Monday, June 30, 2014

ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಬಗ್ಗೆ ಮರಾಠಿ ಭಾಷೆಯಲ್ಲಿ ರಚಿಸಲಾದ ಹೊಸ ಪುಸ್ತಕ "ಸಾಯಿಂಚ್ಯಾ ಸಾನಿಧ್ಯಾತ್" ಪುಸ್ತಕದ ಲೋಕಾರ್ಪಣೆ ಸಮಾರಂಭ - ಕೃಪೆ:ಸಾಯಿಅಮೃತಧಾರಾ.ಕಾಂ



ಶಿರಡಿ ಸಾಯಿಬಾಬಾರವರ ಬಗ್ಗೆ ರಚಿಸಲಾದ ಹೊಸ ಪುಸ್ತಕ  "ಸಾಯಿಂಚ್ಯಾ ಸಾನಿಧ್ಯಾತ್" ನ ಲೋಕಾರ್ಪಣೆ ಸಮಾರಂಭವು ಮುಂದಿನ ತಿಂಗಳ ಪವಿತ್ರ ಗುರುಪೂರ್ಣಿಮೆಯ ದಿನವಾದ 12ನೇ ಜುಲೈ  2014, ಶನಿವಾರದಂದು ಶಿರಡಿಯ ಸಮಾಧಿ ಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕದ ಲೇಖಕಿಯಾದ ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು ಸುದ್ದಿಗಾರರಿಗೆ ತಿಳಿಸಿದರು. 

ಲೇಖಕಿ ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು ಶ್ರೀ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಪಡಿಸುವ ಶ್ರೀ ಸಾಯಿಲೀಲಾ ದ್ವೈಮಾಸಿಕದಲ್ಲಿ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಾ ಬಂದಿದ್ದು ಸಾಯಿಲೀಲಾ ಓದುಗರಿಗೆ ಚಿರಪರಿಚಿತರಾಗಿದ್ದಾರೆ. 

ಈ ಪುಸ್ತಕದಲ್ಲಿ ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿ ಅವರೊಂದಿಗೆ ಹತ್ತಿರದ ಒಡನಾಡವನ್ನು ಹೊಂದಿದ್ದ 77 ಸಾಯಿ ಮಹಾಭಕ್ತರ ಬಗ್ಗೆ ಅತ್ಯಂತ ಅಪರೂಪದ ಹಾಗೂ ನಿಖರ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಶ್ರೀಮತಿ ಮುಗ್ದ ಸುಧೀರ್ ದಿವಾಡಕರ್ ರವರು ಮಾಡಿರುತ್ತಾರೆ. ಅಷ್ಟೇ ಅಲ್ಲದೆ  ಶ್ರೀ ಸಾಯಿಬಾಬಾರವರ ಜೀವನ, ಉಪದೇಶಗಳು ಹಾಗೂ ತತ್ವಗಳನ್ನು ಆ ಮಹಾಭಕ್ತರು ತಮ್ಮ ಮಾತುಗಳಲ್ಲೇ ವರ್ಣಿಸಿರುವುದು ಈ ಪುಸ್ತಕದ ವಿಶೇಷತೆಯಾಗಿರುತ್ತದೆ. 

ಪುಸ್ತಕವು 544 ಪುಟಗಳಷ್ಟು ವಿಷಯವನ್ನು ಹೊಂದಿದ್ದು ಇದರ ಬೆಲೆಯನ್ನು  600 ರೂಪಾಯಿಗಳೆಂದು ನಿಗದಿಪಡಿಸಲಾಗಿದೆ. ಅಲ್ಲದೇ ಲೋಕಾರ್ಪಣೆಯ ವಿಶೇಷ ಕೊಡುಗೆಯಾಗಿ ಪ್ರಕಾಶಕರು 31ನೇ  ಜುಲೈ 2014 ರವರಗೆ ಈ ಪುಸ್ತಕವನ್ನು ಕೇವಲ 450 ರೂಪಾಯಿಗಳಿಗೆ ನೀಡುತ್ತಿದ್ದಾರೆ. 

ಪುಸ್ತಕವನ್ನು ಪಡೆಯಲು ಇಚ್ಚಿಸುವ ಸಾಯಿ ಭಕ್ತರು ಡಿಡಿ ಅಥವಾ ಚೆಕ್ ಮುಖಾಂತರ 31ನೇ  ಜುಲೈ 2014 ರವರಗೆ  450 ರೂಪಾಯಿಗಳಂತೆ ಹಾಗೂ ತದನಂತರ  600 ರೂಪಾಯಿಗಳಂತೆ ಈ ಕೆಳಕಂಡ ವಿಳಾಸಕ್ಕೆ ಹಣವನ್ನು ಸಂದಾಯ ಮಾಡಬಹುದಾಗಿರುತ್ತದೆ. 

ಅನುಬಂಧ್ ಪ್ರಕಾಶನ, 
202, ಬಾಲಾಜಿ ಕಾಂಪ್ಲೆಕ್ಸ್,
ಬಾಲಾಜಿ ನಗರ, 
ಪುಣೆ – 411 043
ದೂರವಾಣಿ ಸಂಖ್ಯೆ: 020-2437 2871
ಮಿಂಚಂಚೆ: anubandhprakashan.pune@gmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, June 26, 2014

ಶಿರಡಿಯ ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಮಾಡಿಸುವ ಸಂದರ್ಭದಲ್ಲಿ ನುಡಿಸಲಾಗುವ ಶೆಹನಾಯ್ ನ ಹಿಂದಿರುವ ಕಥೆ - ಕೃಪೆ: ಸಾಯಿಅಮೃತಧಾರಾ.ಕಾಂ


ದಿವಂಗತ ಶ್ರೀ.ಬಿ.ವಿ.ತಾಲೀಮ್ ರವರು ಸುಂದರವಾಗಿ ಕೆತ್ತಿದ ಬಾಬಾರವರ 5-1/2 ಅಡಿ ಎತ್ತರದ ಇಟಾಲಿನ್ ಅಮೃತ ಶಿಲೆಯ ವಿಗ್ರಹವನ್ನು 7ನೇ ಅಕ್ಟೋಬರ್ 1954 ನೇ ಇಸವಿಯ ಪವಿತ್ರ ವಿಜಯದಶಮಿಯಂದು ಶಿರಡಿಯ ಸಮಾಧಿ ಮಂದಿರದಲ್ಲಿ ವಿಧ್ಯುಕ್ತವಾಗಿ ಪ್ರತಿಷ್ಟಾಪಿಸಲಾಯಿತು. ಆ ದಿನದಿಂದ ಪ್ರತಿನಿತ್ಯ ಬೆಳಗಿನ ಕಾಕಡಾ ಆರತಿಯ ನಂತರ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಲು ಪ್ರಾರಂಭಿಸಿದರು. 


ಹೀಗೆ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸುವ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಸಿದ್ಧ ಶೆಹನಾಯ್ ವಾದಕರಾದ ದಿವಂಗತ ಶ್ರೀ.ಬಿಸ್ಮಿಲ್ಲಾ ಖಾನ್ ರವರ ಶೆಹನಾಯ್ ನಿಂದ ಹೊರಬಂದ ಎರಡು ಪ್ರಸಿದ್ಧ ರಾಗಗಳಾದ ತೋಡಿ ಹಾಗೂ ಲಲಿತ್ ರಾಗಗಳ ಧ್ವನಿಮುದ್ರಿಕೆಯನ್ನು ಹಾಕುತ್ತಾ ಬಂದಿದೆ.  



ಮಹಾರಾಷ್ಟ್ರ ಸಂಪ್ರದಾಯದ ಪ್ರಕಾರ ಶೆಹನಾಯ್ ವಾದ್ಯವನ್ನು ಮದುವೆ ಹಾಗೂ ಇನ್ನಿತರ ಎಲ್ಲಾ ಶುಭ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ಅದೇ ಮಹಾರಾಷ್ಟ್ರ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಬರುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಕೂಡ ಪ್ರತಿನಿತ್ಯ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸುವ ಸಂದರ್ಭದಲ್ಲಿ  ಪ್ರಸಿದ್ಧ ಶೆಹನಾಯ್ ವಾದಕರಾದ ದಿವಂಗತ ಶ್ರೀ.ಬಿಸ್ಮಿಲ್ಲಾ ಖಾನ್ ರವರ ಶೆಹನಾಯ್ ನಿಂದ ಹೊರಬಂದ ಎರಡು ಪ್ರಸಿದ್ಧ ರಾಗಗಳಾದ ತೋಡಿ ಹಾಗೂ ಲಲಿತ್ ರಾಗಗಳ ಧ್ವನಿಮುದ್ರಿಕೆಯನ್ನು ಇಂದಿಗೂ ಹಾಕುತ್ತಾ ಬಂದಿದೆ.  

ಬಹಳ ವರ್ಷಗಳ ಹಿಂದೆ ಸಂಸ್ಥಾನವು ಶ್ರೀ ಸಾಯಿಬಾಬಾರವರ ವಿಗ್ರಹದ ಮಂಗಳ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು, ಹಾಲು ಹಾಗೂ ರೋಸ್ ವಾಟರ್ (ಗುಲಾಬಿ ನೀರು) ಗಳನ್ನು ಯಥೇಚ್ಛವಾಗಿ ಬಳಸುತ್ತಿತ್ತು. ಆದರೆ 2007-2008 ರಲ್ಲಿ ಹೆಚ್ಚಿನ ಭಕ್ತರು ಸಾಯಿಬಾಬಾರವರ ದರ್ಶನವನ್ನು ಪಡೆಯಲು ಸಹಾಯವಾಗಲೆಂದು ಸಂಸ್ಥಾನದವರು  ಆರತಿಯ ಸಮಯವನ್ನು ಬೆಳಿಗ್ಗೆ 5.15 ರಿಂದ 4.30 ಕ್ಕೆ ಬದಲಿಸಿದರು. ಸಾಯಿಬಾಬಾರವರ ವಿಗ್ರಹಕ್ಕೆ ಹಾನಿಯಾಗಬಾರದೆಂಬ ಕಾರಣದಿಂದ ಆಗಿನಿಂದ ಸಂಸ್ಥಾನವು ಹಾಲು ಹಾಗೂ ರೋಸ್ ವಾಟರ್ (ಗುಲಾಬಿ ನೀರು) ಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿತು.  ಅಲ್ಲದೇ ಅಂದಿನಿಂದ ಸಂಸ್ಥಾನವು ಅತಿ ಕಡಿಮೆ ಉಗುರು ಬೆಚ್ಚಗಿನ ನೀರನ್ನು ಬಳಸಿ ಅತ್ಯಂತ ಕಡಿಮೆ ಸಮಯದಲ್ಲಿ ಮಂಗಳ ಸ್ನಾನವನ್ನು ಪೂರ್ಣಗೊಳಿಸುತ್ತಾ ಬಂದಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಶಿರಡಿ ಸಾಯಿಬಾಬಾರವರಿಗೆ ಬಹಳ ಪ್ರಿಯವಾದ ತುಕಾರಾಂ ರವರ ಅಭಂಗಗಳನ್ನು ಹಾಡಿದ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನ್ - ಕೃಪೆ: ಸಾಯಿಅಮೃತಧಾರಾ.ಕಾಂ


ಬಾಬಾರವರು ಆಗಾಗ್ಗೆ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಮೈಮರೆತು ಕುಣಿಯುತ್ತಿದ್ದರು. ಅವರು ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು.  ಈ ಕೆಳಗೆ ಬರುವ ಲೀಲೆಯು ಶಿರಡಿಯಲ್ಲಿ ಹತ್ತು ದಿನಗಳ ಕಾಲ ಬಾಬಾರವರು ಇರಿಸಿಕೊಂಡಿದ್ದ ಖ್ಯಾತ ಹಿಂದೂಸ್ತಾನಿ ಗಾಯಕರಿಗೆ ಸಂಬಂಧಿಸಿದ್ದಾಗಿದೆ. .

ಹಲವಾರು ಸಂಗೀತಗಾರರು, ಗಾಯಕರು ಹಾಗೂ ಇನ್ನು ಅನೇಕ ಪ್ರತಿಭೆಗಳನ್ನು ಹೊಂದಿದ್ದವರು ಬಾಬಾರವರ ದರ್ಬಾರಿಗೆ ಬಂದು ತಮ್ಮ ಕಲೆಯನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಬಾಬಾರವರಿಗೆ ಸಂಗೀತದ ಬಗ್ಗೆ ಹೆಚ್ಚಿನ ಒಲವು ಹಾಗೂ ಪರಿಜ್ಞಾನ ಇತ್ತು. ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನ್  ಅಂತಹ ಒಬ್ಬ ಮಹಾನ್ ಗಾಯಕರಾಗಿದ್ದರು. ಇವರು ಕಿರಾನಾ ಘರಾನ ದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪದವಿಯನ್ನು ಪಡೆದಿದ್ದರು. ಈ ಪ್ರತಿಭಾನ್ವಿತ ಗಾಯಕರು ಕಂಚಿನ ಕಂಠವನ್ನು ಹೊಂದಿದ್ದರು. ಅಲ್ಲದೇ ಬಹಳ ಬುದ್ಧಿವಂತರೂ ಕೂಡ ಆಗಿದ್ದರು.  ಇವರ ಹೆಸರು ದೇಶದ ಉದ್ದಗಲಕ್ಕೂ ಹರಡಿತ್ತು. 

1914ನೇ ಇಸವಿಯಲ್ಲಿ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನ್ ರವರನ್ನು ಪ್ರತಾಪ್ ಶೇಟ್ ಎಂಬುವರು ಕಾರ್ಯಕ್ರಮವನ್ನು ನೀಡುವ ಸಲುವಾಗಿ ಅಮಲನೇರೆಗೆ ಬರಮಾಡಿಕೊಂಡಿದ್ದರು. ಆ ಕಾರ್ಯಕ್ರಮಕ್ಕೆ ಬಂದಿದ್ದ ಬಾಪುಸಾಹೇಬ್ ಬೂಟಿ ಮತ್ತಿತರ ಭಕ್ತರು ಅವರನ್ನು ಶಿರಡಿಗೆ ಬರುವಂತೆ ಆಹ್ವಾನಿಸಿದರು. ಹಾಗಾಗಿ ಖಾನ್ ಸಾಹೇಬ್ ತಮ್ಮ ಮಿಕ್ಕ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ  ಶಿರಡಿಗೆ ಭೇಟಿ ನೀಡಲು ನಿರ್ಧರಿಸಿದರು. ಅವರಿಗೆ ಸಂತರೆಂದರೆ ಮೊದಲಿನಿಂದಲೂ ಬಹಳ ಗೌರವವಿತ್ತು. ಹಾಗಾಗಿ ಶಿರಡಿಗೆ ತೆರಳಿ ಬಾಬಾರವರನ್ನು ಭೇಟಿ ಮಾಡಿ ಅವರಿಗೆ ತಮ್ಮ ಪ್ರಣಾಮಗಳನ್ನು ಸಲ್ಲಿಸಲು ನಿರ್ಧರಿಸಿದರು.  

ಅಂತೆಯೇ ಅವರು, ಅವರ ಶಿಷ್ಯ ವೃಂದ ಹಾಗೂ ಇತರ ಸಂಗೀತಗಾರರು ಶಿರಡಿಗೆ ಭೇಟಿ ನೀಡಿದರು. ಅಲ್ಲಿ ಅವರು ತಾತ್ಯಾ ಕೋತೆ ಪಾಟೀಲ್ ರವರ ಮನೆಯ ಹಜಾರದಲ್ಲಿ ಬೀಡು ಬಿಟ್ಟರು. ಆದಿನ ಸಂಜೆ ಎಂದಿನಂತೆ ದ್ವಾರಕಾಮಾಯಿಯಲ್ಲಿ ಭಜನೆ ನಡೆಯುತ್ತಿದ್ದಾಗ ಖಾನ್ ಸಾಹೇಬ್ ತಮ್ಮ ಸಹಗಾಯಕರ ಪಕ್ಕದಲ್ಲಿ ಕುಳಿತುಕೊಂಡಿದ್ದರು. ನಂತರ ಖಾನ್ ಸಾಹೇಬ್ ರವರು ಬಾಬಾರವರ ದರ್ಶನಕ್ಕೆಂದು  ತೆರಳಿದರು. ಬಾಬಾರವರು ಅವರನ್ನು ಆಶೀರ್ವದಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು. ನಂತರ ಬಾಬಾರವರು ತುಕಾರಾಂ ರವರ ಮರಾಠಿ ಅಭಂಗವೊಂದನ್ನು ಹಾಡುವಂತೆ ತಿಳಿಸಿದರು. ಆಗ ಖಾನ್ ಸಾಹೇಬ್ ರವರು ತಮ್ಮ ಸುಮಧುರ ಧ್ವನಿಯಲ್ಲಿ "ಹೇಚಿ ದಾನ ದೇಗ ದೇವಾ" ಎಂಬ ಸುಂದರ ಅಭಂಗವನ್ನು ಹಾಡಿದರು:



ಖಾನ್ ಸಾಹೇಬರು ಪೀಲು ರಾಗದಲ್ಲಿ ಹಾಡಿದ ಮೇಲಿನ ಈ ಅಭಂಗವನ್ನು ಬಾಬಾರವರು ಕಣ್ಣು ಮುಚ್ಚಿಕೊಂಡು ತನ್ಮಯರಾಗಿ ಆಲಿಸಿದರು. ನಂತರ ಬಾಬಾರವರು "ನಿನಗೇನು ವರ ಬೇಕು ಅದನ್ನು ಕೇಳಿಕೋ. ಈಗಲೇ ಶಿರಡಿಯನ್ನು ಬಿಟ್ಟು ಹೋಗುವ ಯೋಚನೆ ಮಾಡಬೇಡ. ನಿನ್ನ ಸಂಸಾರದ ಚಿಂತೆಯನ್ನು ಬಿಡು. ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ನುಡಿದರು. ನಂತರ ತಾತ್ಯಾ ಕೋತೆ ಪಾಟೀಲರ ಕಡೆಗೆ ತಿರುಗಿ ಬಾಬಾರವರು "ಇವರೆಲ್ಲರಿಗೂ ಶಿರಡಿಯಲ್ಲಿ ಇರುವ ತನಕ ದೊರೆಗಳಿಗೆ ಆದರಿಸುವಂತೆ ಆದರಿಸು" ಎಂದು ಆದೇಶಿಸಿದರು. 

ಮಾರನೇ ದಿನ ಖಾನ್ ಸಾಹೇಬರಿಗೆ ಅವರ ಪತ್ನಿ ತಹರಾಬಾಯಿಯವರಿಂದ ಅವರ ಮಗಳಾದ ಗುಲಾಬಕಲಿಗೆ ಬಹಳವೇ ಹುಷಾರಿಲ್ಲವೆಂದು ಹಾಗೂ ಕೂಡಲೇ ಹೊರಟು ಬರುವಂತೆ ತಂತಿ ಬಂತು. ಖಾನ್ ಸಾಹೇಬರು ಆ ತಂತಿಯನ್ನು ಹಿಡಿದುಕೊಂಡು ಬಾಬಾರವರ ಬಳಿಗೆ ಬಂದವರೇ ಆ ತಂತಿಯನ್ನು ಅವರಿಗೆ ನೀಡಿದರು. ಬಾಬಾರವರು ಖಾನ್ ಸಾಹೇಬರಿಗೆ ಅಭಯವನ್ನು ನೀಡಿ ಅವರ ಪರಿವಾರದ ಸದಸ್ಯರನ್ನು ಶಿರಡಿಗೆ ಬರಹೇಳುವಂತೆ ತಿಳಿಸಿದರು. ಅಂತೆಯೇ ಖಾನ್ ಸಾಹೇಬರ ಪತ್ನಿ ಹಾಗೂ ಅವರ ಮಗಳು ಶಿರಡಿಗೆ ಬಂದರು.  ಖಾನ್ ಸಾಹೇಬರು ಸಾವಿನ ದವಡೆಯಲ್ಲಿದ್ದ ತಮ್ಮ ಮಗಳನ್ನು ಎತ್ತಿಕೊಂಡು ಬಂದವರೇ ಬಾಬಾರವರ ಚರಣಗಳಲ್ಲಿ ಇರಿಸಿದರು. 

ಬಾಬಾರವರು ತಮ್ಮ ಚಿಲುಮೆಯಿಂದ ಸ್ವಲ್ಪ ಬೂದಿಯನ್ನು ಹೊರ ತೆಗೆದು ಅದನ್ನು ಬೆಲ್ಲದೊಡನೆ ಬೆರೆಸಿದರು. ನಂತರ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಖಾನ್ ಸಾಹೇಬರ ಮಗಳಿಗೆ ಕುಡಿಯಲು ನೀಡಿದರು. ಈ ರೀತಿ ಎರಡು ದಿನಗಳು ಚಿಕಿತ್ಸೆಯನ್ನು ನೀಡಿದ ನಂತರ ಗುಲಾಬಕಲಿ ಎದ್ದು  ಓಡಾಡತೊಡಗಿದಳು. ಬಾಬಾರವರು ಖಾನ್ ಸಾಹೇಬ್ ಹಾಗೂ ಅವರ ಪರಿವಾರದವರನ್ನು ಹತ್ತು ದಿನಗಳ ಕಾಲ ಶಿರಡಿಯಲ್ಲೇ ಇರಿಸಿಕೊಂಡರು. 

ಈ ನಡುವೆ ಖಾನ್ ಸಾಹೇಬರು ಇತರ ಭಕ್ತರ ಬಳಿ "ಬಾಬಾರವರು ಇಷ್ಟಪಡುವ ಭಜನೆಗಳು ಯಾವುವು?" ಎಂದು ವಿಚಾರಿಸಿದರು. ನಂತರ ಆ ಭಜನೆಯಗಳನ್ನು ಕಲಿತು ಬಾಯಿಪಾಠ ಮಾಡಿಕೊಂಡು ಬಾಬಾರವರ ಮುಂದೆ ಹಾಡಲು ಸಿದ್ಧರಾದರು. 

ಖಾನ್ ಸಾಹೇಬರ ತಂಡದಲ್ಲಿ ಸುಮಾರು ಇಪ್ಪತ್ತು ಶಿಷ್ಯರು, ಗಾಯಕರು ಹಾಗೂ ವಾದ್ಯಗಾರರು ಇದ್ದರು. ಅವರೆಲ್ಲರೂ ತಾತ್ಯಾ ಕೋತೆ ಪಾಟೀಲರ ಮನೆಯಲ್ಲಿ ಬೀಡು ಬಿಟ್ಟಿದ್ದರು. ಹಾಗಾಗಿ ತಹರಾಬಾಯಿ ಶ್ರೀಮತಿ.ಕೋತೆ ಪಾಟೀಲರಿಗೆ ಅಡುಗೆ ಮತ್ತು ಮನೆ ಕೆಲಸದಲ್ಲಿ ಸಹಾಯ ಮಾಡುವುದಾಗಿ ಹೇಳಿ ಮುಂದೆ ಬಂದರು.  ಅದಕ್ಕೆ ಶ್ರೀಮತಿ.ಕೋತೆ ಪಾಟೀಲರು "ನೀವು ಹೇಳುವುದೇನೋ ಸರಿ. ಆದರೆ ನಿಮ್ಮ ಯೋಗಕ್ಷೇಮ ನೋಡಿಕೊಳ್ಳಬೇಕೆಂದು ಬಾಬಾರವರಿಂದ ನಮಗೆ ಆಜ್ಞೆಯಾಗಿದೆ. ನಿಮಗೇನು ಅಡುಗೆ ಇಷ್ಟವೆಂದು ತಿಳಿಸಿದಲ್ಲಿ ಅದನ್ನೇ ಮಾಡಿ ನಿಮಗೆ ಬಡಿಸುತ್ತೇನೆ" ಎಂದು ತಿಳಿಸಿದರು. ಆ ರಾತ್ರಿಯಂದು ತಹರಾಬಾಯಿಯವರು ದ್ವಾರಕಾಮಾಯಿಯಲ್ಲಿ ಬಾಬಾರವರ ಮುಂದೆ ಕೆಲವು ಭಜನೆಗಳನ್ನು ಹಾಡಿ ನಂತರ ಆರತಿಯಲ್ಲಿ ಬರುವ  "ಗಾಲೀನ ಲೋಟಾಂಗಣ" ವನ್ನು ಹಾಡಿ ತಮ್ಮ ಭಜನೆಯ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಿದರು. ಇದರಿಂದ ಬಾಬಾರವರಿಗೆ ಬಹಳ ಸಂತೋಷವಾಯಿತು. 

ಶಿರಡಿಯಲ್ಲಿದ್ದಾಗ ಖಾನ್ ಸಾಹೇಬರಿಗೆ ಪುಣೆಯಲ್ಲಿದ್ದ ತಮ್ಮ ಸಂಗೀತ ಶಾಲೆಯ ಬಗ್ಗೆ ಚಿಂತೆ ಶುರುವಾಯಿತು. ಆಗ ಬಾಬಾರವರು ಅವರಿಗೆ ಅಭಯವನ್ನು ನೀಡಿ ಶಿರಡಿಯಿಂದ ಹೊರಡಲು ಅನುಮತಿ ನೀಡಿದರು. ಅವರು ಶಿರಡಿಯನ್ನು ಬಿಟ್ಟು ಹೊರಡುವಾಗ "ನಿನಗೆ ಶಿರಡಿಯನ್ನು ಬಿಟ್ಟು ಹೊರಡಲು ಅವಸರ ಇರುವಂತಿದೆ. ಆದರೆ, ನೀನು ಇಲ್ಲಿಂದ ಪುಣೆಗೆ ಹೋಗಬೇಡ. ಬದಲಿಗೆ ವರಾಹಡ್ ಗೆ ಹೋಗಿ ನೆಲೆಸು. ಏಕೆಂದರೆ ಅಲ್ಲಿ ಹತ್ತಿಯ ಗಿಡಗಳು ಚೆನ್ನಾಗಿ ಬೆಳೆದು ಒಳ್ಳೆಯ ಫಸಲನ್ನು ನೀಡುತ್ತಿದೆ" ಎಂದು ನುಡಿದರು. ನಂತರ ಖಾನ್ ಸಾಹೇಬರು ಬಾಬಾರವರ ಮುಂದೆ ಅವರು ಇಷ್ಟ ಪಡುವ ಹಲವು ಭಜನೆಗಳನ್ನು ಹಾಡಿದರು. ಅದರಲ್ಲೂ ಬಾಬಾರವರಿಗೆ ಅತ್ಯಂತ ಪ್ರಿಯವಾದ "ಜೇ ಕಾ ರಂಜಲೇ ಗಾಂಜಲೆ" ಎಂಬ ತುಕಾರಾಂ ರವರ ಅಭಂಗವನ್ನು ಹಾಗೂ "ಜೋಗಿಯ" ಎಂಬ ಅಕ್ಷರಗಳಿಂದ ಪ್ರಾರಂಭವಾಗುವ ಭಜನೆಗಳನ್ನು ಹಾಡಿದರು.


ಖಾನ್ ಸಾಹೇಬರು ಹೊರಡುವಾಗ ಬಾಬಾರವರು ಅವರ ಮೈದಡವಿ ಆಶೀರ್ವದಿಸಿ ಅವರಿಗೆ ಒಂದು ಬೆಳ್ಳಿಯ ನಾಣ್ಯವನ್ನು ನೀಡುತ್ತಾ "ಈ ಹಣವನ್ನು ಖರ್ಚು ಮಾಡದೇ ಸದಾ ನಿನ್ನ ಅಂಗಿಯ ಜೇಬಿನಲ್ಲಿ ಇರಿಸಿಕೋ" ಎಂದು ಹೇಳಿದರು. ನಂತರ ಅವರು ತಹರಾಬಾಯಿಯವರಿಗೆ 5 ರೂಪಾಯಿಗಳನ್ನು ನೀಡಿ ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಇರಿಸಿ ಜೋಪಾನ ಮಾಡುವಂತೆ ತಿಳಿಸಿದರು. ನಂತರ ಬಾಬಾರವರು ಸಿಹಿ ಪೇಡಾಗಳನ್ನು ತಮ್ಮ ಕೈಗೆತ್ತಿಕೊಂಡು ಆಕೆಯ ಸೀರೆಯ ಉಡಿಯಲ್ಲಿ ಹಾಕಿದರು.  “ಉಡಿ" ತುಂಬುವ ಸುಂದರ ಸಂಪ್ರದಾಯವು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪ್ರಚಲಿತದಲ್ಲಿದೆ. ಹಿರಿಯರು ಅಥವಾ ಗುರು ಸ್ವರೂಪರು ಮಹಿಳೆಯರ ಸೀರೆಯ ಉಡಿಯನ್ನು ತುಂಬಿ ಆಶೀರ್ವದಿಸುತ್ತಾರೆ. ಆ ಸಮಯದಲ್ಲಿ ಮಹಿಳೆಯರು ತಮ್ಮ ತಲೆಯನ್ನು ಸೀರೆಯ ಅಂಚಿನಿಂದ ಮುಚ್ಚಿಕೊಂಡು ಆ ಹಿರಿಯರಿಗೆ ತಮ್ಮ ಗೌರವವನ್ನು ಸೂಚಿಸುತ್ತಾರೆ. ಅಲ್ಲದೇ ಆ ಮಹಿಳೆಯರು ಕಿಬ್ಬೊಟ್ಟೆಯನ್ನು ಮುಚ್ಚುವ ಸೀರೆಯ ಭಾಗದ ಕೆಳ ಭಾಗವನ್ನು  ತಮ್ಮ ಎರಡೂ ಕೈಗಳಿಂದ ಹಿಡಿದುಕೊಂಡು ಆಶೀರ್ವಾದ ನೀಡುವಂತೆ ಮುಂದೆ ಮಾಡುತ್ತಾರೆ. ಆಗ ಆ ಹಿರಿಯರು ಅಥವಾ ಗುರುಗಳು ತೆಂಗಿನಕಾಯಿ ಅಥವಾ ಮತ್ಯಾವುದಾದರೂ ವಸ್ತುವನ್ನು ನೀಡಿ ಆಶೀರ್ವದಿಸುತ್ತಾರೆ. ಅಂತೆಯೇ ಇಲ್ಲಿ ಸಾಯಿಬಾಬಾರವರು ತಹರಾಬಾಯಿಯವರ ಉಡಿಯಲ್ಲಿ  ಅನೇಕ ಸಿಹಿ ಪೇಡಾವನ್ನು ಹಾಕಿ ಆಶೀರ್ವದಿಸಿದರು. (ಆಧಾರ: ವಿನ್ನಿ ಚಿಟ್ಲೂರಿಯವರ ಆಂಗ್ಲ ಗ್ರಂಥವಾದ ಬಾಬಾ'ಸ್  ವಾಣಿ).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, June 23, 2014

ಮುಂಬೈ ನ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, ಶ್ರೀ ಪ್ರೇಮಲ ವಿಠಲ ಮಂದಿರ, ಪಾನಸವಾಡಿ, ಮಿಲ್ ಏರಿಯಾ, ಗಿರ್ಗಾಮ್, ಮುಂಬೈ, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ ಸಾಯಿ ಸಚ್ಚರಿತ್ರೆಯ ನಾಲ್ಕನೆಯ ಅಧ್ಯಾಯದಲ್ಲಿ ಪವಿತ್ರ ತೀರ್ಥಕ್ಷೇತ್ರವಾದ ಪಂಢರಾಪುರ, ಶ್ರೀ ವಿಠಲ ಹಾಗೂ ರುಕ್ಮಾಯಿಯನ್ನು ಕುರಿತು ಉಲ್ಲೇಖಿಸಿರುವುದನ್ನು ನಾವು ಓದಿ ತಿಳಿದಿದ್ದೇವೆ. ಹೀಗೆ ಪಂಢರಾಪುರ ಹಾಗೂ ಶ್ರೀ.ವಿಠಲ ಮತ್ತು ರುಕ್ಮಾಯಿಯ ಬಗ್ಗೆ ಬರೆಯುತ್ತಾ ಅಣ್ಣಾ ಸಾಹೇಬ್ ದಾಭೋಲ್ಕರ್ ಆಲಿಯಾಸ್  ಹೇಮಾಡಪಂತರು "ಪಂಢರಾಪುರದಲ್ಲಿ ಶ್ರೀ ವಿಠಲ ರುಕ್ಮಾಯಿಯರ ದರ್ಶನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಶಿರಡಿಯಲ್ಲಿ ಸಾಯಿಬಾಬಾರವರೂ ಕೂಡ ಶ್ರೀ ವಿಠಲನಂತೆಯೇ ದರ್ಶನ ನೀಡುತ್ತಾರೆ" ಎಂದು ಉಲ್ಲೇಖಿಸಿದ್ದಾರೆ. 

ಅದೇ ಅಧ್ಯಾಯದ ಮುಂದಿನ ಸಾಲುಗಳಲ್ಲಿ ಸ್ವಯಂ ಶ್ರೀ ಸಾಯಿಬಾಬಾರವರೇ ದಾಸಗಣು ಮಹಾರಾಜ್ ರವರಿಗೆ "ಢಂಕಪುರಿಯಲ್ಲಿ ಶ್ರೀ.ಢಾಕುರನಾಥ ಹಾಗೂ ಪಂಢರಾಪುರದಲ್ಲಿ ಶ್ರೀ ವಿಠಲ ರುಕ್ಮಾಯಿಯರು ಇರುವಂತೆಯೇ ನಾನು ಶಿರಡಿಯಲ್ಲಿ ಇದ್ದೇನೆ. ಶ್ರೀ ಕೃಷ್ಣನನ್ನು ನೋಡಲು ದ್ವಾರಕಾನಗರಿಗೆ ಹೋಗಬೇಕಾಗಿಲ್ಲ" ಎಂದು ಹೇಳಿದ್ದಾರೆ. ಸಾಯಿಬಾಬಾರವರ ಈ ಮಾತುಗಳಿಂದ ಶ್ರೀ ವಿಠಲನು ಶಿರಡಿಯಲ್ಲಿ ಕೂಡ ನೆಲೆಸಿದ್ದಾನೆಂದು ಸ್ವಯಂ ಬಾಬಾರವರೇ ಮನಗಂಡಿದ್ದು ನಮ್ಮ ಅರಿವಿಗೆ ಬರುತ್ತದೆ. 

ಪಂಢರಾಪುರದ ಶ್ರೀ ವಿಠಲನ ಬಗ್ಗೆ ಬಾಬಾರವರಿಗೆ ಇದ್ದ ವಿಶೇಷ ಗೌರವವನ್ನು ನಾವು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ ಬರುವ ಸಾಯಿ ಭಕ್ತ ಶ್ರೀ ಭಗವಂತ ಕ್ಷೀರಸಾಗರರ ಕಥೆಯಿಂದ ತಿಳಿದುಕೊಳ್ಳಬಹುದಾಗಿದೆ. ಶ್ರೀ ವಿಠಲನು ಭಗವಂತ ಕ್ಷೀರಸಾಗರರ ಕುಲದೈವವಾಗಿದ್ದರು.  ಅವರ ತಂದೆಯವರೂ ಸಹ ವಿಠಲನ ಭಕ್ತರಾಗಿದ್ದು ಅವರ ಮನೆಯಲ್ಲಿ ವಿಠಲನ ಪೂಜೆಯನ್ನು ಅತ್ಯಂತ ಹೆಚ್ಚಿನ ಶ್ರದ್ಧಾ ಭಕ್ತಿಗಳಿಂದ ಆಚರಿಸಿಕೊಂಡು ಬಂದಿದ್ದರು. ಅವರ ತಂದೆಯವರ ಮರಣದ ನಂತರ ಈ ಜವಾಬ್ದಾರಿ ಶ್ರೀ ಭಗವಂತ ಕ್ಷೀರಸಾಗರರ ಮೇಲೆ ಬಿತ್ತು. ಆದರೆ ಅನಿವಾರ್ಯ ಕಾರಣದಿಂದ ಅವರು ವಿಠಲನ ಪೂಜೆಯನ್ನು ಮುಂದುವರಿಸಿಕೊಂಡು ಹೋಗಲಿಲ್ಲ. ಹಾಗಾಗಿ, ಶ್ರೀ ಭಗವಂತ ಕ್ಷೀರಸಾಗರರು ಒಮ್ಮೆ ಶಿರಡಿಗೆ ಶ್ರೀ ಸಾಯಿಬಾಬಾರವರ ದರ್ಶನಕ್ಕೆಂದು ಬಂದಿದ್ದಾಗ ಬಾಬಾರವರು ಈ ವಿಷಯದ ಬಗ್ಗ್ಗೆ ಭಗವಂತ ಕ್ಷೀರಸಾಗರರ ಹತ್ತಿರ ಪ್ರಸ್ತಾಪ ಮಾಡಿದರು ಹಾಗೂ ಎಲ್ಲಾ ದೇವರೂ ಒಂದೇ ಎಂಬ ಸತ್ಯವನ್ನು ಅವರಿಗೆ ತಿಳಿಸಿದರು. ಅಲ್ಲದೇ ಅವರು ಮಾಡುತ್ತಿದ್ದ ವಿಠಲನ ಪೂಜೆಯನ್ನು ಮುಂದುವರಿಸಿಕೊಂಡು ಹೋಗುವುದನ್ನು ಬಿಟ್ಟು ಶಿರಡಿಗೆ ಓಡಿ ಬರುವ ಅವಶ್ಯಕತೆ ಇರಲಿಲ್ಲವೆಂದು ಬಾಬಾರವರು ಕ್ಷೀರಸಾಗರರಿಗೆ ಮನದಟ್ಟು ಮಾಡಿಸಿದರು. ಭಗವಂತ ಕ್ಷೀರಸಾಗರರಿಗೆ ಎಲ್ಲಾ ದೇವರುಗಳೂ ಒಂದೇ ಎಂದು ತೋರಿಸುವ ಸಲುವಾಗಿ ಬಾಬಾರವರು ಅವರಿಗೆ ಪಂಢರಾಪುರದ ಶ್ರೀ ವಿಠಲನಂತೆ ದರ್ಶನ ನೀಡಿದರು. 

ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಗಳೂ ಶಿರಡಿಯ  ಶ್ರೀ ಸಾಯಿಬಾಬಾ ಹಾಗೂ ಪಂಢರಾಪುರದ ಶ್ರೀ ವಿಠಲರಿಗಿರುವ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ. ಮುಂಬೈನ ಗಿರ್ಗಾಮ್ ನ ಪಾನಸವಾಡಿಯಲ್ಲಿರುವ ಸಾಯಿಬಾಬಾ ಮಂದಿರವು ಮೊದಲಿಗೆ ವಿಠಲನ ಮಂದಿರವಾಗಿದ್ದು "ಶ್ರೀ ಪ್ರೇಮಲ ವಿಠಲ ಮಂದಿರ" ವೆಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ಮಂದಿರವನ್ನು ಶ್ರೀ ಗಜಾನನ ವಿನಾಯಕ ಪ್ರಧಾನ್ ಎಂಬುವರು ತಮ್ಮ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಿ ಮಂದಿರದ ಗರ್ಭಗುಡಿಯಲಿ ಶ್ರೀ ವಿಠಲ ಹಾಗೂ ರುಕ್ಮಾಯಿಯ ವಿಗ್ರಹಗಳನ್ನು ಪ್ರತಿಷ್ಟಾಪಿಸಿದರು. ಆದರೆ ಶ್ರೀ ವಸಂತಾಶಾಸ್ತ್ರಿ ಆಲಿಯಾಸ್ ಅಬಾ ಪಂಶೀಕರ್ ರವರು ಮಂದಿರವನ್ನು ಸಂಪೂರ್ಣವಾಗಿ ನವೀಕರಣಗೊಳಿಸಿ ಹಳೆಯ ಮಂದಿರಕ್ಕೆ ಈಗ ಇರುವ ರೂಪವನ್ನು ನೀಡಿದರು. 

ಶ್ರೀ ಅಬಾ ಪಂಶೀಕರ್ ರವರು ಮರಾಠಿ ರಂಗಭೂಮಿಯ ಪ್ರಸಿದ್ಧ ನಟರಾಗಿದ್ದಾರೆ. ಅವರು ಹಾಗೂ ಅವರ ಸಹೋದರ ಈ ಮಂದಿರದಲ್ಲಿ ನಿಯಮಿತವಾಗಿ ಕೀರ್ತನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸಾಯಿ ಭಕ್ತರಾದ ಶ್ರೀ ಭೋಲೆ ಗುರೂಜಿಯವರು ಮಂದಿರದ ಹತ್ತಿರದ ಗಿರ್ಗಾಮ್ ನ ಮುಗ್ಭಾತ್ ನಲ್ಲಿ  ಮನೆ ಮಾಡಿಕೊಂಡಿದ್ದ ಕಾರಣ ಶ್ರೀ ಅಬಾ ಪಂಶೀಕರ್ ರವರ ಕೀರ್ತನೆಯನ್ನು ಆಲಿಸಲು ಆಗಾಗ್ಗೆ ಬರುತ್ತಿದ್ದರು.  ಶ್ರೀ ಭೋಲೆ ಗುರೂಜಿಯವರು ಶ್ರೀ ಅಬಾ ಪಂಶೀಕರ್ ರವರಿಗೆ ಸಾಯಿಬಾಬಾರವರ ಪೂಜೆಯನ್ನು ಮಾಡುವಂತೆ ಸಲಹೆ ನೀಡಿದರು. ಅಲ್ಲಿಯವರೆಗೆ ಶ್ರೀ ಪಂಶೀಕರ್ ರವರು ಬಾಬಾರವರ ದೈವತ್ವದ ಬಗ್ಗೆ ಕೇಳಿಯೇ ಇರಲಿಲ್ಲ. ಆದರೆ ಶ್ರೀ ಭೋಲೆ ಗುರೂಜಿಯವರಿಂದ ಉಪದೇಶ ಪಡೆದ ನಂತರ ಅವರು ಬಹಳವೇ ಸಂತೋಷದಿಂದ ಶ್ರೀ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.  ಕೆಲವೇ ದಿನಗಳಲ್ಲಿ ಅವರು ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದಷ್ಟೇ ಅಲ್ಲದೇ ಶ್ರೀ ವಿಠಲನ ಮಂದಿರವನ್ನು ಶ್ರೀ ಸಾಯಿಬಾಬಾ ಮಂದಿರವಾಗಿ ಮಾರ್ಪಡಿಸಲು ಯೋಚಿಸಿದರು. ಹೀಗೆ ಶ್ರೀ ಅಬಾ ಪಂಶೀಕರ್ ರವರ ಅವಿರತ ಶ್ರಮದ ಫಲವಾಗಿ ಶ್ರೀ ವಿಠಲನ ಮಂದಿರವು ಶ್ರೀ  ಸಾಯಿಬಾಬಾ ಮಂದಿರವಾಗಿ ಮಾರ್ಪಟ್ಟು ಅದೇ ಹೆಸರಿನಿಂದ ಪ್ರಸಿದ್ಧವಾಗಿದೆ. 

ಈ ಮಂದಿರದಲ್ಲಿ ಸುಮಾರು ನಾಲ್ಕೂವರೆ ಅಡಿ ಎತ್ತರದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಮಾಡಿದ ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದಾಗಿದೆ.  ಈ ವಿಗ್ರಹವನ್ನು ಒಂದು ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ ಮೊದಲಿಗೆ ಇದ್ದ ಶ್ರೀ ವಿಠಲ ಹಾಗೂ ರುಕ್ಮಾಯಿಯ ವಿಗ್ರಹಗಳನ್ನು ಸಹ ಸಾಯಿ ಭಕ್ತರು ನೋಡಬಹುದಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಸಾಯಿಬಾಬಾರವರ ಸುಂದರ ವಿಗ್ರಹವನ್ನು ಖ್ಯಾತ ಶಿಲ್ಪಿಯಾದ ಶ್ರೀ.ಜಿ.ವಿ.ಪಾಟ್ಕರ್ ರವರು ತಯಾರಿಸಿರುತ್ತಾರೆ. ಮೊದಲು ಈ ಮಂದಿರವನ್ನು ಸ್ವಂತಕ್ಕೆಂದು ಕಟ್ಟಿಸಿ ಕೊಂಡಿದ್ದರೂ ಸಹ ನಂತರದ ದಿನಗಳಲ್ಲಿ ಸಾರ್ವಜನಿಕರಿಗೂ ಸಹ ದರ್ಶನ ಮಾಡಲು ಅವಕಾಶ ನೀಡಲಾಯಿತು.  ಪ್ರಸ್ತುತ ಯಾರು ಬೇಕಾದರೂ ಈ ಮಂದಿರಕ್ಕೆ ತೆರಳಿ ಶ್ರೀ ಸಾಯಿಬಾಬಾ ಹಾಗೂ ಶ್ರೀ ವಿಠಲ ಮತ್ತು ರುಕ್ಮಾಯಿಯರ ವಿಗ್ರಹಗಳಿಗೆ ಪುಷ್ಪ ಹಾಗೂ ಹೂಮಾಲೆಯನ್ನು ಅರ್ಪಿಸಿ ಪೂಜಿಸಿಕೊಳ್ಳಬಹುದಾಗಿರುತ್ತದೆ. 

ಮಂದಿರದ ಹಿಂಭಾಗದಲ್ಲಿ ಸುಮಾರು ನೂರು ವರ್ಷಗಳಿಗೂ ಹಳೆಯದಾದ ಆಲದ ಮರ ಇದೆ.  ಈ ಮರದ ಸುತ್ತಲೂ ಶ್ರೀ ದತ್ತಾತ್ರೇಯ, ಹನುಮಾನ್ ಹಾಗೂ ಶಿವಲಿಂಗಗಳನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ ಬೆಳ್ಳಿಯಲ್ಲಿ ಕೆತ್ತಲಾಗಿರುವ ಸಾಯಿಬಾಬಾರವರ ಪಾದುಕೆಗಳನ್ನು ಸಹ ಈ ಮಂದಿರದಲ್ಲಿ ನೋಡಬಹುದಾಗಿದೆ. ಈ ಪವಿತ್ರ ಪಾದುಕೆಗಳನ್ನು 26ನೇ ಅಕ್ಟೋಬರ್ 1952 ರಂದು ಶ್ರೀ ಪಾಲೇಕರ್ ಶಾಸ್ತ್ರಿಯವರು ತಮ್ಮ ಅಮೃತ ಹಸ್ತದಿಂದ ಪ್ರತಿಷ್ಟಾಪಿಸಿರುತ್ತಾರೆ.

ಬೆಳ್ಳಿಯಲ್ಲಿ ಶ್ರೀ ಸಾಯಿಬಾಬಾರವರ ಪಾದುಕೆಗಳನ್ನು ತಯಾರು ಮಾಡಿಸಿ ಭಕ್ತರ ಮನೆಗಳಿಗೆ ಹಾಗೂ ಸಂಸ್ಥೆಗಳಿಗೆ ಪೂಜೆ ಮಾಡಿಕೊಳ್ಳುವ ಸಲುವಾಗಿ ನೀಡುವ ಸಂಪ್ರದಾಯವನ್ನು ಈ ಮಂದಿರದವರು ಮೊದಲಿಗೆ ಪ್ರಾರಂಭಿಸಿದರು. ಇದುವರೆಗೂ ಈ ಮಂದಿರದ ವತಿಯಿಂದ ಪೂಜೆ ಮಾಡಿಕೊಳ್ಳುವ ಸಲುವಾಗಿ ಐದು ವಿವಿಧ ಮಂದಿರಗಳಿಗೆ ಬೆಳ್ಳಿಯ ಪಾದುಕೆಗಳನ್ನು ಮಾಡಿಕೊಡಲಾಗಿದೆ. ಲಂಡನ್ ನಲ್ಲಿ ಶ್ರೀಮತಿ.ಅಜೀಬಾಯಿ ವನರಸೆಯವರು ನೆಡೆಸುತ್ತಿರುವ ಸಾಯಿಬಾಬಾ ಮಂದಿರದಲ್ಲಿ ಕೂಡ ಈ ಮಂದಿರದ ವತಿಯಿಂದ ಮಾಡಿಕೊಡಲಾದ ಬೆಳ್ಳಿಯ ಪಾದುಕೆಗಳನ್ನು ಪೂಜಿಸಲಾಗುತ್ತಿದೆ ಎಂಬ ವಿಷಯವನ್ನು ಸಾಯಿ ಭಕ್ತರು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುತ್ತದೆ. 

"ಮಾನವ ಸೇವೆ ಹಾಗೂ ಮಾತು ಬರದವರ ಸೇವೆಯನ್ನು ಮಾಡುವುದೇ ನಿಜವಾಗಿ ನಾವು ದೇವರಿಗೆ ಮಾಡುವ ಸೇವೆ" ಎಂಬುದು ಶ್ರೀ ಸಾಯಿಬಾಬಾರವರ ಧ್ಯೇಯವಾಗಿತ್ತು. ಈ ಮಂದಿರದ ಟ್ರಸ್ಟ್ ನ ಸದಸ್ಯರು ಈ ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದಾರೆ. ಹಾಗಾಗಿ ಮಂದಿರದ ಟ್ರಸ್ಟ್ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಸಹ ತನ್ನನ್ನು ತಾನು ತೊಡಗಿಸಿಕೊಂಡಿದೆ. ಮಂದಿರದ ಮೊದಲನೇ ಮಹಡಿಯಲ್ಲಿ ಮುಂಬೈ ಮಹಾನಗರದಲ್ಲಿ ತಂಗಲು ಸ್ಥಳವಿಲ್ಲದೆ ಒದ್ದಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇದರ ಸದುಪಯೋಗವನ್ನು ಹಲವಾರು ವಿದ್ಯಾರ್ಥಿಗಳು ಪಡೆದುಕೊಂಡಿರುವುದಷ್ಟೇ ಅಲ್ಲದೇ ಸಣ್ಣ ವಯಸ್ಸಿನಿಂದಲೇ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ.  

ಶಿರಡಿಯಲ್ಲಿ ನಡೆಯುವಂತೆಯೇ ಈ ಮಂದಿರದಲ್ಲಿ ಕೂಡ ಆರತಿ ಹಾಗೂ ಪೂಜೆಗಳನ್ನು ನೆರವೇರಿಸಲಾಗುತ್ತಿದೆ.  ಅಲ್ಲದೇ ಶಿರಡಿಯಲ್ಲಿ ನೆಡೆಯುವಂತೆಯೇ ಇಲ್ಲಿ ಕೂಡ ಶ್ರೀರಾಮನವಮಿ, ಗುರುಪೂರ್ಣಿಮೆ ಹಾಗೂ ವಿಜಯದಶಮಿ ಉತ್ಸವಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಅಲ್ಲದೇ ಪ್ರತಿ ವರ್ಷದ ಶ್ರಾವಣ ಮಾಸದ ಸೋಮವಾರದಂದು ಹಾಗೂ ಮಹಾ ಶಿವರಾತ್ರಿಯ ದಿನದಂದು ಶ್ರೀ ಸಾಯಿಬಾಬಾರವರಿಗೆ ಹಣ್ಣುಗಳ ನೈವೇದ್ಯವನ್ನು ಅರ್ಪಿಸಿ ಅದೇ ಹಣ್ಣುಗಳನ್ನು ಮಂದಿರಕ್ಕೆ ಅಂದು ಬರುವ ಎಲ್ಲಾ ಭಕ್ತರಿಗೂ ಪ್ರಸಾದ ರೂಪದಲ್ಲಿ ಹಂಚಲಾಗುತ್ತಿದೆ. ಮಹಾನ್ ಸಾಯಿ ಭಕ್ತರಾದ  ಶ್ರೀ ಪಾಂಡುರಂಗ ಮಹದೇವ ವಾರಂಗ್ ರವರು ಈ ಮಂದಿರದ ಮೇಲುಸ್ತುವಾರಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇವರು ಬಾಲ್ಯದಿಂದ ಈ ಮಂದಿರದ ಆವರಣದಲ್ಲೇ ವಾಸವಾಗಿದ್ದು ಮಂದಿರದ ಎಲ್ಲಾ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಮಂದಿರದ ಟ್ರಸ್ಟ್ ನ ಸದಸ್ಯರು ಮಂದಿರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದರೆ ಮಂದಿರದಲ್ಲಿ ಸ್ಥಳಾವಕಾಶದ ಅಭಾವವಿರುವ ಕಾರಣ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಬಾಬಾರವರು ತಮಗೆ ಬಂದೊದಗುವ ಎಲ್ಲಾ ಕಷ್ಟಗಳನ್ನು ಆ ಕೂಡಲೇ ಹೊಡೆದೊಡಿಸುತ್ತಿದ್ದಾರೆ ಎಂದು ಶ್ರೀ ವಾರಂಗ್ ರವರು ಸಂತೋಷದಿಂದ ನುಡಿಯುತ್ತಾರೆ. ಇವರು ಅವರಿಗೆ ಬಾಬಾರವರಲ್ಲಿರುವ ನಂಬಿಕೆ ಹಾಗೂ ಭಕ್ತಿಯನ್ನು ಸೂಚಿಸುತ್ತದೆ. 

ಮುಂಬೈನ ಗಿರ್ಗಾಮ್ ಪ್ರದೇಶವು ಜನರಿಂದ ಸದಾ ಕಿಕ್ಕಿರಿದು ತುಂಬಿರುವ ಪ್ರದೇಶವಾಗಿರುತ್ತದೆ.  ಲಾಲ್ ಬಾಗ್ ಹಾಗೂ ಪರೇಲ್ ನಡುವಿನ ಪ್ರದೇಶವಾದ "ಮಿಲ್ ಪ್ರದೇಶ" ವು ಸಹ ಸದಾ ಜನರಿಂದ ತುಂಬಿರುವ ಪ್ರದೇಶವಾಗಿರುತ್ತದೆ.  "ಮಿಲ್ ಪ್ರದೇಶ" ದಲ್ಲಿ ಕೆಳ  ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದು ತಮ್ಮ ಒಂದೊಂದು ದಿನವನ್ನು ಕಳೆಯಲು ಬಹಳ ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಅವರಿಗೆ ದೇವರ ಬಗ್ಗೆ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಆದರೆ ಗಿರ್ಗಾಮ್ ಪ್ರದೇಶದಲ್ಲಿ ಬಹಳಷ್ಟು ಶ್ರೀಮಂತರು ವಾಸವಾಗಿದ್ದಾರೆ.  ಅವರು ನಿಗದಿತ ಸಮಯವನ್ನು ತಮ್ಮ ಕಛೇರಿಯ ಕೆಲಸಕ್ಕೆಂದು ವಿನಿಯೋಗಿಸುತ್ತಾರೆ. ಅಲ್ಲದೇ ಬಾಲ್ಯದಿಂದಲೇ ಅವರಲ್ಲಿ ಧಾರ್ಮಿಕ ಆಚರಣೆಗಳು ಮೈಗೂಡಿಕೊಂಡಿರುತ್ತವೆ.  ಹಾಗಾಗಿ ಪೂಜೆ ಮಾಡಿಕೊಳ್ಳುವ ಸಲುವಾಗಿ ಹಾಗೂ ಮನಶ್ಯಾಂತಿಗಾಗಿ ಅವರುಗಳಿಗೆ ಪೂಜಾ ಸ್ಥಳದ ಅವಶ್ಯಕತೆ ಇದೆ. ಈ ಹಿಂದೆ ವಿಠಲನ ಭಕ್ತರಾಗಿದ್ದ ಜನರು ಈ ಮಂದಿರಕ್ಕೆ ಪೂಜೆ ಮಾಡುವ ಸಲುವಾಗಿ ಬರುತ್ತಾರೆ. ಅಲ್ಲಿ ಬಂದವರೇ ಶ್ರೀ ಸಾಯಿಬಾಬಾರವರ ವಿಗ್ರಹವನ್ನು ನೋಡಿ ಹಾಗೂ ಅವರ ದೈವತ್ವವನ್ನು ತಿಳಿದವರೇ ಸಾಯಿ ಭಕ್ತರಾಗಿ ಪರಿವರ್ತನೆಯಾಗುತ್ತಾರೆ. ಈ ರೀತಿಯಲ್ಲಿ ಗಿರ್ಗಾಮ್ ಪ್ರದೇಶದಲ್ಲಿ ವಾಸಿಸುವ ಭಕ್ತರಿಗೆ ಈ ಮಂದಿರವು ಬಹಳ ಉಪಯೋಗಕಾರಿಯಾಗಿದೆ ಎಂದು ಹೇಳಬಹುದು. ಹಾಗಾಗಿ ಈ ಮಂದಿರಕ್ಕೆ ಪ್ರತಿನಿತ್ಯ ಬಹಳ ಭಕ್ತರು ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. 

