Monday, September 20, 2010

ಸಾಯಿ ಮಹಾಭಕ್ತ - ಹರಿ ವಿನಾಯಕ ಸಾಥೆ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 

ಹರಿ ವಿನಾಯಕ ಸಾಥೆ

ರಾವ್ ಬಹದ್ದೂರ್ ಹರಿ ವಿನಾಯಕ ಸಾಥೆಯವರು ಬಾಂಬೆ ಪ್ರಾಂತ್ಯದ ಡೆಪ್ಯುಟಿ ಕಲೆಕ್ಟರ್ ಮತ್ತು ಸೆಟಲ್ಮೆಂಟ್ ಅಧಿಕಾರಿ ಆಗಿದ್ದರು. ಇವರು ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಶಿರಡಿಯಲ್ಲಿ ಮೊದಲ ವಾಡ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಥೆ ವಾಡದ ನಿರ್ಮಾಣ 1905-06 ರಲ್ಲಿ ಆಯಿತು. ಸಾಯಿಬಾಬಾರವರ ಕೀರ್ತಿ ದೇಶದ ಎಲ್ಲೆಡೆ ಹರಡಿ ಅವರನ್ನು ಭೇಟಿ ಮಾಡಲು ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಬರುವ ಭಕ್ತರಿಗೆ ಶಿರಡಿಯಲ್ಲಿನ ಕೆಲವೇ ಹೋಟೆಲ್ ಗಳು ಮತ್ತು ಮನೆಗಳು ಸಾಲದೇ ಅನೇಕರು ಶಿರಡಿ ಗ್ರಾಮದಲ್ಲಿದ್ದ ಮರಗಳ ಕೆಳಗೆ ಮಲಗಿಕೊಳ್ಳುತ್ತಿದ್ದರು. ಆದುದರಿಂದ ಸಾಥೆವಾಡ ನಿರ್ಮಾಣದಿಂದ ಸಾಯಿಯವರನ್ನು ಭೇಟಿ ಮಾಡಲು ಬರುವ ಎಲ್ಲಾ ಭಕ್ತರು ತಂಗಲು ಸಹಾಯವಾಯಿತು. ಇವರು ಮಾಡಿದ ಮತ್ತೊಂದು ಮುಖ್ಯ ಕೆಲಸವೆಂದರೆ ಸಾಯಿಬಾಬಾರವರ ಪೂಜೆಯನ್ನು ಮತ್ತು ಆರತಿಯನ್ನು ಮೇಘಶ್ಯಾಮ ಆಲಿಯಾಸ್ ಮೇಘ ಎಂಬ ಸಾಯಿಭಕ್ತರ ಮುಖೇನ ಪ್ರಾರಂಭ ಮಾಡಿಸಿ ಸಾಯಿಬಾಬಾರವರಿಗೆ ಭಕ್ತರು ಪೂಜೆಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿದುದು.

ಸಾಥೆಯವರು ತಮ್ಮ ಮೊದಲನೇ ಹೆಂಡತಿಯು ತೀರಿಕೊಂಡಿದ್ದರಿಂದ ಮರು ಮದುವೆಯಾಗಿದ್ದರು. ಏಕೆಂದರೆ ಇವರಿಗೆ ಮೊದಲನೇ ಹೆಂಡತಿಯಿಂದ ಬರಿಯ ಹೆಣ್ಣು ಮಕ್ಕಳೇ ಹುಟ್ಟಿದ್ದರು. ಗಂಡು ಮಕ್ಕಳಿಲ್ಲದಿದ್ದರೆ ಮುಕ್ತಿಯಿಲ್ಲ ಎಂದು ಮನಗಂಡ ಸಾಥೆಯವರು ತಮ್ಮ 50ನೇ ವಯಸ್ಸಿನಲ್ಲಿ ಮರು ಮದುವೆಯಾದರು. ಆದರೆ ಗಂಡು ಮಕ್ಕಳು ಹುಟ್ಟುತ್ತಾರೋ ಇಲ್ಲವೋ ಎಂಬ ಚಿಂತೆಯಲ್ಲಿದ್ದರು. 1904 ರಲ್ಲಿ ಸಾಥೆಯವರು ಅಹ್ಮದ್ ನಗರದ ಡೆಪ್ಯುಟಿ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಮ್ಮೆ ಸಾಥೆಯವರು ಕೋಪರ್ ಗಾವ್ ನ ಮಾಮಲ್ತೆದಾರರಾದ ಶ್ರೀಯುತ ಬಾರ್ವರವರನ್ನು ಭೇಟಿ ಮಾಡಿದಾಗ ಅವರು ಸಾಯಿಬಾಬಾರವರು ಒಬ್ಬ ಮಹಾಪುರುಷರೆಂದು ಹೇಳಿ ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ಸಾಥೆಯವರು ಸಾಯಿಯವರನ್ನು ಏನು ಕೇಳಲೇ ಇಲ್ಲ. ಆದರೆ ಬಾರ್ವರವರು ಸಾಥೆಯವರ ವಿಷಯವನ್ನು ಸಾಯಿಬಾಬಾರವರ ಬಳಿ ಹೇಳಿದಾಗ ಸಾಯಿಯವರು ಸಾಥೆಯವರು ಮರು ಮದುವೆಯಾದರೆ ಅವರಿಗೆ ಗಂಡು ಮಕ್ಕಳು ಹುಟ್ಟುತ್ತಾರೆ ಎಂದು ಹೇಳಿದರು. ಆಗ ಸಾಥೆಯವರು ಮಸೀದಿಯ ಹೊರಗಡೆ ನಿಂತಿದ್ದರು. ಸಾಯಿಯವರು ಬಾರ್ವೆಯವರಿಗೆ ಹೇಳಿದ ಮಾತುಗಳು ಇವರಿಗೆ ಕೇಳಿಸಿತು. ಆದರೆ ಸಾಥೆಯವರಿಗೆ ಇನ್ನು ನಂಬಿಕೆ ಬರಲಿಲ್ಲ. ಪುಣೆಯಲ್ಲಿನ ಪ್ರಸಿದ್ದ ಜ್ಯೋತಿಷಿಯನ್ನು ಸಾಯಿಬಾಬಾರವರು ನುಡಿದಿದ್ದು ಸರಿಯಾಗಿದೆಯೇ ಎಂದು ಪರೀಕ್ಷಿಸಲು ವಿಚಾರಿಸಿದರು. ಆ ಜ್ಯೋತಿಷಿ ಇವರ ಜಾತಕವನ್ನು ಪರಿಶೀಲಿಸಿ 1905 ರಲ್ಲಿ ಇವರಿಗೆ ಮರು ಮದುವೆಯ ಯೋಗವಿದೆ ಮತ್ತು ಇವರ 50 ನೇ ವಯಸ್ಸಿನ ನಂತರ ಇವರಿಗೆ  ಗಂಡು ಮಕ್ಕಳಾಗುವ ಯೋಗವಿದೆ ಎಂದು ಭವಿಷ್ಯ ನುಡಿದರು. ಆಗ ಸಾಥೆಯವರು ಮರು ಮದುವೆಯಾಗಲು ನಿರ್ಧರಿಸಿದರು. ಗಣೇಶ ದಾಮೋದರ ಕೇಳ್ಕರ್ ರವರಿಗೆ ಮದುವೆ ವಯಸ್ಸಿನ ಮಗಳಿದ್ದಳು. ಅವಳ ವಿಷಯವಾಗಿ ಸಾಥೆಯವರಿಗೆ ಕೇಳ್ಕರ್ ರವರು ಪತ್ರ ಬರೆದು ಯಾರಾದರೂ ಗಂಡುಗಳು ಮದುವೆಗೆ ಇರುವರೇ ಎಂದು ವಿಚಾರಿಸಿದರು. ಆಗ ಸಾಥೆಯವರು ಅಹಮದ್ ನಗರದಲ್ಲಿದ್ದರು. ಸಾಥೆಯವರು ಆ ಪತ್ರಕ್ಕೆ ಉತ್ತರವಾಗಿ ತಮಗೆ ತಿಳಿದಂತೆ ಯಾವುದೇ ಗಂಡುಗಳು ಇಲ್ಲವೆಂದು, ಆದರೆ ತಾವು ಮರು ಮದುವೆಯಾಗಲು ನಿರ್ಧರಿಸಿರುವರೆಂದು, ಕೇಳ್ಕರ್ ರವರು ಒಪ್ಪಿದರೆ ತಾವೇ ಅವರ ಮಗಳನ್ನು ವಿವಾಹ ಮಾಡಿಕೊಳ್ಳುವುದಾಗಿ ಹೇಳಿದರು. ಗಣೇಶ ದಾಮೋದರ್ ಕೇಳ್ಕರ್ ರವರು ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು ಮತ್ತು ಸಾಥೆಯವರ ಸಲಹೆಯಂತೆ ತಮ್ಮ ಮಗಳನ್ನು ಸಾಯಿಬಾಬಾರವರ ಬಳಿಗೆ ಕರೆದುಕೊಂಡು ಹೋದರು. ಸಾಯಿಯವರು ಕೇಳ್ಕರ್ ರವರ ಮಗಳ ಹಣೆಗೆ ಕುಂಕುಮವನ್ನು ಹಚ್ಚಿ ಆಶೀರ್ವದಿಸಿದರು.

ಕ್ರಿ.ಶ.1906 ರಲ್ಲಿ ಸಾಥೆಯವರ ಮರು ವಿವಾಹ ನಡೆಯಿತು. ಮೊದಲು 2 ಹೆಣ್ಣು ಮಕ್ಕಳು ಹುಟ್ಟಿದರು. ಇದರಿಂದ ಚಿಂತೆಗೀಡಾದ ಕೇಳ್ಕರ್ ರವರು ಸಾಯಿಬಾಬಾರವರ ಬಳಿಗೆ ಹೋಗಿ ತಮಗೆ ಮೊಮ್ಮಗ ಯಾವಾಗ ಹುಟ್ಟುವನು ಎಂದು ಕೇಳಿದಾಗ ಸಾಯಿಬಾಬಾರವರು "ನಾನು ಅಲ್ಲಾನನ್ನು ಪ್ರಾರ್ಥಿಸುತ್ತಿದ್ದೇನೆ. ಸಧ್ಯದಲ್ಲೇ ಗಂಡು ಮಗ ಹುಟ್ಟುವನು" ಎಂದು ಭರವಸೆ ನೀಡಿದರು. ಸಾಯಿಯವರು ನುಡಿದಂತೆ 1912 ರಲ್ಲಿ ಸಾಥೆಯವರಿಗೆ ಗಂಡು ಮಗನು ಹುಟ್ಟಿದನು. ಈಗ ಸಾಥೆಯವರ ವಂಶಸ್ಥರು ಪುಣೆ ನಗರದಲ್ಲಿದ್ದಾರೆ. ಸಾಯಿಯವರ ಅನುಗ್ರಹಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ಶಿರಡಿಯಲ್ಲಿ ಒಂದು ವಾಡ ನಿರ್ಮಿಸಲು ಸಾಥೆಯವರು ನಿರ್ಧರಿಸಿದರು. ಆಗ ಸಾಯಿಯವರು ಹಳ್ಳಿಯ ಗೋಡೆಯನ್ನು ಕೆಡವಿ ಪುನಃ ಕಟ್ಟಲು ಸೂಚಿಸಿದರು. ಆಗ ಸಾಥೆಯವರು ಸಾಯಿಬಾಬಾರವರು ತಮಗೆ ಹಳ್ಳಿಯ ಸುತ್ತಲೂ ಇರುವ ಗೋಡೆಯನ್ನು ಕೆಡವಿ ಪುನಃ ಕಟ್ಟಲು ಹೇಳುತ್ತಿದ್ದಾರೆಂದು ಭಾವಿಸಿ ಅದಕ್ಕೆ ಬಹಳ ಹಣ ಖರ್ಚಾಗುವುದರಿಂದ ಅದು ತಮ್ಮ ಕೈಲಿ ಸಾಧ್ಯವಿಲ್ಲ ಎಂದು ಯೋಚಿಸಿದರು. ಆದರೆ ಸಾಯಿಬಾಬಾರವರು ಹಳ್ಳಿಯಲ್ಲಿದ್ದ ಒಂದು ಪಾಳು ಬಿದ್ದ ಜಾಗವನ್ನು ಕೆಡವಿ ಅದರ ಜಾಗದಲ್ಲಿ ವಾಡಾ ನಿರ್ಮಿಸಲು ಮತ್ತು ಅದರ ಮಧ್ಯ ಭಾಗದಲ್ಲಿ ಬಾಬಾರವರ ಗುರುವಿನ ಸಮಾಧಿ ಇದ್ದು ಅದರ ಸುತ್ತಲೂ ಒಂದು ಬೇವಿನ ಮರವನ್ನು ನೆಡಲು ಹೇಳಿದರು. ಸಾಯಿಯವರ ಆದೇಶದಂತೆ ಸಾಥೆಯವರು ಆ ಜಾಗವನ್ನು ಖರೀದಿಸಿ ವಾಡ ನಿರ್ಮಾಣ ಕಾರ್ಯ ಆರಂಭಿಸಿದರು. ಸಾಯಿಬಾಬಾರವರು "ಆ ಬೇವಿನ ಮರದ ಹತ್ತಿರ ತಮ್ಮ ಗುರುವಿನ ಸಮಾಧಿ ಇದೆ. ಅಲ್ಲಿ ಗೋಡೆ ಕಟ್ಟು. ಆ ಗೋಡೆಗೆ ಛಾವಣಿ  ಹಾಕಿ ಕಟ್ಟು. ಮತ್ತು ಅಲ್ಲಿ ನನ್ನ ಗುರುವಿನ ಸಮಾಧಿಗೆ ಪೂಜೆ ಆಗಲಿ" ಎಂದರು. ಬಾಬಾರವರು ತಮ್ಮ ಗುರುವಿನ ಹೆಸರನ್ನು ಹೇಳಿದರು. ಸಾಥೆಯವರು ಸಾಯಿಬಾಬಾರವರ ಗುರುವಿನ ಹೆಸರು ಸಾ ಅಥವಾ ಶಾ ಇಂದ ಕೊನೆಗೊಳ್ಳುತ್ತದೆ ಎಂದು ಹೇಳಿದರು. ಇನ್ನು ಕೆಲವರಿಗೆ ತಮ್ಮ ಗುರು ಕಬೀರ ಎಂದು ಹೇಳಿದರು. ಈಗಲೂ ಕೆಲವರು ಗುರುಸ್ಥಾನದಲ್ಲಿರುವ ಸಮಾಧಿಯನ್ನು ಕಬೀರರ ಗೋರಿ ಎಂದು ಕರೆಯುತ್ತಾರೆ. ಕಬೀರರು ಶಿರಡಿಯಲ್ಲಿ ವಾಸಿಸುತ್ತಿರಲಿಲ್ಲ ಮತ್ತು ಸಮಾಧಿ ಕೂಡ ಆಗಲಿಲ್ಲ. ಕಬೀರರ ಸಮಾಧಿ ಕಾಶಿಯಲ್ಲಿದೆ. ಹಿಂದೂ ಮತ್ತು ಮೊಹಮ್ಮದೀಯರು ಕಬೀರರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಾಡಲು ಜಗಳವಾಡಿದರು. ಅವರುಗಳು ಕಳೇಬರಕ್ಕೆ ಹೊದಿಸಿದ್ದ ಬಟ್ಟೆಯನ್ನು ತೆಗೆದು ನೋಡಿದಾಗ ಅದರೊಳಗೆ ಹೂವು ಮತ್ತು ಎಲೆಗಳಿದ್ದವು. ಆ ಹೂವು ಮತ್ತು ಎಲೆಗಳನ್ನು ಎಲ್ಲಾ ಕಡೆಯೂ ತೆಗೆದುಕೊಂಡು ಹೋಗಿ ಅಲ್ಲಿ ಗೋರಿ ಕಟ್ಟಿದರು. ಅದ್ದರಿಂದ ಈ ಬೇವಿನ ಮರದ ಕೆಳಗಡೆ ಕೆಲವು ಎಳೆಗಳು ಕಬೀರರ ದೇಹವೆಂದು ಹೇಳಲಾಗಿದೆ ಎಂದು ಅನೇಕರು ಇಂದಿಗೂ ನಂಬಿದ್ದಾರೆ.

ಸಾಥೆಯವರು ಸ್ವತಃ ಶಿರಡಿಗೆ ಹೋಗಿ ಅಲ್ಲಿ ಬಹಳ ವರ್ಷಗಳು ವಾಸವಿದ್ದರು. ಬಾಬಾರವರ ಆರತಿ ಮತ್ತು ಪೂಜೆಯನ್ನು 20ನೇ ಶತಮಾನದ ಪ್ರಾರಂಭದಲ್ಲಿ ಪಂಡರಾಪುರದ ಪಾಂಡುರಂಗನ ಆರತಿಯಲ್ಲಿರುವಂತೆಯೇ ರಚಿಸಲಾಯಿತು. ಇದನ್ನು ನಾನಾ ಸಾಹೇಬ್ ಚಂದೋರ್ಕರ್ ರವರು ಪರಿಶೀಲಿಸಿ ತಮ್ಮ ಅನುಮೋದನೆ ನೀಡಿದರು. ಗುರುಪೂರ್ಣಿಮೆಯು ಮೊದಲು ವಿಶೇಷವಾಗಿ ನಡೆಯುತ್ತಿರಲಿಲ್ಲ. ಎಲ್ಲಾ ಭಕ್ತರು ಒಟ್ಟಿಗೆ ಆರತಿ ಮತ್ತು ಪೂಜೆ ಮಾಡುವ ಪರಿಪಾಟ ಇರಲಿಲ್ಲ. 1910 ರಲ್ಲಿ ಗುರುಪೂರ್ಣಿಮೆಯ ದಿವಸ ಬಾಬಾರವರು ಕೇಳ್ಕರ್ ಅವರಿಗೆ "ಈ ದಿನ ಗುರು ಪೂರ್ಣಿಮೆ ಎಂದು ನಿನಗೆ ಗೊತ್ತಿಲ್ಲವೇ? ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು ನಿನ್ನ ಗುರುವಿನ ಪೂಜೆ ಮಾಡು" ಎಂದರು. ಈ ರೀತಿ ಎಲ್ಲರು ಒಟ್ಟಿಗೆ ಸಾಯಿಯವರ ಪೂಜೆ ಮತ್ತು ಆರತಿಯನ್ನು ಮಾಡುವ ಪರಿಪಾಟ ಆರಂಭವಾಯಿತು. ಸಾಥೆಯವರು ಓರ್ವ ಬ್ರಾಹ್ಮಣನಾದ ಮೇಘ ಅವರನ್ನು ಸಾಯಿಯವರ ಪೂಜೆ ಮತ್ತು ಆರತಿ ಮಾಡಲು ಶಿರಡಿಗೆ ಕಳುಹಿಸಿದರು. ಮೇಘ ಬ್ರಾಹ್ಮಣನಾದರೂ ಅವರಿಗೆ ಗಾಯತ್ರಿ ಮಂತ್ರವಾಗಲಿ ಅಥವಾ ಇನ್ನಿತರ ಯಾವುದೇ ಪೂಜೆಯಾಗಲಿ ಬರುತ್ತಿರಲಿಲ್ಲ. ಆಲ್ಲದೇ ಸಾಯಿಯವರು ಮುಸ್ಲಿಂ ಎಂದು ಅವರ ಪೂಜೆ ಮಾಡಲು ಮೇಘ ಮೊದಲಿಗೆ ಒಪ್ಪಲಿಲ್ಲ. ಆದರೆ ಮೇಘ ಯಾವಾಗಲೂ ಶಿವಪಂಚಾಕ್ಷರಿ ಮಂತ್ರವಾದ "ಓಂ ನಮಃ ಶಿವಾಯ" ವನ್ನು ಜಪಿಸುತ್ತಿದ್ದರು. ಸಾಥೆಯವರು ಅವರಿಗೆ ಗಾಯತ್ರಿ ಮಂತ್ರವನ್ನು, ಸಂಧ್ಯಾವಂದನೆಯನ್ನು ಹೇಳಿಕೊಟ್ಟು ಶಿವಪೂಜೆ ಮಾಡಿಕೊಂಡು ಇರುವಂತೆ ಹೇಳಿ ಶಿರಡಿಗೆ ಬಲವಂತವಾಗಿ ಕಳುಹಿಸಿದರು. ಸಾಥೆಯವರ ಒತ್ತಾಯಕ್ಕೆ ಮಣಿದು ಮೇಘರವರು ಶಿರಡಿಗೆ ಹೊರಟರು. ಮಸೀದಿಗೆ ಕಾಲಿಟ್ಟ ತಕ್ಷಣ ಬಾಬಾರವರು ಕೋಪಗೊಂಡು "ಈ ರಾಸ್ಕಲ್ ನನ್ನು ಇಲ್ಲಿಂದ ಓಡಿಸಿ" ಎಂದು ಹೇಳಿ ಮಸೀದಿಯ ಒಳಗೆ ಬರಲು ಬಿಡಲಿಲ್ಲ. ಮೇಘರವರು ತ್ರಯಂಬಕಕ್ಕೆ ಹೋಗಿ ಒಂದೂವರೆ ವರ್ಷಗಳ ಕಾಲ ಶಿವನ ಪೂಜೆಯನ್ನು ಮಾಡಿ ನಂತರ ಮರಳಿ ಶಿರಡಿಗೆ ಬಂದರು. ಆಗ ಸಾಯಿಯವರು ಅವರನ್ನು ಮಸೀದಿಯ ಒಳಗಡೆ ಬರಲು ಅನುಮತಿ ನೀಡಿದರು. ಅಷ್ಟೇ ಆಲ್ಲದೇ ಮಸೀದಿಯಲ್ಲಿ ತಮ್ಮ ಪೂಜೆಯನ್ನು ಮಾಡಲು ಅನುಮತಿ ಕೂಡ ನೀಡಿದರು. ಸಾಯಿಯವರು ಸಾಕ್ಷಾತ್ ಶಿವನ ಅವತಾರ ಎಂದು ಮೇಘರವರು ಚೆನ್ನಾಗಿ ಮನಗಂಡರು. ಪ್ರತಿನಿತ್ಯ ಶಿರಡಿಯಿಂದ 5 ಮೈಲು ದೂರದಲ್ಲಿದ್ದ ಗೋದಾವರಿ ನದಿಯಿಂದ ನೀರನ್ನು ಹೊತ್ತು ತಂದು ಸಾಯಿಯವರ ಮೇಲೆ ಅದನ್ನು ಹಾಕಿ ಅಭಿಷೇಕ ಮಾಡಿ ಪೂಜೆ ನೆರವೇರಿಸುತ್ತಿದ್ದರು.

ಸಾಥೆಯವರು ಬಾಬಾರವರಿಂದ ಲೌಕಿಕ ಅನುಕೂಲಗಳನ್ನು ಪಡೆದುಕೊಂಡರು. ಸಾಥೆಯವರು ನಿವೃತ್ತಿ ಹೊಂದಿದಾಗ ಪಿಂಚಣಿಗೆ ಅರ್ಜಿ ಹಾಕಿದಾಗ ಅವರಿಗೆ ಬರಬೇಕಾಗಿದ್ದಕ್ಕಿಂತ 50 ರುಪಾಯಿ ಕಡಿಮೆ ಮಂಜೂರಾಯಿತು. ಆಗ ಸಾಥೆಯವರು ಕಡಿಮೆ ಮಾಡಿದ್ದಕ್ಕೆ ವಿರೋಧಿಸಿ ಅರ್ಜಿಯನ್ನು ಹಾಕಿದರು. ಸಾಯಿಬಾಬಾರವರು ಧುಮಾಳ್ ರನ್ನು 50 ರುಪಾಯಿ ದಕ್ಷಿಣೆ ಕೇಳಿದರು. ಅವರು ತಮ್ಮ ಬಳಿ ಇಲ್ಲ ಎಂದರು. ಆಗ ಸಾಯಿಯವರು ಸಾಥೆಯವರ ಬಳಿ ಹೋಗಿ ತೆಗೆದುಕೊಂಡು ಬಾ ಎಂದು ಕಳುಹಿಸಿದರು. ಧುಮಾಳ್ ರವರು ಸಾಥೆಯವರ ಬಳಿ ಬಂದು 50 ರುಪಾಯಿಗಳನ್ನು ಕೇಳಿದರು. ಆಗ ಸಾಥೆಯವರಿಗೆ ಅತೀವ ಸಂತೋಷವಾಯಿತು. ಏಕೆಂದರೆ ತಾವು ಪಿಂಚಣಿ ಹಣ 50 ರುಪಾಯಿ ಏರಿಕೆಗೆ ಅರ್ಜಿ ಸರ್ಕಾರಕ್ಕೆ ಸಲಿಸಿದ್ದುದು ಜಯಪ್ರದವಾಗುವಂತೆ ಅನಿಸಿತು. ಕೂಡಲೇ ಸಾಥೆಯವರು 50 ರುಪಾಯಿಗಳನ್ನು ಧುಮಾಳ್ ರಿಗೆ ನೀಡಿದರು. ಅದೇ ದಿನ ಅವರ ಅರ್ಜಿ ಸ್ವೀಕಾರವಾಗಿ 50 ರುಪಾಯಿಗಳ ಹೆಚ್ಚಿನ ಪಿಂಚಣಿ ಮಂಜೂರಾಯಿತು.

ಸಾಥೆಯವರು ಬಾಬಾರವರ ಬಳಿ ಧಾರ್ಮಿಕ ಉನ್ನತಿಗಾಗಿ ಎಂದು ಹೋಗಲಿಲ್ಲ. ಆದರೆ ಸಾಯಿಯವರೇ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದ್ದರು. ಉದಾಹರಣೆಗಾಗಿ ಹೇಳುವುದಾದರೆ ಒಂದು ಸಾರಿ ಅವರು ಶಿರಡಿಯಲ್ಲಿದ್ದಾಗ ಅವರ ಯೋಚನೆಗಳು ಸಡಿಲವಾಗಿ ಅವರು ಒಮ್ಮೆ ಅನೈತಿಕ ಸಂಬಂಧವುಳ್ಳ ಓರ್ವ ಸ್ತ್ರೀ ಮನೆಗೆ ಹೋಗಲು ಮನಸ್ಸು ಮಾಡಿದರು. ಅಲ್ಲಿಗೆ ಹೋಗುವ ಮೊದಲು ಅವರು ಬಾಬಾರವರಿಗೆ ನಮಸ್ಕರಿಸಿದರು. ಕೂಡಲೇ ಬಾಬಾರವರು "ನೀನು ಆ ಸ್ತ್ರೀಯ ಮನೆಗೆ ಹೋಗಿದ್ದೆಯಾ" ಎಂದು ಕೇಳಿದರು. ಆಗ ಸಾಥೆಯವರು ಏನೋ ಒಂದು ರೀತಿಯ ಹಾರಿಕೆಯ ಉತ್ತರವನ್ನು ಕೊಟ್ಟರು. ಬಾಬಾರವರು ಸಾಥೆಯವರು ತಮ್ಮ ಹೇಳಿಕೆಯನ್ನು ಸಾಥೆ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೆಂದು ತಿಳಿದು ಸುಮ್ಮನಾದರು. ಸಂಜೆ ಸಾಥೆಯವರು ಆ ಸ್ತ್ರೀ ಮನೆಗೆ ಹೋದರು. ಆಗ ಬಾಗಿಲ ಹಿಂದೆ ನಿಂತು ಅವಳ ಬಳಿ ಮಾತನಾಡುತ್ತಿದ್ದರು. ಅದು ಅವರನ್ನು ಪತನಕ್ಕೆ ಕೊಂಡೊಯ್ಯುವುದಾಗಿತ್ತು. ಕೂಡಲೇ ಆ ಬಾಗಿಲು ತೆರೆಯಿತು. ಬಾಗಿಲ ಹೊಸ್ತಿಲಿನಲ್ಲಿ ಬಾಬಾರವರು ನಿಂತಿದ್ದರು. ಕೈಬೀಸಿ ಸಾಥೆಯವರನ್ನು ಉದ್ದೇಶಿಸಿ "ಏನು? ಎಷ್ಟು ದೂರದಿಂದ ನಿನ್ನ ಗುರುವಿನ ಬಳಿ ಬಂದಿರುವೆ? ಈಗ ಈ ನರಕಕ್ಕೆ ಬೀಳುತ್ತಿರುವೆಯಾ?" ಎಂದು ಗದರಿಸಿದರು. ಸಾಥೆಯವರು ತುಂಬಾ ಪಶ್ಚಾತ್ತಾಪ ಪಟ್ಟರು. ಪುನಃ ಅವಳ ಮನೆಯ ಬಳಿಗೆ ಸುಳಿಯಲೇ ಇಲ್ಲ. ಈ ರೀತಿ ಬಾಬಾರವರು ಸಾಥೆಯವರನ್ನು ಕಾಪಾಡಿದರು.

ಇನ್ನೊಂದು ಸಂದರ್ಭದಲ್ಲಿ ಇದೇ ರೀತಿ ಬಾಬಾರವರು ಸಹಾಯ ಮಾಡಿದರು. ಸಾಥೆಯವರು ಶಿರಡಿಯಲ್ಲಿ ಒಂದು ನಿವೇಶನವನ್ನು ಖರೀದಿಸಿ ಅದನ್ನು ನೋಡಲು ಹೋಗಬೇಕೆಂದು ಕೊಂಡಿದ್ದರು. ಅವರು ಒಂದು ಗಾಡಿಗೆ ಹೇಳಿದರು. ಅವರ ಪತ್ನಿ ಕೂಡ ಬರುವೆನೆಂದರು. ಆದರೆ ದುರದೃಷ್ಟವಶಾತ್ ಅವರ ಸಹೋದರ ಬಾಪು ಅಲ್ಲಿ ವಾಸಿಸಿದ್ದು ಆಗ ತಾನೇ ಕಾಲವಾಗಿದ್ದ. ದಾದಾ ಕೇಳ್ಕರ್ ರವರು ಬಾಪುವಿನ ವಿಧವೆ ಇದನ್ನು ತಿಳಿದರೆ ಅದರಿಂದ ಅವಳು ಹಕ್ಕು ಸಾಧಿಸಬಹುದು ಎಂದು ಅವರು ತಮ್ಮ ಮಗಳಿಗೆ (ಸಾಥೆಯವರ ಪತ್ನಿ) ನಿವೇಶನ ನೋಡಲು ಹೋಗಬೇಡ ಎಂದು ಹೇಳಿದರು. ಅದರಂತೆ ಸಾಥೆಯವರ ಪತ್ನಿ ಅವರ ಜೊತೆ ಹೊರಡಲು ಒಪ್ಪಲಿಲ್ಲ. ಆಗ ಸಾಥೆಯವರಿಗೆ ಕೋಪ ಬಂದು ಅವರು ಗಾಡಿಯವನಿಂದ ಕೋಲನ್ನು ತೆಗೆದುಕೊಂಡು ಬಂದು ತಮ್ಮ ಹೆಂಡತಿಗೆ ಹೊಡೆಯುವುದರಲ್ಲಿದ್ದರು. ಆ ಕ್ಷಣದಲ್ಲಿ ಮೇಘ ಅಲ್ಲಿಗೆ ಬಂದು ಬಾಬಾರವರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ಸಾಥೆಯವರು ತಮ್ಮ ಕೋಲನ್ನು ಕೆಳಗಿಳಿಸಿದರು ಮತ್ತು ಬಾಬಾರವರ ಬಳಿ ಓಡಿ ಬಂದರು. ಆಗ ಬಾಬಾರವರು "ಏನಾಯಿಗಿದೆ ನಿನ್ನ ನಿವೇಶನಕ್ಕೆ. ಅದು ಅಲ್ಲಿಯೇ ಇದೆ. ನೀನು ಅದನ್ನೇಕೆ ನೋಡಲು ಹೋಗಬೇಕು" ಎಂದು ಕೇಳಿದರು. ಹೀಗೆ ಬಾಬಾರವರು ತಮ್ಮ ಸಹಾಯ ಹಸ್ತವನ್ನು ಯಾವಾಗಲೂ ಚಾಚುತ್ತಿದ್ದರು.

ಬಾಬಾರವರ ದಯೆ ಸಾಥೆಯವರ ಕುಟುಂಬದ ವ್ಯವಹಾರ ಮತ್ತು ಹಣದ ವಿಷಯದಲ್ಲಿ ಇದ್ದಿತು. ಸಾಥೆಯವರು ನಿವೃತ್ತರಾದಾಗ ಅವರ ಆದಾಯ ಕಡಿಮೆಯಾಗಿ ಅವರು ತಮ್ಮ ಪತ್ನಿಯ ಆಭರಣಗಳನ್ನು ಮಾರಬೇಕಾಯಿತು. ಆಗ ಬಾಬಾರವರು ಕೇಳ್ಕರ್ ರವರಿಗೆ "ಏಕೆ ಈ ದಡ್ಡ ನನ್ನ ಮಗಳ ಆಭರಣ ಮಾರಿದ" ಎಂದು ಚೆನ್ನಾಗಿ ಬಯ್ದರು.

ಸಾಥೆಯವರು ಬಾಬಾರವರು ತಮ್ಮನ್ನು ನಾನಾವಲ್ಲಿಯಿಂದ ರಕ್ಷಿಸದಿದ್ದರೂ ಬಾಬಾರವರನ್ನು ನಂಬುತ್ತಿದ್ದರು. "ಸಾಯಿ ಕರಂಡಕ" ಎಂಬ ಇಂಗ್ಲೀಷ್ ಪುಸ್ತಕದಲ್ಲಿ ಸಾಥೆಯವರು ಸಾಯಿಬಾಬಾರವರ ಬಗ್ಗೆ ಬರೆದ 10-12 ಕಥೆಗಳು ಪ್ರಕಟವಾಗಿವೆ. ಇದನ್ನು ಹಲವರು ಚಾರಿತ್ರಿಕವಾದುದು ಎಂದು ತಪ್ಪು ತಿಳಿದಿದ್ದಾರೆ. ಆದರೆ ಸಾಥೆಯವರು 1936 ರಲ್ಲಿ ಇದನ್ನು ಕಾದಂಬರಿ ಎಂದು ಹೇಳಿದ್ದಾರೆ. ಸಾಥೆಯವರು "ಸಾಯಿ ಪ್ರಭ" ಎಂಬ ನಿಯತಕಾಲಿಕವನ್ನು ನಡೆಸುತ್ತಿದ್ದರು ಮತ್ತು ಅದನ್ನು ನಾರಾಯಣ ಸುಂದರ ರಾವ್ ಆಲಿಯಾಸ್ ರಾಮಗೀರ್ ಅವರು ನೋಡಿಕೊಳ್ಳುತ್ತಿದ್ದರು. 

No comments:

Post a Comment