Tuesday, July 5, 2011

ಪ್ರಪಂಚದ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರ - ಭಿವಪುರಿ  ಶ್ರೀ ಸಾಯಿನಾಥ ಮಂದಿರ - ಕೃಪೆ: ಸಾಯಿ ಅಮೃತಧಾರಾ .ಕಾಂ  

ಭಿವಪುರಿಯು ಹಿಂದಿನ ಕುಲಬ ಮತ್ತು ಈಗಿನ ರಾಯಘಡ ಜಿಲ್ಲೆಯಲ್ಲಿರುವ ಅತ್ಯಂತ ಸಣ್ಣ ಗ್ರಾಮವಾಗಿರುತ್ತದೆ. ಭಿವಪುರಿ ರಸ್ತೆಯು ಮುಂಬೈ-ಪುಣೆ ರೈಲು ಮಾರ್ಗದಲ್ಲಿ ಸಿಗುವ ಒಂದು ರೈಲ್ವೇ ನಿಲ್ದಾಣವಾಗಿದ್ದು ಈ ನಿಲ್ದಾಣವು ಖರ್ಜತ್ ರೈಲ್ವೇ ನಿಲ್ದಾಣ ಮತ್ತು ನೆರಾಲ್ ರೈಲ್ವೇ ನಿಲ್ದಾಣದ ನಡುವೆ ಇರುತ್ತದೆ. ಭಿವಪುರಿ ಶ್ರೀ ಸಾಯಿನಾಥ ಮಂದಿರವು ಭಿವಪುರಿ ರಸ್ತೆ ರೈಲು ನಿಲ್ದಾಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುತ್ತದೆ ಮತ್ತು ಕರ್ಜತ್ ರೈಲ್ವೇ ನಿಲ್ದಾಣದಿಂದ 13 ಕಿಲೋಮೀಟರ್ ದೂರದಲ್ಲಿರುತ್ತದೆ.


ಮುಂಬೈನಿಂದ ಪುಣೆಗೆ ಹೋಗುವ ಮಧ್ಯ ರೈಲ್ವೇ ಮಾರ್ಗದಲ್ಲಿ ಭಿವಪುರಿ ರಸ್ತೆ ಎಂಬ ರೈಲ್ವೇ ನಿಲ್ದಾಣವು ಖರಟ್ ಗಿಂದ ಮುಂಚಿತವಾಗಿ ಸಿಗುವ ಒಂದು ರೈಲು ನಿಲ್ದಾಣವಾಗಿರುತ್ತದೆ. ಈ ರೈಲ್ವೇ ನಿಲ್ದಾಣದಲ್ಲಿ ಇಳಿದು ಪೂರ್ವಕ್ಕೆ ತಿರುಗಿ ನೋಡಿದರೆ ನಿಮಗೆ ಭಿವಪುರಿ ಶ್ರೀ ಸಾಯಿನಾಥ ಮಂದಿರದ ರಾಜಗೋಪುರ ಕಣ್ಣಿಗೆ ಕಾಣುತ್ತದೆ. ಈ ದೇವಾಲಯ ತಲುಪಲು ಹೊಲಗಳ ಮಧ್ಯೆ ಹಾದು ಹೋಗಬೇಕಾಗಿದ್ದು ಕೇವಲ ಐದರಿಂದ ಏಳು ನಿಮಿಷಗಳಲ್ಲಿ ದೇವಾಲಯವನ್ನು ಸೇರಬಹುದು. 



ಈ ದೇವಾಲಯವನ್ನು 1916 ನೇ ಇಸವಿಯಲ್ಲಿ ಸಾಯಿಬಾಬಾರವರು ಜೀವಂತವಾಗಿ ಇದ್ದಾಗ ಅವರ ಆದೇಶದಂತೆ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರು ನಿರ್ಮಿಸಿರುತ್ತಾರೆ. ಆದುದರಿಂದ ಈ ಮಂದಿರವು ಪ್ರಪಂಚದ ಪ್ರಪ್ರಥಮ ಸಾಯಿಬಾಬಾ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಆದುದರಿಂದ ಭಿವಪುರಿಯು ಪ್ರಪಂಚದ ಪ್ರತಿಯೊಬ್ಬ ಸಾಯಿಭಕ್ತರೂ ಕೂಡ ನೋಡಲೇಬೇಕಾದ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುತ್ತದೆ. ಈ ದೇವಾಲಯದ ಇತಿಹಾಸವು ಬಹಳ ಸ್ವಾರಸ್ಯಕರವಾಗಿದ್ದು ಇದನ್ನು ಸಾಯಿಭಕ್ತರು ತಿಳಿದುಕೊಂಡರೆ ಹೇಗೆ ಶಿರಡಿ ಸಾಯಿಬಾಬಾರವರು ತಮ್ಮ ಭಕ್ತರ ಮನವನ್ನು ಪರಿವರ್ತನೆ ಮಾಡಿ ಅವರಲ್ಲಿ ಭಕ್ತಿಯನ್ನು ತುಂಬುತ್ತಿದ್ದರು ಎಂದು ಅರ್ಥವಾಗುತ್ತದೆ.   

ಶ್ರೀ.ಕೇಶವ ರಾವ್ ಪ್ರಧಾನ್ ರವರು ಭಿವಪುರಿ ಗ್ರಾಮದವರು. ಈ ಗ್ರಾಮದಲ್ಲಿ ಇವರು ಒಂದು ಮನೆ ಮತ್ತು ಸ್ವಲ್ಪ ಜಮೀನನ್ನು ಹೊಂದಿದ್ದರು. ಅಲ್ಲದೆ, ತಮ್ಮ ದಿನ ನಿತ್ಯದ ಜೀವನಕ್ಕಾಗಿ ಇವರು ಒಂದು ಹಣಕಾಸು ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರ ಮನೆಯು ಇವರ ಜಮೀನಿನ ಪಕ್ಕದಲ್ಲೇ ಇದ್ದು ಗ್ರಾಮದ ಹೊರಗಡೆ ನಿರ್ಜನ ಪ್ರದೇಶದಲ್ಲಿ ಇತ್ತು. ಇವರಿದ್ದ ಜಾಗವು ಬಹಳ ಪ್ರಶಾಂತವಾಗಿದ್ದು ಮನೆಯ ಸುತ್ತಲೂ ಸುಂದರ ಹೂವುಗಳಿಂದ ಕೂಡಿದ ತೋಟವನ್ನು ಕಾಣಬಹುದಾಗಿತ್ತು. ಇವರಿದ್ದ ಮನೆಯ ಪಕ್ಕದಲ್ಲಿ ಒಂದು ಸಾಯಿಬಾಬಾ ಮಂದಿರವನ್ನು ಬಹಳ ವರ್ಷಗಳಾದ ಮೇಲೆ ಕಟ್ಟಲಾಗಿದೆ. ಅಲ್ಲದೆ, ತುಳಸಿ ಬೃಂದಾವನ, ಒಂದು ಬಾವಿ ಮತ್ತು ಅನೇಕ ಹಳೆಯದಾದ ಮರಗಳನ್ನು ಕೂಡ ನಾವು ನೋಡಬಹುದು. ಮನೆಯ ಪಕ್ಕದಲ್ಲಿದ್ದ ಹೂತೋಟದಲ್ಲಿ ಒಂದು ಹಳೆಯದಾದ ಆಲದ ಮರ, ಒಂದು ಅರಳಿ ಮರ, ಎರಡು ಬೇವಿನ ಮರಗಳು ಮತ್ತು ಒಂದು ಔದುಂಬರ ವೃಕ್ಷವನ್ನು ಕಾಣಬಹುದಾಗಿತ್ತು. 


ಪ್ರಧಾನ್ ರವರು ಸಾಯಿಬಾಬಾರವರನ್ನು ಭೇಟಿಯಾಗುವುದಕ್ಕೆ ಮೊದಲು ಅವರಿಗೆ ಸಾಧು ಸಂತರೆಂದರೆ ಬಹಳ ಅಗೌರವ ಇತ್ತು. ಒಮ್ಮೆ ಇವರ ಸ್ನೇಹಿತರು ಶಿರಡಿಗೆ ತಮ್ಮ ಮನೆಯವರೊಂದಿಗೆ ಹೋಗುತ್ತಿದ್ದರು. ಅವರು ಪ್ರಧಾನ್ ರವರನ್ನು ತಮ್ಮೊಡನೆ ಬರುವಂತೆ ಬಹಳ ಸಲ ಒತ್ತಾಯ ಮಾಡಿದರು. ಮೊದಲು ಪ್ರಧಾನ್ ಶಿರಡಿಗೆ ಹೋಗಲು ಒಪ್ಪಲಿಲ್ಲ. ಆದರೆ, ಬಹಳ ಸಲ ಒತ್ತಾಯ ಮಾಡಿದ ಮೇಲೆ ಪ್ರಧಾನ್ ಒಂದು ಶರತ್ತಿನ ಮೇಲೆ ಶಿರಡಿಗೆ ಹೋಗಲು ಒಪ್ಪಿದರು. ಅದೇನೆಂದರೆ, ತಾನು ಸಾಯಿಬಾಬಾರವರಿಗೆ ತಲೆ ಬಾಗುವುದಿಲ್ಲ ಮತ್ತು ಅವರ ಪಾದ ತೀರ್ಥವನ್ನು ತೆಗೆದುಕೊಳ್ಳುವುದಿಲ್ಲ ಎಂಬುದಾಗಿತ್ತು. ಪ್ರಧಾನ್ ರವರ ಸ್ನೇಹಿತರು ಅದಕ್ಕೆ ಒಪ್ಪಿದರು. ಅವರು ಮತ್ತು ಅವರ ಸ್ನೇಹಿತರ ಮನೆಯವರೆಲ್ಲ ಶಿರಡಿಗೆ ಹೋದರು.ಶಿರಡಿ ತಲುಪಿ ಸಾಯಿಬಾಬಾರವರ ದರ್ಶನ ಪಡೆಯಲು ದ್ವಾರಕಾಮಾಯಿಗೆ ತೆರಳಿದರು. ದ್ವಾರಕಾಮಾಯಿಯಲ್ಲಿ ಬಹಳ ಜನ ಭಕ್ತರು ನೆರೆದಿದ್ದು ಸಭಾಮಂಟಪವು ತುಂಬಿ ಹೋಗಿತ್ತು. ಆದುದರಿಂದ ಪ್ರಧಾನ್ ರವರು ಒಂದು ಕಡೆ ತುದಿಯಲ್ಲಿ ತಮ್ಮ ಪಾಡಿಗೆ ತಾವು ಎಲ್ಲವನ್ನು ನೋಡುತ್ತಾ ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಜನಜಂಗುಳಿ ಕಡಿಮೆಯಾಗಿ ದ್ವಾರಕಾಮಾಯಿ ಖಾಲಿಯಾಯಿತು. ಪ್ರಧಾನ್ ರವರ ಸ್ನೇಹಿತರು ಬಾಬಾರವರ ಬಳಿಗೆ ಹೋಗಿ ಅವರಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಿದ್ದರು. ಆಗ ಸಾಯಿಬಾಬಾರವರು ಪ್ರಧಾನ್ ರವರ ಕಡೆ ತಮ್ಮ ಕೈಯನ್ನು ತೋರಿಸುತ್ತಾ "ಆ ಬೇಜವಾಬ್ದಾರಿತನದ  ಮತ್ತು ತೆಗಳುವ ವ್ಯಕ್ತಿಯನ್ನು ಇಲ್ಲಿಗೆ ಕರೆದು ತಾ" ಎಂದು ಆಜ್ಞಾಪಿಸಿದರು. ಪ್ರಧಾನ್ ರವರ ಸ್ನೇಹಿತರು ಅವರನ್ನು ಸಾಯಿಬಾಬಾರವರ ಬಳಿಗೆ ಕರೆದುಕೊಂಡು ಬಂದರು. ಸಾಯಿಬಾಬಾರವರು ಪ್ರಧಾನ್ ರವರಿಗೆ ಬಯ್ಗುಳಗಳ ಮಳೆಯನ್ನು ಸುರಿಸುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಶಾಂತರಾದ ಸಾಯಿಬಾಬಾರವರು ಸಾಧು ಸಂತರಿಗೆ ನಿಂದನೆ ಮಾಡುವದು ತಪ್ಪು ಎಂಬ ಮನವರಿಕೆಯನ್ನು ಪ್ರಧಾನ್ ರವರಿಗೆ ಮಾಡಿಕೊಟ್ಟರು ಮತ್ತು ತಮ್ಮ ಬುದ್ಧಿಯನ್ನು ತಿದ್ದಿಕೊಳ್ಳಲು ಸಲಹೆಯನ್ನು ನೀಡಿದರು. ಸಾಯಿಬಾಬಾರವರು ಪ್ರಧಾನ್ ರವರಿಗೆ ಬುದ್ಧಿವಾದ ಹೇಳುತ್ತಿದ್ದಾಗ ಪ್ರಧಾನ್ ರವರಿಗೆ ಸಾಯಿಬಾಬಾರವರ ಅಂತರ್ಯಾಮಿತ್ವ ಮತ್ತು ತಮ್ಮ ಮನದಲ್ಲಿ ಬಾಬಾರವರ ಬಗ್ಗೆ ಹಾಗೂ ಇತರ ಸಾಧು ಸಂತರ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯಗಳ ಬಗ್ಗೆ ಇದ್ದ ಜ್ಞಾನದ ಅರಿವಾಯಿತು. ಆ ಕೊಡಲೇ ಪ್ರಧಾನ್ ರವರಿಗೆ ಸಾಧು ಸಂತರ ಬಗ್ಗೆ ಇದ್ದ ಅಗೌರವ ಮಾಯವಾಯಿತು. ಆ ಕ್ಷಣದಿಂದಲೇ ಪ್ರಧಾನ್ ರವರು ಸಾಯಿಬಾಬಾರವರ ಅನನ್ಯ ಭಕ್ತರಾದರು. 

