Sunday, June 17, 2012

ಶೇಕಡ 99% ಹೃದಯದ ಬ್ಲಾಕ್ ಹೊಂದಿದ್ದ ರೋಗಿಯನ್ನು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿಸಿದ ಶಿರಡಿ ಸಾಯಿಬಾಬಾ - ಕೃಪೆ: ಶ್ರೀಮತಿ.ಮೀತಾ ಭಟ್, ಮುಂಬೈ ಮತ್ತು ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ಮೀತಾ ಭಟ್ ರವರು ಮಹಾರಷ್ಟ್ರದ ಮುಂಬೈ ನಗರದಲ್ಲಿರುವ ಪಶ್ಚಿಮ ಥಾಣೆಯ ನಿವಾಸಿ. ಇವರ ಸಹೋದರಿ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದರು. ರೋಗಿಯ ವೈದ್ಯಕೀಯ ತಪಾಸಣೆಯನ್ನು ನಡೆಸಿದ ವೈದ್ಯರು ಇವರ ಹೃದಯವು ಶೇಕಡ 99% ರಷ್ಟು ಬ್ಲಾಕ್ ಹೊಂದಿದ್ದು ಬೈಪಾಸ್ ಆಪರೇಷನ್ ಮಾಡಲು ಸಾಧ್ಯವಿಲ್ಲ ಹಾಗೂ ಮಾಡಿದರೂ ಬದುಕುಳಿಯುವ ಸಂಭವ ಕಡಿಮೆ ಎಂದು ಮನೆಯವರಿಗೆ ತಿಳಿಸಿದರು. ಆದರೆ ಅನನ್ಯ ಸಾಯಿಭಕ್ತರಾದ ಇವರ ಕುಟುಂಬ ವರ್ಗದವರು ಆಶಾವಾದಿಗಳಾಗಿದ್ದು ವೈದ್ಯರುಗಳಿಗೆ ಬೈಪಾಸ್ ಆಪರೇಷನ್ ಮಾಡಲು ಬಲವಂತ ಮಾಡಿ ಒಪ್ಪಿಸಿದರು. ಆಪರೇಷನ್ ಗೆ ನಿಗದಿ ಪಡಿಸಿದ ದಿನದಂದು ವೈದ್ಯರುಗಳು ಸತತ 9 ಗಂಟೆಗಳ ಕಾಲ ಆಪರೇಷನ್ ಪ್ರಕ್ರಿಯೆಯನ್ನು ನಡೆಸಿದರು.  ಆಪರೇಷನ್ ಮುಗಿಸಿ ಆಪರೇಷನ್ ಕೋಣೆಯಿಂದ ಹೊರಬಂದ ವೈದ್ಯರು "ಇದು ಒಂದು ಪವಾಡವಲ್ಲದೇ ಮತ್ತೇನೂ ಇಲ್ಲ. ನಾನು ಕೇವಲ ನಿಮಿತ್ತ ಮಾತ್ರನಾಗಿ ದೇವರ ಸಾಧನವೆಂಬಂತೆ ಈ ಆಪರೇಷನ್ ಮಾಡಿದೆ" ಎಂದು ನುಡಿದರು. ಆಪರೇಷನ್ ಆದ 3 ದಿನಗಳ ನಂತರ ಮೀತಾರವರ ಸಹೋದರಿ ಮೊದಲಿನಂತಾದರು. ಆಗ ಮಾತನಾಡಿದ ಅವರು "ಅರಿವಳಿಕೆಯನ್ನು ನೀಡಿದ ಮೇಲೆ ಎನಾಯಿತೆಂದು ನನಗೆ ತಿಳಿಯಲಿಲ್ಲ. ಕಣ್ಣು ಕತ್ತಲಿಟ್ಟುಕೊಂಡು ನನ್ನ ಮುಂದಿರುವ ಎಲ್ಲವೂ ಖಾಲಿಯಾಗಿರುವಂತೆ ಕಾಣಿಸಿತು. ನಂತರ ಒಂದು ದೊಡ್ಡ ಕೋಟೆಯ ಬಾಗಿಲಿನಲ್ಲಿ ಸಾಯಿಬಾಬಾರವರು ನಿಂತುಕೊಂಡಿರುವಂತೆ ಕಾಣಿಸಿತು. ಸಾಯಿಬಾಬಾರವರು  ನನಗೆ ಯೋಚನೆ ಮಾಡಬೇಡ, ನಾನು ನಿನ್ನ ಜೊತೆಯಲ್ಲಿದ್ದೇನೆ ಎಂದು ಅಭಯ ನೀಡಿದರು. ಆನಂತರ ಏನು ನಡೆಯಿತೋ ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ" ಎಂದು  ಭಾವುಕರಾಗಿ ನುಡಿದರು. ಶ್ರೀಮತಿ.ಮೀತಾರವರು "ನನ್ನ ಸಹೋದರಿಗೆ ಸಾಯಿಬಾಬಾರವರು ಮರುಜನ್ಮ ಎಂಬ ಕೊಡುಗೆಯನ್ನು ನೀಡಿದರು" ಎಂದು ಅತ್ಯಂತ ಸಂತೋಷದಿಂದ ನುಡಿಯುತ್ತಾರೆ.

ಸಾಯಿಬಾಬಾರವರ ಈ ಅಪೂರ್ವ ಲೀಲೆಯು ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಕಟಣೆ ಮಾಡುವ ಶ್ರೀ ಸಾಯಿಲೀಲಾ ಮಾರ್ಚ್-ಏಪ್ರಿಲ್ 2012 ಸಂಚಿಕೆಯಲ್ಲಿ ಪ್ರಕಟಣೆಗೊಂಡಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment