Wednesday, November 2, 2011

ಸಾಯಿ ಮಹಾಭಕ್ತ - ಶ್ರೀ ಅನಂದನಾಥ  ಮಹಾರಾಜ್  - ಕೃಪೆ: ಸಾಯಿಅಮೃತಧಾರಾ.ಕಾಂ 

ಸಂತ ಶ್ರೀ ಅನಂದನಾಥ  ಮಹಾರಾಜ್ ರವರು ಅಕ್ಕಲಕೋಟೆ ಮಹಾರಾಜರೆಂದು ಪ್ರಸಿದ್ಧರಾದ ಶ್ರೇಷ್ಠ ಸಂತ ಮತ್ತು ದತ್ತಾವತಾರಿ ಶ್ರೀ. ಸ್ವಾಮಿ ಸಮರ್ಥರವರ ಪ್ರಮುಖ ಶಿಷ್ಯರಲ್ಲಿ ಒಬ್ಬರು.

ಇವರ ಅಶ್ರಮವು ಕೋಪರ್ ಗಾವ್ ಮತ್ತು ಮನಮಾಡ ರೈಲು ಮಾರ್ಗದಲ್ಲಿ ಸಿಗುವ ಯೇವಲಾ ಗ್ರಾಮದಿಂದ ಸುಮಾರು 6  ಕಿಲೋಮೀಟರ್ ದೂರದಲ್ಲಿರುವ ಸವರಗಾವ್ ನಲ್ಲಿರುತ್ತದೆ. ಶ್ರೀ.ಅನಂದನಾಥ ಮಹಾರಾಜ್ ರವರು ಈ ಆಶ್ರಮದಲ್ಲಿ ವಾಸಿಸುತ್ತಿದ್ದರು. ಇನ್ನಿತರ ಸಾಧು ಸಂತರುಗಳಂತೆ ಇವರು ಕೂಡ ಶಿರಡಿಗೆ ಸಾಯಿಬಾಬಾರವರನ್ನು ಭೇಟಿ ಮಾಡುವ ಸಲುವಾಗಿ ಆಗಾಗ್ಗೆ ಬರುತ್ತಿದ್ದರು. ಇವರು ಸಾಯಿಬಾಬಾರವರನ್ನು ಕುರಿತು "ಇವರು ಮುಂದಿನ ದಿನಗಳಲ್ಲಿ ಬಹಳ ಉತ್ತಮವಾದ ಕಾರ್ಯಗಳನ್ನು ಮಾಡುತ್ತಾರೆ" ಎಂದು ಭವಿಷ್ಯ ನುಡಿದಿದ್ದರು.

ಒಮ್ಮೆ ಮಾಧವ ರಾವ್ ದೇಶಪಾಂಡೆ ಆಲಿಯಾಸ್ ಶ್ಯಾಮ, ನಂದರಾಮ್ ಮಾರವಾಡಿ, ಭಾಗಚಂದ್ ಮಾರವಾಡಿ, ದಗ್ದು ಬಾವು ಗಾಯಕೆ ಮತ್ತಿತರ ಶಿರಡಿಯ ಗ್ರಾಮಸ್ಥರು ಶ್ರೀ.ಅನಂದನಾಥ ಮಹಾರಾಜ್  ರವರನ್ನು ಕಾಣಲು ಅವರ ಆಶ್ರಮಕ್ಕೆ ಹೋಗಿದ್ದರು. ದರ್ಶನ ಮುಗಿದ ನಂತರ ಎಲ್ಲರೂ ಗಾಡಿಗಳಲ್ಲಿ ಕುಳಿತು ಇನ್ನೇನು ಹೊರಡಬೇಕೆಂದುಕೊಳ್ಳುತ್ತಿರುವಾಗ ಅನಂದನಾಥ ಮಹಾರಾಜ್ ರು ಓಡಿಬಂದು ತಾವೂ ಗಾಡಿಯಲ್ಲಿ ಕುಳಿತುಕೊಂಡು "ನಾನು ಶಿರಡಿಗೆ ನಿಮ್ಮೊಂದಿಗೆ ಬರುತ್ತೇನೆ" ಎಂದು ಹೇಳಿ ಅವರೊಂದಿಗೆ ಶಿರಡಿಗೆ ಬಂದು ಸಾಯಿಬಾಬಾರವರನ್ನು ಭೇಟಿ ಮಾಡಿದರು.

ಇವರನ್ನು ಹತ್ತಿರದಿಂದ ಕಂಡ ಮಾಧವ ರಾವ್ ದೇಶಪಾಂಡೆ ಆಲಿಯಾಸ್ ಶ್ಯಾಮಾರವರು ಹೀಗೆ ಹೇಳುತ್ತಾರೆ: "ನಾವುಗಳು ಇವರನ್ನು ಮೊದಲ ಬಾರಿ ಭೇಟಿ ಮಾಡಲು ಯೇವಲಾ ಗ್ರಾಮಕ್ಕೆ ಹೋದಾಗ ಇವರಿಗೆ ಸುಮಾರು 95  ವರ್ಷಗಳಾಗಿತ್ತು.  ಇವರು ಕೇವಲ ಲುಂಗಿಯೊಂದನ್ನು ತಮ್ಮ ನಡುವಿಗೆ ಕಟ್ಟಿಕೊಳ್ಳುತ್ತಿದ್ದರು. ಇವರು ಅತ್ಯುತ್ತಮವಾದ ದೈವಿಕ ದೃಷ್ಟಿಯನ್ನು ಹೊಂದಿದವರಾಗಿದ್ದರು. ಇವರನ್ನು ಭೇಟಿ ಮಾಡಿ ಶಿರಡಿಗೆ ವಾಪಸಾಗುವ ಸಮಯದಲ್ಲಿ ಇವರೂ ಕೂಡ ನಮ್ಮೊಂದಿಗೆ ಶಿರಡಿಗೆ ಬಂದು ಸಾಯಿಬಾಬಾರವರನ್ನು ಭೇಟಿ ಮಾಡಿದರು. ಶಿರಡಿಯಲ್ಲಿ ಇವರ ಮತ್ತು ಸಾಯಿಬಾಬಾರವರು ಒಬ್ಬರನ್ನೊಬ್ಬರು ದೃಷ್ಟಿಸಿ ನೋಡಿದರು. ಆದರೆ ಇಬ್ಬರೂ ಒಂದು ಮಾತನ್ನೂ  ಆಡಲೇ ಇಲ್ಲ.  ಸ್ವಲ್ಪ ಸಮಯದ ನಂತರ ಅನಂದನಾಥ ಮಹಾರಾಜ್ ರವರು ಶಿರಡಿಯ ಗ್ರಾಮಸ್ಥರಿಗೆ 'ಇವರು ಒಂದು ವಜ್ರವೇ ಸರಿ. ಈಗ ಇವರು ಕಸದ ತೊಟ್ಟಿಯಲ್ಲಿ ಬಿದ್ದಿದ್ದರೂ ಕೂಡ ಇವರು ಬೀಸುವ ಕಲ್ಲೇನು ಅಲ್ಲ.'  ನನ್ನ ಈ ಮಾತುಗಳನ್ನು ನೀವುಗಳು ನೆನಪಿನಲ್ಲಿಡಿ. ಮುಂದೆ ಒಂದು ದಿನ ನೀವುಗಳು ಇದನ್ನು ಮನಗಾಣುವಿರಿ" ಎಂದು ಹೇಳಿ ಯೇವಲಾ ಗ್ರಾಮದ ಹತ್ತಿರದಲ್ಲಿದ್ದ ತಮ್ಮ ಆಶ್ರಮಕ್ಕೆ ಹಿಂತಿರುಗಿದರು.

ಶ್ರೀ.ಅನಂದನಾಥ ಮಹಾರಾಜ್ ರವರ ಜೀವನವು ಅತ್ಯಂತ ವಿಚಿತ್ರವಾಗಿತ್ತು. ಅಕ್ಕಲಕೋಟೆ ಮಹಾರಾಜ್ ರ ಭಕ್ತರಾದ ಶ್ರೀ.ಗಣೇಶ್ ಬಲ್ಲಾಳ ಮುಳೇಕರ್ ರವರು ಬಹಳ ವರ್ಷಗಳ ಕಾಲ ಸ್ವಾಮಿ ಸಮರ್ಥರ ಜೊತೆಯಲ್ಲಿದ್ದರು. ಅವರು "ಶ್ರೀ ಅಕ್ಕಲಕೋಟೆ ನಿವಾಸಿ ಶ್ರೀ ಸ್ವಾಮಿ ಮಹಾರಾಜ್ ಯಾಂಚೆ ಚರಿತ್ರ" ಎಂಬ ಪುಸ್ತಕವನ್ನು ರಚಿಸಿದ್ದಾರೆ. ಸ್ವಾಮಿ ಸಮರ್ಥರ ಬಗ್ಗೆ ಬರೆದಿರುವ ಈ ಚರಿತ್ರೆಯಲ್ಲಿ ಶ್ರೀ.ಆನಂದನಾಥ  ಮಹಾರಾಜ್ ರವರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಅದು ಈ ಕೆಳಕಂಡಂತೆ ಇದೆ:

ಶ್ರೀ.ಅನಂದನಾಥ ಮಹಾರಾಜ್ ರವರು ಮೊದಲಿಗೆ ಕೊಂಕಣ ರಾಜ್ಯದ ವಳವಾಲ್ ನ ನಿವಾಸಿಯಾಗಿದ್ದು ಕೂಡಲ್ ದೇಶಿಕರ್ ಬ್ರಾಹ್ಮಣ ಪಂಗಡಕ್ಕೆ ಸೇರಿದವರಾಗಿದ್ದರು. ಇವರ ಮನೆತನದ ಹೆಸರು "ವಳವಾಲ್ಕರ್" ಆಗಿತ್ತು. ಇವರು ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದು ಔಷಧೀಯ ಗುಣಗಳುಳ್ಳ "ಹರ್ದಾ" ಎಂಬ  ಬೇರಿನ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಮ್ಮೆ ಮುಂಬೈ ಗೆ ವ್ಯಾಪಾರದ ಸಲುವಾಗಿ ಹೋದಾಗ ಇವರು ಶ್ರೀ.ಬೆಂಡೆಯವರ ಮಳಿಗೆಗೆ ಬಂದರು. ಅಲ್ಲಿ ಇವರಿಗೆ ಅಕ್ಕಲಕೋಟೆಯಲ್ಲಿ ದತ್ತಾತ್ರೇಯ ಅವತಾರಿಗಳಾದ ಶ್ರೀ.ಸ್ವಾಮಿ ಸಮರ್ಥರು ಇರುವರೆಂದು ತಿಳಿದುಬಂದಿತು. ಅಲ್ಲಿಂದ ಕೂಡಲೇ ಇವರು ಅಕ್ಕಲಕೋಟೆಗೆ ಹೊರಟರು. ಅಕ್ಕಲಕೋಟೆ ತಲುಪಿ ಅಲ್ಲಿ ಒಂದು ಪವಿತ್ರ ಮರದ ಕೆಳಗಡೆ ಇದ್ದ ಕೊಳದಲ್ಲಿ ಕಾಲು ತೊಳೆದುಕೊಳ್ಳುವ ಸಲುವಾಗಿ ಇಳಿದಾಗ, ಇವರ ತಲೆಯ ಮೇಲೆ ಇದ್ದಕ್ಕಿದ್ದಂತೆ ಆ ಪವಿತ್ರ ಮರದ ರೆಂಬೆಯೊಂದು ಮುರಿದು ಬಿದ್ದಿತು. ಇವರು ಕತ್ತೆತ್ತಿ ನೋಡಿದಾಗ, ಮರದ ಮೇಲೆ ಕುಳಿತಿದ್ದ ಶ್ರೀ.ಸ್ವಾಮಿ ಸಮರ್ಥರ ದಿವ್ಯ ದರ್ಶನವಾಯಿತು ಮತ್ತು ಆ ಕ್ಷಣವೇ ಇವರು ಶ್ರೀ.ಸ್ವಾಮಿ ಸಮರ್ಥರಿಂದ ಆಶೀರ್ವದಿಸಲ್ಪಟ್ಟರು.

ಆ ಘಳಿಗೆಯಿಂದಲೇ ಶ್ರೀ.ಆನಂದನಾಥ ಮಹಾರಾಜ್ ರವರು ಲೌಕಿಕ ಪ್ರಪಂಚದ ಎಲ್ಲಾ ಬೇಕು ಬೇಡಗಳನ್ನು ತೊರೆದು ಬೈರಾಗಿಯಾದರು. ಇದಾದ ನಂತರ ಇವರು ಸುಮಾರು ಆರು ವರ್ಷಗಳ ಕಾಲ ಅಕ್ಕಲಕೋಟೆಯಲ್ಲಿ ನೆಲೆಸಿದ್ದರು. ಆಗ ಇವರಿಗೆ ಸ್ಫೂರ್ತಿ ಬಂದು ಸಂಪೂರ್ಣ ಭಕ್ತಿ ರಸ ತುಂಬಿರುವಂತಹ ಸುಂದರ ಭಜನೆಯೊಂದನ್ನು ರಚಿಸಿದರು. ಈ ಭಜನೆಯನ್ನು ಅವರು ಯಾವಾಗಲೂ ಶ್ರೀ.ಸ್ವಾಮಿ ಸಮರ್ಥರ ಮುಂದೆ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಕ್ಕಲಕೋಟೆಯಲ್ಲಿ ಇದ್ದಾಗ ಇವರು ಸದಾಕಾಲ ಮೈಮೇಲೆ ಬಟ್ಟೆಯನ್ನೇ ತೊಟ್ಟುಕೊಳ್ಳದೇ ದಿಗಂಬರರಂತೆ ಓಡಾಡುತ್ತಿದ್ದರು. ಕಾಲಾನಂತರದಲ್ಲಿ ಸ್ವಾಮಿ ಸಮರ್ಥರು ಇವರನ್ನು ಅಕ್ಕಲಕೋಟೆ ಬಿಟ್ಟು ಹೋಗುವಂತೆ ಆಜ್ಞಾಪಿಸಿದರು. ಆಗ ಅನಂದನಾಥ ಮಹಾರಾಜ್ ರು ಶ್ರೀ.ಸ್ವಾಮಿ ಸಮರ್ಥರನ್ನು ತಮಗೆ ಪ್ರಸಾದವನ್ನು ನೀಡುವಂತೆ ಕೇಳಿಕೊಂಡರು. ಅನಂದನಾಥ ಮಹಾರಾಜ್ ರ ಈ ಕೋರಿಕೆಯನ್ನು ಕೇಳಿ  ಪರಿಪೂರ್ಣ ಪರಬ್ರಹ್ಮ ಸಾಕ್ಷಾತ್ ಪರಮಾತ್ಮ ಸ್ವರೂಪಿಯಾದ ಶ್ರೀ.ಅಕ್ಕಲಕೋಟೆ ಮಹಾರಾಜ್ ರಿಗೆ ಅತೀವ ಸಂತೋಷವಾಯಿತು. ಶ್ರೀ.ಸ್ವಾಮಿ ಸಮರ್ಥರು ತಮ್ಮ ಬಾಯಿಯಿಂದ ಆತ್ಮ ಪಾದುಕೆಗಳನ್ನು ತೆಗೆದು ಅದನ್ನು ಅನಂದನಾಥ ಮಹಾರಾಜ್ ರ ಕೈಯಲ್ಲಿ ಇಟ್ಟರು. ಈ ಪವಿತ್ರ ಪಾದುಕೆಗಳು ಕೇವಲ ಅರ್ಧ ಇಂಚು ದೊಡ್ಡದಾಗಿದ್ದು ಅದರಲ್ಲಿ ಶ್ರೀ.ಸ್ವಾಮಿ ಸಮರ್ಥರ ದರ್ಶನವನ್ನು ಮಾಡಬಹುದಾಗಿದೆ. ಪಾದುಕೆಗಳು ಚಿಕ್ಕದಾಗಿದ್ದರೂ ಕೂಡ ಅದರಲ್ಲಿ ಸ್ವಾಮಿ ಸಮರ್ಥರ ಪಾದಗಳ ಪ್ರತಿಯೊಂದು ರೇಖೆಗಳು ಅತ್ಯಂತ ಸ್ಪಷ್ಟವಾಗಿ ಮುದ್ರಿತವಾಗಿವೆ. ಈ ಪಾದುಕೆಗಳು ಯಾವ ವಸ್ತುವಿನಿಂದ ಮಾಡಿದ್ದು ಎಂದು ಈಗಲೂ ಯಾರಿಗೂ ತಿಳಿದುಬಂದಿರುವುದಿಲ್ಲ. ಈ ಪವಿತ್ರ ಪಾದುಕೆಗಳನ್ನು ದವಾಡೆ ಗ್ರಾಮದ ಆಶ್ರಮದಲ್ಲಿ ಸ್ಥಾಪಿಸಲಾಗಿದ್ದು ಸುತ್ತಮುತ್ತ ಇರುವ ಹಳ್ಳಿಗಳಿಂದ ಸಾವಿರಾರು ಜನ ಭಕ್ತರು ಬಂದು ಇದರ ದರ್ಶನ ಮಾಡಿಕೊಂಡು ಹೋಗುತ್ತಾರೆ.

ಶ್ರೀ.ಅನಂದನಾಥ ಮಹಾರಾಜರು 3 ಆಶ್ರಮಗಳನ್ನೂ ಸ್ಥಾಪಿಸಿರುತ್ತಾರೆ. ಮೊದಲನೇ ಆಶ್ರಮವು ಯೇವಲಾ ಗ್ರಾಮದಲ್ಲಿರುತ್ತದೆ. ಎರಡನೇ ಆಶ್ರಮವನ್ನು ಸಾವಂತವಾಡಿ ರಾಜ್ಯದ ಹೊದವಾಡೆ ಗ್ರಾಮದಲ್ಲಿ ಸ್ಥಾಪಿಸಿರುತ್ತಾರೆ. 3ನೇ ಆಶ್ರಮವನ್ನು ವೆಂಗುರ್ಲೆ ಬಳಿಯ ದವಾಡೆ ಗ್ರಾಮದಲ್ಲಿ ಸ್ಥಾಪಿಸಿರುತ್ತಾರೆ. ಈ ಸ್ಥಳವು ವೆಂಗುರ್ಲೆ ಗ್ರಾಮದ ಹೊರಭಾಗದಲ್ಲಿದ್ದು ಆಶ್ರಮದ ಸುತ್ತಮುತ್ತಲಿನ ಪ್ರದೇಶವು ಸುಂದರವಾದ ಗಿಡ ಮರಗಳಿಂದ ಕೊಡಿಕೊಂಡು ನೋಡಲು ಅತ್ಯಂತ ರಮಣೀಯವಾಗಿರುತ್ತದೆ. ಅಕ್ಕಲಕೋಟೆ ಮಹಾರಾಜರ ಅನೇಕ ಭಕ್ತರು ಈ ಸ್ಥಳಕ್ಕೆ ಬಂದು ಆತ್ಮ ಪಾದುಕೆಗಳ ದರ್ಶನ ಮಾಡಿಕೊಂಡು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಎಲ್ಲಾ 3 ಆಶ್ರಮಗಳನ್ನೂ ಬಹಳ ಉತ್ತಮ ರೀತಿಯಿಂದ ನಡೆಸಲಾಗುತ್ತಿದೆ. 

ಶ್ರೀ.ಅನಂದನಾಥ ಮಹಾರಾಜರು ಶ್ರೀ.ಸ್ವಾಮಿ ಸಮರ್ಥರ ಮೇಲೆ ಅನೇಕ ಭೂಪಾಲಿಗಳು, ಭಜನೆಗಳು, ಶ್ಲೋಕಗಳು, ಆರತಿಗಳು ಮತ್ತು ಇನ್ನು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ ಅನೇಕ ಕೃತಿಗಳು ಇನ್ನೂ ಮುದ್ರಣ ಕಾಣದೇ ಹಾಗೆ ಉಳಿದುಕೊಂಡಿರುವುದು ವಿಷಾದನೀಯ. ಶ್ರೀ.ಅನಂದನಾಥರ ಆಶ್ರಮಗಳಲ್ಲಿ ಪ್ರತಿದಿನ ಬೆಳಗಿನ ಜಾವ ಇವರು ರಚಿಸಿರುವ ಭೂಪಾಲಿಗಳು, ಭಜನೆಗಳು, ಶ್ಲೋಕಗಳು ಮತ್ತು ಆರತಿಯನ್ನು ಹಾಡಲಾಗುತ್ತಿದೆ. ಅದೇ ರೀತಿಯಲ್ಲಿ, ರಾತ್ರಿಯ ವೇಳೆ ಶ್ರೀ ಅನಂದನಾಥ ಮಹಾರಾಜರು ರಚಿಸಿರುವ ಪೂಜಾ ವಿಧಾನಗಳು, ಭಜನೆಗಳು ಮತ್ತು  ಶೇಜಾರತಿಯನ್ನು ಹಾಡಲಾಗುತ್ತಿದೆ. ಪ್ರತಿ ವರ್ಷದ ದತ್ತ ಜಯಂತಿ, ಸ್ವಾಮಿ ಸಮರ್ಥರ ಜಯಂತಿ ಮತ್ತು ವರ್ಧಂತಿ, ಗುರು ಪ್ರತಿಪತ್, ಗುರು ದ್ವಾದಶಿ ಮತ್ತಿತರ ವಿಶೇಷ ಉತ್ಸವಗಳನ್ನು ಆಶ್ರಮದಲ್ಲಿ ತಪ್ಪದೆ ಆಚರಿಸಲಾಗುತ್ತಿದೆ. ಸ್ವಾಮಿ ಸಮರ್ಥರ ಜಯಂತಿಯ ದಿನ ಹಳ್ಳಿಯ ಜನರು ಗ್ರಾಮದ ಮುಖ್ಯರಸ್ತೆಯಲ್ಲಿ ಕುಳಿತುಕೊಂಡು ದಾರಿಯಲ್ಲಿ ಓಡಾಡುವ ಎಲ್ಲ ಜನರಿಗೆ ಜಯಂತಿ ಉತ್ಸವದ ಮಹಾಪ್ರಸಾದ ಭೋಜನಕ್ಕೆ ಆಹ್ವಾನವನ್ನು ನೀಡುವ ಸಂಪ್ರದಾಯ ಬೆಳೆದುಬಂದಿದೆ. ಇಂದಿಗೂ ಆ ದಿನ ಬಂದು ಸೇರುವ ಎಲ್ಲರಿಗೆ ಮಹಾಪ್ರಸಾದವನ್ನು ನೀಡಲಾಗುತ್ತಿದೆ.

ಶ್ರೀ.ಅನಂದನಾಥ ಮಹಾರಾಜರು ಸಾಮಾನ್ಯ ಜನರಂತೆ ಜೀವಿಸುತ್ತಿರಲಿಲ್ಲ. ಇವರ ದೈನಂದಿನ ಜೀವನ ಬಹಳ ವೈಭವೋಪೇತವಾಗಿತ್ತು. ಇವರ ಸೇವೆ ಮಾಡಲು ಅನೇಕ ಸೇವಕರಿದ್ದರು. ಅಲ್ಲದೆ ಅನೇಕ ಅಡಿಗೆಯವರು, ಹಸುಗಳು, ಎತ್ತುಗಳು, ಎಮ್ಮೆಗಳು, ವಾಹನಗಳು ಇದ್ದವು. ಅಷ್ಟೇ ಅಲ್ಲಾ, ಇವರ ಆಶ್ರಮದಲ್ಲಿ ಅತ್ಯಂತ ಬೆಲೆಬಾಳುವ ಕುದುರೆಯು ಕೂಡ ಇತ್ತು. ಒಟ್ಟಿನಲ್ಲಿ ಹೇಳುವುದಾದರೆ, ಇವರ ಜೀವಿತಾವಧಿಯಲ್ಲಿ ಆಶ್ರಮವು ಅತ್ಯಂತ ಆಡಂಬರದಿಂದ ಕೂಡಿತ್ತು ಎಂದರೆ ತಪ್ಪಾಗಲಾರದು.

ಶ್ರೀ.ಸ್ವಾಮಿ ಸಮರ್ಥರ ಅನುಗ್ರಹದಿಂದ ಮತ್ತು ಆಶೀರ್ವಾದದ ಫಲವಾಗಿ ಶ್ರೀ.ಅನಂದನಾಥ ಮಹಾರಾಜರಿಗೆ ಅನೇಕ ಸಿದ್ಧಿಗಳು ಲಭಿಸಿದ್ದವು. ಅವುಗಳ ಸಹಾಯದಿಂದ ಇವರು ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿದರು. ಅಲ್ಲದೆ, ಸ್ವಾಮಿ ಸಮರ್ಥರಿಂದ ಇವರಿಗೆ ವಾಕ್ ಸಿದ್ಧಿ ಕೂಡ ಲಭಿಸಿತ್ತು. ಇದರ ಸಹಾಯದಿಂದ ಇವರು ತಮ್ಮ ಬಳಿ ಬಂದ ಅನೇಕರ ಯೋಗಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಂಡರು.

ಶ್ರೀ.ಅನಂದನಾಥ ಮಹಾರಾಜರು ವೆಂಗುರ್ಲೆಯಲ್ಲಿ 1904ನೇ ಇಸವಿಯ ಜ್ಯೇಷ್ಠ ಮಾಸದ ಶುದ್ಧ ಷಷ್ಠಿಯ ದಿನ, ಶಕೆ 1825  ರ ಪವಿತ್ರ ದಿನದಂದು ಇಚ್ಚಾ ಮರಣಿಯಾಗಿ ಸಜೀವ ಸಮಾಧಿ ಹೊಂದಿದರು. ಇವರನ್ನು ಆಶ್ರಮದ ಸಮೀಪದಲ್ಲಿ ಸಮಾಧಿ ಮಾಡಲಾಯಿತು. ಇವರ ಪವಿತ್ರ ಪಾದುಕೆಗಳನ್ನು ಈ ಆಶ್ರಮದಲ್ಲೇ ಸ್ಥಾಪಿಸಲಾಗಿದೆ.

ಅಕ್ಕಲಕೋಟೆ ಗ್ರಾಮದ ಜನರು ಇವರನ್ನು ಪ್ರೀತಿಯಿಂದ "ಅನಂದಬುವಾ" ಎಂದು ಸಂಬೋಧಿಸುತ್ತಿದ್ದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment