Thursday, July 1, 2010

ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ಗಣಪತಿ, ಶನಿ, ಮಹಾದೇವ ದೇವರುಗಳ ದೇವಾಲಯಗಳು ಮತ್ತು ಹುಲಿಯ ಸಮಾಧಿ - ಕೃಪೆ - ಸಾಯಿಅಮೃತಧಾರಾ.ಕಾಂ  

ಮೂರು ದೇವಾಲಯಗಳ ಒಂದು ಹೊರನೋಟ

ಹೊಸದಾಗಿ ನಿರ್ಮಿಸಿರುವ ರಂಗಮಂಟಪದ ಹಿಂಭಾಗದಲ್ಲಿ ಗಣೇಶ, ಶನಿ ಮತ್ತು ಈಶ್ವರನ ಪುಟ್ಟ ದೇವಾಲಯಗಳನ್ನು ಸಾಯಿಬಾಬಾರವರ ಕಾಲದಲ್ಲೇ ನಿರ್ಮಿಸಲಾಯಿತು. ಈ 3 ದೇವಾಲಯಗಳ ದುರಸ್ಥಿ ಕಾರ್ಯವನ್ನು ಸ್ವತಃ ಸಾಯಿಬಾಬಾರವರೇ ತಮಗೆ ಬಂದ ದಕ್ಷಿಣೆ ಹಣದಿಂದ ಸ್ವತಃ ನಿಂತು ತಾತ್ಯಾ ಕೋತೆ ಪಾಟೀಲರ ಮುಖಾಂತಾರ ಮಾಡಿಸಿದರು. ತಾತ್ಯ ಕೋತೆ ಪಾಟೀಲರಿಗೆ ಈ ಮೂರು ದೇವಾಲಯಗಳಲ್ಲಿ ಎಣ್ಣೆಯನ್ನು ಹಾಕಿ ದೀಪಗಳನ್ನು ಹಚ್ಹ್ಚುವುದೆಂದರೆ ಬಹಳ ಆನಂದ. ಈ ಮಂದಿರಗಳು ಬಹಳ ಶಿಥಿಲವಾಗಿದ್ದರಿಂದ ಸಾಯಿಬಾಬಾ ಸಂಸ್ಥಾನದವರು 26ನೇ  ಡಿಸೆಂಬರ್ 1998 ರಂದು ಈ  ಮಂದಿರದಲ್ಲಿದ್ದ ವಿಗ್ರಹಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಲಶ ಮಂದಿರಕ್ಕೆ ವರ್ಗಾಯಿಸಿದರು. ಹೊಸ ಮಂದಿರವನ್ನು ಒಂದರ ಪಕ್ಕದಲ್ಲಿ ಒಂದರಂತೆ ನಿರ್ಮಾಣ ಮಾಡಲಾಯಿತು. ಈ ಹೊಸ ಮಂದಿರವು ಶಿರಡಿ ಸಾಯಿಬಾಬಾ  ದೇವಾಲಯದ ಪ್ರಾಂಗಣದಲ್ಲಿರುವ ಕ್ಯು ಕಾಂಪ್ಲೆಕ್ಷ್ ನ ಎದುರುಗಡೆ ಇರುತ್ತದೆ.  3ನೇ ಜುಲೈ  1999 ರಂದು ಈ ಹೊಸ ಮಂದಿರದ ಒಳಗಡೆ ವಿಗ್ರಹಗಳನ್ನು ಕಲಶ ಮಂದಿರದಿಂದ ವಾಪಸ್ ತಂದು ಪುನರ್ ಪ್ರತಿಷ್ಟಾಪನೆ ಕಾರ್ಯವನ್ನು ವಿಧಿವತ್ತಾಗಿ  ಮಾಡಲಾಯಿತು. 

ಗಣಪತಿಯ ವಿಗ್ರಹ

ಶನಿದೇವರ ವಿಗ್ರಹ

ಈಶ್ವರನ ವಿಗ್ರಹ

ಹುಲಿಯ ಸಮಾಧಿ

ಹುಲಿಯ ಸಮಾಧಿ

ಸಾಯಿಬಾಬಾರವರಿಂದ ದ್ವಾರಕಾಮಾಯಿಯಲ್ಲಿ ಮುಕ್ತಿಯನ್ನು ಪಡೆದ ಈ ಹುಲಿಯ ಸಮಾಧಿ ಈಶ್ವರನ ಮಂದಿರದ ಮುಂಭಾಗದಲ್ಲಿದೆ. ಇದರ ವಿವರಣೆಯನ್ನು ಸಾಯಿ ಸಚ್ಚರಿತೆಯ 31ನೇ ಅಧ್ಯಾಯದಲ್ಲಿ ಸಾಯಿಭಕ್ತರು ನೋಡಬಹುದು.  1918 ರಲ್ಲಿ ಸಾಯಿಬಾಬಾರವರ ದೇಹಾವಸಾನಕ್ಕೆ 7 ದಿನಗಳ ಮುಂಚೆ ಕೆಲವು ದರವೇಶಿಗಳು ಈ ಮರಣ ಶಯ್ಯೆಯಲ್ಲಿದ್ದ ಹುಲಿಯನ್ನು ಚಕ್ಕಡಿ ಗಾಡಿಯಲ್ಲಿ ಹಾಕಿ ಸಾಯಿಬಾಬಾರವರ ಬಳಿ ಬದುಕಿಸುವ ಆಸೆಯಿಂದ ತಂದರು. ಆ ದರವೇಶಿಗಳು ಹುಲಿಯನ್ನು ಹಳ್ಳಿಗಳಲ್ಲಿ ಪ್ರದರ್ಶನ ಮಾಡಿ ಅದರಿಂದ ಬರುವ ಆದಾಯದಿಂದ ಜೀವನ ನಡೆಸುತ್ತಿದ್ದರು. ಅದು ಬಹಳ ದಿನಗಳಿಂದ ರೋಗದಿಂದ ನರಳುತ್ತಿತ್ತು. ಆದರೆ ಆ ಹುಲಿಯು ದ್ವಾರಕಾಮಾಯಿಯ ಒಳಗಡೆ ಬಂದು ಸಾಯಿಬಾಬಾರವರನ್ನು ನೋಡಿದ ಕೂಡಲೇ ಅವರ ದಿವ್ಯ ತೇಜಸ್ಸನ್ನು ಸಹಿಸಲಾರದೆ ತಲೆಯನ್ನು ಕೆಳಗೆ ಮಾಡಿ ಅವರನ್ನು ಪ್ರೀತಿಯಿಂದ ನೋಡಿತು. ನಂತರ ಬಾಲವನ್ನು ಅಲ್ಲಾಡಿಸಿ ಅದನ್ನು ಮೂರು ಸಲ ನೆಲಕ್ಕೆ ಹೊಡೆದು, ಜ್ಞಾನ ತಪ್ಪಿ ಕೆಳಗೆ ಬಿದ್ದ ಕೂಡಲೇ ಅದರ ಪ್ರಾಣ ಹೋಯಿತು. ಸಾಯಿಬಾಬಾರವರು ಆ ದರವೇಶಿಗಳಿಗೆ ತಮ್ಮ ಕೈಯಿಂದ 50 ರುಪಾಯಿಗಳನ್ನು ನೀಡಿದರು. ಈ ರೀತಿ ಸಾಯಿಬಾಬಾರವರು ತಮ್ಮ ಹಳೆಯ ಋಣವನ್ನು ತೀರಿಸಿದರು. ಹೀಗೆ ಸಾಯಿಬಾಬಾರವರು ಮಾನವರಿಗೆ ಮಾತ್ರವೇ ಅಲ್ಲದೇ ಪ್ರಾಣಿಗಳಿಗೂ ಕೂಡ ಸದ್ಗತಿಯನ್ನು ಕೊಡುತ್ತಿದ್ದುದು ಈ ಘಟನೆಯಿಂದ ನಮಗೆ ತಿಳಿಯುತ್ತದೆ.

ಈ ಘಟನೆಯಾದ ಸಂದರ್ಭದಲ್ಲಿ ಜ್ಯೋತಿಂದ್ರ ತರ್ಕಡ ಸಾಯಿಬಾಬಾರವರ ಪಕ್ಕದಲ್ಲೇ ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಜ್ಯೋತಿಂದ್ರ ಸಾಯಿಬಾಬಾರವರನ್ನು ಆ ಹುಲಿಗೂ ಮತ್ತು ಸಾಯಿಬಾಬಾರವರಿಗೂ ಇದ್ದ ಹಳೆಯ ಸಂಬಂಧದ ಬಗ್ಗೆ ಕೇಳಿದರು. ಆಗ ಸಾಯಿಬಾಬಾರವರು "ಆ ಹುಲಿಯು ತನಗೆ ಬಂದ ಖಾಯಿಲೆಯಿಂದ ಬಹಳವಾಗಿ ನರಳುತ್ತಿತ್ತು. ಆ ರೋಗದಿಂದ ತನಗೆ ಮುಕ್ತಿ ನೀಡಬೇಕೆಂದು ದೀನವಾಗಿ ಬೇಡಿಕೊಳ್ಳುತ್ತಿತ್ತು. ಅದರ ಮೇಲಿನ ಕರುಣೆಯಿಂದ ನಾನು ಅಲ್ಲಾ ಮಿಯಾನನ್ನು ಆ ಹುಲಿಗೆ ನೋವಿನಿಂದ ಮುಕ್ತಿ ನೀಡುವಂತೆ ಬೇಡಿಕೊಂಡೆ. ನನ್ನ ಕೋರಿಕೆಯಂತೆ ಆ ಹುಲಿಗೆ ಈಗ ಜನನ ಮರಣ ಚಕ್ರದಿಂದ ಸಂಪೂರ್ಣವಾಗಿ ಮುಕ್ತಿ ದೊರಕಿದೆ. ಆದುದರಿಂದ ನಾನು ಆ ದರವೇಶಿಗಳಿಗೆ ಮಹಾದೇವನ ದೇವಾಲಯದ ಎದುರು ಸಮಾಧಿ ಮಾಡುವಂತೆ ಹೇಳಿದೆ" ಎಂದು ಉತ್ತರಿಸಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment