Tuesday, February 4, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ವಿಐಪಿ ಪಾಸುಗಳ ಬಗ್ಗೆ ಸ್ಪಷ್ಟೀಕರಣ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು  ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರನ್ನು ಹೊರತುಪಡಿಸಿ ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಮಾತ್ರ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸುತ್ತಿದೆ,  ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. 
 
ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯು 18ನೇ ನವೆಂಬರ್ 2013 ರಿಂದ ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಮಾತ್ರ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸುತ್ತಿದೆ. ಆದರೆ, ಟಿವಿ ಮಾಧ್ಯಮಗಳು ಈ ವಿಷಯದ ಬಗ್ಗೆ ಬಿತ್ತರಿಸಿದ ಸುದ್ದಿಯನ್ನು ಅನೇಕ ಸಾಯಿ ಭಕ್ತರು ತಪ್ಪಾಗಿ ಅರ್ಥೈಸಿದ್ದಾರೆ ಹಾಗೂ ಸಾಯಿಬಾಬಾರವರ ದರ್ಶನ ಹಾಗೂ ಆರತಿಯನ್ನು ನೋಡಲು ಎಲ್ಲಾ ಭಕ್ತರೂ ಶುಲ್ಕ ನೀಡಬೇಕಾಗಿರುತ್ತದೆ  ಎಂದು ತಿಳಿದಿದ್ದಾರೆ. ಆದರೆ, ಸರತಿಯಲ್ಲಿ ಬಂದು ದರ್ಶನ ಮಾಡಲು ಆಗದೇ ಶ್ರೀಘ್ರ ದರ್ಶನ ಮಾಡಲು ಬಯಸುವ ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಮಾತ್ರ ಶ್ರೀ ಸಾಯಿಬಾಬಾ ಸಂಸ್ಥಾನವು ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸುತ್ತಿದೆ. ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನವು ಸರತಿಯಲ್ಲಿ ಬಂದು ಶ್ರೀ ಸಾಯಿಬಾಬಾರವರ ದರ್ಶನ ಮಾಡುವ ಎಲ್ಲಾ ಸಾಯಿ ಭಕ್ತರಿಗೂ 15ನೇ ಆಗಸ್ಟ್ 2013 ರಿಂದ ಎರಡು ಲಾಡುಗಳನ್ನು ಒಳಗೊಂಡ ಪ್ರಸಾದದ ಪೊಟ್ಟಣವನ್ನು ಉಚಿತವಾಗಿ ನೀಡುತ್ತಿದೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು. 
 
ಶ್ರೀ ಸಾಯಿಬಾಬಾ ಸಂಸ್ಥಾನವು ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಶುಲ್ಕವನ್ನು ವಿಧಿಸುವ ಮೊದಲು ಪ್ರತಿನಿತ್ಯ ಸುಮಾರು 700 ರಿಂದ 800 ವಿಐಪಿಗಳು ಆರತಿ ದರ್ಶನವನ್ನು ಮಾಡುತ್ತಿದ್ದರು. ಸುಮಾರು 70 ರಿಂದ 90 ಪ್ರತಿಶತ ವಿಐಪಿಗಳು ಬೆಳಗಿನ ಕಾಕಡಾ ಆರತಿ ದರ್ಶನವನ್ನು ಮಾಡುತ್ತಿದ್ದರು. ಆದುದರಿಂದ ಕೇವಲ 10 ಪ್ರತಿಶತ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ ಭಕ್ತರು ಮಾತ್ರ ಕಾಕಡಾ ಆರತಿಯ ದರ್ಶನವನ್ನು ಮಾಡಲು ಸಾಧ್ಯವಾಗಿತ್ತು. ಮಾರನೇ ದಿನ ಬೆಳಗಿನ 4 ಘಂಟೆಯ ಕಾಕಡಾ ಆರತಿಗೆ ಹಿಂದಿನ ರಾತ್ರಿ  10.30 ರಿಂದ ನಿದ್ದೆಗೆಟ್ಟು ಸರತಿಯಲ್ಲಿ ನಿಂತಿದ್ದರೂ ಕೂಡ ಸಾಮಾನ್ಯ ಸರತಿಯಲ್ಲಿ ಬರುವ ಭಕ್ತರಿಗೆ ಆರತಿಯ ದರ್ಶನ ಭಾಗ್ಯ ಸಿಗುತ್ತಿರಲಿಲ್ಲ. ಆದರೆ, ಆರತಿಯ ಸಮಯಕ್ಕೆ ಬಂದು ವಿಐಪಿಗಳು ಕಾಕಡಾ ಆರತಿ ದರ್ಶನ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಶ್ರೀ ಸಾಯಿಬಾಬಾ ಸಂಸ್ಥಾನವು ಆರತಿ ಮತ್ತು ದರ್ಶನಕ್ಕೆ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದ ಮೇಲೆ 25 ರಿಂದ 30 ಪ್ರತಿಶತ ವಿಐಪಿಗಳು ಮಾತ್ರ ಆರತಿ ಮತ್ತು ದರ್ಶನ ಮಾಡುತ್ತಿದ್ದು ವಿಐಪಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿದಿದೆ. ಇದರಿಂದ 60 ರಿಂದ 70 ಪ್ರತಿಶತ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ ಭಕ್ತರು ಈಗ  ಕಾಕಡಾ ಆರತಿಯ ದರ್ಶನವನ್ನು ಮಾಡಲು ಸಾಧ್ಯವಾಗಿದೆ ಎಂದು ಶ್ರೀ ಅಜಯ್ ಮೋರೆಯವರು ಸ್ಪಷ್ಟೀಕರಣ ನೀಡಿದರು. . 

ಮರಾಠಿಯಿಂದ ಆಂಗ್ಲ ಭಾಷೆಗೆ ತರ್ಜುಮೆ: ಶ್ರೀ.ರಾಜೇಶ್ ಶೇಲಾತ್ಕರ್, ಮುಂಬೈ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment