Wednesday, October 12, 2011

ಸಾಯಿ ಮಹಾಭಕ್ತ  - ಶ್ರೀಧರ ನಾರಾಯಣ ಕರ್ಕರ್  - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಶ್ರೀಧರ ನಾರಾಯಣ ಕರ್ಕರ್  ರವರು ಕಾಯಸ್ತ ಪ್ರಭು ಕುಲಕ್ಕೆ ಸೇರಿದವರಾಗಿದ್ದರು. ಇವರು ಸಚಿವಾಲಯದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ಮುಂಬೈನ ಥಾಣೆಯಲ್ಲಿ ವಾಸ ಮಾಡುತ್ತಿದ್ದರು. 


ಬಾಲ್ಯದಲ್ಲಿ ಇವರ ತಾತನವರ ಮಾರ್ಗದರ್ಶನದಲ್ಲಿ ಬೆಳೆದಿದ್ದರಿಂದ ಧಾರ್ಮಿಕ ರೀತಿ ನೀತಿಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಹೀಗಿರುವಾಗ ಡೆಪ್ಯೂಟಿ ಕಲೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದ ಅಪ್ಪಾ ಕುಲಕರ್ಣಿಯವರು ಇವರಿಗೆ ಸಾಯಿಬಾಬಾರವರ ಚಿತ್ರಪಟವೊಂದನ್ನು ಇವರಿಗೆ ತೋರಿಸಿದರು. ಆ ಚಿತ್ರಪಟವು ಇವರಿಗೆ ಬಹಳ ಹಿಡಿಸಿತು. ಹೀಗೆ ಇವರಿಗೆ ಸಾಯಿಬಾಬಾರವರ ಮೊದಲ ಭೇಟಿಯಾಯಿತು. ಇದಾದ ಕೆಲವೇ ದಿನಗಳಲ್ಲಿ ಇವರಿಗೆ ಹೇಮಾಡಪಂತರ ಮುಖಾಂತರ ಸಾಯಿಬಾಬಾರವರ ಇನ್ನೊಂದು ಚಿತ್ರಪಟ, ಅನೇಕ ಸಾಯಿ ಲೀಲಾ ಮಾಸಪತ್ರಿಕೆಯ ಪ್ರತಿಗಳು ಮತ್ತು ಪವಿತ್ರ ಉಧಿಯ ಪೊಟ್ಟಣ ಒಂದೇ ದಿನ ಬಂದು ಸೇರಿತು. ಆ ದಿನ ಇವರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಮರುದಿನ ಇವರ ದೇಹ ಸ್ಥಿತಿ ಇದ್ದಕಿದ್ದಂತೆ ಸರಿಹೋಯಿತು. ಅಂದಿನಿಂದ ಇವರು ಸಾಯಿಬಾಬಾರವರ ಪೂಜೆಯನ್ನು ಮಾಡಲು ಪ್ರಾರಂಭಿಸಿದರು ಮತ್ತು ಅದು ನಿಯಮಿತವಾಗಿ ನಡೆದುಕೊಂಡು ಬರಲು ಪ್ರಾರಂಭವಾಯಿತು. 


ಇವರಿಗೆ ಸಾಯಿಬಾಬಾರವರಲ್ಲಿ ನಂಬಿಕೆ ಬರಲು ಕಾರಣ ಇವರಿಗೆ ಬಿದ್ದ ಒಂದು ಕನಸಾಗಿತ್ತು. ಅದರ ವಿವರ ಈ ಕೆಳಕಂಡಂತೆ ಇದೆ: 

ಕರ್ಕರ್ ರವರು ಹೇಮಾಡಪಂತರು ನೀಡಿದ ಚಿತ್ರಪಟವನ್ನು ತೆಗೆದುಕೊಂಡು ಅದನ್ನು ಪೂಜಾಗೃಹದಲ್ಲಿ ಇರಿಸಲು ಹೋದರು. ಇವರು ಮೊದಲಿನಿಂದಲೂ ಪೂಜಿಸುತ್ತಿದ್ದ ಅಕ್ಕಲಕೋಟೆ ಮಹಾರಾಜರ ಚಿತ್ರಪಟ ಪೂಜಾಗೃಹದಲ್ಲಿತ್ತು. ಅದರ ಪಕ್ಕದಲ್ಲಿ ಸಾಯಿಬಾಬಾರವರ ಚಿತ್ರಪಟವನ್ನು ಇರಿಸಬೇಕೆಂದು ಅಂದುಕೊಳ್ಳುತ್ತಿರುವಾಗ ಇವರ ಮನಸ್ಸಿನಲ್ಲಿ ಒಂದು ರೀತಿಯ ಸಂಶಯ ಮನೆ ಮಾಡಿಕೊಂಡಿತ್ತು."ಅರೆ, ಈ ಚಿತ್ರಪಟವು ಒಬ್ಬ ಮುಸ್ಲಿಂ ಫಕೀರನದು. ಇದನ್ನು ಹೇಗೆ ಹಿಂದೂ ಸಂತನ ಪಕ್ಕದಲ್ಲಿ ಇರಿಸುವುದು" ಎಂಬ ಜಿಜ್ಞಾಸೆ ಮನದಲ್ಲಿ ಸುಳಿಯಿತು. ಹೀಗೆ ಮನಸ್ಸಿನಲ್ಲಿ ಯೋಚಿಸುತ್ತಾ ಸಾಯಿಬಾಬಾರವರ ಚಿತ್ರಪಟವನ್ನು ಸ್ವಲ್ಪ ದೂರದಲ್ಲಿ ಈ ಚಿತ್ರಪಟಗಳ ಗುಂಪಿನಿಂದ ಬೇರೆಯಾಗಿಯೇ ಇರಿಸಿದರು.


ಅದೇ ದಿನ ರಾತ್ರಿ ಕರ್ಕರ್ ರವರಿಗೆ ಕನಸು ಬಿದ್ದಿತು. ಎಂದಿನಂತೆ ಬೆಳಗಿನ ಜಾವ ಎದ್ದ ಕರ್ಕರ್ ರವರು ರಾತ್ರಿ ಬಿದ್ದ ಕನಸನ್ನು ಮರೆತು ಬಿಟ್ಟಿದ್ದರು.ಆದರೆ, ಇವರು ಪೂಜೆ ಮಾಡಲು ಕುಳಿತುಕೊಂಡಾಗ ಹಿಂದಿನ ರಾತ್ರಿ ಬಿದ್ದ ಕನಸು ನೆನಪಿಗೆ ಬಂದಿತು. ಆ ಕನಸಿನಲ್ಲಿ ಇವರ ಮನೆಯ ವರಾಂಡಕ್ಕೆ ಸಾಯಿಬಾಬಾರವರನ್ನೇ ಹೋಲುತ್ತಿದ್ದ ಒಬ್ಬ ಫಕೀರ ಬಂದರು. ಆ ವರಾಂಡದಲ್ಲಿ ಕರ್ಕರ್ ಮತ್ತು ಅವರ ಸ್ನೇಹಿತರೊಬ್ಬರು ಕುಳಿತಿದ್ದರು. ಆ ಫಕೀರನನ್ನು ಎದ್ದು ಸ್ವಾಗತಿಸುವ ಸಂದರ್ಭದಲ್ಲಿ ಭೇದವನ್ನು ಮನದಲ್ಲಿ ಭೇದಭಾವ ಮಾಡುವ ಇಚ್ಚೆಯನ್ನು ಹೊಂದಿದ್ದರು. ಆಗ ಇವರ ಪಕ್ಕದಲ್ಲಿದ್ದ ಸ್ನೇಹಿತರು "ಇವರು ಅಕ್ಕಲಕೋಟೆ ಮಹಾರಾಜರಿಗಿಂತ ಬೇರೆಯಲ್ಲ" ಎಂದು ಹೇಳಿ ಆ ಫಕೀರನನ್ನು ಸರಿಯಾಗಿ ಸತ್ಕರಿಸುವಂತೆ ಹೇಳಿದರು. ಆ ಕನಸು ಸರಿಯಾದ ಸಮಯಕ್ಕೆ ನೆನಪಾಗಿ ಇವರ ಮನದ ಶಂಕೆಗಳೆಲ್ಲಾ ದೂರವಾಗಿ ದೂರದಲ್ಲಿ ಬೇರೆಯಾಗಿ ಇರಿಸಿದ್ದ ಸಾಯಿಬಾಬಾರವರ ಚಿತ್ರಪಟವನ್ನು ತೆಗೆದು ಅಕ್ಕಲಕೋಟೆ ಮಹಾರಾಜರ ಚಿತ್ರಪಟದ ಪಕ್ಕದಲ್ಲಿ ಇರಿಸಿದ್ದಷ್ಟೇ ಅಲ್ಲದೇ ಅಂದಿನಿಂದ ಸಾಯಿಬಾಬಾರವರನ್ನು  ಕೂಡ ಪೂಜಿಸಲು ಪ್ರಾರಂಭಿಸಿದರು.

ಕಾಲ ಉರುಳಿದಂತೆ ಸಾಯಿಬಾಬಾರವರ ದಯೆಯಿಂದ ಇವರು ಮತ್ತು ಇವರ ಮನೆಯವರಲ್ಲೆಲ್ಲಾ ಸಾಯಿಬಾಬಾರವರ ಬಗ್ಗೆ ಭಕ್ತಿ ಭಾವ ಹೆಚ್ಚಾಯಿತು. ಇವರು ಸಾಯಿಬಾಬಾರವರ ಬಗ್ಗೆ ಬರೆಯಲಾದ ಎಲ್ಲಾ ಗ್ರಂಥಗಳನ್ನೂ ಓದಿ ಮುಗಿಸಿದರು. ಇವರ ಹೆಂಡತಿ ಮತ್ತು ಮಕ್ಕಳು ಕೂಡ ಸಾಯಿಬಾಬಾರವರ ಪೂಜೆಯನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದರು. ಇವರ ಮನೆಯವರುಗಳ ಶ್ರದ್ಧೆ ಎಷ್ಟರ ಮಟ್ಟಿಗೆ ಇತ್ತೆಂದರೆ ಕರ್ಕರ್ ರವರು ಸಾಯಿಬಾಬಾರವರ ಪೂಜೆ ಮತ್ತು ಆರತಿಯನ್ನು ಮಾಡಲು ಸಾಧ್ಯವಾಗದಿದ್ದ ದಿನಗಳಲ್ಲಿ, ಮನಯಲ್ಲಿದ್ದ ಯಾರಾದರೂ ಒಬ್ಬರು ಈ ಕೆಲಸವನ್ನು ನಿರ್ವಹಿಸಲು ಸದಾ ಸಿದ್ಧರಾಗಿರುತ್ತಿದ್ದರು.

ಪ್ರಾರಂಭದ ದಿನಗಳಲ್ಲಿ ಇವರ ತಾಯಿಯವರು ಅನೇಕ ವರ್ಷಗಳ ಕಾಲ ಇವರ ಜೊತೆಯಲ್ಲಿ ವಾಸಿಸದೇ ಬೇರೆಯಾಗಿ ವಾಸ ಮಾಡುತ್ತಿದ್ದರು. ಆದರೆ ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ಇವರು ತಾಯಿಯವರು ಇವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಮೊದಲ ಕೆಲವು ದಿನಗಳು,  ಕರ್ಕರ್ ರವರು ಸಾಯಿಬಾಬಾರವರನ್ನು ಪೂಜೆ ಮಾಡುವುದು ಮತ್ತು ಆಗಾಗ್ಗೆ ಶಿರಡಿಗೆ ಹೋಗಿ ಬರುವುದು ಇವರ ತಾಯಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಏಕೆಂದರೆ, ಅವರ ಮನಸ್ಸಿನಲ್ಲಿ ಸಾಯಿಬಾಬಾರವರು ಒಬ್ಬ ಮುಸ್ಲಿಂ ಫಕೀರ ಎಂಬ ಭಾವನೆ ಇತ್ತು. ಆದರೆ, ಕರ್ಕರ್ ಮತ್ತು ಅವರ ತಾಯಿಯವರ ಮೇಲೆ ಸಾಯಿಬಾಬಾರವರು ಅತ್ಯಂತ ಗಮನಾರ್ಹವಾದ ಪ್ರೀತಿಯನ್ನು ಹೊಂದಿದ್ದರು. ಕಾಲ ಕಳೆದಂತೆ ಕರ್ಕರ್ ರವರ ತಾಯಿಯವರಿಗೆ ಸಾಯಿಬಾಬಾರವರ ಬಗ್ಗೆ ಇದ್ದ ಅಭಿಪ್ರಾಯ ಬದಲಾಯಿತು. ಕರ್ಕರ್ ರವರು ಶಿರಡಿಗೆ ಹೋದಾಗಲೆಲ್ಲಾ ಇವರ ತಾಯಿಯವರನ್ನು ಮಾತ್ರ ಬಿಟ್ಟು ಉಳಿದ ಎಲ್ಲರನ್ನು ಕರೆದುಕೊಂಡು ಹೋಗುವ ಪರಿಪಾಠವನ್ನು ಇಟ್ಟುಕೊಂಡಿದ್ದರು.

ಹೀಗೆ 2-3 ವರ್ಷಗಳು ಕಳೆದ ಮೇಲೆ 1933 ರಲ್ಲಿ ಕರ್ಕರ್ ರವರ ತಾಯಿಯವರು ಕರ್ಕರ್ ರವರ ಹೆಂಡತಿ ಮತ್ತು ಮಗಳ ಹತ್ತಿರ ತಮಗೆ ಕೂಡ ಶಿರಡಿಗೆ ತೆರಳಿ ಸಾಯಿಬಾಬಾರವರಿಗೆ ಪೂಜೆಯನ್ನು ಸಲ್ಲಿಸಬೇಕೆಂಬ ಆಸೆ ಇರುವುದಾಗಿ ಹೇಳಿಕೊಂಡರು. ತಮ್ಮ ತಾಯಿಯವರ ಮಾತುಗಳನ್ನು ಕೇಳಿ ಕರ್ಕರ್ ರವರಿಗೆ ಅತೀವ ಸಂತೋಷವಾಯಿತು. ತಾಯಿಯವರ ಆಸೆಯಂತೆ ಕರ್ಕರ್ ರವರು ತಾಯಿಯವರನ್ನು ಶಿರಡಿಗೆ ಕರೆದುಕೊಂಡು ಹೋದರು. ಶಿರಡಿಯಲ್ಲಿನ ಸಾಯಿಬಾಬಾರವರ ಎಲ್ಲಾ ಸ್ಥಳಗಳು, ಪೂಜಾ ವಿಧಿಗಳನ್ನು ನೋಡಿ ಕರ್ಕರ್ ರವರ ತಾಯಿಯವರು ತುಂಬಾ ಖುಷಿಯಾದರು. ಶಿರಡಿಯಿಂದ ವಾಪಸಾದ ಸ್ವಲ್ಪ ದಿನಗಳಲ್ಲಿಯೇ ಕರ್ಕರ್ ವರ ಥಾಣೆಯ ನಿವಾಸದಲ್ಲಿ ಅವರ ತಾಯಿ ಕೊನೆಯುಸಿರೆಳೆದರು. ಕರ್ಕರ್ ರವರ ತಾಯಿಯವರ ಮನಸ್ಸಿನ ಭಾವನೆಯನ್ನು ಬದಲಿಸಿ ಕೊನೆಯ ಕಾಲದಲ್ಲಿ ತಮ್ಮ ಸಮಾಧಿಯ ದರ್ಶನವನ್ನು ನೀಡಿದುದು ಸಾಯಿಬಾಬಾರವರ ದಯೆಯಲ್ಲದೆ ಮತ್ತಿನ್ನೇನೆಂದು ಹೇಳಬೇಕು?

ಹೀಗೆ ಹೇಳುತ್ತಾ ಹೋದರೆ, ಸಾಯಿಬಾಬಾರವರು ಕರ್ಕರ್ ಮತ್ತು ಅವರ ಕುಟುಂಬದವರ ಮೇಲೆ ತೋರಿದ ದಯೆಯನ್ನು ವಿವರಿಸುವ ಇನ್ನು ಅನೇಕ ಘಟನೆಗಳನ್ನು ಹೇಳುತ್ತಾ ಹೋಗಬಹುದು. ಆದರೆ, ಅದರ ಅವಶ್ಯಕತೆ ಕಂಡುಬರುವುದಿಲ್ಲ. ಒಟ್ಟಿನಲ್ಲಿ ಕರ್ಕರ್ ರವರು,  ಸಾಯಿಬಾಬಾರವರು ತಮ್ಮ ಮತ್ತು ತಮ್ಮ ಮನೆಯವರೆಲ್ಲರಿಗೂ ಪ್ರತಿಯೊಂದು ವಿಷಯದಲ್ಲೂ ಮಾರ್ಗದರ್ಶನ ನೀಡುತ್ತಾ, ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಸದಾಕಾಲ ಕಾಪಾಡುತ್ತಿದ್ದರು ಎಂದು ಹೇಳುತ್ತಾರೆ.

ಕರ್ಕರ್ ರವರ ಎರಡನೇಯ ಮಗ ಗೋವಿಂದ್ ಗೆ ಶಿರಡಿಗೆ ಹೋಗಿ ಸಾಯಿಬಾಬಾರವರ ಸಮಾಧಿ ಮತ್ತು ದ್ವಾರಕಾಮಾಯಿಯ ದರ್ಶನವನ್ನು ಮಾಡಬೇಕೆಂಬ ಹಂಬಲ ಬಹಳ ದಿನಗಳಿಂದ ಇತ್ತು. 1934 ನೇ ಇಸವಿಯ ರಾಮನವಮಿಯ ಉತ್ಸವಕ್ಕೆ ಕರ್ಕರ್ ರವರ ಸ್ನೇಹಿತರಾದ ಶ್ರೀ.ಜಿ.ಬಿ.ದಾತಾರ್ ಮತ್ತು ಅವರ ಕುಟುಂಬದವರು ಶಿರಡಿಗೆ ಹೊರಟಿದ್ದರು. ಅವರ ಜೊತೆಯಲ್ಲಿ ಕರ್ಕರ್ ರವರ ಮಗ ಗೋವಿಂದ್ ಕೂಡ ಹೊರಟರು. ದ್ವಾರಕಾಮಾಯಿಗೆ ತೆರಳಿ ಸಾಯಿಬಾಬಾರವರ ಅತ್ಯಂತ ಸುಂದರವಾಗಿ ಜಯಕರ್ ರವರು ಬರೆದಿರುವ ತೈಲಚಿತ್ರದ ಬಳಿ ಒಬ್ಬರೇ ನಿಂತುಕೊಂಡಿದ್ದರು.  ಸಾಯಿಬಾಬಾರವರ ಆ ಚಿತ್ರಪಟವನ್ನೇ ದಿಟ್ಟಿಸಿ ನೋಡುತ್ತಾ ಗೋವಿಂದ್ ರವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು. ಆಗ ಇವರಿಗೆ "ನನ್ನನ್ನು ನೋಡಲು ನೀನು ಬಂದೆಯಾ" ಎಂದು ಯಾರೋ ಕೇಳಿದ ಹಾಗೆ ಆಯಿತು. ಕಣ್ಣು ತೆರೆದು ನೋಡಲು ಪಕ್ಕದಲ್ಲಿ ಯಾರೂ ಇರಲಿಲ್ಲ. ಗೋವಿಂದ್ ಒಬ್ಬರೇ ಇದ್ದರು. ಪಕ್ಕದಲ್ಲಿ ಯಾರು ಇರದಿದ್ದರಿಂದ ಹಾಗೆ ನುಡಿಯಲು ಬಂದವರು ಬಾಬಾರವರಲ್ಲದೇ ಮತ್ತಿನ್ನಾರು ಬಂದಿರಬೇಕು?


ಇದಾದ 8 ವರ್ಷಗಳ ನಂತರ ಕರ್ಕರ್ ರವರ ಮಗಳು ಗರ್ಭಿಣಿಯಾದ್ದರಿಂದ ಹೆರಿಗೆಗೆ ಅವಳನ್ನು ಥಾಣೆಯಿಂದ ಸುಮಾರು 2-3 ಮೈಲು ದೂರದಲ್ಲಿರುವ ಕಾರ್ ಇನ್ನುವ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋದರು. ಹೆರಿಗೆಯ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಇರಲಿಲ್ಲ. ಕರ್ಕರ್ ರವರ ಬಂಧುಗಳು ಥಾಣೆಯಲ್ಲಿ ವ್ಯವಸ್ಥೆ ಚೆನ್ನಾಗಿದ್ದರೂ ಈ ಕುಗ್ರಾಮಕ್ಕೆ ಮಗಳನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದಕ್ಕೆ ಕರ್ಕರ್ ರವರನ್ನು ಚೆನ್ನಾಗಿ ನಿಂದಿಸಿದರು. ಇವರ ಹೆಂಡತಿ ಬಂದು ಹೆರಿಗೆಗೆ ಬಹಳ ತೊಂದರೆ ಆಗುತ್ತಿದೆ ಎಂದು ತಿಳಿಸಿದರು. ಗರ್ಭದಲ್ಲಿಯೇ ಮಗುವು ಸತ್ತು ಹೋಗಿತ್ತು ಮತ್ತು ಅದು ಹೊರಗಡೆ ಬರದೆ ಹೆರಿಗೆ ಕಷ್ಟವಾಗುತ್ತಿತ್ತು. ಇದನ್ನು ಕಂಡು ಕರ್ಕರ್ ರವರ ಮಗಳು ಮತ್ತು ಅವರ ಮನೆಯವರೆಲ್ಲರೂ ಬಹಳ ಭಯಭೀತರಾದರು. ಆಗ ಮಧ್ಯರಾತ್ರಿ ಎರಡು ಘಂಟೆಯ ಸಮಯ. ಕರ್ಕರ್ ರವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ಕರ್ಕರ್ ರವರಿಗೆ ತಮ್ಮ ಬಳಿ ಸಾಯಿಬಾಬಾರವರ ಉಧಿ ಇರುವುದು ನೆನಪಿಗೆ ಬಂದಿತು. ಇವರ ಹೆಂಡತಿಯು ಆ ಉಧಿಯನ್ನು ತೆಗೆದುಕೊಂಡು ಮಗಳ ಹಣೆಯ ಮೇಲೆ ಹಚ್ಚಿದರು. ಹಾಗೆ ಉಧಿಯನ್ನು ಹಚ್ಚಿದ ಕೇವಲ 30  ನಿಮಿಷಗಲ್ಲಿ ಮಗುವು ಹೊರಗಡೆ ಬಂದಿತು. ಮಗುವು ಸತ್ತು ಹೋಗಿತ್ತು. ಆದರೆ ಕರ್ಕರ್ ರವರ ಮಗಳ ಪ್ರಾಣವನ್ನು ಸಾಯಿಬಾಬಾರವರು ಉಳಿಸಿದರು. ಬೆಳಿಗ್ಗೆ ನೋಡಲು ಬಂದ ಡಾಕ್ಟರ್ ರವರಿಗೆ ಮಗುವು ಹೇಗೆ ಗರ್ಭದಿಂದ ಹೊರಗೆ ಬಂದಿತು ಎಂದು ಆಶ್ಚರ್ಯವಾಯಿತು. ಕೇವಲ ಉಧಿಯ ಸಹಾಯದಿಂದ ಮತ್ತು ಯಾವ ನುರಿತ ಪ್ರಸೂತಿ ತಜ್ಞರ ಸಹಾಯವೂ ಇಲ್ಲದೆ ಮಗುವು ಹೊರಗೆ ಬಂದಿತು ಎಂದು ಕೇಳಿ ಡಾಕ್ಟರ್ ಬಹಳ ಅಚ್ಚರಿಗೊಂಡರು. 


ಕರ್ಕರ್ ರವರ ಮನೆಯ ಎಲ್ಲಾ ಹೆಣ್ಣು ಮಕ್ಕಳು ಸಾಯಿಬಾಬಾರವರ ಸೇವೆಯಲ್ಲಿ ತಮ್ಮನ್ನು ಅನವರತವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಪ್ರತಿನಿತ್ಯ ಸಾಯಿಬಾಬಾರವರಿಗೆ ಆರತಿಯನ್ನು ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. 


ಕರ್ಕರ್ ರವರ ಮಗಳ ಹೆರಿಗೆಗೆ ಒಂದು ವಾರಕ್ಕೆ ಮುಂಚೆ ಕರ್ಕರ್ ರವರ ಮಗನ ಕನಸಿನಲ್ಲಿ ಸಾಯಿಬಾಬಾರವರು ಬಂದು "ನಾನಾ, ಅವನು ಎಲ್ಲಿ? ಅವನು ಏಕೆ ಗಾಭರಿಗೊಂಡಿದ್ದಾನೆ? ನನ್ನ ಉಧಿಯನ್ನು ಹಚ್ಚಲು ಹೇಳು? ಎಲ್ಲವು ಸರಿಯಾಗುತ್ತದೆ" ಎಂದು ಹೇಳಿದ್ದರು. ಈ ವಿಷಯವನ್ನು ಕರ್ಕರ್ ರವರ ಮಗನು ತಂದೆಗೆ ತಿಳಿಸಿದ್ದನು. ಆದರೆ, ಹೆರಿಗೆಯ ಸಮಯದಲ್ಲಿ ಈ ವಿಷಯ ಕರ್ಕರ್ ರವರ ನೆನಪಿಗೆ ಬರಲಿಲ್ಲ. ಆದರೆ, ತಮ್ಮ ಮಗಳ ಹಣೆಗೆ ಉಧಿಯನ್ನು ಹಚ್ಚಬೇಕೆಂದು ಮಾತ್ರ ಹೊಳೆಯಿತು. ಸ್ವಲ್ಪ ದಿನಗಳು ಕಳೆದ ಮೇಲೆ ಹಳೆಯ ವಿಷಯಗಳನ್ನು ಮೆಲುಕು ಹಾಕುತ್ತಿರುವಾಗ, ತಮ್ಮ ಮಗನು ತನಗೆ ಬಿದ್ದ ಕನಸನ್ನು ತಿಳಿಸಿದ್ದು ಜ್ಞಾಪಕಕ್ಕೆ ಬಂದಿತು. ಸಾಯಿಬಾಬಾರವರು ಮೊದಲೇ ಎಚ್ಚರಿಕೆ ನೀಡಿದ್ದರೂ ಸಮಯಕ್ಕೆ ಅದು ಕರ್ಕರ್ ರವರ ಜ್ಞಾಪಕಕ್ಕೆ ಬರಲಿಲ್ಲ. ಆದರೆ, ತಮ್ಮ ಅರಿವಿಲ್ಲದೆ ಸಾಯಿಬಾಬಾರವರ ಉಧಿಯನ್ನು ಮಗಳ ಹಣೆಗೆ ಹಚ್ಚಿದ್ದು ಸಾಯಿಬಾಬಾರವರ ಪವಾಡವಲ್ಲದೆ ಮತ್ತಿನ್ನೇನೆಂದು ಹೇಳಬೇಕು?


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment