Tuesday, July 22, 2014

ಶಿರಡಿಯಲ್ಲಿರುವ ಹೊಸ್ತಿಲಿನ ಮಹತ್ವ - ಕೃಪೆ: ಸಾಯಿಅಮೃತಧಾರಾ.ಕಾಂ

ಒಂದು ಮನೆ, ಕೋಣೆ, ಗ್ರಾಮ ಅಥವಾ ಊರಿನ ಸರಹದ್ದಿನಲ್ಲಿ  ಮಹಾದ್ವಾರದ ಕೆಳಗೆ ಒಂದು ಮರ ಅಥವಾ ಕಲ್ಲನ್ನು ಅಡ್ಡವಾಗಿ ಹಾಕುತ್ತಾರೆ. ಅದನ್ನು "ಹೊಸ್ತಿಲು", "ಹೊಸಿಲು" ಅಥವಾ "ವಾಸಕಲ್ಲು" ಎಂಬ ಹೆಸರುಗಳಿಂದ ಕರೆಯುತ್ತಾರೆ. ಅಂತೆಯೇ ಶಿರಡಿಯಲ್ಲಿನ ಚಾವಡಿ ಮತ್ತು ಶ್ಯಾಮ ಸುಂದರ ಹಾಲ್ ನ ನಡುವೆ ಇರುವ ಖಾಲಿ ಸ್ಥಳದಲ್ಲಿ ಒಂದು ಹೊಸ್ತಿಲು ಇರುತ್ತದೆ. ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ವು 2013ನೇ ಇಸವಿಯಲ್ಲಿ ಇದರ ಪಕ್ಕದಲ್ಲಿಯೇ ಒಂದು ಕಮಾನನ್ನು ನಿರ್ಮಾಣ ಮಾಡಿರುತ್ತದೆ. ಅನೇಕ ಸಾಯಿಭಕ್ತರಿಗೆ ಈ ಹೊಸ್ತಿಲಿನ ಬಗ್ಗೆ ಮಾಹಿತಿ ಇಲ್ಲ. ಈ ಹೊಸ್ತಿಲು ಎರಡು ಗ್ರಾಮಗಳಾದ ಶಿರಡಿ ಹಾಗೂ ಭೀರಗಾವ್ ಅನ್ನು ಬೇರ್ಪಡಿಸುತ್ತದೆ.

ಹಿಂದಿನ ಕಾಲದಲ್ಲಿ ಶಿರಡಿಯು ಒಂದು ಸಣ್ಣ ಗ್ರಾಮವಾಗಿತ್ತು. ನಂತರ ಬಾಬಾರವರ ಅವತರಣ ಕಾಲದಲ್ಲಿ ಬಾಬಾರವರ ಮಹಾಭಕ್ತರಾದ ದಿವಂಗತ ಶ್ರೀ.ರಾಮಚಂದ್ರ ದಾದಾ ಪಾಟೀಲರು ಭೀರಗಾವ್ ಹಾಗೂ ಶಿರಡಿಯನ್ನು ಒಗ್ಗೂಡಿಸಿ ಶಿರಡಿ ಒಂದು ದೊಡ್ಡ ಗ್ರಾಮವಾಗುವಂತೆ ಮಾಡಿದರು.

ಇದೇ ಕಾರಣಕ್ಕಾಗಿ ಶಿರಡಿಯ ದ್ವಾರಕಾಮಾಯಿಯ ಬಳಿ ಎರಡು ಚಾವಡಿಗಳಿರುತ್ತವೆ. ಉತ್ತರದ ಚಾವಡಿಯು ಶಿರಡಿಗೆ ಹಾಗೂ ದಕ್ಷಿಣದ ಚಾವಡಿಯು ಭೀರಗಾವ್ ಗೆ ಸೇರಿರುತ್ತದೆ. ಹಾಗೆಯೇ, ಶಿರಡಿಯ ದಕ್ಷಿಣ ಮುಖಿ ಹನುಮಾನ್ ಮಂದಿರದಲ್ಲಿ ಮೊದಲು ಈ ಎರಡೂ ಗ್ರಾಮಗಳನ್ನು ಪ್ರತಿನಿಧಿಸುವ ಸಲುವಾಗಿ ಎರಡು ಪುಟ್ಟ ಹನುಮಂತನ ವಿಗ್ರಹಗಳನ್ನು ಇರಿಸಲಾಗಿತ್ತು. ಆದರೆ ಶ್ರೀ ಸಾಯಿಬಾಬಾ ಸಂಸ್ಥಾನದವರು ವಸ್ತು ಸಂಗ್ರಹಾಲಯವನ್ನು ನಿರ್ಮಾಣ  ಮಾಡಿದ ನಂತರ ಹಾಗೂ  ಹಳೆಯ ಹನುಮಾನ್ ಮಂದಿರವನ್ನು ನವೀಕರಣಗೊಳಿಸಿದಾಗ ಈ ಎರಡು ಪುಟ್ಟ ವಿಗ್ರಹಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಿ ಅದರ ಬದಲಿಗೆ ಆಳೆತ್ತರದ ಒಂದು ಹನುಮಂತನ ವಿಗ್ರಹವನ್ನು ಹೊಸ ಮಂದಿರದಲ್ಲಿ ಪ್ರತಿಷ್ಟಾಪಿಸಿದರು. 


ಹಿಂದಿನ ದಿನಗಳಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಈ ಹೊಸ್ತಿಲಿನ ಮೇಲೆ ತೆಂಗಿನಕಾಯಿಯನ್ನು ಒಡೆದು ಪೂಜೆ ಸಲ್ಲಿಸುತ್ತಿದ್ದರು. ಶಿರಡಿ ನಿವಾಸಿಗಳು ಈ ಹೊಸ್ತಿಲಿಗೆ ಸಕ್ಕರೆಯನ್ನು ಅರ್ಪಣೆ ಮಾಡಿ ಪೂಜಿಸುವ ಪರಿಪಾಠ ಇಟ್ಟುಕೊಂಡಿದ್ದರು. ಅಲ್ಲದೇ ಶಿರಡಿ ಗ್ರಾಮದಲ್ಲಿ ಯಾರಾದರೂ ಮೃತರಾದಾಗ ಅವರ ದೇಹವನ್ನು ಮೆರವಣಿಗೆಯಲ್ಲಿ ತಂದು ಹೊಸ್ತಿಲಿನ ಮೇಲೆ ಇರಿಸಿ ನಂತರ ತೆಗೆದುಕೊಂಡು ಹೋಗಿ ಉತ್ತರಕ್ರಿಯೆಗಳನ್ನು ಮಾಡುತ್ತಿದ್ದರು. ಈ ಹೊಸ್ತಿಲಿನ ಬಗ್ಗೆ ತಿಳಿದಿರುವ ಶಿರಡಿ ಗ್ರಾಮದ ಹಳೆಯ ನಿವಾಸಿಗಳು ಇಂದಿಗೂ ಪವಿತ್ರ ಹಿಂದೂ ಮಾಸಗಳಾದ ಶ್ರಾವಣ ಹಾಗೂ ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಹಿಂದೂ ಪುರಾಣವಾದ ಭಾಗವತ ಮಹಾಪುರಾಣದಲ್ಲಿ ಬರುವ ನರಸಿಂಹಾವತಾರದ ಕಥೆಯನ್ನು ನೋಡಿದಾಗ ನಮಗೆ ಹೊಸ್ತಿಲಿನ ಮಹತ್ವ ಚೆನ್ನಾಗಿ ಮನದಟ್ಟಾಗುತ್ತದೆ. ನರಸಿಂಹಾವತಾರದ ಕಥೆ ಈ ಕೆಳಕಂಡಂತೆ ಇದೆ:

ಭಗವಾನ್ ಮಹಾವಿಷ್ಣುವಿನ ವೈಕುಂಠ ಲೋಕದಲ್ಲಿ ದ್ವಾರಪಾಲಕರಾಗಿದ್ದ ಜಯ ಮತ್ತು ವಿಜಯರು ನಾಲ್ವರು ಕುಮಾರರ ಶಾಪದಿಂದಾಗಿ ಹಿರಣ್ಯಕಶಿಪು ಹಾಗೂ ಹಿರಣ್ಯಾಕ್ಷನೆಂಬ ಹೆಸರಿನಿಂದ ಮುಂದಿನ ಸತ್ಯ ಯುಗದಲ್ಲಿ ದಕ್ಷ ಪ್ರಜಾಪತಿಯ ಮಗಳಾದ ದಿತಿ ಹಾಗೂ ಕಶ್ಯಪ ಮುನಿಯ ಪುತ್ರರಾಗಿ ಜನ್ಮ ತಾಳುತ್ತಾರೆ ಹಾಗೂ ಹಿರಣ್ಯರೆಂಬ ಹೆಸರಿನಿಂದ ಪ್ರಸಿದ್ಧರಾಗಿರುತ್ತಾರೆ. ಮುಸ್ಸಂಜೆಯ ವೇಳೆಯಲ್ಲಿ ದಿತಿ ಹಾಗೂ ಕಶ್ಯಪ ಮುನಿಯು ರತಿಕ್ರೀಡೆಯಲ್ಲಿ ತೊಡಗಿದ್ದರಿಂದ ಹಾಗೂ ಮುಸ್ಸಂಜೆಯ ಸಮಯ ಅಶುಭವಾದ ಕಾರಣದಿಂದ ಹಿರಣ್ಯಕಶಿಪು ಹಾಗೂ ಹಿರಣ್ಯಾಕ್ಷರು ರಾಕ್ಷಸರಾಗಿ ಜನ್ಮ ತಾಳುತ್ತಾರೆ.

ಕಾಲಾನಂತರದಲ್ಲಿ ವಿಷ್ಣುವು ವರಾಹ ರೂಪವನ್ನು ಧರಿಸಿ ಹಿರಣ್ಯಾಕ್ಷನನ್ನು ಸಂಹಾರ ಮಾಡುತ್ತಾನೆ. ಆ ದಿನದಿಂದ ಹಿರಣ್ಯಕಶಿಪುವು ವಿಷ್ಣುವನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ. ಆದುದರಿಂದ ಹೇಗಾದರೂ ಮಾಡಿ ವಿಷ್ಣುವನ್ನು ಸಂಹಾರ ಮಾಡಬೇಕೆಂದು ಆಲೋಚಿಸಿದ ಅವನು ಬ್ರಹ್ಮದೇವನನ್ನು ಕುರಿತು ತಪಸ್ಸನ್ನು ಆಚರಿಸಿದ ಪಕ್ಷದಲ್ಲಿ ಇತರ ರಕ್ಕಸರಿಗೆ ವರ ನೀಡಿದಂತೆ ತನಗೂ ಬ್ರಹ್ಮದೇವನು ವರ ನೀಡಬಹುದೆಂದು ಯೋಚಿಸುತ್ತಾನೆ. ಹಿರಣ್ಯಕಶಿಪುವಿನ ತಪಸ್ಸಿನಿಂದ ಬ್ರಹ್ಮದೇವನು ಸುಪ್ರೀತನಾಗುತ್ತಾನೆ ಹಾಗೂ ಅವನ ಮುಂದೆ ಪ್ರತ್ಯಕ್ಷನಾಗಿ ಅವನಿಗಿಷ್ಟವಾದ ವರವನ್ನು ಬೇಡಿಕೊಳ್ಳುವಂತೆ ಹೇಳುತ್ತಾನೆ. ಆಗ ಹಿರಣ್ಯಕಶಿಪುವು ತನಗೆ ಅಮರತ್ವವನ್ನು ದಯಪಾಲಿಸುವಂತೆ  ಬ್ರಹ್ಮನನ್ನು ಬೇಡಿಕೊಳ್ಳುತ್ತಾನೆ. ಆದರೆ ಬ್ರಹ್ಮದೇವನು ಅದಕ್ಕೆ ಒಪ್ಪುವುದಿಲ್ಲ. ಆಗ ಹಿರಣ್ಯಕಶಿಪುವು ಬ್ರಹ್ಮನನ್ನು  ಈ ಕೆಳಗಿನಂತೆ ಯಾಚಿಸುತ್ತಾನೆ.

"ಎಲೈ ದೇವನೇ, ನೀನು ಸೃಷ್ಟಿ ಮಾಡಿದ ಯಾವ ಜೀವಿಯಿಂದಲೂ ನನಗೆ ಮರಣ ಬರದಂತೆ ವರವನ್ನು ದಯಪಾಲಿಸು. ನಾನು ಯಾವುದೇ ಮನೆಯ ಒಳಗೆ ಅಥವಾ ಹೊರಗೆ ಸಾಯಬಾರದು. ಬೆಳಗಿನ ಸಮಯ ಅಥವಾ ರಾತ್ರಿಯ ಸಮಯದಲ್ಲಿ ಸಾಯಬಾರದು. ನೆಲದಲ್ಲಿ ಅಥವಾ ಆಕಾಶದಲ್ಲಿ ಸಾಯಬಾರದು. ನೀನು ಸೃಷ್ಟಿ ಮಾಡಿದ ಯಾವ ಮನುಶ್ಯರಿಂದಲೋ, ಆಯುಧದಿಂದಲೂ ಅಥವಾ ಪ್ರಾಣಿಯಿಂದಲೂ  ಸಾಯಬಾರದು. ಜೀವಂತವಿರುವ ಅಥವಾ ಜೀವವಿಲ್ಲದಿರುವ ಯಾವುದರಿಂದಲೂ ನನಗೆ ಮರಣ ಸಂಭವಿಸಬಾರದು. ಯಾವ ದೇವತೆಗಳಿಂದಲೂ ಅಥವಾ ರಾಕ್ಷಸರಿಂದಲೂ ಅಥವಾ ಭೂಮಿಯೊಳಗೆ ವಾಸಿಸುವ ಹಾವು ಮತ್ತು ಇತರ ಯಾವುದೇ ಪ್ರಾಣಿಗಳಿಂದಲೂ ಸಾಯಬಾರದು.  ನನಗೆ ಯಾರೂ ಶತ್ರುಗಳಿರಬಾರದು. ಈ ಭೂಮಂಡಲದ ಮೇಲೆ ಜೀವಿಸಿರುವ ಎಲ್ಲರಿಗೂ ಹಾಗೂ ಎಲ್ಲಾ  ದೇವತೆಗಳಿಗೂ ನಾನೇ ನಾಯಕನಾಗುವಂತೆ ಅನುಗ್ರಹಿಸು. ಅಲ್ಲದೇ, ದೀರ್ಘಕಾಲದವರೆಗೆ ನಾನು  ತಪಸ್ಸು ಹಾಗೂ ಯೋಗವನ್ನಾಚರಿಸಿ ಗಳಿಸಿರುವ ಎಲ್ಲಾ ಅತೀಂದ್ರಿಯ ಶಕ್ತಿಗಳೂ ಯಾವುದೇ ಸಮಯದಲ್ಲೂ ವ್ಯಯವಾಗದಂತೆ ವರವನ್ನು ನೀಡು" ಎಂದು ಕೋರಿಕೊಂಡನು.

ಹಿರಣ್ಯಕಶಿಪುವು ಈ ರೀತಿ ತಪಸ್ಸನ್ನಾಚರಿಸುತ್ತಿರಬೇಕಾದರೆ ಅದೇ ಅವಕಾಶಕ್ಕೆ ಬಹಳ ದಿನಗಳಿಂದ ಕಾಯುತ್ತಿದ್ದ ಇಂದ್ರ ಹಾಗೂ ಮತ್ತಿತರ ದೇವತೆಗಳು ಅವನ ಅರಮನೆಗೆ ಮುತ್ತಿಗೆ ಹಾಕುತ್ತಾರೆ.  ಆ ಸಮಯದಲ್ಲಿ ಅಲ್ಲಿಗೆ ಬಂದ ಮಹರ್ಷಿ ನಾರದರು ಯಾವ ತಪ್ಪನ್ನು ಮಾಡದ ಹಿರಣ್ಯಕಶಿಪುವಿನ ಧರ್ಮಪತ್ನಿಯಾದ ಕಯಾದುವನ್ನು ರಕ್ಷಿಸಬೇಕೆಂದು ಮನಸ್ಸು ಮಾಡಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ನಾರದರ ಆರೈಕೆಯಲ್ಲಿರುವ ಸಮಯದಲ್ಲಿ ಆಕೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನಿಗೆ ತಾಯಿಯ ಗರ್ಭದಲ್ಲಿರುವ ಸಮಯದಲ್ಲಿಯೇ ನಾರದರು ಕಾಲ ಕಾಲಕ್ಕೆ ದಿವ್ಯ ಸಂದೇಶಗಳನ್ನು ರವಾನಿಸುತ್ತಾರೆ. ಹಾಗಾಗಿ, ಮುಂದೆ ಪ್ರಹ್ಲಾದನು ಭಗವಾನ್ ನಾರಾಯಣನ ಅನನ್ಯ ಭಕ್ತನಾಗಿ ರೂಪುಗೊಳ್ಳುತ್ತಾನೆ. ಇದರಿಂದ ತಂದೆಯಾದ ಹಿರಣ್ಯಕಶಿಪುವಿಗೆ ಬಹಳವೇ ಕೋಪ ಉಕ್ಕಿ ಬರುತ್ತದೆ.

ಕೋಪದಿಂದ ಕೆಂಡಮಂಡಲವಾದ ಹಿರಣ್ಯಕಶಿಪುವು ತನ್ನ ಮಗನಾದ ಪ್ರಹ್ಲಾದನನ್ನೇ ಹಲವಾರು ಬಾರಿ ಕೊಲ್ಲಿಸಲು ನೋಡುತ್ತಾನೆ. ಆದರೆ ಪ್ರಹ್ಲಾದನಿಗೆ ತೊಂದರೆಯಾದಾಗಲೆಲ್ಲಾ ವಿಷ್ಣುವು ಅವನನ್ನು ರಕ್ಷಿಸುತ್ತಾ ಹೋಗುತ್ತಾನೆ. ಒಮ್ಮೆ ಹಿರಣ್ಯಕಶಿಪುವು ತನ್ನನ್ನು ಸರ್ವಶಕ್ತ ಭಗವಂತನೆಂದು ಅಂಗೀಕರಿಸುವಂತೆ ಪ್ರಹ್ಲಾದನಿಗೆ ಆಜ್ಞೆ ಮಾಡಲು ಅವನು ಅದಕ್ಕೆ ಒಪ್ಪದೇ ಭಗವಾನ್ ಮಹಾವಿಷ್ಣುವೇ  ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿಯಾದ ಭಗವಂತನೆಂದು ನುಡಿಯುತ್ತಾನೆ. ಆಗ ಹಿರಣ್ಯಕಶಿಪುವು ಒಂದು ಕಂಭದ ಕಡೆಗೆ ತನ್ನ ಕೈ ತೋರಿಸಿ ವಿಷ್ಣುವು ಆ ಕಂಭದಲ್ಲಿ ಇರುವನೇ ಎಂದು ತನ್ನ ಮಗನನ್ನು ಪ್ರಶ್ನಿಸಿದನು. ಅದಕ್ಕೆ ಪ್ರಹ್ಲಾದನು ಭಗವಾನ್ ನಾರಾಯಣನು ಆ ಕಂಭದಲ್ಲಿಯೂ ಇರುವನೆಂದು ಬಲು ಧೃಢವಾಗಿ ಉತ್ತರಿಸಿದನು. ಪ್ರಹ್ಲಾದನ ಈ ಉತ್ತರದಿಂದ ಕುಪಿತನಾದ ಹಿರಣ್ಯಕಶಿಪುವು ಆ ಕಂಭಕ್ಕೆ ತನ್ನ ಗದೆಯಿಂದ ಬಲವಾಗಿ ಹೊಡೆಯುತ್ತಾನೆ.  ಆಗ ಭಯಂಕರವಾದ ಸದ್ದಿನೊಂದಿಗೆ ಆ ಕಂಭದಿಂದ ಭಗವಾನ್ ಮಹಾವಿಷ್ಣುವು ನರಸಿಂಹನ ರೂಪದಲ್ಲಿ ಹೊರಬಂದು ಹಿರಣ್ಯಕಶಿಪುವಿನ ಮೇಲೆರಗುತ್ತಾನೆ. ಬ್ರಹ್ಮ ದೇವನು ನೀಡಿದ ವರಕ್ಕೆ ಅಪಚಾರವಾಗಬಾರದೆಂಬ ಕಾರಣದಿಂದ ವಿಷ್ಣುವು ಮನುಷ್ಯನೂ  ಅಲ್ಲದೇ, ಪ್ರಾಣಿಯೂ ಅಲ್ಲದೇ ಅವೆರಡರ ಸಮ್ಮಿಶ್ರಣದ ರೂಪವಾದ ನರಸಿಂಹನ ರೂಪದಲ್ಲಿ ಬರುತ್ತಾನೆ. ಆಗ ಹಗಲು ಅಥವಾ ರಾತ್ರಿಯಾಗಿರದೇ ಮುಸ್ಸಂಜೆಯ ಸಮಯವಾಗಿರುತ್ತದೆ. ಹಿರಣ್ಯಕಶಿಪುವಿನ ಅರಮನೆಯ ಒಳಗೆ ಅಥವಾ ಹೊರಗೆ ಆಗಿರದೇ ಬದಲಿಗೆ ಅವನ ಅರಮನೆಯ ಹೊಸ್ತಿಲಿನ ಮೇಲೆ ಅಡ್ಡಲಾಗಿ ಕುಳಿತುಕೊಂಡು ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ತನ್ನ ಬಲವಾದ ಉಗುರುಗಳನ್ನೇ ಆಯುಧವನ್ನಾಗಿ ಬಳಸಿ ಅವನನ್ನು ಸಂಹರಿಸುತ್ತಾನೆ. ಹಿರಣ್ಯಕಶಿಪುವಿನ ಸಂಹಾರವಾದ ಮೇಲೂ  ನರಸಿಂಹ ಶಾಂತನಾಗುವುದಿಲ್ಲ. ಅಲ್ಲದೇ ಅವನ ಉಗುರುಗಳು ಬಹಳ ಉರಿಯುತ್ತಿರುತ್ತವೆ. ಆಗ ವಿಷ್ಣುವಿನ ಧರ್ಮಪತ್ನಿಯಾದ ಮಹಾಲಕ್ಷ್ಮಿಯು ಅತ್ತಿ (ಔದುಂಬರ) ಮರದ ಹಣ್ಣುಗಳನ್ನು ವಿಷ್ಣುವಿನ ಉರಿಯುತ್ತಿರುವ ಉಗುರುಗಳಿಗೆ ಹಾಕುತ್ತಾಳೆ. ಆಗ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ.

ಮೇಲಿನ ಈ ನರಸಿಂಹವಾತಾರದ ಕಥೆಯು ದುಷ್ಟ ಶಕ್ತಿಗಳ ಮೇಲೆ ಧರ್ಮವು ಸಾಧಿಸಿದ ವಿಜಯವನ್ನು ಸೂಚಿಸುತ್ತದೆ.

ಭಾರತದ ಪುರಾತನ ಗ್ರಂಥಗಳು ಹಾಗೂ ವೇದಗಳನ್ನು ಪರಾಂಬರಿಸಿದಾಗ ಹೊಸ್ತಿಲಿನ ಮಹತ್ವವನ್ನು ಈ ಕೆಳಕಂಡಂತೆ ಅರ್ಥೈಸಬಹುದಾಗಿರುತ್ತದೆ:

ಒಂದು ಮನೆ ಎಂದ ಮೇಲೆ ಹೊಸ್ತಿಲು ಇರಲೇಬೇಕೆಂಬ ನಿಯಮವಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಹೇಳಬೇಕೆಂದರೆ ಹೊಸ್ತಿಲು ಕೇವಲ ಒಂದು ಮನೆ, ಗ್ರಾಮ, ಪಟ್ಟಣ, ಮತ್ತು ದೇವಾಲಯದ   ಮುಖ್ಯದ್ವಾರದ ಗಡಿಯನ್ನು ಸೂಚಿಸುವುದಷ್ಟೇ ಅಲ್ಲದೇ ವಿಷ್ಣುವಿನ ಒಳಗೆ ಅಂತರ್ಗತವಾಗಿರುವ ದೇವಿ  ಮಹಾಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ. ಅದುದರಿಂದ ನಮ್ಮ ದೇಶದ ಪ್ರಾಚೀನ ಸಾಹಿತ್ಯವನ್ನು ಅವಲೋಕನೆ ಮಾಡಿದಾಗ "ಹೊಸ್ತಿಲು" ಪದವನ್ನು ನಪೂಂಸಕ ಲಿಂಗವಾಗಿ ಪರಿಗಣಿಸದೇ ಬದಲಿಗೆ ಪೂಜ್ಯ ಭಾವನೆಯಿಂದ ಸ್ತ್ರೀಲಿಂಗ ಪದವಾದ "ಅವಳು" ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ. ಯಾವುದೇ ಒಂದು ಕಟ್ಟಡ, ವಸತಿ ಸಮುಚ್ಚಯ ಅಥವಾ ಲೇಔಟ್ ನಿರ್ಮಾಣ ಮಾಡುವ ಪ್ರಾರಂಭದಲ್ಲಿಯೇ ಕಲ್ಲನ್ನು ಇರಿಸಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸುವ ಸಂಪ್ರದಾಯ ನಮ್ಮಲ್ಲಿ ಬೆಳೆದುಬಂದಿದೆ. ಆ ಸಂದರ್ಭದಲ್ಲಿ ಎಲ್ಲಾ ದೇವರುಗಳನ್ನು ಮಂತ್ರಪೂರ್ವಕವಾಗಿ  ಆವಾಹನೆ ಮಾಡಿ ಆ ಕಲ್ಲನ್ನೇ ದೇವರೆಂಬ ಭಾವನೆಯಿಂದ  ಭಕ್ತಿಯಿಂದ ಪೂಜಿಸಿ ಕೊನೆಗೆ ಒಂದು ಮರ ಅಥವಾ ಕಲ್ಲಿನ ಹೊಸ್ತಿಲನ್ನು ಇರಿಸುವ ಪರಿಪಾಠ ಇಂದಿಗೂ ಇದೆ. ಈ ಅಡಿಪಾಯದ ಕಲ್ಲನ್ನು "ಆಧಾರ ಇಷ್ಟಿಕ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. (ಇಷ್ಟಿಕ ಎಂದರೆ ಇಟ್ಟಿಗೆ ಅಥವಾ ಕಲ್ಲು ಎಂಬ ಅರ್ಥ ಬರುತ್ತದೆ).  ಈ ಹೊಸ್ತಿಲನ್ನು "ವಾಸುದೇವ" (ವಿಷ್ಣುವಿನ ಒಂದು ರೂಪ) ನೆಂದು ಪರಿಗಣಿಸಲಾಗುತ್ತದೆ. ನಾವು ಈ ವಾಸುದೇವ ಎಂಬ ಪದವನ್ನು ಸೂಕ್ಷ್ಮವಾಗಿ ಅವಲೋಕನೆ ಮಾಡಿ ಪದ ವಿಭಜನೆಯನ್ನು ಮಾಡಿದಾಗ ಪದದ ಮೊದಲ ಭಾಗವು  "ವಾಸ" ಎಂದಾಗುತ್ತದೆ. "ವಾಸ" ಎಂಬ ಪದಕ್ಕೆ "ಇರುವುದು" ಅಥವಾ "ತಂಗುವುದು" ಎಂಬ ಅರ್ಥವಿರುತ್ತದೆ. ಆದ್ದರಿಂದ ವಾಸುದೇವನಲ್ಲಿ ಯಾರು ವಾಸಿಸುತ್ತಾರೆ ಎಂಬ ಪ್ರಶ್ನೆ ನಮ್ಮೆಲ್ಲರ ಮನದಲ್ಲಿ ಉದ್ಭವಿಸುತ್ತದೆ. ವಾಸುದೇವನಲ್ಲಿ ನಮ್ಮ ಪ್ರೀತಿಯ ತಾಯಿ ಹಾಗೂ ವಾಸುದೇವನ ಪತಿಯಾದ "ಮಾ ಭಗವತಿ ಮಹಾಲಕ್ಷ್ಮಿ" ಯನ್ನು ಬಿಟ್ಟು ಬೇರೆ ಯಾರು ವಾಸಿಸಲು ಸಾಧ್ಯ. ಹಾಗಾಗಿ  ಯಾವ ಸ್ಥಳದಲ್ಲಿ ಲಕ್ಷ್ಮಿಯು ವಾಸಿಸುತ್ತಾಳೋ ಆ ಸ್ಥಳದಲ್ಲಿ ಎಲ್ಲಾ ರೀತಿಯ ಸಂಪತ್ತುಗಳೂ ಮನೆ ಮಾಡಿರುತ್ತದೆ. ಇಲ್ಲಿ ನಾವುಗಳು ಗಮನಿಸಬೇಕಾದ ಒಂದು ಅಂಶವೇನೆಂದರೆ ಲಕ್ಷ್ಮಿಯು ಕೇವಲ ಲೌಕಿಕ ವೈಭವವಷ್ಟೇ ಅಲ್ಲದೇ ಬದಲಿಗೆ ಶಾಂತಿ, ನೆಮ್ಮದಿ, ಸಂತೋಷ, ಜ್ಞಾನ, ಕಾಂತಿಯತೆ ಹಾಗೂ ಇನ್ನೂ ಹಲವಾರು ಬಗೆಯ ಆಧ್ಯಾತ್ಮಿಕ ಸಂಪತ್ತನ್ನೂ ಸಹ ಸೂಚಿಸುತ್ತಾಳೆ.  ಹಾಗಾಗಿ ಮಹಾಲಕ್ಷ್ಮಿ ಎಂದರೆ  ಕೇವಲ ಲೌಕಿಕ  ಸಂಪತ್ತನ್ನು ನೀಡುವವಳು ಎಂದು ನಾವು ತಿಳಿದಿದ್ದರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಇಲ್ಲವೆಂದೇ ಹೇಳಬೇಕಾಗುತ್ತದೆ. ಅಂತಹ ಸಂಶಯಾತ್ಮರಿಗೆ ಋಗ್ವೇದ ಸಂಹಿತೆಯಲ್ಲಿ ಮಾತೆ ಲಕ್ಷ್ಮಿಯ ವೈಭವವನ್ನು ಕೊಂಡಾಡುವ "ಶ್ರೀ ಸೂಕ್ತ" ಮಂತ್ರವು ತಕ್ಕ ಉತ್ತರವನ್ನು ನೀಡಿ ಕಣ್ಣು ತೆರೆಯುವಂತೆ ಮಾಡುತ್ತದೆ. ಶ್ರೀ ಸೂಕ್ತ ಮಂತ್ರದಲ್ಲಿ ಮಹಾಲಕ್ಷ್ಮಿಯನ್ನು "ಮೋಕ್ಷ ಲಕ್ಷ್ಮಿ" (ಅಂದರೆ ಮೋಕ್ಷವನ್ನು ನೀಡುವವಳು ಎಂಬ ಅರ್ಥ ಬರುತ್ತದೆ) ಎಂದು ಹೊಗಳಲಾಗಿದೆ. ಹಾಗಾಗಿ, ವಾಸುದೇವನ ಒಳಗೆ ಅನಾದಿ ಕಾಲದಿಂದಲೂ ಮಹಾಲಕ್ಷ್ಮಿಯು ಅಂತರ್ಗತವಾಗಿರುವುದರಿಂದ ಅವನು ನಮಗೆಲ್ಲರಿಗೂ ಶುಭಪ್ರದನಾಗಿದ್ದಾನೆ. ಆದುದರಿಂದ ಲಕ್ಷ್ಮಿಯನ್ನು ಇಲ್ಲಿ ಕೇವಲ ಒಂದು ಹೆಣ್ಣು ದೇವತೆಯೆಂದು ಪರಿಗಣಿಸದೇ  ಬದಲಿಗೆ ಭಗವಾನ್ ವಿಷ್ಣುವಿನ "ಕ್ರಿಯಾತ್ಮಕ ಶಕ್ತಿ" ಎಂದು ಪರಿಗಣಿಸಲಾಗುತ್ತದೆ. 

ನಾವುಗಳು ಶಂಕುಸ್ಥಾಪನೆಯನ್ನು ಮಾಡುವ ಸಂದರ್ಭದಲ್ಲಿ  "ಆಧಾರ ಇಷ್ಟಿಕೆ" ಮತ್ತು ಕಲ್ಲನ್ನು ಇರಿಸುವಾಗ ವೇದ ಮಂತ್ರಗಳಾದ ಪುರುಷ ಸೂಕ್ತ, ಶ್ರೀ ಸೂಕ್ತ, ಭೂ ಸೂಕ್ತ, ಭಾಗ್ಯ ಸೂಕ್ತ, ನೀಳಾ ಸೂಕ್ತವನ್ನು ಉಚ್ಚರಿಸುತ್ತಾ  ಸರ್ವ ಶಕ್ತ ಭಗವಂತನ ಪುರುಷ ರೂಪವನ್ನು "ಪರಮ ಪುರುಷ" ನೆಂದೂ ಹಾಗೂ ಅವನ ಹೃದಯದ ಒಳಗೆ  ಸದಾ ವಾಸವಾಗಿರುವ ಹೆಣ್ಣು ದೇವತೆಯನ್ನು "ಪರಾ ಶಕ್ತಿ"  ಎಂದು  ಸ್ತುತಿಸುವ ಪರಿಪಾಠ ಇಟ್ಟುಕೊಂಡಿದ್ದೇವೆ.  ಹಾಗೆ ನಾವು ಪ್ರಾರ್ಥಿಸುವಾಗ "ಎಲೈ ದೇವನೇ, ಎಲೈ ವಿಶ್ವ ಮಾತೆಯೇ, ನಾವು ನಿಮ್ಮನ್ನು ಒಂದು ಅಧಮ್ಯ ಚೇತನದ ರೂಪದಲ್ಲಿ ನಿನ್ನ ಸಹೋದರಿಯಾದ ಭೂದೇವಿಯ ಗರ್ಭದಲ್ಲಿ ಇರಿಸಲಾಗಿರುವ  ಈ ಹೊಸ್ತಿಲಿನಲ್ಲಿ ಬಂದು ಶಾಶ್ವತವಾಗಿ  ನೆಲೆಸಿ ಈ ಮನೆ, ಮಂದಿರ, ಗ್ರಾಮ ಅಥವಾ ಊರಿಗೆ ಸದಾಕಾಲವೂ ಸುಖ ಶಾಂತಿಯನ್ನು ದಯಪಾಲಿಸು. ಎಲೈ ದೇವಿಯೇ, ನಮ್ಮ ತಂದೆಯಾದ ನಾರಾಯಣನ ಹೃದಯ ಕಮಲದಲ್ಲಿ ವಾಸವಾಗಿರುವವಳೇ, ಈ ಗ್ರಾಮದಲ್ಲಿ ವಾಸಿಸುವ ಸರ್ವರಿಗೂ ಸದಾ ತಡೆಯಿಲ್ಲದ ಸಂತೋಷ, ಶಾಶ್ವತವಾದ ಸಮೃದ್ಧಿ, ದೇವರು ಮತ್ತು ಗುರುವಿನಲ್ಲಿ ಅಪಾರವಾದ ನಂಬಿಕೆ ಹಾಗೂ ಮನಶ್ಯಾಂತಿಯನ್ನು  ಎಂದೆಂದಿಗೂ ಕರುಣಿಸು. ನೀನು ನಮಗೆ ನೀಡುತ್ತಿರುವ ರಕ್ಷಣೆಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ನಾವುಗಳು ಈ ಹೊಸ್ತಿಲಿನಲ್ಲಿ ನೆಲೆಸಿರುವ ನಿನ್ನನ್ನು ಪ್ರತಿನಿತ್ಯವೂ ಅರಿಶಿನ ಹಾಗೂ ಕುಂಕುಮಗಳಿಂದ ಪೂಜಿಸುತ್ತೇವೆ. ಎಲೈ ತಾಯಿಯೇ, ಕ್ಷೀರಸಾಗರ ಸಂಜಾತೆಯೇ, ನಮ್ಮ ಮನದ ಯಾವ ಮೂಲೆಯಲ್ಲಿಯೂ ಯಾವುದೇ ರೀತಿಯ ಋಣಾತ್ಮಕ ಹಾಗೂ ಕೆಟ್ಟ ಆಲೋಚನೆಗಳೂ ಸುಳಿಯದಂತೆ ನೋಡಿಕೋ. ಅಲ್ಲದೇ  ಯಾವ ರೀತಿಯಲ್ಲಿ ನೀನು ನಮ್ಮ ಮನೆಯ  ಬಾಗಿಲಿನಲ್ಲಿರುವ ಹೊಸ್ತಿಲಿನಲ್ಲಿ ದೃಢವಾಗಿ ನಿಂತು ನಿನ್ನ ಮಕ್ಕಳಿಗೆ ಬರುವ ಎಲ್ಲಾ ತೊಂದರೆಗಳನ್ನೂ ನಿವಾರಿಸುತ್ತಿದ್ದೀಯೋ ಅದೇ ರೀತಿ ಆ ಪರಮ ಪುರುಷನ ಪಾದ ಪದ್ಮಗಳಲ್ಲಿ ಸ್ಥಿರವಾಗಿ ಭಕ್ತಿ ನೆಲೆಸುವಂತೆ ಮಾಡು" (ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿ ಹಾಗೂ ಡಾ.ಪಿ.ವಿ.ಶಿವಚರಣ್. ಭಾವಚಿತ್ರ ಕೃಪೆ: ಶ್ರೀ.ನಾಗರಾಜ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment