Wednesday, December 31, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ಲಿಥೋಟ್ರಿಪ್ಸಿ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

 ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 4ನೇ ಡಿಸೆಂಬರ್ 2014 ರಿಂದ 8ನೇ ಡಿಸೆಂಬರ್ 2014 ರವರಗೆ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಅಹಮದಾಬಾದ್ ನ  ಖ್ಯಾತ ಲೇಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಕೇತನ್  ಶುಕ್ಲಾರವರ ನೇತೃತ್ವದಲ್ಲಿ ಉಚಿತ ಲಿಥೋಟ್ರಿಪ್ಸಿ ಶಿಬಿರವನ್ನು ಆಯೋಜಿಸಿತ್ತು ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 30ನೇ  ಡಿಸೆಂಬರ್ 2014, ಮಂಗಳವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. ಈ ಶಿಬಿರದಲ್ಲಿ ಒಟ್ಟು 37 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮೂತ್ರಕೋಶದ  ಕಲ್ಲುಗಳನ್ನು ಹೊರತೆಗೆಯಲಾಯಿತು. 

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆ ಮತ್ತು ಸಾಯಿಬಾಬಾ ಆಸ್ಪತ್ರೆಗಳಲ್ಲಿ ವರ್ಷದುದ್ದಕ್ಕೂ ನಿಯಮಿತವಾಗಿ ಕೃತಕ ಕಣ್ಣಿನ ಮಸೂರ ಶಸ್ತ್ರಚಿಕಿತ್ಸಾ ಶಿಬಿರ, ಕೃತಕ ಜೈಪುರದ ಕಾಲುಗಳ ಜೋಡಣೆ ಶಿಬಿರ, ಪ್ಲಾಸ್ಟಿಕ್ ಸರ್ಜರಿ ಶಿಬಿರ, ಹೋಮಿಯೋಪತಿ ಶಿಬಿರ, ಸಂಧಿವಾತ ಮತ್ತು ಕೀಲುನೋವು ಶಿಬಿರ,   ಹಲವಾರು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರಿಗಾಗಿ ವಿಶೇಷ ಲ್ಯಾಪ್ರೋಸ್ಕೋಪಿ ಶಿಬಿರ, ರೋಗ ನಿರ್ಣಯ ಶಿಬಿರ, ಮೂಗು ಚಿಕಿತ್ಸಾ ಶಿಬಿರ, ಎಂಡೋಸ್ಕೋಪಿ ಶಿಬಿರ, ಕ್ಯಾನ್ಸರ್ ಪತ್ತೆ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ, ಮೆಳ್ಳುಗಣ್ಣು ಪತ್ತೆ ಶಿಬಿರ ಹಾಗೂ ಲಿಥೋಟ್ರಿಪ್ಸಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ.ಜಾಧವ್ ತಿಳಿಸಿದರು. 

ಇತ್ತೀಚೆಗೆ ಹಮ್ಮಿಕೊಳ್ಳಲಾದ ಲಿಥೋಟ್ರಿಪ್ಸಿ ಶಿಬಿರದಲ್ಲಿ 19 ರೋಗಿಗಳ ಮೂತ್ರಕೋಶದಲ್ಲಿದ್ದ ಸುಮಾರು 1 ರಿಂದ 1.5 ಸೆಂಟಿಮೀಟರ್ ಗಾತ್ರದ ಸಣ್ಣ ಕಲ್ಲುಗಳನ್ನು ಲಿಥೋಟ್ರಿಪ್ಸಿ ಧ್ವನಿ ತರಂಗಗಳ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಯಿತು.  ಅದೇ ರೀತಿಯಲ್ಲಿ  18 ರೋಗಿಗಳ  ಮೂತ್ರಕೋಶದಲ್ಲಿದ್ದ ದೊಡ್ಡ ಗಾತ್ರದ ಕಲ್ಲುಗಳನ್ನು ಪರ್ಕ್ಯುಟೇನಿಯಸ್ ನೆಪ್ರೊಲಿಥೋಟೋಮಿ ಶಸ್ತ್ರಚಿಕಿತ್ಸೆಯ ಸಹಾಯದಿಂದ ಹೊರತೆಗೆಯಲಾಯಿತು. ಅಹಮದಾಬಾದ್ ನ ಖ್ಯಾತ ಯೂರೋಸರ್ಜನ್ ಆದ ಡಾ.ಕೇತನ್  ಶುಕ್ಲಾರವರು ತಮ್ಮ ವೈದ್ಯರ ತಂಡ ಹಾಗೂ ಆಂಬ್ಯುಲೆನ್ಸ್ ಶಸ್ತ್ರಚಿಕಿತ್ಸೆ ವ್ಯಾನ್ ನೊಂದಿಗೆ ಶಿರಡಿಯಲ್ಲಿ ನಡೆದ ಈ ಶಿಬಿರಕ್ಕೆ ಆಗಮಿಸಿ ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 

ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ರಾಮ್ ನಾಯಕ್, ಅರವಳಿಕೆ ತಜ್ಞರು, ಶ್ರೀ ಸಾಯಿನಾಥ ಆಸ್ಪತ್ರೆಯ ಸಿಬ್ಬಂದಿಗಳು ಈ ಶಿಬಿರವು ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.  ಈ ಶಸ್ತ್ರ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ 25,000 ದಿಂದ 30,000 ರೂಪಾಯಿಗಳವರೆಗೆ ಖರ್ಚು ತಗುಲಲಿದ್ದು ಶ್ರೀ ಸಾಯಿನಾಥ ಆಸ್ಪತ್ರೆಯು ಉಚಿತವಾಗಿ ಈ ಸೇವೆಯನ್ನು ರೋಗಿಗಳಿಗೆ ಒದಗಿಸಿತು. ಅಷ್ಟೆ ಅಲ್ಲದೆ ಎರಡು ಹೊತ್ತು ಉಚಿತ ಊಟ ಮತ್ತು ಟೀ  ಸೇವೆಯನ್ನು ಸಹ ಆಸ್ಪತ್ರೆಯ ವತಿಯಿಂದ ರೋಗಿಗಳಿಗೆ ನೀಡಲಾಯಿತು. 

ಈ ಶಿಬಿರವು ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಕೌಶಿಕ್ ಮಕ್ವಾನ, ವೈದ್ಯಕೀಯ ಅಧಿಕಾರಿಗಳು ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಮರಾಠಿಯಿಂದ ಆಂಗ್ಲಭಾಷೆಗೆ:ಶ್ರೀ ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ  

No comments:

Post a Comment