ ನಂತರ ರಾಜೋಪಚಾರ ಭಾವಚಿತ್ರವನ್ನು ಬಾಬಾರವರು ಕುಳಿತುಕೊಳ್ಳುತ್ತಿದ್ದ ಕಲ್ಲಿನ ಮೇಲಿನಿಂದ ತೆಗೆದುಕೊಂಡು ಬಂದು ಪಲ್ಲಕ್ಕಿಯ ಒಳಗಡೆ ಇರಿಸಲಾಗುತ್ತದೆ. 

ನಂತರ ಚೋಪದಾರರು ಈ ಕೆಳಗಿನ ಘೋಷಣೆ ಲಾಲಕರಿಯನ್ನು ಉದ್ಗರಿಸುತ್ತಾರೆ:

“ಶ್ರೀ ಗುರುದೇವ ಶ್ರೀಮಂತ ಮಹಾರಾಜ, ಸದ್ಗುರು ಸಾಯಿನಾಥ್ ಮಹಾರಾಜ್ ಕಿ ಜೈ"

ಭಾವಾರ್ಥ:ಶ್ರೀ ಗುರುದೇವ (ದತ್ತ) ಶ್ರೀಮಂತರಲ್ಲಿ ಶ್ರೀಮಂತರಾದ ಶ್ರೀ ಸದ್ಗುರು ಸಾಯಿನಾಥ ಮಹಾರಾಜರಿಗೆ ಜಯವಾಗಲಿ.

ನಂತರ ಚಾವಡಿ ಉತ್ಸವವು ದ್ವಾರಕಾಮಾಯಿಯಿಂದ ಸುಮಾರು 9:30 ಕ್ಕೆ ಈ ಕೆಳಗಿನ ಭಜನೆಯೊಂದಿಗೆ ಹೊರಡುತ್ತದೆ:

ಸಾಯಿನಾಥ ಗುರು ಮಾಜೇ ಆಯಿ ಮಜಲಾ ಠಾವ ಧ್ಯಾವಾ ಪಾಯಿ
ಮಜಲಾ ಠಾವ ಧ್ಯಾವಾ ಪಾಯಿ, ಮಜಲಾ ಠಾವ ಧ್ಯಾವಾ ಪಾಯಿ
ಸಾಯಿನಾಥ ಗುರು ಮಾಜೇ ಆಯಿ ಮಜಲಾ ಠಾವ ಧ್ಯಾವಾ ಪಾಯಿ

ಈ ರೀತಿಯಲ್ಲಿ ದ್ವಾರಕಾಮಾಯಿಯಿಂದ ಹೊರಟ ಚಾವಡಿ ಉತ್ಸವವು ಸುಮಾರು 9:35 ಕ್ಕೆ ಚಾವಡಿಯನ್ನು ಬಂದು ತಲುಪುತ್ತದೆ.

ದ್ವಾರಕಾಮಾಯಿಯಿಂದ ಹೊರಟ ಪಲ್ಲಕ್ಕಿಯು ಚಾವಡಿಯನ್ನು ತಲುಪಿದ ನಂತರ ಚಾವಡಿಯ ಮುಂಭಾಗದಲ್ಲಿ ಇರಿಸಲಾಗಿರುವ ಬಾಬಾರವರ ಮಂಚದ ಮೇಲೆ ಪಲ್ಲಕ್ಕಿಯನ್ನು ಇರಿಸಲಾಗುತ್ತದೆ. 15ನೇ ಅಕ್ಟೋಬರ್ 1918 ರಂದು  ಬಾಬಾರವರ ದೇಹಾವಸಾನವಾದ ನಂತರ 3 ದಿನಗಳ ಕಾಲ  ಈ ಮಂಚದ ಮೇಲೆ ಬಾಬಾರವರ ದೇಹವನ್ನು ಇರಿಸಲಾಗಿತ್ತು. ಈ ರೀತಿ 2006-2007 ನೇ ಇಸವಿಯವರೆಗೂ ನಡೆಯಿತು. ಆದರೆ ನಂತರ ಶ್ರೀ ಸಾಯಿಬಾಬಾ ಸಂಸ್ಥಾನದವರು ದೀಕ್ಷಿತವಾಡಾದಲ್ಲಿ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಿದ ನಂತರ ಬಾಬಾರವರು ಉಪಯೋಗಿಸುತ್ತಿದ್ದ ಹಾಗೂ  ಅವರಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು  ಹೆಚ್ಚು ವರ್ಷಗಳ ಕಾಲ ಸಂರಕ್ಷಿಸುವ ಉದ್ದೇಶದಿಂದ ಅಲ್ಲಿ ಇರಿಸಿದರು. ಹಾಗಾಗಿ ಆ ಮಂಚವನ್ನು ಸಹ ವಸ್ತು ಸಂಗ್ರಹಾಲಯದ ನೆಲಮಹಡಿಯಲ್ಲಿ ಗಾಜಿನ ಹೊದಿಕೆಯಡಿಯಲ್ಲಿ ಸಂರಕ್ಷಿಸಿದರು. ಈಗ ಸಂಸ್ಥಾನದವರು ಆ ಮಂಚಕ್ಕೆ ಬದಲಾಗಿ ಅದೇ ರೀತಿಯ ಮತ್ತೊಂದು ಮಂಚವನ್ನು ಚಾವಡಿಯಲ್ಲಿ ಇರಿಸಿದ್ದು ಚಾವಡಿ ಉತ್ಸವದ ದಿನಗಳಂದು ಆ ಮಂಚದ ಮೇಲೆ ಶ್ರೀ ಸಾಯಿಬಾಬಾರವರ ಪಲ್ಲಕ್ಕಿಯನ್ನು ಇರಿಸಲಾಗುತ್ತಿದೆ.

ಪ್ರತಿ ಗುರುವಾರಗಳಂದು ಸಂಜೆಯ ಧೂಪಾರತಿಯಾದ ನಂತರ ಚಾವಡಿಯ ಮುಂದೆ ಚೆನ್ನಾಗಿ ಗುಡಿಸಿ, ಸಾರಿಸಿ ಶುಭ್ರಗೊಳಿಸಲಾಗುತ್ತದೆ ಮತ್ತು  ಮನಮೋಹಕವಾದ  ಹಾಗೂ ಚಿತ್ತಾಕರ್ಷಕವಾದ ರಂಗೋಲಿಯನ್ನು ಶಿರಡಿಯ ಸಾಯಿಭಕ್ತರೊಬ್ಬರು ತಪ್ಪದೆ ಹಾಕುತ್ತಾ ಬಂದಿದ್ದಾರೆ. ಪಲ್ಲಕ್ಕಿ ಉತ್ಸವವು ಚಾವಡಿಯ ಬಳಿಗೆ ಬಂದಾಗ ಪಲ್ಲಕ್ಕಿಯನ್ನು ಈ ರಂಗೋಲಿಯ ಮೇಲೆ ಶ್ರದ್ಧಾಪೂರ್ವಕವಾಗಿ ಇರಿಸಲಾಗುತ್ತದೆ.

ತಾತ್ಯಾ ಕೋತೆ ಪಾಟೀಲರ ವಂಶಸ್ಥರು ಬಾಬಾರವರ ಭಾವಚಿತ್ರವನ್ನು ಪಲ್ಲಕ್ಕಿಯಿಂದ ಹೊರತೆಗೆದು ಚಾವಡಿಯ ಒಳಗೆ ಕೊಂಡೊಯ್ದು ಸಿಂಹಾಸನದ ಮೇಲೆ ಇರಿಸುತ್ತಾರೆ. ಬಯ್ಯಾಜಿ ಅಪ್ಪಾ ಕೋತೆ ಪಾಟೀಲರ ವಂಶಸ್ಥರು ಪಾದುಕೆ ಹಾಗೂ ಸಟಕಾವನ್ನು ಚಾವಡಿಯ ಒಳಗೆ ಕೊಂಡೊಯ್ದು ಭಾವಚಿತ್ರದ ಮುಂದೆ ಇರಿಸುತ್ತಾರೆ.

ಬಾಬಾರವರ ರಾಜೋಪಚಾರದ ಭಾವಚಿತ್ರ, ಪಾದುಕೆ ಹಾಗೂ ಸಟಕಾಗಳನ್ನು ಬಾಬಾರವರು ತಮ್ಮ ಅವತರಣ ಕಾಲದಲ್ಲಿ ದಿನ ಬಿಟ್ಟು ದಿನ ಮಲಗುತ್ತಿದ್ದ ಚಾವಡಿಯ ಬಲಭಾಗದಲ್ಲಿ ಇರಿಸಲಾಗುತ್ತದೆ.  ನಂತರ  ಶ್ರೀ ಸಾಯಿಬಾಬಾರವರಿಗೆ ಧೂಪ ಹಾಗೂ ಪಂಚಾರತಿ ದೀಪಗಳನ್ನು ಬೆಳಗಲಾಗುತ್ತದೆ. ಆ ನಂತರ ಉಪಹಾರ ನೈವೇದ್ಯವನ್ನು ಸಹ ನೀಡಲಾಗುತ್ತದೆ. ನೈವೇದ್ಯವಾದ ನಂತರ ಶ್ರೀ ಸಾಯಿಬಾಬಾರವರಿಗೆ ಆರತಿಯನ್ನು ಮಾಡಲಾಗುತ್ತದೆ.

ಲಘು ಆರತಿಯನ್ನು ರಾತ್ರಿ 9.30 ರಿಂದ  9:45 ರವರೆಗೆ ಮಾಡಲಾಗುತ್ತದೆ. ಆರತಿ ಪ್ರಾರಂಭಿಸುವುದಕ್ಕೆ ಮುಂಚೆ "ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ್ ಮಹಾರಾಜ್ ಕಿ ಜೈ" ಎಂಬ ಘೋಷಣೆಯನ್ನು ಮಾಡಲಾಗುತ್ತದೆ.

ನಂತರ ಕೆಳಗಿನ ಐದು ಲಘು ಆರತಿಗಳನ್ನು ಹಾಡಲಾಗುತ್ತದೆ:

1. ಘೇವುನಿಯಾ ಪಂಚಾರತಿ 
2. ಆರತಿ ಸಾಯಿಬಾಬಾ 
3. ಶಿರಡಿ ಮಾಜೇ ಪಂಢರಾಪುರ
4. ಘಾಲೀನ ಲೋಟಾಂಗಣ
5. ಹರೇ ರಾಮ ಹರೇ ರಾಮ

ಎರಡನೇ ಲಘು ಆರತಿಯಾದ "ಆರತಿ ಸಾಯಿಬಾಬಾ" ವನ್ನು ಹಾಡುವಾಗ ಶ್ರೀ.ಸಾಯಿಬಾಬಾರವರ ರಾಜೋಪಚಾರ ಭಾವಚಿತ್ರಕ್ಕೆ ಚಿಲುಮೆಯನ್ನು ಅರ್ಪಿಸಲಾಗುತ್ತದೆ. ಇಂದಿಗೂ ಚಾವಡಿ ಆರತಿಯ ಸಮಯದಲ್ಲಿ ಬಾಬಾರವರು ಸ್ವತಃ ಆಗಮಿಸಿ ಚಿಲುಮೆಯನ್ನು ಎಳೆಯುತ್ತಾರೆ ಎಂಬ ಪ್ರತೀತಿಯಿದೆ. ಭಕ್ತರು ಬಹಳ ಎಚ್ಚರಿಕೆಯಿಂದ ಗಮನಿಸಿದಲ್ಲಿ ಯಾರೋ ಚಿಲುಮೆಯನ್ನು ಸೇದಿದಂತೆ  ಬಾಬಾರವರ ರಾಜೋಪಚಾರ ಭಾವಚಿತ್ರದಿಂದ ಎತ್ತರಕ್ಕೆ ಹೊಗೆಯು ಹೊರಬರುವುದನ್ನು ಗಮನಿಸಬಹುದಾಗಿದೆ. ಅದು ಬೇರೆ ಯಾರೋ ಆಗಿರದೇ ಸ್ವತಃ ನಮ್ಮ ಪ್ರೀತಿಯ ಸದ್ಗುರುಗಳಾದ ಶ್ರೀ ಸಾಯಿಬಾಬಾರವರೇ  ಎಂದು ನಮಗೆ ಅರಿವಾಗುತ್ತದೆ. ಏಕೆಂದರೆ ಸಾಯಿಬಾಬಾರವರಿಗೆ ಚಿಲುಮೆ ಸೇದುವುದೆಂದರೆ ಬಹಳ ಪ್ರಿಯವಾಗಿತ್ತು ಎಂಬುದು ಎಲ್ಲಾ ಭಕ್ತರಿಗೂ ತಿಳಿದ ವಿಷಯವಾಗಿರುತ್ತದೆ.

ಚಾವಡಿಯಲ್ಲಿ ಲಘು  ಸಂಪೂರ್ಣಗೊಂಡ ನಂತರ ಚೋಪದಾರರು “ಶ್ರೀ ಗುರು ದೇವ ದತ್ತ” ಎಂಬ ಘೋಷಣೆಯನ್ನು ಮಾಡುತ್ತಾರೆ. ನಂತರ ಘೋಷಣೆ ಲಾಲಕರಿಯಾದ :

“ಶ್ರೀ ಗುರುದೇವ ಶ್ರೀಮಂತ ಮಹಾರಾಜ, ಸದ್ಗುರು ಸಾಯಿನಾಥ್ ಮಹಾರಾಜ್ ಕಿ ಜೈ" ಎಂದು ಉದ್ಗರಿಸುತ್ತಾರೆ.

ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ತಾತ್ಯಾರವರು ಬಾಬಾರವರಿಗೆ ಅತ್ತರು ಹಾಗೂ ರೋಜ್ ವಾಟರ್ (ಗಂಧ ಮತ್ತು ಗುಲಾಬಿ ನೀರು) ಅನ್ನು ಲೇಪಿಸುತ್ತಿದ್ದರು.  (ಶ್ರೀ ಸಾಯಿ ಸಚ್ಚರಿತ್ರೆ 37ನೇ ಅಧ್ಯಾಯ). ಶ್ರೀ ಸಾಯಿಬಾಬಾ ಸಂಸ್ಥಾನದವರು ಅದೇ ಪದ್ಧತಿಯನ್ನು ಮುಂದುವರಿಸಿ ಚಾವಡಿಯಲ್ಲಿ ಆರತಿಯಾದ ನಂತರ ಬಾಬಾರವರ ರಾಜೋಪಚಾರ ಭಾವಚಿತ್ರಕ್ಕೆ ಅತ್ತರು ಹಾಗೂ ರೋಜ್ ವಾಟರ್ (ಗಂಧ ಮತ್ತು ಗುಲಾಬಿ ನೀರು) ಅನ್ನು ಲೇಪಿಸುವ ಸುಯೋಗವನ್ನು ತಾತ್ಯಾರವರ ವಂಶಸ್ಥರಿಗೆ ನೀಡಿದ್ದಾರೆ. ನಂತರ ಭಾವಚಿತ್ರವನ್ನು ಚಾವಡಿಯಿಂದ ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ಕೊಂಡೊಯ್ಯಲಾಗುತ್ತದೆ. 

ಸುಮಾರು 9:45 ರ ಹೊತ್ತಿಗೆ ರಾಜೋಪಚಾರ ಭಾವಚಿತ್ರ, ಪಾದುಕೆ ಹಾಗೂ ಸಟಕಾಗಳನ್ನು ಚಾವಡಿಯಿಂದ ಹೊರತಂದು ಶಿರಡಿ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

ಚಾವಡಿ ಆರತಿಯಾದ ನಂತರ ಪಲ್ಲಕ್ಕಿಯನ್ನು ಹಾಗೂ ಮಂಚವನ್ನು ತೆಗೆದ ಕೂಡಲೇ ಸಾಯಿ ಭಕ್ತರು ರಂಗೋಲಿಯನ್ನು ಬಿಡಿಸಿರುವ ಸ್ಥಳಕ್ಕೆ ಓಡಿಹೋಗಿ ಆ ರಂಗೋಲಿಯನ್ನು ಕೈಗೆತ್ತಿಕೊಂಡು ತಮ್ಮ ದೇಹದ ಮೇಲೆಲ್ಲಾ ಹಚ್ಚಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಏಕೆಂದರೆ  ಬಾಬಾರವರು ಆ ರಂಗೋಲಿಯ  ಮೇಲೆ ಕುಳಿತಿದ್ದರಿಂದ ಅದು ಪವಿತ್ರವಾಗಿದ್ದು ಅದನ್ನು ತಮ್ಮ ಮೈಮೇಲೆ ಹಚ್ಚಿಕೊಳ್ಳುವುದರಿಂದ ತಮ್ಮ ದೇಹಗಳು ಪವಿತ್ರವಾಗುವುದೆಂಬ ನಂಬಿಕೆ ಸಾಯಿ ಭಕ್ತರಲ್ಲಿ ಬೆಳೆದುಬಂದಿದೆ.

ನಂತರ ಪಲ್ಲಕ್ಕಿ ಉತ್ಸವವು ಸಮಾಧಿ ಮಂದಿರಕ್ಕೆ ಸುಮಾರು 10:30 ಕ್ಕೆ ಬಂದು ಸೇರುತ್ತದೆ. ನಂತರ ಸಮಾಧಿ ಮಂದಿರದಲ್ಲಿ ಶೇಜಾರತಿ ಕಾರ್ಯಕ್ರಮ ನಡೆಯುತ್ತದೆ. ಈ ರೀತಿಯಲ್ಲಿ ಬಾಬಾರವರ ರಾಜೋಪಚಾರ ಭಾವಚಿತ್ರ, ಪಾದುಕೆ ಮತ್ತು ಸಟಕಾಗಳು ಸಮಾಧಿ ಮಂದಿರಕ್ಕೆ ಬಂದು ತಲುಪುತ್ತದೆ. ಚಾವಡಿಯು ಆ ದಿನದಂದು ಮಾತ್ರ ಸುಮಾರು 9:45 ಕ್ಕೆ ಮುಚ್ಚುತ್ತದೆ.

ಪಂಢರಾಪುರದಲ್ಲಿ ಭಗವಾನ್ ವಿಠಲನಿಗೆ ಮಾಡುವಂತೆ ಈ ಚಾವಡಿ ಉತ್ಸವ, ಲಾಲಕಾರಿ ಘೋಷಣೆಯ ಸಂಪ್ರದಾಯವನ್ನು ಸಾಯಿಬಾಬಾರವರ ಅವತರಣ ಕಾಲದಲ್ಲೇ ಶಿರಡಿ ಗ್ರಾಮದಲ್ಲಿ ಪ್ರಾರಂಭಿಸಿದ ಕೀರ್ತಿ ಸಾಯಿ ಮಹಾಭಕ್ತೆಯಾದ ದಿವಂಗತ ಶ್ರೀಮತಿ.ರಾಧಾಕೃಷ್ಣ ಮಾಯಿಗೆ ಸಲ್ಲುತ್ತದೆ.ಅಷ್ಟೇ ಅಲ್ಲದೇ ರಾಧಾಕೃಷ್ಣ ಮಾಯಿಯವರು ಬಾಬಾರವರು ಚಾವಡಿ ಉತ್ಸವಕ್ಕೆ ತೊಟ್ಟುಕೊಳ್ಳುತ್ತಿದ್ದ ಬಟ್ಟೆಗಳನ್ನು ಸಹ ಆಯ್ಕೆ ಮಾಡುತ್ತಿದ್ದರು. ಏಕೆಂದರೆ ರಾಧಾಕೃಷ್ಣ ಮಾಯಿಯವರಿಗೆ ಬಾಬಾರವರಿಗೆ ಭಗವಾನ್ ವಿಠಲನಂತೆಯೇ ಉಪಚಾರ ಮಾಡಬೇಕೆಂಬ ಉತ್ಕಟ ಇಚ್ಛೆಯಿತ್ತು.

ಸಮಾಧಿ ಮಂದಿರದಲ್ಲಿ ಮಾರನೇ ದಿನ ಬೆಳಗಿನ ಜಾವದ ಕಾಕಡಾ ಆರತಿಯಾದ ನಂತರ ಬಾಬಾರವರ ರಾಜೋಪಚಾರದ ಭಾವಚಿತ್ರವು ಚಾವಡಿಗೆ ವಾಪಸ್ ಬಂದು ಸೇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment