Friday, June 18, 2010

ಸಾಯಿ ಭಜನ ಗಾಯಕ -ಶ್ರೀ. ಪ್ರಕಾಶ್ ಚಂದರ್ - ಕೃಪೆ - ಸಾಯಿ ಅಮೃತಧಾರಾ.ಕಾಂ 



ಶ್ರೀ ಪ್ರಕಾಶ್ ಚಂದರ್ ರವರು ಉತ್ತರಖಂಡ್ ರಾಜ್ಯದ ಅಲ್ಮೋರ ಪ್ರಾಂತ್ಯದ ನೈಲ್ವಾಲಪಲ್ಲಿ ಎಂಬ ಗ್ರಾಮದಲ್ಲಿ ಶ್ರೀಯುತ ದಿವಂಗತ ಹಂಸ ದತ್ತ ಹಾಗೂ ಶ್ರೀಮತಿ ಲೀಲಾ ದೇವಿಯವರ ಮಗನಾಗಿ ೧೪ ಫೆಬ್ರವರಿ ೧೯೭೧ ರಂದು ಜನಿಸಿದರು. ಇವರು ಆಚಾರ್ಯ ರಾಮಾನುಜರ ವೈಷ್ಣವ ಪಂತದ ಅನುಯಾಯಿಗಳು.

ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು ಇವರ ತಂದೆಯವರು ಉದರ ನಿರ್ವಹಣೆಗಾಗಿ ಪಂಜಾಬಿ ದಾಬಾವನ್ನು ನಡೆಸುತ್ತಿದ್ದರು. ಪ್ರಕಾಶ್ ಚಂದರ್ ರವರು ೩ನೇ ವಯಸ್ಸಿನವರಾಗಿದ್ದಾಗಲೇ ಹಾಡುವುದಕ್ಕೆ ಪ್ರಾರಂಭ ಮಾಡಿದರು. ಇವರು ಮೊಟ್ಟ ಮೊದಲು ತಾವು ಓದುತ್ತಿದ್ದ ಸರ್ಕಾರಿ ಶಾಲೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶ ಭಕ್ತಿಯ ಗೀತೆಯನ್ನು ಹಾಡುವುದರೊಂದಿಗೆ ತಮ್ಮ ಗಾಯನ ಪಯಣವನ್ನು ಆರಂಭಿಸಿದರು. ಆ ದಿನಗಳಲ್ಲಿ ಇವರ ಮನೆಯಲ್ಲಿ ಒಂದು ರೇಡಿಯೋ ಕೂಡ ಕೊಳ್ಳಲು ಶಕ್ತಿ ಇರಲಿಲ್ಲ. ಇವರು ಅಕ್ಕ ಪಕ್ಕದ ಮನೆಗಳಲ್ಲಿ ಆಕಾಶವಾಣಿಯಲ್ಲಿ ಕೇಳಿಬರುತ್ತಿದ್ದ ಗೀತೆಗಳನ್ನು ಕೇಳಿ ಕೇಳಿ ಕಲಿಯುತ್ತಿದ್ದರು. ಕೆಲವು ಬಾರಿ ಇವರ ಅಣ್ಣನವರಾದ ಶ್ರೀ. ಹರಿ ದತ್ತ್ ರವರು ಇವರಿಗೆ ಹಾಡುಗಳನ್ನು ಶಾಲೆಯ ಕಾರ್ಯಕ್ರಮಗಳಲ್ಲಿ ಹಾಡಲು ಬರೆದು ಕೊಡುತ್ತಿದ್ದರು. ಇವರ ವಿಶೇಷತೆಯೇನೆಂದರೆ ಇವರು ಯಾವ ಹಾಡುಗಳನ್ನು ಬರೆದು ಹಾಡುತ್ತಿರಲಿಲ್ಲ. ಇವರಿಗೆ ಹಾಡುಗಳು ಒಮ್ಮೆ ಕೇಳಿದರೆ ಬಾಯಿಪಾಟವಾಗಿ ಬಿಡುತ್ತಿತ್ತು. ಇವರ ಶಾಲೆಯ ಉಪಾಧ್ಯಾಯರು ಇವರ ಹಾಡುಗಾರಿಕೆಗೆ ಬಹಳ ಪ್ರೋತ್ಸಾಹವನ್ನು ನೀಡುತ್ತಿದ್ದರು. ಇವರು ೧೯೮೯ ರಲ್ಲಿ ತಮ್ಮ ೧೨ ನೇ ವರ್ಷದ ವ್ಯಾಸಂಗವನ್ನು ಮುಗಿಸಿದರು. ಇವರು ಶಾಲೆಯಲ್ಲಿ ನಡೆಯುತ್ತಿದ್ದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮದಲ್ಲಿ ತಮ್ಮ ಶಾಲೆಯನ್ನು ಪ್ರತಿನಿಧಿಸಿದ್ದರು.

ಇವರು ತಮ್ಮ ಶಾಲಾ ದಿನಗಳನ್ನು ಮುಗಿಸಿದ ನಂತರ ಸಂಗೀತವನ್ನು ಶಾಸ್ತ್ರೋಕ್ತವಾಗಿ ಕಲಿಯಬೇಕೆಂಬ ಹಂಬಲ ಬೆಳೆಯಿತು. ಕುಟುಂಬದಲ್ಲಿ ಆರ್ಥಿಕ ತೊಂದರೆಯಿದ್ದ ಕಾರಣ ಇವರು ದೂರ ಶಿಕ್ಷಣದ ಮೊಲಕ ದೆಹಲಿ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪೂರೈಸಿದರು. ಜೊತೆಯಲ್ಲಿ ಉದರ ನಿರ್ವಹಣೆಗಾಗಿ ಕೆಲಸವನ್ನು ಮಾಡಲು ಪ್ರಾರಂಭಿಸಿದರು. ಕ್ರಿ.ಶ.೧೯೯೦ ರಲ್ಲಿ ಖ್ಯಾತ ಹಿಂದಿ ಗಾಯಕರಾದ ಭುಪೇಂದರ್ ರವರ ಸಹೋದರಿಯಾದ ಹಾಗೂ ಖ್ಯಾತ ದೂರದರ್ಶನ/ಆಕಾಶವಾಣಿ ಗಾಯಕಿಯಾದ ಶ್ರೀಮತಿ. ಚರಣ್ ಜಿತ್ ಸೋನಿ ಯವರ "ಶ್ರೀರಾಮ ಭಾರತೀಯ ಕಲಾ ಕೇಂದ್ರ" ದಲ್ಲಿ ತಮ್ಮ ಸಂಗೀತ ಶಿಕ್ಷಣವನ್ನು ಪ್ರಾರಂಭ ಮಾಡಿದರು. ಅವರ ಬಳಿ ಲಘು ಶಾಸ್ತ್ರೀಯ ಸಂಗೀತ, ಭಜನೆ, ಘಜಲ್ ಗಳನ್ನು ಅಭ್ಯಾಸ ಮಾಡಿದರು. ಕ್ರಿ.ಶ.೧೯೯೧ ರಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಶ್ರೀ. ಸುಧಾಂಶು ಬಹುಗುಣ ರವರ "ಗಂಧರ್ವ ಮಹಾವಿದ್ಯಾಲಯ" ವನ್ನು ಸೇರಿ ಅಲ್ಲಿ "ಸಂಗೀತ ವಿಶಾರದ" ದ ವರೆಗೆ ಅಭ್ಯಾಸ ಮಾಡಿದರು. ಆನಂತರ ಪಂಡಿತ್ ಶ್ರೀ ಜಗದೀಶ್ ಮೋಹನ್ ರವರ ಬಳಿ "ಸಂಗೀತ ಅಲಂಕಾರ" ದ ವರೆಗೆ ಅಭ್ಯಾಸ ಮಾಡಿದರು. ಇವರು "ಸಂಗೀತ ವಿಶಾರದ" ವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರು. 

ಶ್ರೀ ಪ್ರಕಾಶ್ ಚಂದರ್ ರವರು ಸಾವಿರಾರು ಹಳೆಯ ಹಿಂದಿ ಚಿತ್ರ ಗೀತೆಗಳನ್ನು, ಮಹಾ ಕಾವ್ಯಗಳನ್ನು ಸಂಗ್ರಹ ಮಾಡಿರುತ್ತಾರೆ. ಪ್ರಸ್ತುತ ಇವರು ಸರ್ಕಾರಿ ಕೆಲಸದಲ್ಲಿದ್ದಾರೆ. ಇವರ ಪತ್ನಿ ಶ್ರೀಮತಿ. ಪ್ರೀತಿ ನೈಲ್ವಾಲ್ ರವರು ಕೂಡ "ಗಂಧರ್ವ ಮಹಾವಿದ್ಯಾಲಯ" ದ ವಿದ್ಯಾರ್ಥಿಯಾಗಿದ್ದು ಇವರ ಪತಿಯೊಡನೆ ಗಾಯನ ಕಾರ್ಯಕ್ರಮಗಳನ್ನು ನೀಡುತ್ತಾರೆ. ಇವರಿಗೆ ಪ್ರೇರಣ ಮತ್ತು ಪ್ರಕೃತಿ ಎಂಬ ಮುದ್ದಾದ ಎರಡು ಮಕ್ಕಳಿದ್ದಾರೆ.

ಶ್ರೀ ಪ್ರಕಾಶ್ ಚಂದರ್ ರವರು ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡಿ ಉತ್ತಮ ಸಂಗೀತಗಾರರಾಗುವಂತೆ ಮಾಡಿರುತ್ತಾರೆ. ಇವರ ಈ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳನ್ನು ಇವರು ಪಡೆದಿರುತ್ತಾರೆ. ಇವರು "ಸರಸ್ವತಿ ಆರ್ಟ್ ಕ್ರಿಯೇಷನ್ಸ್" ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ ಹಾಗೂ ಇದರ ಮೊಲಕ ಅನೇಕ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುತ್ತಾರೆ.

ಶ್ರೀ ಪ್ರಕಾಶ್ ಚಂದರ್ ರವರು ೨೦೦೪-೦೫ ರಲ್ಲಿ "ಸಾಯಿ ಜಗ ಕೆ ಕಿವಯ್ಯ" ಎಂಬ ಶಿರಡಿ ಸಾಯಿ ಬಾಬಾ ರವರ ಧ್ವನಿ ಸುರಳಿಯನ್ನು ಹೊರತಂದರು. ಇವರಿಗೆ ಮುಂದಿನ ದಿನಗಳಲ್ಲಿ ರಾಮ, ಕೃಷ್ಣ, ಶಿರಡಿ ಸಾಯಿಬಾಬಾ ಹಾಗೂ ಇನ್ನು ಹಲವಾರು ದೇವರುಗಳ ಭಜನೆಗಳನ್ನು ಸಿಡಿ ಮುಖಾಂತರ ತರುವ ಆಸೆ ಇದೆ. ಅಲ್ಲದೆ, "ಸುಂದರ ಕಾಂಡ" ವನ್ನು ಸಿಡಿ ಮುಖಾಂತರ ತರುವ ಬಯಕೆ ಕೂಡ ಹೊಂದಿದ್ದಾರೆ.

ಕ್ರಿ. ಶ.೨೦೦೯ ಜೂನ್ ನಲ್ಲಿ ಇವರು ಹಾಗೂ ಇವರ ಪತ್ನಿಯವರನ್ನು ಪ್ರಖ್ಯಾತ ಹಿಂದಿ ಭಕ್ತಿ ಚಾನೆಲ್ ಆದ "ಪ್ರಗ್ಯಾ" ಟಿವಿ ತಮ್ಮ ಬೆಳಗಿನ ಕಾರ್ಯಕ್ರಮವಾದ "ಉಟ್ಹೋ ಜಾಗೋ" ನಲ್ಲಿ ಆಹ್ವಾನಿಸಿ ಇವರ ಸಂದರ್ಶನ ಹಾಗೂ ಭಜನ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಇವರು ೩೧.೩.೨೦೧೦ ಹನುಮಾನ್ ಜಯಂತಿಯಂದು "ಇಂಡೋನೇಶಿಯ" ದಲ್ಲಿ ಭಜನ ಕಾರ್ಯಕ್ರಮವನ್ನು ಅತಿ ಯಶಸ್ವಿಯಾಗಿ ನಡೆಸಿ ಕೊಟ್ಟಿರುತ್ತಾರೆ. ಇವರೊಡನೆ ಕಳೆದ ೭ ವರ್ಷಗಳಿಂದ ತಬಲಾ ದಲ್ಲಿ ಶ್ರೀಯುತ ಪ್ರಕಾಶ್ ಜುಯಲ್ ರವರು ಸಾಥ್ ನೀಡುತ್ತಿದ್ದಾರೆ.

ಇವರ ಪತ್ನಿ ಪ್ರೀತಿ ನೈಲ್ವಾಲ್ ರವರು ೨೦೦೪ ರಿಂದ "ಗಂಧಾರ್ ಸಂಗೀತಾಲಯ" ಎಂಬ ಸಂಗೀತ ಮತ್ತು ನಾಟ್ಯ ಕಲಾ ಶಾಲೆಯನ್ನು ವಸುಂಧರಾ ಎಂಬಲ್ಲಿ ನಡೆಸುತ್ತಿದ್ದಾರೆ. ಶ್ರೀ. ಪ್ರಕಾಶ್ ಚಂದರ್ ರವರು ತಮ್ಮ ಪತ್ನಿಯೊಡನೆ ದೆಹಲಿ ಮತ್ತು ಉತ್ತರ ಭಾರತದ ಹಲವು ಕಡೆಗಳಲ್ಲಿ ಭಜನೆ ಹಾಗೂ ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೆಹಲಿಯ "ಸಾಹಿತ್ಯ ಕಲಾ ಪರಿಷತ್" ನ ಅನೇಕ ಕಾರ್ಯಕ್ರಮಗಳಲ್ಲೂ ಕೂಡ ಭಾಗವಹಿಸಿದ್ದಾರೆ. ಕ್ರಿ.ಶ. ೧೯೯೮ ರಲ್ಲಿ ದೆಹಲಿಯ ಸಾಹಿತ್ಯ ಕಲಾ ಪರಿಷತ್ ಏರ್ಪಡಿಸಿದ್ದ ೧೧ನೇ "ಯುವ ಮಹೋತ್ಸವ" ದಲ್ಲಿ ಇವರು ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸಿರುತ್ತಾರೆ. ಇವರು ದೇಶದ ಹಲವೆಡೆ ರಾಮ ಕಥಾ ಹಾಗೂ ಸುಂದರಕಾಂಡ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುತ್ತಾರೆ.

ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ವಿಳಾಸ : ಇಕೆ-೫೯, ಏಕಲವ್ಯ ವಿಹಾರ್, ಸೆಕ್ಟರ್-೯, ಘಜಿಯಾಬಾದ್, ಉತ್ತರ ಪ್ರದೇಶ.

ದೂರವಾಣಿ : ೯೮೧೦೪೭೦೧೯೫/೯೭೧೬೨೫೧೬೭೧

ಇ ಮೇಲ್ : singerprakash@rediffmail.com

ಆಲ್ಬಮ್ : ಸಾಯಿ ಜಗ ಕೆ ಕಿವಯ್ಯ

ಇವರ ಭಜನೆಯನ್ನು Youtube ನಲ್ಲಿ ವೀಕ್ಷಿಸಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:

http://www.youtube.com/watch?v=XYOPff3whzI
http://www.youtube.com/watch?v=8ty9U7ssgqM
http://www.youtube.com/watch?v=NZlyH-jeHmo
http://www.youtube.com/watch?v=droPU2ONjsE

No comments:

Post a Comment