ದಿನ ಕಳೆದಂತೆ, ಸಾಯಿಬಾಬಾರವರ ದಯೆಯಿಂದ ಪ್ರಧಾನ್ ರವರ ಹಣಕಾಸು ಪರಿಸ್ಥಿತಿ ಸುಧಾರಿಸಿ ಅವರು ಮನಶ್ಯಾಂತಿ ಹೊಂದಿದರು. ಅಂದಿನಿಂದ ಪ್ರಧಾನ್ ರವರು ಆಗಾಗ್ಗೆ ಶಿರಡಿಗೆ ಹೋಗಿ ಬರಲು ಪ್ರಾರಂಭಿಸಿದರು ಮತ್ತು ಪ್ರತಿ ಸಲ ಶಿರಡಿಗೆ ಹೋದಾಗಲೂ ಸಾಯಿಬಾಬಾರವರನ್ನು ಭಿವಪುರಿಗೆ ಬರಲು ಒತ್ತಾಯ ಮಾಡುತ್ತಿದ್ದರು. ಕಟ್ಟ ಕಡೆಗೆ ಒಮ್ಮೆ ಸಾಯಿಬಾಬಾರವರು ತಮ್ಮ ಒಪ್ಪಿಗೆ ಸೂಚಿಸಿ "ನಾನು ಭಿವಪುರಿಗೆ ಖಂಡಿತವಾಗಿ ಬರುವೆ" ಎಂದು ವಚನ ನೀಡಿದರು. ಆದರೆ, ಪ್ರಧಾನ್ ರವರು ಅಷ್ಟಕ್ಕೇ ಸುಮ್ಮನಾಗದೆ ಪದೇ ಪದೇ ಸಾಯಿಬಾಬಾರವರನ್ನು "ನೀವು ಯಾವಾಗ ಭಿವಪುರಿಗೆ ಬರುವಿರಿ" ಎಂದು ಕೇಳಲು ಪ್ರಾರಂಭಿಸಿದರು.  ಕಡೆಗೆ  ಪ್ರಧಾನ್ ರವರು ಒಮ್ಮೆ ಶಿರಡಿಗೆ ಭೇಟಿ ನೀಡಿದಾಗ ಅವರಿಗೆ ತಮ್ಮ ಒಂದು ಚಿತ್ರಪಟವನ್ನು ನೀಡಿ "ಕೇಳು, ಈ ಚಿತ್ರಪಟವನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯಲ್ಲಿ ಇದು. ಈ ಚಿತ್ರಪಟವೇ ನಾನೆಂದು ತಿಳಿದು ಪೂಜಿಸು.ಇನ್ನು ಎಂದಿಗೂ ನೀನು ಶಿರಡಿಗೆ ಕಾಲಿಡಬೇಡ" ಎಂದು ಹೇಳಿದರು. ಪ್ರಧಾನ್ ರವರು ಚಿತ್ರಪಟವನ್ನು ತೆಗೆದುಕೊಂಡು ಹೋದರು. ಆದರೆ, ಅವರು ಸಾಯಿಬಾಬಾ ಸುಮ್ಮನೆ ಹಾಸ್ಯ ಮಾಡುತ್ತಿದ್ದಾರೆ ಎಂದು ಭಾವಿಸಿದರು. ಪುನಃ ಮತ್ತೊಮ್ಮೆ ಶಿರಡಿಗೆ ಬಂದರು. ಪ್ರಧಾನ್ ರವರು ದ್ವಾರಕಾಮಾಯಿ ಪ್ರವೇಶ ಮಾಡುತ್ತಿದ್ದಂತೆ ಸಾಯಿಬಾಬಾರವರು "ನಾನು ನಿನ್ನ ಮನೆಯಲ್ಲೇ ಇದ್ದೇನೆ. ಶಿರಡಿಗೆ ಮತ್ತೆ ಕಾಲಿಡಬೇಡ. ಭಿವಪುರಿಗೆ ವಾಪಸ್ ಹೋಗು. ಅಲ್ಲಿ ಒಂದು ಮಂದಿರವನ್ನು ನಿರ್ಮಾಣ ಮಾಡು. ಆ ಮಂದಿರದಲ್ಲಿ ನಾನು ನಿನಗೆ ನೀಡಿದ ಚಿತ್ರಪಟವನ್ನು ಪ್ರತಿಷ್ಠಾಪಿಸು. ಆ ಸ್ಥಳದಲ್ಲೇ ಎಲ್ಲ ಉತ್ಸವಗಳನ್ನು ಆಚರಿಸು. ಪುನಃ ಶಿರಡಿಗೆ ಬರಬೇಡ. ಏಕೆಂದರೆ ಭಿವಪುರಿಯೇ ನಿನ್ನ ಶಿರಡಿಯಾಗಿರುತ್ತದೆ. ಈ ಕೊಡಲೇ ಇಲ್ಲಿಂದ ಹೊರಟುಹೋಗು. ನಿನ್ನ ಮನೆಯನ್ನು ಸೇರಿಕೋ" ಎಂದರು. ಹೀಗೆ, ಸಾಯಿಬಾಬಾರವರ ಆಜ್ಞೆಯ ಮೇರೆಗೆ ಪ್ರಧಾನ್ ರವರು ಶಿರಡಿಗೆ ಹೋಗುವುದನ್ನು ನಿಲ್ಲಿಸಿದರು. 



ಪ್ರಧಾನ್ ರವರು ತಮ್ಮ ಮನೆಯ ಪಕ್ಕದಲ್ಲಿ ಒಂದು ಸಣ್ಣ ಮಂದಿರವನ್ನು ನಿರ್ಮಿಸಿದರು. ಒಂದು ದಿನ ಮಧ್ಯರಾತ್ರಿಯ ಸಮಯದಲ್ಲಿ ದೇವಾಲಯದ ಬಾಗಿಲು ತೆರೆದ ಶಬ್ದ ಕೇಳಿಸಿತು. ಅವರು ಮತ್ತು ಅವರ ಮನೆಯವರೆಲ್ಲಾ ಏನಾಯಿತೆಂದು ನೋಡಲು ಹೋದರು. ಅಲ್ಲಿ ನಡೆದ ದೃಶ್ಯ ಕಂಡು ಮನೆಯವರಿಗೆಲ್ಲ ಆಶ್ಚರ್ಯವಾಯಿತು. ಸಾಯಿಬಾಬಾರವರು ದೇವಾಲಯದ ಒಳಗಡೆ ಹೋಗಿ ತಮ್ಮ ಹಿಂದೆಯೇ ಬಾಗಿಲನ್ನು ಹಾಕಿಕೊಂಡರು. ಮತ್ತೆ 3 ಘಂಟೆಗೆ ದೇವಾಲಯದ ಬಾಗಿಲು ತೆರೆಯಿತು. ಬಾಬಾರವರು ತಾವು ಬಂದಂತೆಯೇ ಹಿಂತಿರುಗಿ ಹೋದರು. ಪ್ರಧಾನ್ ಓಡಿಹೋಗಿ ನಡೆದ ವಿಷಯವನ್ನು ಗ್ರಾಮದ ಅನೇಕ ಸ್ನೇಹಿತರಿಗೆ ಮತ್ತು ತಮ್ಮ ಬಂಧುಗಳಿಗೆ ತಿಳಿಸಿದರು. ಅವರುಗಳೂ ಕೂಡ ಬಂದು ಈ ವಿಸ್ಮಯಕಾರಿ ದೃಶ್ಯವನ್ನು ನೋಡಿ ಅಚ್ಚರಿಗೊಂಡರು. 



ಒಮ್ಮೆ ಪ್ರಧಾನ್ ತಮ್ಮ ಜೀವನದಲ್ಲಿ ಒಂದು ದೊಡ್ಡ ತೊಂದರೆಗೆ ಸಿಕ್ಕಿಹಾಕಿಕೊಂಡರು. ಏನು ಮಾಡಿದರೂ ಕೂಡ ಆ ತೊಂದರೆ ನಿವಾರಣೆ ಆಗುವ ಮಾರ್ಗ ಕಾಣಲಿಲ್ಲ. ಆ ಸಮಯದಲ್ಲಿ ಸಾಯಿಬಾಬಾರವರು ಪ್ರಧಾನ್ ರವರಿಗೆ ದರ್ಶನ ನೀಡಿ ಅವರ ಬೆನ್ನು ತಟ್ಟಿ "ಹೆದರಬೇಡ, ನಾನು ನಿನ್ನನ್ನು ರಕ್ಷಿಸಲು ಇಲ್ಲೇ ಇದ್ದೇನೆ" ಎಂದು ಅಭಯ ನೀಡಿದರು. ಪ್ರಧಾನ್ ರವರು ಬಾಬಾ ತಮಗೆ ಸಾಕ್ಷಾತ್ಕಾರ ನೀಡಿದ ಸ್ಥಳವನ್ನು ಪವಿತ್ರವೆಂದು ತೀರ್ಮಾನಿಸಿ ಆ ಸ್ಥಳದಲ್ಲಿ ಯಾರು ಓಡಾಡಲು ಬಿಡುತ್ತಿರಲಿಲ್ಲ. ಆದುದರಿಂದ ಆ ಸ್ಥಳದ ಪವಿತ್ರತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆ ಸ್ಥಳದಲ್ಲಿ ಒಂದು ಪವಿತ್ರ ತುಳಸಿ ಬೃಂದಾವನವನ್ನು ಪ್ರತಿಷ್ಟಾಪಿಸಿದರು. 



ಭಿವಪುರಿಯ ಸಾಯಿಬಾಬಾ ಮಂದಿರದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ಟ್ರಸ್ಟ್ ನಿರ್ಮಾಣಗೊಂಡಿದೆ. ಈ ಟ್ರಸ್ಟ್ ಇತ್ತೀಚಿಗೆ ಹಳೆಯ ಮಂದಿರವನ್ನು ಕೆಡವಿ ಆ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿತು.

ಭಿವಪುರಿಯಲ್ಲಿ ದೇವ್ ಬಾಬಾ ರವರ ಶ್ರೀ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣ: 

ಶಿರಡಿ ಸಾಯಿಬಾಬಾ ಮತ್ತು ದೇವ್ ಬಾಬಾ ರವರ ಸಂಬಂಧ ಬಹಳ ಆಳವಾಗಿತ್ತು. ದೇವ್ ಬಾಬಾ ಆಗಾಗ್ಗೆ ಭಿವಪುರಿಗೆ ಹೋಗಿ ಅಲ್ಲಿ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣವನ್ನು ಮಾಡುತ್ತಿದ್ದರು. ಒಮ್ಮೆ ಇವರು ತಮ್ಮ ಅಖಂಡ ಪಾರಾಯಣವನ್ನು ಸರಿಯಾಗಿ 11 ಘಂಟೆಗೆ ಪೂರ್ಣಗೊಳಿಸಿದರು. ಗ್ರಾಮದ ಜನರಿಗೆ ಆ ದಿನ ಪಾರಾಯಣದ ಕಡೆಯ ದಿನವೆಂದು ತಿಳಿದಿತ್ತು. ಆದುದರಿಂದ ಹಳ್ಳಿಯ ಜನರೆಲ್ಲಾ ಪ್ರಸಾದ ಸಿಗುವುದೆಂದು ದೇವಾಲಯದಲ್ಲಿ ನೆರೆದಿದ್ದರು. ಸಾಯಿ ಸಚ್ಚರಿತೆ ಪಾರಾಯಣದ ಕೊನೆಯಲ್ಲಿ ಈ ರೀತಿ ಪ್ರಸಾದ ವಿತರಣೆ ಮಾಡುವ ವಾಡಿಕೆ ಮತ್ತು ಸಂಪ್ರದಾಯವಿರುತ್ತದೆ. 

ಮಧ್ಯಾನ್ಹ 12 ಘಂಟೆಗೆ ಸರಿಯಾಗಿ ಆರತಿಯಾಯಿತು. ಹಳ್ಳಿಯ ಜನರೆಲ್ಲಾ ಆರತಿಗೆ ಸೇರಿದ್ದರು. ಆರತಿ ಹಾಡುವುದರಲ್ಲಿ ಸಂಪೂರ್ಣ ಮಗ್ನರಾಗಿದ್ದರೂ ಕೂಡ ದೇವ್ ಬಾಬಾ ರವರಿಗೆ ತಮ್ಮ ಪಕ್ಕದಲ್ಲಿ ಏನೋ ಒಂದು ರೀತಿಯ ಆಧ್ಯಾತ್ಮಿಕ ಅನುಭೂತಿಯಾಯಿತು. ದೇವ್ ಬಾಬಾ ತಮ್ಮ ಕಣ್ಣುಗಳನ್ನು ತೆರೆದು ತಮ್ಮ ಸುತ್ತಲೂ ನೋಡಿದರು. ಇವರ ಪಕ್ಕದಲ್ಲಿ ಒಬ್ಬ ಎತ್ತರದ ಮನುಷ್ಯ ನಿಂತಿದ್ದನು. ಅವನು ಕುರಿ ಕಾಯುವವನಂತೆ ಕಂಡನು ಮತ್ತು ಗ್ರಾಮದ ಎಲ್ಲ ಜನರಿಗಿಂತ ಭಿನ್ನವಾಗಿ ಕಂಡನು. ಆ ಸಮಯದಲ್ಲಿ ಮಂತ್ರ ಪುಷ್ಪಾಂಜಲಿ (ದೇವರಿಗೆ ಹೂಗಳನ್ನು ಸಮರ್ಪಣೆ ಮಾಡುವ ಕಾರ್ಯಕ್ರಮ) ಮುಗಿಯಿತು. ದೇವಾಲಯದಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಪುಷ್ಪಗಳನ್ನು ವಿಗ್ರಹಕ್ಕೆ ಅರ್ಪಿಸಲು ಮುಂದೆ ತೆರಳಿದರು. ಆದರೆ, ಆ ಕುರಿ ಕಾಯುವವ ಮುಂದೆ ಹೋಗದೆ ತಾನು ನಿಂತ ಸ್ಥಳದಲ್ಲೇ ನಿಂತು ತಾನು ಕೈನಲ್ಲಿ ಹಿಡಿದಿದ್ದ ಹೂಗಳು ತನ್ನ ಪಾದದ ಮೇಲೆ ಬೀಳುವ ಹಾಗೆ ಮಾಡಿದನು. ಕೂಡಲೇ, ದೇವ್ ಬಾಬಾ ರವರಿಗೆ ತಮ್ಮನ್ನು ಹರಸಲು ಸಾಯಿಬಾಬಾರವರೇ  ಕುರಿ ಕಾಯುವವನ ವೇಷದಲ್ಲಿ ಬಂದಿರುವರೆಂದು ತಿಳಿಯಿತು. ಒಂದು ಕ್ಷಣವೂ ತಡ ಮಾಡದೆ ದೇವ್ ಬಾಬಾ ಆ ಕುರಿ ಕಾಯುವವನಿಗೆ ತಮ್ಮ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದರು. 

ಶ್ರೀ ಸಾಯಿನಾಥ ಮಂದಿರ ಟ್ರಸ್ಟ್, ಭಿವಪುರಿಯ ಬಗ್ಗೆ ವಿವರಗಳು: 

ದೇವಾಲಯದ ಸುತ್ತಮುತ್ತಲಿನ ಪರಿಸರ ಅತ್ಯಂತ ರಮಣೀಯವಾಗಿದೆ. ದೇವಾಲಯದ ಸುತ್ತಲೂ ದೊಡ್ಡ ದೊಡ್ಡ ಮರಗಳಿವೆ. ರಾತ್ರಿಯ ವೇಳೆ ದೇವಾಲಯದ ಹತ್ತಿರ ಸ್ವಲ್ಪವೂ ಕೂಡ ಸದ್ದು ಗದ್ದಲಗಳಿಲ್ಲದೆ ಪ್ರಶಾಂತ ವಾತಾವರಣವಿರುತ್ತದೆ. ದೇವಾಲಯ ನಿರ್ಮಾಣವಾದ ನಂತರ ಪ್ರತಿದಿನ ಮಧ್ಯರಾತ್ರಿ ದೇವಾಲಯದ ಬಾಗಿಲು ತೆರೆದ ಸದ್ದು ಕೇಳಿಬರುತ್ತಿತ್ತು ಮತ್ತು ಸಾಯಿಬಾಬಾರವರು ದೇವಾಲಯದ ಸುತ್ತಲೂ ಓಡಾಡುವಂತೆ ಕಾಣಿಸುತ್ತಿತ್ತು. ಕೆಲವೊಮ್ಮೆ ದೇವಾಲಯದ ಹತ್ತಿರ ಇದ್ದ ಮರದ ಬುಡದಲ್ಲಿ ಸಾಯಿಬಾಬಾರವರು ಕುಳಿತು ಆಯಾಸ ಪರಿಹಾರ ಮಾಡಿಕೊಳ್ಳುವಂತೆ ಕಾಣಿಸುತ್ತಿತ್ತು. ಪ್ರತಿದಿನ 3 ಘಂಟೆಯ ವೇಳೆಗೆ ದೇವಾಲಯದ ಬಾಗಿಲು ಹಾಕಿದ ಸದ್ದು ಕೇಳಿಬರುತ್ತಿತ್ತು. ಈ ದೃಶ್ಯವನ್ನು ಪ್ರಧಾನ್ ಮತ್ತು ಅವರ ಮನೆಯವರು ಮಾತ್ರವಲ್ಲದೆ ಗ್ರಾಮದ ಅನೇಕ ಜನರು ತಮ್ಮ ಕಣ್ಣಾರೆ ಕಂಡಿರುತ್ತಾರೆ. ಆ ಘಟನೆಯಾದ ಬಳಿಕ ಪ್ರಧಾನ್ ರವರ ಎಲ್ಲ ಅನುಮಾನಗಳೂ ದೂರವಾಗಿ ಅವರು ಸಾಯಿಬಾಬಾರವರ ಅನನ್ಯ ಭಕ್ತರಾದರು. ಸಾವಿರಾರು ರುಪಾಯಿಗಳನ್ನು ಖರ್ಚು  ಮಾಡಿ ಪ್ರಧಾನ್ ರವರು ಸುಂದರವಾದ ಸಾಯಿಬಾಬಾ ಮಂದಿರ, ಒಂದು ದೊಡ್ಡ ಹಾಲ್, ಒಂದು ವರಾಂಡಾ ಮತ್ತು ಅತಿಥಿ ಗೃಹವನ್ನು ನಿರ್ಮಿಸಿರುತ್ತಾರೆ. 

ಶ್ರೀ ಸಾಯಿಬಾಬಾರವರು 1918 ರಲ್ಲಿ ಸಮಾಧಿ ಹೊಂದಿದರು. ಆದರೆ, ಪ್ರಧಾನ್ ರವರು ತಮ್ಮ ಸಾಯಿ ಪೂಜೆಯನ್ನು ಅಷ್ಟೇ ಶ್ರದ್ಧಾ ಭಕ್ತಿಗಳಿಂದ ಮುಂದುವರಿಸಿದರು. 1924 ರಲ್ಲಿ ಪ್ರಧಾನ್ ರವರ ಮಗಳನ್ನು ಮುಂಬೈ ದಾದರ್ ನ ಶ್ರೀ.ಎ.ವಿ.ಗುಪ್ತೆ ಎಂಬುವರಿಗೆ ಕೊಟ್ಟು ವಿವಾಹ ಮಾಡಲಾಯಿತು. ಗುಪ್ತೆಯವರು ಕೂಡ ಬಹಳ ಒಳ್ಳೆಯ ಮನಸ್ಸಿನವರಾದುದರಿಂದ ಅವರು ಕೂಡ ಭಿವಪುರಿಯ ದೇವಾಲಯದ ಎಲ್ಲ ಸಮಾರಂಭಗಳಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ಅನೇಕ ಸ್ನೇಹಿತರಿಗೂ ಕೂಡ ಭಿವಪುರಿಗೆ ಬಂದು ಬಾಬಾರವರ ದರ್ಶನ ಮಾಡಿಕೊಂಡು ಹೋಗಲು ಪ್ರೇರೇಪಿಸುತ್ತಿದ್ದರು. ಆ ಕಾರಣದಿಂದ ಭಿವಪುರಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು. 

ಶ್ರೀ.ಗುಪ್ತೆ ಪ್ರಥಮ ಬಾರಿಗೆ 1936 ರಲ್ಲಿ ಶಿರಡಿಗೆ ಭೇಟಿ ನೀಡಿದರು. ಅಲ್ಲಿನ ಸಮಾಧಿ ಮಂದಿರವನ್ನು ನೋಡಿ ಭಿವಪುರಿಯಲ್ಲಿ ಕೂಡ ಅದೇ ರೀತಿಯ ಸಮಾಧಿ ಮಂದಿರ ನಿರ್ಮಾಣವಾಗಬೇಕೆಂದು ಸಾಯಿಬಾಬಾರವರನ್ನು ಮನಸಾರೆ ಪ್ರಾರ್ಥಿಸಿದರು. ಸಾಯಿಬಾಬಾರವರು ತಮ್ಮ ಭಕ್ತರ ಕೋರಿಕೆಗಳನ್ನು ಕೂಡಲೇ ನೆರವೇರಿಸುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಂತೆ, ಸಾಯಿಬಾಬಾರವರು ಗುಪ್ತೆಯವರ ಈ ಕೋರಿಕೆಯನ್ನು ಕೂಡಲೇ ನೆರವೇರಿಸಿದರು.  ಆ ಕ್ಷಣದಿಂದಲೇ ಭಿವಪುರಿಯ ಸಾಯಿನಾಥ ಮಂದಿರವು ಹೆಚ್ಚು ಹೆಚ್ಚು  ಪ್ರಸಿದ್ದಿಯನ್ನು ಪಡೆಯಲು ಪ್ರಾರಂಭಿಸಿತು.
ಶ್ರೀ.ಪ್ರಧಾನ್ ರವರು 1939 ರಲ್ಲಿ ಸ್ವರ್ಗಸ್ಥರಾದರು. ಆಗಿನಿಂದ ದೇವಾಲಯದ ಉಸ್ತುವಾರಿಯ ಹೊಣೆ ಪ್ರಧಾನ್ ರವರ ಮಗ ಮತ್ತು ಅಳಿಯನ ಮೇಲೆ ಬಿದ್ದಿತು. ದೇವಾಲಯದ ಮೇಲ್ವಿಚಾರಣೆಗಾಗಿ ಅದೇ ವರ್ಷ "ಶ್ರೀ ಸದ್ಗುರು ಸಾಯಿನಾಥ ಸೇವಾ ಸಂಸ್ಥಾ" ಎಂಬ ಟ್ರಸ್ಟ್ ನ್ನು ಪ್ರಾರಂಭಿಸಿ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳಲು 7 ಜನ ಟ್ರಸ್ಟಿಗಳನ್ನು ನೇಮಕ ಮಾಡಲಾಯಿತು. 

ದಿನೇ ದಿನೇ ಹೆಚ್ಚು ಹೆಚ್ಚು ಸಾಯಿ ಭಕ್ತರು ದೇವಾಲಯಕ್ಕೆ ದರ್ಶನ ಪಡೆಯಲು ಬರಲಾರಂಭಿಸಿದರು. ಇದರಿಂದ ದೇವಾಲಯದಲ್ಲಿ ಸ್ಥಳಾವಕಾಶವಿಲ್ಲದೆ ಹೋಯಿತು. ಆದುದರಿಂದ ದೇವಾಲಯವನ್ನು ಪುನರ್ ನಿರ್ಮಾಣ ಮತ್ತು ಅಗಲೀಕರಣ ಮಾಡುವ ಕಾರ್ಯ ಪ್ರಾರಂಭಿಸಲಾಯಿತು. ದೇವಾಲಯದ ಗೋಡೆ ಕಟ್ಟುವ ಕಾರ್ಯ ಪೂರ್ಣಗೊಂಡಿತಾದರೂ ಹಣದ ಅಭಾವದಿಂದ ಮೇಲ್ಚಾವಣಿಯ ಕೆಲಸ ನಿಂತು ಹೋಯಿತು. ಆಗ ಶ್ರೀ.ನಾರಾಯಣ ಪುರೋಹಿತ್ ಎನ್ನುವ ಸಾಯಿಭಕ್ತರು ಆ ಸಂಕಷ್ಟದಿಂದ ಹೊರಗೆ ಬರಲು ಸಾಯಿ ಸಚ್ಚರಿತೆಯ ಪಾರಾಯಣವನ್ನು ಪ್ರಾರಂಭಿಸಿದರು. ಪಾರಾಯಣ ಆರಂಭಿಸಿದ ನಾಲ್ಕನೇ ದಿನ ಸಾಯಿಬಾಬಾರವರು ಶ್ರೀ.ನಾರಾಯಣ ಪುರೋಹಿತ್ ರವರ ಕನಸಿನಲ್ಲಿ ದರ್ಶನ ನೀಡಿ "ನನ್ನ ಧುನಿ ಎಲ್ಲಿ? ಧುನಿಯು ಇಲ್ಲದಿದ್ದರೆ ಈ ಸ್ಥಳವು ಹೇಗೆ ಶಿರಡಿಯಾಗುತ್ತದೆ? ದೇವಾಲಯದ ಕೆಲಸ ಹೇಗೆ ಪೂರ್ಣವಾಗುತ್ತದೆ?" ಎಂದು ಕೇಳಿದರು. ಈ ಕನಸು ಪ್ರತಿದಿನ ಪುನರಾವರ್ತನೆಯಾಗುತ್ತಿದ್ದರಿಂದ ಶ್ರೀ.ನಾರಾಯಣ ಪುರೋಹಿತ್ ತಮ್ಮ ಕನಸನ್ನು ಶ್ರೀ.ಗುಪ್ತೆಯವರಿಗೆ ತಿಳಿಸಿದರು. ಗುಪ್ತೆಯವರು ಈ ವಿಷಯವನ್ನು ಇತರ ಟ್ರಸ್ಟಿಗಳೊಂದಿಗೆ ಸಮಾಲೋಚಿಸಿ ದೇವಾಲಯದಲ್ಲಿ ಧುನಿಯನ್ನು ಪ್ರಾರಂಭಿಸಲು ತೀರ್ಮಾನಿಸಿದರು. ಧುನಿಗೆ ಒಂದು ಸ್ಥಳವನ್ನು ತೀರ್ಮಾನಿಸಿ ದೇವಾಲಯದ ಕಾರ್ಯ ಮುಂದುವರಿಸಲಾಯಿತು. ಧುನಿಯನ್ನು ಸಾಯಿ ಸಚ್ಚರಿತೆಯ ಲೇಖಕರಾದ ಶ್ರೀ.ಹೇಮಾಡಪಂತರ ಮೊಮ್ಮಗನಾದ ಶ್ರೀ.ಎ.ಆರ್.ವಳವಾಲ್ಕರ್ ರವರು 7ನೇ ಏಪ್ರಿಲ್ 1949 ರ ಪವಿತ್ರ ಶ್ರೀರಾಮನವಮಿಯ ದಿನ ಬೆಳಿಗ್ಗೆ 10 ಘಂಟೆಗೆ ವಿಧ್ಯುಕ್ತವಾಗಿ ಉದ್ಘಾಟಿಸಿದರು. 

ಸಾಯಿ ಭಕ್ತರಾದ ಶ್ರೀ.ಕುಮರೇಶನ್ ಸಮರ್ಥ ಎಂಬುವರು ಮೇಲ್ಛಾವಣಿಯ ಮತ್ತು ಧುನಿಯ ಸುತ್ತಾ ನಿರ್ಮಿಸಬೇಕಿದ್ದ ಕಟ್ಟಡಗಳ ಎಲ್ಲ ಖರ್ಚನ್ನು ವಹಿಸಿಕೊಂಡರು. ಶಿರಡಿಯ ದ್ವಾರಕಾಮಾಯಿಯಲ್ಲಿನ ಧುನಿಯಂತೆ ಈ ಧುನಿಯು ಕೂಡ ನಿರಂತರವಾಗಿ ಪ್ರಜ್ವಲಿಸುತ್ತಿದೆ. ವರ್ಷ ಪೂರ್ತಿ ಅನೇಕ ವಿಶೇಷ ಉತ್ಸವದ ದಿನಗಳನ್ನು ಆಚರಿಸಲಾಗುತ್ತಿದೆ. ಶ್ರೀರಾಮನವಮಿ ಮತ್ತು ಸಾಯಿಬಾಬಾರವರ ಸಮಾಧಿ ದಿವಸವನ್ನು ಮತ್ತಷ್ಟು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶ್ರೀ ಸಾಯಿ ಲೀಲಾ ಮಾಸ ಪತ್ರಿಕೆಯ ಮಾಜಿ ಸಂಪಾದಕರಾದ ದಿವಂಗತ ಪ್ರೊಫೆಸ್ಸರ್ ಶ್ರೀ.ಡಿ.ಡಿ.ಪರ್ಚೂರೆಯವರು ಈ ಎರಡೂ ಉತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಾಯಿಬಾಬಾರವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದ ಕೀರ್ತನೆಯನ್ನು ಮಾಡುತ್ತಿದ್ದರು. 

ಅನೇಕ ಪ್ರಸಿದ್ದ ಸಾಯಿಭಕ್ತರು ಈ ದೇವಾಲಯವನ್ನು ಸಂದರ್ಶಿಸಿ ಧನ ಸಹಾಯವನ್ನು ಮಾಡುತ್ತಿದ್ದಾರೆ. ದೇವಾಲಯದ ಟ್ರಸ್ಟಿಗಳು ಹಣ ಸಹಾಯವನ್ನು ಮಾಡಿದ ಈ ಎಲ್ಲ ದಾನಿಗಳಿಗೆ ಅತ್ಯಂತ ಋಣಿಯಾಗಿದ್ದಾರೆ. ಈ ಮೇಲೆ ತಿಳಿಸಿದ ಸಾಯಿಬಾಬಾರವರ ಮಾಡಿದ ವಿಶೇಷ ಲೀಲೆಯಿಂದ ಈ ಸ್ಥಳವು ಪ್ರತಿ ವರ್ಷ ಹೆಚ್ಚು ಹೆಚ್ಚು ಸಾಯಿ ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ ಮತ್ತು ಒಮ್ಮೆ ಬಂದ ಸಾಯಿ ಭಕ್ತ ಮತ್ತೆ ಮತ್ತೆ ಈ ಸ್ಥಳಕ್ಕೆ ಬರುವ ಹಾಗೆ ಮಾಡುತ್ತಿದೆ. 

ದೇವಾಲಯದ ವಿಶೇಷತೆಗಳು: 

ದೇವಾಲಯದ ಗರ್ಭಗುಡಿಯಲ್ಲಿ ಶಿರಡಿ ಸಾಯಿಬಾಬಾರವರು 1916ನೇ ಇಸವಿಯಲ್ಲಿ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರಿಗೆ ನೀಡಿದ ಚಿತ್ರಪಟವನ್ನು ನೋಡಬಹುದು. ದಿನನಿತ್ಯ ಈ ಚಿತ್ರಪಟಕ್ಕೆ ಸ್ಟೀಲ್ ಫ್ರೇಮನ್ನು ಹೊದಿಸಲಾಗುತ್ತದೆ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಬೆಳ್ಳಿಯ ಫ್ರೇಮ್ ನ್ನು ಹೊದಿಸಲಾಗುತ್ತದೆ.

ಗಣೇಶ, ಕಪ್ಪು ಶಿಲೆಯ ಶಿವಲಿಂಗ, ಬೆಳ್ಳಿಯ ಲಕ್ಷ್ಮಿ ನಾಣ್ಯವನ್ನು ಸಾಯಿಬಾಬಾರವರ ಚಿತ್ರಪಟದ ಮುಂಭಾಗದಲ್ಲಿ ನೋಡಬಹುದು.

ಸಾಯಿಬಾಬಾರವರ ಚಿತ್ರಪಟದ ಎರಡೂ ಬದಿಗಳಲ್ಲಿ ನಿರಂತರ ಪ್ರಜ್ವಲಿಸುವ ಎರಡು ನಂದಾದೀಪಗಳನ್ನು ನೋಡಬಹುದು.


ದತ್ತಾತ್ರೇಯ ದೇವರ ಅತ್ಯಂತ ಪುರಾತನ ಮತ್ತು ಅಪರೂಪದ ಚಿತ್ರಪಟ ಮತ್ತು ಅದರ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ.



ವಿಠಲ, ದ್ವಾರಕಾಮಾಯಿ ಬಾಬಾ, ಭಿಕ್ಷೆಗೆ ಹೋಗುತ್ತಿರುವ ಬಾಬಾ, ಸ್ವಾಮಿ ಸಮರ್ಥ, ಸಂತ ಜ್ಞಾನೇಶ್ವರ, ಕೇಶವ ರಾಮಚಂದ್ರ ಪ್ರಧಾನ್ ರವರುಗಳ ಚಿತ್ರಪಟ ಮತ್ತು ಹೊಸದಾಗಿ ನಿರ್ಮಿಸಬೇಕೆಂದುಕೊಂಡಿರುವ ಸಾಯಿಬಾಬಾ ಮಂದಿರದ ನಕಾಶೆಯನ್ನು ಗರ್ಭಗುಡಿಯ ಹೊರಭಾಗದ ಗೋಡೆಯ ಮೇಲೆ ಕಾಣಬಹುದು.





ಸಾಯಿಬಾಬಾ ಮಂದಿರದ ಹೊರಗಡೆಯಲ್ಲಿ ಗರ್ಭಗುಡಿಗೆ ಎದುರಾಗಿ ಇರುವಂತೆ ಪವಿತ್ರ ಧುನಿಯನ್ನು ನಿರ್ಮಿಸಲಾಗಿದೆ. ಧುನಿಯ ಒಳಭಾಗದ ಗೋಡೆಯ ಮೇಲೆ ಹನುಮಂತನ ಕಪ್ಪು ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ.




ದೇವಾಲಯದ ಎಡಭಾಗದಲ್ಲಿ ತುಳಸಿ ಬೃಂದಾವನವನ್ನು ಸ್ಥಾಪಿಸಲಾಗಿದೆ. ಈ ಸ್ಥಳದಲ್ಲಿ ಸಾಯಿಬಾಬಾರವರು ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರಿಗೆ ದರ್ಶನ ನೀಡಿದರೆಂದು ತಿಳಿದುಬಂದಿದೆ.

ತುಳಸಿ ಬೃಂದಾವನದ ಪಕ್ಕದಲ್ಲಿ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರ ಮೊಮ್ಮಗನಾದ ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ ರವರು ಮತ್ತು ಅವರ ಮನೆಯವರು ವಾಸಿಸುತ್ತಿರುವ ಅನುವಂಶಿಕವಾಗಿ ಬಳುವಳಿಯಾಗಿ ಬಂದಿರುವ ಮನೆಯನ್ನು ನೋಡಬಹುದು.

ದೇವಾಲಯದ ಆವರಣದಲ್ಲಿ ಮತ್ತು ಲೇಂಡಿ ಉದ್ಯಾನವನದ ಎದುರುಗಡೆ ಇರುವಂತೆ ಒಂದು ಪವಿತ್ರ ಅರಳಿ ಮರವನ್ನು ನೋಡಬಹುದು.


ದೇವಾಲಯದ ಎದುರುಗಡೆ ಇರುವ ಸ್ಥಳದಲ್ಲಿ ಅತ್ಯಂತ ಸುಂದರವಾದ ಲೇಂಡಿ ಉದ್ಯಾನವನವಿದ್ದು ಈ ಸ್ಥಳವನ್ನು ದೇವಾಲಯದ ಟ್ರಸ್ಟ್ ನವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.



ದೇವಾಲಯವು ಬೆಳಿಗ್ಗೆ 5:30 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8 ಘಂಟೆಗೆ ಶೇಜಾರತಿಯ ನಂತರ ಮುಚ್ಚುತ್ತದೆ.

ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ - ಬೆಳಿಗ್ಗೆ 5:30 ಕ್ಕೆ
ಮಧ್ಯಾನ್ಹ ಆರತಿ - ಮಧ್ಯಾನ್ಹ 12:30 ಕ್ಕೆ
ಶೇಜಾರತಿ - ರಾತ್ರಿ 7:30 ಕ್ಕೆ 

ಪ್ರತಿದಿನ ಬೆಳಿಗ್ಗೆ  ಕಾಕಡಾ ಆರತಿಯ ನಂತರ ೬:೩೦ ಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 11 ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1.ಗುರುಪೂರ್ಣಿಮೆ. 
2.ಶ್ರೀರಾಮನವಮಿ. 
3. ಗೋಕುಲಾಷ್ಟಮಿ. 
4. ವಿಜಯದಶಮಿ. 
5. ದೀಪಾವಳಿ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಭಿವಪುರಿ ರಸ್ತೆ ರೈಲು ನಿಲ್ದಾಣದ ಬಳಿ. 

ವಿಳಾಸ: 
ಶ್ರೀ ಸಾಯಿನಾಥ ಮಂದಿರ (ಭಿವಪುರಿ ರಸ್ತೆ) ಟ್ರಸ್ಟ್ (ನೋಂದಣಿ), 
ನೋಂದಣಿ ಸಂಖ್ಯೆ: ಎ-2024 (ಮುಂಬೈ), 
ಭಿವಪುರಿ ರಸ್ತೆ, ಉಕ್ರೂಲ್ ಗ್ರಾಮ, 
ಚಿಂಚವಾಲಿ ಅಂಚೆ-410 201, 
ಖರ್ಜತ್ ತಾಲ್ಲೂಕ್, ರಾಯಘಡ ಜಿಲ್ಲೆ, 
ಮಹಾರಾಷ್ಟ್ರ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ / ಶ್ರೀ.ಯೋಗೇಶ್ ಪ್ರಧಾನ್ / ಶ್ರೀ.ಮಾರುತಿ ರಾಜಾರಾಂ ಪಂಡಿತ್ ಜಿ. 

ದೂರವಾಣಿ ಸಂಖ್ಯೆಗಳು: 
+91 93722 18558 / +91 74981 62002 / +91 93714 94766 

ಮಾರ್ಗಸೂಚಿ: 
ಭಿವಪುರಿ ಶ್ರೀ ಸಾಯಿನಾಥ ಮಂದಿರವು ಭಿವಪುರಿ ರಸ್ತೆ ರೈಲು ನಿಲ್ದಾಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುತ್ತದೆ ಮತ್ತು ಕರ್ಜತ್ ರೈಲ್ವೇ ನಿಲ್ದಾಣದಿಂದ 13 ಕಿಲೋಮೀಟರ್ ದೂರದಲ್ಲಿರುತ್ತದೆ.ಕರ್ಜತ್ ರೈಲು ನಿಲ್ದಾಣದಿಂದ ಆಟೋ ಸೌಲಭ್ಯವಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment