Wednesday, December 4, 2013

ಶ್ರೀ ಸಾಯಿ ಸಚ್ಚರಿತ್ರೆಯು ಒಂದು ಸಾಯಿ ವಿಶ್ವವಿದ್ಯಾಲಯ: ಶ್ರೀಮತಿ ಉಜ್ವಲ ಬೋರ್ಕರ್

 
 
ಶ್ರೀಮತಿ ಉಜ್ವಲ ಬೋರ್ಕರ್ ರವರು ಸಾಯಿ ಮಹಾಭಕ್ತೆ ದಿವಂಗತ ಚಂದ್ರಬಾಯಿ ಬೋರ್ಕರ್ ರವರ ಮೊಮ್ಮಗಳು. ಇವರ ಜೀವನದಲ್ಲೂ ಸಹ ಅಸಂಖ್ಯಾತ ಸಾಯಿ ಲೀಲೆಗಳು ನಡೆದಿವೆ. ಅಂತಹ ಒಂದು ಸಾಯಿ ಲೀಲೆ ಎಂದರೆ ಶ್ರೀ ಸಾಯಿ ಸಚ್ಚರಿತ್ರೆ  ಎಂದು ಅವರು ಅಭಿಪ್ರಾಯ ಪಡುತ್ತಾರೆ. ಶ್ರೀ ಸಾಯಿ ಸಚ್ಚರಿತ್ರೆಯು ಒಂದು ಸಾಯಿ ವಿಶ್ವವಿದ್ಯಾಲಯ ಹಾಗೂ ಶ್ರೀ ಸಾಯಿಬಾಬಾರವರು ಆ ವಿಶ್ವವಿದ್ಯಾಲಯದ ಕುಲಪತಿಗಳು ಎಂದು ಅವರು ಹೇಳುತ್ತಾರೆ. 

ನಾನು "ಮಾಧವ ರಾವ್ ದೇಶಪಾಂಡೆ, ಬಾಯಿಜಾಬಾಯಿ, ತಾತ್ಯಾ ಕೋತೆ ಪಾಟೀಲ್, ಲಕ್ಷ್ಮಿಬಾಯಿ ಶಿಂಧೆ, ಕಾಕಾ ಸಾಹೇಬ್ ದೀಕ್ಷಿತ್, ಚಂದ್ರಾಬಾಯಿ ಬೋರ್ಕರ್ ಹಾಗೂ ಇನ್ನೂ ಹಲವಾರು ಸಾಯಿಭಕ್ತರು ಹೇಗೆ ತಮ್ಮ ಜೀವನದಲ್ಲಿ ಏಳಿಗೆಯನ್ನು ಕಂಡಿದ್ದಾರೆ ಎಂಬ ವಿಷಯವನ್ನು ಸ್ವತಃ ಮನಗಂಡಿದ್ದೇನೆ ಮತ್ತು ಗೋವಿಂದರಾವ್ ದಾಭೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆ ಎಂಬ ವಿಶ್ವವಿದ್ಯಾಲಕ್ಕೆ 18ನೇ  ಮೇ  1974 ರಂದು ಸೇರಿಕೊಂಡೆ " ಎಂದು ಹೇಳುತ್ತಾರೆ.

ಸಾಯಿಬಾಬಾರವರು ಗೋವಿಂದರಾವ್ ದಾಭೋಲ್ಕರ್ ರವರನ್ನು ಈ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಪ್ರೇರೇಪಿಸಿದರು. ಈ ವಿಶ್ವವಿದ್ಯಾಲಯದಲ್ಲಿ ಒಟ್ಟು 53 ತರಗತಿ (ಅಧ್ಯಾಯ) ಗಳಿವೆ. ಆಶ್ಚರ್ಯದ ಸಂಗತಿ ಏನೆಂದರೆ ದಾಭೋಲ್ಕರ್ ರವರು ಮೊದಲಿಗೆ ಸಾಯಿಬಾಬಾರವರನ್ನು ಕುಲಪತಿಗಳೆಂದು ಸ್ವೀಕರಿಸಲು ಸಿದ್ಧರಿರರಿಲ್ಲ. ಅವರು ಹೆಚ್ಚಿನ  ವ್ಯಾಸಂಗ ಮಾಡಿದ್ದ ಕಾರಣ ಮನುಷ್ಯರು ತಮ್ಮ ಸ್ವಪ್ರಯತ್ನದಿಂದ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಬಲವಾಗಿ ನಂಬಿದ್ದರು. ಅವರ ಮನಸ್ಸು ಕರ್ಮ ಮಾರ್ಗವೇ ಸರಿಯಾದ ಮಾರ್ಗವೆಂದು ಬಲವಾಗಿ ನಂಬಿತ್ತು.  ಕಾಕಾ ಸಾಹೇಬ್ ದೀಕ್ಷಿತ್, ನಾನಾ ಚಂದೋರ್ಕರ್, ಭಾಟೆ ಮತ್ತು ನೂಲ್ಕರ್ ಎಂಬ ತರಗತಿಯ ವಿದ್ಯಾರ್ಥಿಗಳು ದಾಭೋಲ್ಕರ್ ರವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಈ ವಿದ್ಯಾರ್ಥಿಗಳು ಸಂಪೂರ್ಣ ಧೂಳು ತುಂಬಿದ್ದ ದಾರಿಯ ಮಧ್ಯದಲ್ಲೇ ಸಾಯಿಬಾಬಾರವರಿಗೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸುತ್ತಿದ್ದರು. ಇದನ್ನು ನೋಡಿ ದಾಭೋಲ್ಕರ್ ರವರಿಗೆ ಆಶ್ಚರ್ಯವಾಗುತ್ತಿತ್ತು, ಆದರೆ ಅವರ ಮನಸ್ಸಿನ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ದೀಕ್ಷಿತ್ ರವರು ಪ್ರಪಂಚವನ್ನೆಲ್ಲಾ ಸುತ್ತಿ ಬಂದಿದ್ದರೂ, ಹಲವಾರು ಧಾರ್ಮಿಕ ಗ್ರಂಥಗಳನ್ನು ಓದಿದ್ದರೂ ಏಕೆ ಹೀಗೆ ಸಾಯಿಬಾಬಾರವರಿಗೆ ತಲೆ ಬಾಗುತ್ತಿದ್ದಾರೆ ಎಂದು ಯೋಚಿಸುತ್ತಿದ್ದರು. ಈ ಬುದ್ಧಿವಂತರು ಬಡ ಫಕೀರನಲ್ಲಿ ಏನನ್ನು ಕಂಡು ಅವನನ್ನು ಗುರುವೆಂದು ಸ್ವೀಕರಿಸಿದ್ದಾರೆ ಎಂದು ಯೋಚಿಸುತ್ತಿದ್ದರು. 

ಆದರೆ ದಾಭೋಲ್ಕರ್ ರವರು ಒಮ್ಮೆ ಸಾಯಿಬಾಬಾರವರು ಬೀಸುವ ಕಲ್ಲಿನ ಮೇಲೆ ಗೋಧಿಯ ಕಾಳುಗಳನ್ನು ಹಾಕಿಕೊಡು ಬೀಸುತ್ತಾ ಕುಳಿತಿರುವುದನ್ನು ನೋಡಿದರು. ಅಲ್ಲದೇ, ಹಾಗೆ ಬೀಸಿ ಪುಡಿ ಮಾಡಿದ ಗೋಧಿಯ ಹಿಟ್ಟನ್ನು ಶಿರಡಿ ಗ್ರಾಮದ ಹೊರಭಾಗದಲ್ಲಿ ಚಲ್ಲಿದ್ದರಿಂದ ಶಿರಡಿ ಗ್ರಾಮದಲ್ಲಿ ಹರಡಿದ್ದ ಕಾಲರಾ ಮಹಾಮಾರಿ ಮಾಯವಾದದ್ದನ್ನು ಸಹ ಕಣ್ಣಾರೆ ಕಂಡರು. ಈ ಘಟನೆ ಅವರ ಮನ ಪರಿವರ್ತನೆಗೆ ಕಾರಣವಾಯಿತು. ಈ ಘಟನೆಯು ಸಾಯಿ ಸಚ್ಚರಿತ್ರೆ ಎಂಬ ವಿಶ್ವವಿದ್ಯಾಲಯದ ಶಂಕುಸ್ಥಾಪನೆಗೆ ನಾಂದಿ ಹಾಡಿತು. ದಾಭೋಲ್ಕರ್ ರವರಿಗೆ ತಮ್ಮಲ್ಲಿ  ಇದ್ದ ನಂಬಿಕೆ ಧೃಡವಾದದ್ದನ್ನು ಕಂಡ ಸಾಯಿಬಾಬಾರವರು ದಾಭೋಲ್ಕರ್ ರವರ ತಲೆಯ ಮೇಲೆ ತಮ್ಮ  ಅಭಯ ಹಸ್ತವನ್ನು ಇರಿಸಿ ಅವರನ್ನು ಆಶೀರ್ವದಿಸಿ ಸಾಯಿ ಸಚ್ಚರಿತ್ರೆಯನ್ನು ಬರೆಯುವುದಕ್ಕೆ ಅನುಮತಿ ನೀಡುವ ಮುಖಾಂತರ ಸಾಯಿ ವಿಶ್ವವಿದ್ಯಾಲಯವೆಂಬ ಕಟ್ಟಡದ ನಿರ್ಮಾಣಕ್ಕೆ ತಮ್ಮ ಹಸಿರು ನಿಶಾನೆಯನ್ನು ತೋರಿಸಿದರು. 

ಈ ವಿಶ್ವವಿದ್ಯಾಲಯದಲ್ಲಿ ಹೇಳಿಕೊಡುವ ಪ್ರಮುಖ ನೀತಿ ಪಾಠಗಳೆಂದರೆ: 1) ಶ್ರದ್ಧೆ ಹಾಗೂ ತಾಳ್ಮೆ ಯಾವಾಗಲೂ ನಿಮ್ಮೊಂದಿಗಿರಲಿ. 2)ಜೀವನದಲ್ಲಿ ನೀವು ನೆಮ್ಮದಿಯಿಂದ ಬಾಳಬೇಕೆಂದುಕೊಂಡಿದ್ದರೆ ಕ್ರಮೇಣವಾಗಿ ಅಭ್ಯಾಸ ಮಾಡುವ ಮುಖಾಂತರ ನಿಮ್ಮ ಬಯಕೆಗಳನ್ನು ಹತ್ತಿಕ್ಕುವುದನ್ನು ಅಥವಾ ಕಡಿಮೆ ಮಾಡಿಕೊಳ್ಳುವುದನ್ನು ಕಲಿಯಿರಿ. ಬೇರೆಯವರ ವಸ್ತುವನ್ನು ಕದಿಯಲು ಹೋಗಬೇಡಿ. ಶ್ರಮಪಟ್ಟು ಕೆಲಸ ಮಾಡಿ. ನೀವು ಬಿತ್ತಿದ್ದನ್ನೇ ಬೆಳೆಯುತ್ತೀರಿ. ಈ ಗುಣಗಳೇ ನಿಮ್ಮನ್ನು ಕಾಪಾಡುತ್ತವೆ. 3)ಒಬ್ಬ ಮನುಷ್ಯ ದುಡಿಯುತ್ತಾನೆ, ಉಳಿದವರು ಅದರ ಫಲವನ್ನು ಪಡೆಯುತ್ತಾರೆ ಎಂಬ ನೀತಿಯು ಇಲ್ಲಿ ನೆಡೆಯುವುದಿಲ್ಲ. ಯಾವ ಪ್ರಯತ್ನವನ್ನೂ ಪಡದೆ ಸುಮ್ಮನೆ ಮನೆಯಲ್ಲಿ ಕುಳಿತು ಮಜಾ ಮಾಡುತ್ತಾ ಲಂಚವನ್ನು ನೀಡಿ ನೀವು ಮೊದಲನೇ ದರ್ಜೆಯನ್ನು ಪಡೆಯಲು ಈ ವಿಶ್ವವಿದ್ಯಾಲಯದಲ್ಲಿ ಅವಕಾಶವಿಲ್ಲ. ಯಾರಿಗೆ ಓದಲು ಇಷ್ಟವಿದೆಯೋ ಅವರಿಗೆ ಸ್ವತಃ ಕುಲಪತಿಗಳೇ ಮಾರ್ಗದರ್ಶನ ಮಾಡುತ್ತಾರೆ ಹಾಗೂ ಶಿಷ್ಯರು ತಮ್ಮ ಮನದಲ್ಲಿ ಏಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಪಡೆಯುತ್ತಾರೆ.  4)ನಿಮ್ಮ ಅಹಂಕಾರವನ್ನು ಸಂಪೂರ್ಣವಾಗಿ ತೊಡೆದು ಹಾಕಿ. ಯಾರಿಗೆ ಬ್ರಹ್ಮಜ್ಞಾನವನ್ನು ಪಡೆಯಬೇಕೆಂಬ ಆಶೆಯಿರುವುದೋ ಅವರು ಎಲ್ಲಾ ರೀತಿಯ ಮೋಹವನ್ನು ಸಂಪೂರ್ಣವಾಗಿ ಬಿಡಬೇಕಾಗುತ್ತದೆ. 
ಈ ವಿಶ್ವವಿದ್ಯಾಲಕ್ಕೆ ಸೇರಲು ಯಾವುದೇ ಖರ್ಚು ಮಾಡಬೇಕಾಗಿಲ್ಲ ಅಥವಾ ಯಾವುದೇ ಪ್ರವೇಶ ಧನ ಇರುವುದಿಲ್ಲ. ಈ ವಿಶ್ವವಿದ್ಯಾಲಯದ ವಿಶೇಷತೆ ಏನೆಂದರೆ ಇದು ಹಗಲಿರುಳೆನ್ನದೇ ಇಪ್ಪತ್ತನಾಲ್ಕು ಗಂಟೆಗಳೂ ಕಾರ್ಯ ನಿರ್ವಹಿಸುತ್ತದೆ. ನೀವು ಈ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದನ್ನು ಜೀವನವೆಂಬ ಸ್ಥಳದಲ್ಲಿ ಓರೆಗೆ ಹಚ್ಚಬೇಕಾಗಿರುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಅನನ್ಯ ವ್ಯಕ್ತಿತ್ವವನ್ನು ಹೊಂದಿದ್ದು ಚಾಣಾಕ್ಷ ಕುಲಪತಿಗಳು ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಗಮನವಿಟ್ಟು ನೋಡಿಕೊಳ್ಳುತ್ತಾರೆ. ಕೆಲವರಿಗೆ ಕನಸಿನ ಮುಖಾಂತರವಾಗಿ ಹಾಗೂ ಇನ್ನಿತರರಿಗೆ ವಿವಿಧ ರೀತಿಯಲ್ಲಿ  ಸೂಚನೆ ನೀಡುವ ಮುಖಾಂತರ ಮಾರ್ಗದರ್ಶನ ನೀಡುತ್ತಾರೆ. "ನಾನು ಸಶರೀರನಾಗಿ ಇಲ್ಲಿ ಇದ್ದರೂ, ನೀವು ಸಪ್ತ ಸಾಗರಗಳ ಆಚೆಯಿದ್ದರೂ ಸಹ ನೀವು ಮಾಡುವ ಪ್ರತಿಯೊಂದು ವಿಷಯವನ್ನೂ ನಾನು ಇಲ್ಲಿಂದಲೇ ತಿಳಿದುಕೊಳ್ಳಬಲ್ಲೆ" ಎಂಬ ವಿಷಯವನ್ನು ಜ್ಞಾಪಕದಲ್ಲಿಡಿ" ಎಂದು ಕುಲಪತಿಗಳಾದ ಸಾಯಿಬಾಬಾ ನುಡಿಯುತ್ತಾರೆ.

ಈ ವಿಶ್ವವಿದ್ಯಾಲಯವು ಹಲವಾರು ಸ್ವಾರಸ್ಯಕರವಾದ ಘಟನೆಗಳಿಗೆ ಸಾಕ್ಷಿಯಾಗಿದ್ದು ಅವುಗಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಒಮ್ಮೆ ಕಾಕಾ ಸಾಹೇಬ್ ದೀಕ್ಷಿತ್ ರವರನ್ನು ಈ ವಿಶ್ವವಿದ್ಯಾಲದಲ್ಲಿ ಕಠಿಣ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಅದೇನೆಂದರೆ, ಅವರು ಗುರುವಿನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವರೋ ಅಥವಾ ಇಲ್ಲವೋ ಎಂದು ತಿಳಿಯಬೇಕಾಗಿತ್ತು. ಹೇಗೆ ಬೆಂಕಿಯಲ್ಲಿ ಪುಟವಿಟ್ಟ ನಂತರ ಚಿನ್ನವು ಅಪರಂಜಿಯಾಗುವುದೋ ಅದೇ ರೀತಿ ಕಾಕಾ ಸಾಹೇಬ್ ದೀಕ್ಷಿತರು ಸಾಯಿಬಾಬಾರವರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸಾಯಿಬಾಬಾರವರ ಆಜ್ಞೆಯ ಮೇರೆಗೆ ಶುದ್ಧ ಬ್ರಾಹ್ಮಣರಾದ ಕಾಕಾ ಸಾಹೇಬ್ ದೀಕ್ಷಿತರು ಕತ್ತಿಯನ್ನು ಮೇಲಕ್ಕೆ ಎತ್ತಿ ಮೇಕೆಯನ್ನು ಕೊಲ್ಲಲು ಸಿದ್ಧರಾದರು. ಆಗ ಸಾಯಿಬಾಬಾರವರು ಅವರನ್ನು ತಡೆದರು. ಈ ರೀತಿಯಲ್ಲಿ ಕುಲಪತಿಗಳ ಅಂದರೆ ಸಾಯಿಬಾಬಾರವರ ಪರೀಕ್ಷೆಯಲ್ಲಿ ಕಾಕಾ ಸಾಹೇಬ್ ದೀಕ್ಷಿತರು ತೇರ್ಗಡೆ ಹೊಂದಿದರು. ಈ ವಿಶ್ವವಿದ್ಯಾಲಯದಲ್ಲಿ ನಾವು ಮಾಡುವ ಕಾರ್ಯದ ಒಳಿತು ಅಥವಾ  ಕಡುಕಿನ ಬಗ್ಗೆ ವಿವೇಚನೆಯನ್ನು ಮಾಡದೆ ಗುರುವಿನ ಪಾದಗಳಲ್ಲಿ ಸಂಪೂರ್ಣವಾಗಿ ಶರಣಾಗತರಾಗಿ ಗುರುವಿನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ನಮ್ಮ ಕರ್ತವ್ಯ.

ನಾವುಗಳು ಅಹಂಭಾವರಹಿತರಾಗಿ ಕಾರ್ಯವನ್ನು ಮಾಡಿದರೆ ದೈವಸಾಕ್ಷಾತ್ಕಾರ ತುಂಬಾ ಸುಲಭವಾಗಿ ಆಗುತ್ತದೆ. ಪುಂಡಲೀಕ ರಾವ್ ಎಂಬ ವಿದ್ಯಾರ್ಥಿಗೆ "ನೀನು ಅಹಂಕಾರರಹಿತನಾಗಿ ಕಾರ್ಯವನ್ನು ಮಾಡಿದರೆ ಮಾತ್ರ ಆತ್ಮ ಸಾಕ್ಷಾತ್ಕಾರ ಆಗುತ್ತದೆ. ನೀನು ಬಹಳ ಸುಲಭದಲ್ಲಿ ಭವ ಸಾಗರವನ್ನು ದಾಟಬಹುದು. " ಎಂದು ಸಾಯಿಬಾಬಾರವರು ಉಪದೇಶವನ್ನು ಮಾಡಿದ್ದರು. "ಯಾವ ವಿದ್ಯಾರ್ಥಿ ಚೆನ್ನಾಗಿ ಕಲಿಯುತ್ತಾನೋ ಅವನು ತನ್ನ ಯೋಗ್ಯತೆಗೆ ತಕ್ಕಂತೆ ಫಲವನ್ನು ಪಡೆಯುತ್ತಾನೆ. ಪ್ರತಿಯೊಬ್ಬರೂ ಅವರವರ ಯೋಗ್ಯತೆಗೆ ತಕ್ಕಂತೆ ಪ್ರತಿಫಲವನ್ನು ಪಡೆಯುತ್ತಾರೆ. ಈ ವಿಶ್ವವಿದ್ಯಾಲಯದಲ್ಲಿ ಎಲ್ಲರಿಗೂ ಸಹಾಯ ದೊರಯುತ್ತದೆ. ನೀವು ನಿಮ್ಮನ್ನು ಬೇರೆಯವರ ಜೊತೆಗೆ ಹೊಲಿಸಿಕೊಳ್ಳಬೇಡಿ. ಈ ವಿಶ್ವವಿದ್ಯಾಲಯದಲ್ಲಿ ಮೋಸಗಾರರಿಗೆ ಅವಕಾಶವಿಲ್ಲ. ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗುವುದಕ್ಕೆ  ಶ್ರದ್ಧೆ ಹಾಗೂ ಭಕ್ತಿ ಅತ್ಯಾವಶ್ಯಕ. ಈ ಎಲ್ಲಾ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಯಶಸ್ಸು ಕಂಡಿತ" ಎಂದು ವಿಶ್ವವಿದ್ಯಾಲಯದ ಕುಲಪತಿಗಳು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.

ಈ ವಿಶ್ವವಿದ್ಯಾಲಯದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಪಡೆಯಲಾಗದಂತಹ  ಸಂತೋಷ, ಮತ್ತು ಮನಶ್ಯಾಂತಿಯನ್ನು ಹೇಗೆ ಪಡೆಯಬಹುದು ಎಂದು ವಿದ್ಯಾರ್ಥಿಗೆ ಹೇಳಿಕೊಡಲಾಗುತ್ತದೆ. 

ಯಾರೂ ಈಗಿನ ನಮ್ಮ ಸಂತೋಷದ ಕ್ಷಣ ಅಥವಾ ನಮ್ಮ ಹಿಂದಿನ ಕರ್ಮಗಳ ಫಲವನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ನಿರಂತರವಾಗಿ ಮಾಡುವ ಸಾಯಿಬಾಬಾರವರ ನಾಮಸ್ಮರಣೆಯಿಂದ ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.

ಆಂಗ್ಲ ಲೇಖನ ಹಾಗೂ ಛಾಯಾಚಿತ್ರ : ಶಂಷಾದ್  ಆಲಿ ಬೇಗ್, ಪತ್ರಕರ್ತೆ, ನವಿ ಮುಂಬೈ
ಕನ್ನಡ ಅನುವಾದ: ಶ್ರೀಕಂಠ ಶರ್ಮ



No comments:

Post a Comment