ಮಂದಿರದ ವಿಳಾಸ: 

ಶ್ರೀ ಸಾಯಿಬಾಬಾ ಮಂದಿರ 
ಶ್ರೀ ಪ್ರೇಮಲ ವಿಠಲ ಮಂದಿರ,
ಪಾನಸವಾಡಿ, 
ಮಿಲ್ ಏರಿಯಾ, ಗಿರ್ಗಾಮ್,
ಮುಂಬೈ,ಮಹಾರಾಷ್ಟ್ರ, ಭಾರತ.  

(ಆಧಾರ:ಶ್ರೀ ಸಾಯಿ ಲೀಲಾ ಪತ್ರಿಕೆ (ಮರಾಠಿ), ಜುಲೈ 1975)


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, June 22, 2014

ಒರಿಸ್ಸಾ ರಾಜ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರ - ದ್ವಾರಕಾಮಾಯಿ ಸಾಯಿ ಭವನ್ ಟ್ರಸ್ಟ್, ಬರಾಲ್ ಪೋಖರಿ ಅಂಚೆ, ಚರಂಪ, ಭದ್ರಕ್ ಜಿಲ್ಲೆ, ಒರಿಸ್ಸಾ-756 101 - ಕೃಪೆ: ಸಾಯಿಅಮೃತಧಾರಾ.ಕಾಂ


ಮಂದಿರದ ವಿಶೇಷತೆಗಳು: 

ಈ ಸಾಯಿಬಾಬಾ ಮಂದಿರವು ಒರಿಸ್ಸಾ ರಾಜ್ಯದ ಭದ್ರಕ್ ಜಿಲ್ಲೆಯ ಬರಾಲ್ ಪೋಖರಿ ಗ್ರಾಮದಲ್ಲಿ ಇದೆ. ಮಂದಿರವು ಭದ್ರಕ್ ರೈಲು ನಿಲ್ದಾಣದ ಹತ್ತಿರದಲ್ಲಿರುತ್ತದೆ. 

ಮಂದಿರದ ಟ್ರಸ್ಟ್ ಅನ್ನು  8ನೇ ಆಗಸ್ಟ್  2013 ರಂದು ನೋಂದಣಿ ಸಂಖ್ಯೆ: 231303515 ಅಡಿಯಲ್ಲಿ ನೋಂದಣಿ ಮಾಡಲಾಗಿರುತ್ತದೆ. 

ಪ್ರಸ್ತುತ ಮನೆಯಲ್ಲಿ ಪ್ರಾರಂಭಿಸಲಾಗಿರುವ ಈ ಸಾಯಿಬಾಬಾ ಮಂದಿರದ ಪೂಜೆಯನ್ನು 9ನೇ ಜುಲೈ 2009 ರಿಂದ ನೆರವೇರಿಸಲಾಗುತ್ತಿದೆ.

ಕುಮಾರಿ ಪಯೋಸ್ವಿನಿ ಪತಿ ಈ ಮಂದಿರದ ಟ್ರಸ್ಟ್ ನ ಅಧ್ಯಕ್ಷೆಯಾಗಿರುತ್ತಾರೆ. ಬರಾಲ್ ಪೋಖರಿ ಗ್ರಾಮದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಮಂದಿರವನ್ನು ನಿರ್ಮಾಣ ಮಾಡುವ ಸಲುವಾಗಿ ಸೂಕ್ತ ಭೂಮಿಯನ್ನು ಹುಡುಕುವ ಕಾರ್ಯದಲ್ಲಿ ಮಂದಿರದ ಟ್ರಸ್ಟ್ ನ ಸದಸ್ಯರುಗಳು ತೊಡಗಿದ್ದಾರೆ. 



ಮಂದಿರದ ನಿತ್ಯ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಬೆಳಿಗ್ಗೆ: 05:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಮಂದಿರವನ್ನು ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿ ಸಮಯ: 

ಕಾಕಡಾ ಆರತಿ       06:00 
ಮಧ್ಯಾನ್ಹ ಆರತಿ          12:00 
ಧೂಪಾರತಿ          06:00 
ಶೇಜಾರತಿ           09:00 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರು ಪೂರ್ಣಿಮಾ
3.ವಿಜಯದಶಮಿ 

ಟ್ರಸ್ಟ್ ನ ಸಾಮಾಜಿಕ ಕಾರ್ಯಚಟುವಟಿಕೆಗಳು:

ಮಂದಿರದ ಟ್ರಸ್ಟ್ ನ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ತರು ನಿಯಮಿತವಾಗಿ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.  

ದೇವಾಲಯದ ಸಂಪರ್ಕದ ವಿವರಗಳು: 

ದ್ವಾರಕಾಮಾಯಿ ಸಾಯಿ ಭವನ್ ಟ್ರಸ್ಟ್ 
ಬರಾಲ್ ಪೋಖರಿ ಅಂಚೆ, 
ಚರಂಪ, ಭದ್ರಕ್ ಜಿಲ್ಲೆ, 
ಒರಿಸ್ಸಾ-756 101
ಭಾರತ. 
ಸಂಪರ್ಕಿಸಬೇಕಾದ ವ್ಯಕ್ತಿ :ಕುಮಾರಿ ಪಯೋಸ್ವಿನಿ ಪತಿ 
ದೂರವಾಣಿ ಸಂಖ್ಯೆ : +91 94375 16783
ಇ ಮೇಲ್ ವಿಳಾಸ:payoswinipati@gmail.com
ಸ್ಥಳ: ಭದ್ರಕ್ ರೈಲು ನಿಲ್ದಾಣದ ಹತ್ತಿರ 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಮಹಾರಾಷ್ಟ್ರ ಯುವ ಸೇನಾ ಅಧ್ಯಕ್ಷ ಶ್ರೀ.ಆದಿತ್ಯ ಥಾಕ್ರೆ ಶಿರಡಿ ಭೇಟಿ - ಕೃಪೆ:ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ಯುವ ಸೇನಾ ಅಧ್ಯಕ್ಷ ಶ್ರೀ.ಆದಿತ್ಯ ಥಾಕ್ರೆಯವರು ತಮ್ಮ ಪತ್ನಿಯವರೊಂದಿಗೆ ಇದೇ ತಿಂಗಳ 22ನೇ ಜೂನ್  2014, ಭಾನುವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, June 21, 2014

ಧೂಪಖೇಡಾದ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಗಣೇಶ ಮಂದಿರ, ಧೂಪಖೇಡಾ, ಪೈಠಾಣ್ ತಾಲೂಕು, ಔರಂಗಾಬಾದ್ ಜಿಲ್ಲೆ, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 


ಶ್ರೀ ಶಿರಡಿ ಸಾಯಿಬಾಬಾರವರ ಈ ಸುಪ್ರಸಿದ್ಧ ಮಂದಿರ ಹಾಗೂ ಪ್ರಪಂಚದ ಪ್ರಪ್ರಥಮ ಸಾಯಿ ಗಣೇಶ ಮಂದಿರವು ಶಿರಡಿ ಸಾಯಿಬಾಬಾರವರ ಪ್ರಕಟ ಭೂಮಿ ಎಂದೇ ಪ್ರಸಿದ್ಧವಾದ ಧೂಪಖೇಡಾ  ಗ್ರಾಮದಲ್ಲಿದೆ.  ಧೂಪಖೇಡಾವು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಠಾಣ್ ತಾಲೂಕಿನಲ್ಲಿದೆ. ಶ್ರೀ ಶಿರಡಿ ಸಾಯಿಬಾಬಾರವರು ಈ ಗ್ರಾಮದಲ್ಲಿ ಸುಮಾರು  9 ವರ್ಷಗಳ ಕಾಲ ಜೀವಿಸಿದ್ದರಿಂದ ಸಾಯಿ ಭಕ್ತರಿಗೆ ಇದೊಂದು ಪವಿತ್ರ ಸ್ಥಳವಾಗಿರುತ್ತದೆ.

ಈ ಮಂದಿರದ ಭೂಮಿ ಪೂಜೆಯನ್ನು 28ನೇ ಫೆಬ್ರವರಿ 2000 ದಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು  28ನೇ ಫೆಬ್ರವರಿ  2002 ರಂದು ಮಹಾರಾಷ್ಟ್ರದ ಕೊಲ್ಹಾಪುರದ ಕರವೀರ ಪೀಠದ ಜಗದ್ಗುರುಗಳಾದ ಶ್ರೀ.ವಿದ್ಯಾ ನರಸಿಂಹ ಭಾರತಿಯವರು ನೆರವೇರಿಸಿದರು

ಈ ಮಂದಿರವನ್ನು ಸಾಯಿ ಮಹಾಭಾಕ್ತರಾದ ದಿವಂಗತ ಶ್ರೀ.ಚಾಂದ್ ಭಾಯಿ ಪಾಟೀಲರ ಮರಿ ಮಗನಾದ (ನಾಲ್ಕನೇ ಪೀಳಿಗೆ) ಶ್ರೀ.ಬಾಬುಲಾಲ್ ನಾದಾನ್ ಪಠಾಣ್ ರವರು ಮಂದಿರದ ಟ್ರಸ್ಟ್ ಗೆ ದಾನವಾಗಿ ನೀಡಿದ 47000 ಚದರ ಅಡಿ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ಸಾಯಿ ಸಾಧಕ ಶ್ರೀ.ಬಲದೇವ ಭಾರತಿಯವರು ಈ ಮಂದಿರ ಹಾಗೂ ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಅವರು ಮಂದಿರದ ದಿನ ನಿತ್ಯದ ಆಗು ಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಅವರು ಸೇವೆ, ಸಾಧನ, ಅನ್ನದಾನ, ಆರೋಗ್ಯ ಹಾಗೂ ಪ್ರಚಾರ/ಪ್ರಸಾರ ಎಂಬ ಐದು ಒಳ್ಳೆಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಮಂದಿರ ಹಾಗೂ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. 

ಮಂದಿರದಲ್ಲಿ ಶ್ರೀ ಸಾಯಿ ಗಣೇಶನ  ಸುಂದರ ಅಮೃತ ಶಿಲೆಯ ವಿಗ್ರಹ ಹಾಗೂ ವಿಗ್ರಹದ ಎದುರುಗಡೆ ಇರುವ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ. 

ಮಂದಿರದ ಎದುರುಗಡೆ ನಿರ್ಮಿಸಲಾಗಿರುವ ಪುಟ್ಟ ಮಂದಿರದಲ್ಲಿ ಅಮೃತಶಿಲೆಯ ದತ್ತಾತ್ತ್ರೇಯರ ಸುಂದರವಾದ ವಿಗ್ರಹವನ್ನು ನೋಡಬಹುದಾಗಿದೆ. 

ಶ್ರೀ ಸಾಯಿ ಗಣೇಶ ಮಂದಿರದ ಎಡಭಾಗದಲ್ಲಿ ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮವನ್ನು ನಿರ್ಮಿಸಲಾಗಿದ್ದು ಅಲ್ಲಿ ಅಕ್ಕಲಕೋಟೆ ಮಹಾರಾಜ ಶ್ರೀ ಸ್ವಾಮಿ ಸಮರ್ಥ, ಶ್ರೀ ಶಿರಡಿ ಸಾಯಿಬಾಬಾ ಹಾಗೂ ಶ್ರೀ ಗಜಾನನ ಮಹಾರಾಜ ರವರ ಪುಟ್ಟ ಅಮೃತ ಶಿಲೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮವನ್ನು ಬಡವರು ಹಾಗೂ ಅನಾಥರ ಜೀವನವನ್ನು ಉತ್ತಮಗೊಳಿಸಲು, ಜನರಲ್ಲಿ ಸೌಹಾರ್ದ ಭಾವನೆಯನ್ನು ಬೆಳೆಸಲು ಹಾಗೂ ಸಾಯಿಬಾಬಾರವರ ತತ್ವಗಳನ್ನು ಪ್ರಚಾರ ಮಾಡುವ ಸಲುವಾಗಿ 2000ನೇ ಇಸವಿಯ ಜನವರಿ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು.

ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮದ ಪಕ್ಕದಲ್ಲಿ ವಿಶಾಲವಾದ ಭೋಜನ ಶಾಲೆಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.






ಮಂದಿರದ ನಿತ್ಯ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವನ್ನು ದಿನದ 24 ಗಂಟೆಗಳೂ ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿರುತ್ತದೆ.

ಆರತಿ ಸಮಯ: 

ಬೆಳಿಗ್ಗೆ  :  7:00
ಸಂಜೆ  :  7:00


ವಿಶೇಷ ಉತ್ಸವದ ದಿನಗಳು:

1.ಹೊಸವರ್ಷದ ಆಚರಣೆ
2.ವಸಂತ ಪಂಚಮಿ
3.ಮಕರ ಸಂಕ್ರಾಂತಿ
4.ಶ್ರೀ ರಾಮ ನವಮಿ
5.ಗುರು ಪೂರ್ಣಿಮಾ 
6.ಗಣೇಶ ಚತುರ್ಥಿ 
7.ವಿಜಯದಶಮಿ 
8.ದತ್ತ ಜಯಂತಿ 
9.ದೀಪಾವಳಿ 
10.ಕ್ರಿಸ್ ಮಸ್ 




ಟ್ರಸ್ಟ್ ನ ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ವರ್ಷ 21ನೇ ಫೆಬ್ರವರಿಯಿಂದ 28ನೇ ಫೆಬ್ರವರಿಯವರೆಗೆ ಮಂದಿರದಲ್ಲಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಆ ಏಳು ದಿನಗಳಲ್ಲಿ ಸಾಯಿ ಸಂಕೀರ್ತನ, ನಿತ್ಯ ಅನ್ನದಾನ, ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ, ರಕ್ತದಾನ ಶಿಬಿರ ಹಾಗೂ ಶಿರಡಿಗೆ ಪಾದಯಾತ್ರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳ ಶಿಬಿರವನ್ನು ನಡೆಸಲಾಗುತ್ತದೆ.

ಪ್ರತಿ ವರ್ಷ ಮಂದಿರದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ.

ಮಂದಿರದ ಟ್ರಸ್ಟ್ ಔರಂಗಾಬಾದ್ ನ ಡಾ.ಸಮೀರ್ ಆರ್.ಗಂಡ್ಲೆ ಮತ್ತು ಅವರ ತಜ್ಞ ವೈದ್ಯರ ತಂಡದ  ಸಹಾಯ ಮತ್ತು ಸಹಕಾರದೊಂದಿಗೆ ಬಡವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ. 2002ನೇ ಇಸವಿಯ ಅಕ್ಟೋಬರ್ ತಿಂಗಳಿನಲ್ಲಿ ಮಂದಿರದ ಆವರಣದಲ್ಲಿ ಒಂದು ಸಣ್ಣ ಔಷಧಾಲಯವನ್ನು ಶ್ರೀ.ಲಕ್ಷ್ಮಣ ಏಖಾಂಡೆ ಗುರುಜಿಯವರು ನೀಡಿದ ಧನ ಸಹಾಯದಿಂದ ನಿರ್ಮಿಸಲಾಗಿದ್ದು ಇಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗೂ ಅಗತ್ಯವಿರುವ ರೋಗಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುತ್ತಿದೆ. ಹಲವಾರು ನುರಿತ ವೈದ್ಯರು ಇಲ್ಲಿಗೆ ಬಂದು ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಬ್ಬ ವೈದ್ಯರನ್ನು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಮಂದಿರದ ಔಷಧಾಲಯದಲ್ಲಿ  ಇರಿಸಬೇಕೆಂದು ಮಂದಿರದ ಟ್ರಸ್ಟ್ ಯೋಚಿಸುತ್ತಿದೆ.

ಮಂದಿರದ ಟ್ರಸ್ಟ್ ಮಂದಿರಕ್ಕೆ ಬರುವ ಸಾಯಿ ಭಕ್ತರಿಗೆ ಹಾಗೂ ಬಡವರಿಗೆ ಉಚಿತವಾಗಿ ಭೋಜನ ಪ್ರಸಾದವನ್ನು ನೀಡುತ್ತಿದೆ. ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಮಂದಿರಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಯಾವುದೇ ಬೇಧ ಭಾವ ತೋರದೆ ಮಹಾಪ್ರಸಾದ ಭೋಜನವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ದಿರದ ಟ್ರಸ್ಟ್ ಈ ಅನ್ನದಾನವನ್ನು ನಿತ್ಯಾನ್ನದಾನ ಕಾರ್ಯಕ್ರಮವನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದೆ.

ಮಂದಿರದ ಟ್ರಸ್ಟ್ ನ ವತಿಯಿಂದ ಸಾಯಿ ಭಕ್ತರಿಗೆ "ಶ್ರೀ ಸಾಯಿ ಸಚ್ಚರಿತ್ರೆ" "ಸಾಯಿ ಲೀಲಾಮೃತ", ಮಕ್ಕಳ ಸಾಯಿಬಾಬಾ ಪುಸ್ತಕ, ಆರತಿ ಪುಸ್ತಕ, ಸಾಯಿಬಾಬಾರವರ ಭಾವಚಿತ್ರ, ಸಾಯಿ ರುದ್ರಾಧ್ಯಾಯ ಪುಸ್ತಕ ಹಾಗೂ ಸಾಯಿ ಭಜನೆಯ ಧ್ವನಿ ಸುರಳಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 

ಮಂದಿರದ ಟ್ರಸ್ಟ್ ಸ್ಥಳೀಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಶಾಲಾ  ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ, ಪೆನ್ ಹಾಗೂ ಶಾಲಾ ಪುಸ್ತಕಗಳನ್ನೂ ವಿತರಿಸುತ್ತಾ ಬಂದಿದೆ.

ದೇಣಿಗೆಗೆ ಮನವಿ :

ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮವು ತಾನು ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಸಾಯಿ ಭಕ್ತರಿಂದ ಹಾಗೂ ದಾನಿಗಳಿಗೆ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರ “ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮ, ಬ್ಯಾಂಕ್ ಆಫ್ ಬರೋಡಾ, ಖಾತೆ ಸಂಖ್ಯೆ: 50190150321, ಶಾಖೆ: ಬಿಡ್ಕಿನ್, ಐ.ಎಫ್.ಎಸ್. ಸಿ ಸಂಕೇತ: BARBOBIDKIN" ಗೆ ಸಲ್ಲುವಂತೆ ಕಳುಹಿಸಬಹುದಾಗಿದೆ. 

ದೇವಾಲಯದ ಸಂಪರ್ಕದ ವಿವರಗಳು: 

ಶ್ರೀ ಸಾಯಿ ಗಣೇಶ ಮಂದಿರ,
ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮ,
ದಿನ್ನಾಪುರ್ ರಸ್ತೆ,
ಧೂಪಖೇಡಾ,
ಪೈಠಾಣ್ ತಾಲೂಕು,
ಔರಂಗಾಬಾದ್ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿ : ಸಾಯಿ ಸಾಧಕ ಶ್ರೀ.ಬಲದೇವ ಭಾರತಿ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: +91 98812 83070
ಸ್ಥಳ:  ಮಂದಿರವು ಔರಂಗಾಬಾದ್ ನಿಂದ ಪೈಠಾಣಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿದೆ. ರಾಜ್ಯ ಹೆದ್ದಾರಿಯಲ್ಲಿ ಸುಮಾರು 20 ಕಿಲೋಮೀಟರ್ ಕ್ರಮಿಸಿದರೆ ಚಿಟೆಗಾವ್ ಸಿಗುತ್ತದೆ. ಅದೇ ರಸ್ತೆಯಲ್ಲಿ ಸುಮಾರು 6 ಕಿಲೋಮೀಟರ್ ಕ್ರಮಿಸಿದರೆ ಬಿಡಕಿನಗಾವ್ ಸಿಗುತ್ತದೆ. ಮತ್ತೆ 6 ಕಿಲೋಮೀಟರ್ ಕ್ರಮಿಸಿದರೆ ಕೌಡಗಾವ್ ಸಿಗುತ್ತದೆ.  ಅಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಸಾಗಿದರೆ ಒಂದು ಕಮಾನು ಸಿಗುತ್ತದೆ (ಅದರ ಮೇಲೆ ಬಾಬಾರವರ ಭಾವಚಿತ್ರ ಹಾಗೂ ಧೂಪಖೇಡಾ ಮಂದಿರದ ಹೆಸರು ಬರೆಯಲಾಗಿದೆ). ಅದೇ ದಾರಿಯಲ್ಲಿ ಮುಂದೆ ಸುಮಾರು 3 ಕಿಲೋಮೀಟರ್ ಕ್ರಮಿಸಿದರೆ ಶ್ರೀ ಸಾಯಿಬಾಬಾ ವಿಶ್ವಸ್ಥ ಮಂದಿರ ಸಿಗುತ್ತದೆ. ಆ ಮಂದಿರದ ಪಕ್ಕದಲ್ಲಿನ ಸಣ್ಣ ರಸ್ತೆಯಲ್ಲಿ ಸುಮಾರು  800 ಮೀಟರ್ ಕ್ರಮಿಸಿದರೆ ಶ್ರೀ ಸಾಯಿ ಗಣೇಶ ಮಂದಿರ ಹಾಗೂ ಸಾಯಿ ಸಾಧಕ ಶ್ರೀ ಬಲದೇವ ಭಾರತಿಯವರ ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಧೂಪಖೇಡಾದ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಭಕ್ತ (ವಿಶ್ವಸ್ಥ) ಮಂಡಲ, ಧೂಪಖೇಡಾ, ಪೈಠಾಣ್ ತಾಲೂಕು, ಔರಂಗಾಬಾದ್ ಜಿಲ್ಲೆ, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 


ಶ್ರೀ ಶಿರಡಿ ಸಾಯಿಬಾಬಾರವರ ಈ ಸುಪ್ರಸಿದ್ಧ ಮಂದಿರವು ಶಿರಡಿ ಸಾಯಿಬಾಬಾರವರ ಪ್ರಕಟ ಭೂಮಿ ಎಂದೇ ಪ್ರಸಿದ್ಧವಾದ ಧೂಪಖೇಡಾ  ಗ್ರಾಮದಲ್ಲಿದೆ.  ಧೂಪಖೇಡಾವು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಠಾಣ್ ತಾಲೂಕಿನಲ್ಲಿದೆ. ಶ್ರೀ ಶಿರಡಿ ಸಾಯಿಬಾಬಾರವರು ಈ ಗ್ರಾಮದಲ್ಲಿ ಸುಮಾರು  9 ವರ್ಷಗಳ ಕಾಲ ಜೀವಿಸಿದ್ದರಿಂದ ಸಾಯಿ ಭಕ್ತರಿಗೆ ಇದೊಂದು ಪವಿತ್ರ ಸ್ಥಳವಾಗಿರುತ್ತದೆ. 

ಈ ಮಂದಿರದ ಭೂಮಿ ಪೂಜೆಯನ್ನು 1997 ನೇ ಇಸವಿಯಲ್ಲಿ ನೆರವೇರಿಸಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು  1998ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ಖ್ಯಾತ ಸಾಯಿ ಬಂಧುಗಳಾದ ಚೆನ್ನೈನ ಶ್ರೀ.ಸಾಯಿ ರವಿಚಂದ್ರನ್ ಹಾಗೂ ಬೆಂಗಳೂರಿನ ಶ್ರೀ.ವಿ.ಎಸ್. ಕುಬೇರ್ ರವರು ನೆರವೇರಿಸಿದರು. 

ಈ ಮಂದಿರವನ್ನು ಮಂದಿರದ ಟ್ರಸ್ಟ್ ನ 10000 ಚದರ ಅಡಿ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. 

ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ ಹಾಗೂ ವಿಗ್ರಹದ ಎದುರುಗಡೆ ಇರುವ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ. 

ಶ್ರೀ ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಹಾಗೂ ವಿಶ್ರಮಿಸುತ್ತಿದ್ದ ಪವಿತ್ರ ಬೇವಿನ ಮರ ಈ ಮಂದಿರದ ಆವರಣದಲ್ಲಿದೆ. ಈ ಬೇವಿನ ಮರದ ಎಲೆಗಳು ಶಿರಡಿಯ ಗುರುಸ್ಥಾನದಲ್ಲಿರುವ ಬೇವಿನ ಮರದ ಎಲೆಗಳಂತೆಯೇ ಸಿಹಿಯಾಗಿವೆ. 

ಮೊದಲು ಬೇವಿನ ಮರವಿರುವ ಸ್ಥಳದಲ್ಲಿ ಸ್ಥಳೀಯ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಒಂದು ಪುಟ್ಟ ಮಂದಿರವನ್ನು ನಿರ್ಮಾಣ ಮಾಡಿದ್ದರು. ನಂತರ ಖ್ಯಾತ ಸಾಯಿ ಭಕ್ತರಾದ ಚೆನ್ನೈನ ಶ್ರೀ.ಕೆ.ವಿ.ರಮಣಿಯವರ ಸಹಾಯದಿಂದ ಈ ಮಂದಿರವನ್ನು ಪುನರ್ ನಿರ್ಮಾಣ ಮಾಡಲಾಯಿತು. ಪ್ರತಿ ಗುರುವಾರದಂದು ಈ ಮಂದಿರಕ್ಕೆ ಸಾಯಿ ಭಕ್ತ ಸಾಗರವೇ ಹರಿದು ಬರುತ್ತದೆ. ಆ ದಿನದಂದು ಮಂದಿರಕ್ಕೆ ಬರುವ ಎಲ್ಲಾ ಭಕ್ತರಿಗೂ ಮಹಾಪ್ರಸಾದ ಭೋಜನವನ್ನು ನೀಡಲಾಗುತ್ತದೆ.







ಮಂದಿರದ ನಿತ್ಯ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಬೆಳಿಗ್ಗೆ 6:00 ರಿಂದ  ರಾತ್ರಿ  9:00 ರವರೆಗೆ. 

ಆರತಿ ಸಮಯ: 

ಕಾಕಡಾ ಆರತಿ  :  6:00 
ಮಧ್ಯಾನ್ಹ ಆರತಿ : 12:00
ಧೂಪಾರತಿ       :  6:00 
ಶೇಜಾರತಿ        :  9:00 

ವಿಶೇಷ ಉತ್ಸವದ ದಿನಗಳು:

1.ಗುರು ಪೂರ್ಣಿಮಾ
2.ಶ್ರೀ ರಾಮನವಮಿ
3.ವಿಜಯದಶಮಿ

ದೇವಾಲಯದ ಸಂಪರ್ಕದ ವಿವರಗಳು: 

ಶ್ರೀ ಸಾಯಿ ಭಕ್ತ (ವಿಶ್ವಸ್ಥ) ಮಂಡಲ,
ಶ್ರೀ ಸಾಯಿಬಾಬಾ ಪ್ರಕಟ ಭೂಮಿ, 
ದಿನ್ನಾಪುರ್ ರಸ್ತೆ,  
ಧೂಪಖೇಡಾ,
ಪೈಠಾಣ್ ತಾಲೂಕು,
ಔರಂಗಾಬಾದ್ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು :ಶ್ರೀ.ಮೋಹನಲಾಲ್ ಲಾಹುಜಿ ವಾಕ್ಚುರೆ/ಶ್ರೀ.ಪಾಂಡುರಂಗ ಕೇಶವರಾವ್ ವಾಕ್ಚುರೆ 
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: +91-98223 34799
ಅಂತರ್ಜಾಲ ತಾಣ: http://saibaba-dhupkheda.in/
ಸ್ಥಳ:  ಮಂದಿರವು ಔರಂಗಾಬಾದ್ ನಿಂದ ಪೈಠಾಣಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿದೆ. ರಾಜ್ಯ ಹೆದ್ದಾರಿಯಲ್ಲಿ ಸುಮಾರು 20 ಕಿಲೋಮೀಟರ್ ಕ್ರಮಿಸಿದರೆ ಚಿಟೆಗಾವ್ ಸಿಗುತ್ತದೆ. ಅದೇ ರಸ್ತೆಯಲ್ಲಿ ಸುಮಾರು 6 ಕಿಲೋಮೀಟರ್ ಕ್ರಮಿಸಿದರೆ ಬಿಡಕಿನಗಾವ್ ಸಿಗುತ್ತದೆ. ಮತ್ತೆ 6 ಕಿಲೋಮೀಟರ್ ಕ್ರಮಿಸಿದರೆ ಕೌಡಗಾವ್ ಸಿಗುತ್ತದೆ.  ಅಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಸಾಗಿದರೆ ಒಂದು ಕಮಾನು ಸಿಗುತ್ತದೆ (ಅದರ ಮೇಲೆ ಬಾಬಾರವರ ಭಾವಚಿತ್ರ ಹಾಗೂ ಧೂಪಖೇಡಾ ಮಂದಿರದ ಹೆಸರು ಬರೆಯಲಾಗಿದೆ). ಅದೇ ದಾರಿಯಲ್ಲಿ ಮುಂದೆ ಸುಮಾರು 3 ಕಿಲೋಮೀಟರ್ ಕ್ರಮಿಸಿದರೆ ಶ್ರೀ ಸಾಯಿಬಾಬಾ ವಿಶ್ವಸ್ಥ ಮಂದಿರ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, June 19, 2014

ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ ಪ್ರಥಮ ಆವೃತ್ತಿಯ ಪ್ರಥಮ ಪ್ರತಿಯನ್ನು ಪಡೆದ ಮಹಾನ್ ಸಾಯಿ ಭಕ್ತೆ - ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ -ಕೃಪೆ: ಸಾಯಿ ಅಮೃತಧಾರಾ.ಕಾಂ


ಪರಮ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಸಾಯಿಬಾಬಾರವರ ಅಶೀರ್ವಾದದಿಂದ 1922ನೇ ಇಸವಿಯಿಂದ 1929ನೇ ಇಸವಿಯ ನಡುವೆ ದಿವಂಗತ ಶ್ರೀ.ಗೋವಿಂದ ರಘುನಾಥ್ ದಾಭೋಲ್ಕರ್ ರವರು ಪ್ರಪ್ರಥಮ ಬಾರಿಗೆ ಮರಾಠಿ ಓವಿ ಶೈಲಿಯಲ್ಲಿ ರಚಿಸಿದರು. ಈ ಮಹಾನ್ ಗ್ರಂಥವನ್ನು ಶ್ರೀ ಸಾಯಿಬಾಬಾ ಸಂಸ್ಥಾನವು 30ನೇ ಅಕ್ಟೋಬರ್ 1930 ರಂದು ಲೋಕಾರ್ಪಣೆ ಮಾಡಿತು.  ನಂತರ ಅದರ ಸಂಕ್ಷಿಪ್ತ ಆವೃತ್ತಿಯನ್ನು ಅಂಗ್ಲ ಭಾಷೆಗೆ ಶ್ರೀ.ನಾಗೇಶ್ ವಾಸುದೇವ್ ಗುಣಾಜಿಯವರು ಅನುವಾದ ಮಾಡಿ ಪ್ರಕಟಿಸಿದರು. ಶ್ರೀ.ಗುಣಾಜಿಯವರ ಈ ಅಂಗ್ಲ ಶ್ರೀ ಸಾಯಿ ಸಚ್ಚರಿತೆಯು ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿದ್ದು  ಈಗ ಇತಿಹಾಸ.  ಶ್ರೀ.ಗುಣಾಜಿಯವರ ಈ ಅಂಗ್ಲ ಶ್ರೀ ಸಾಯಿ ಸಚ್ಚರಿತೆಯು ಮೊದಲಿಗೆ ತೆಲುಗು ಭಾಷೆಯಲ್ಲಿ ದಿವಂಗತ ಶ್ರೀ.ಪ್ರತ್ತಿ ನಾರಾಯಣ ರಾವ್ ರವರಿಂದ ಅನುವಾದಗೊಂಡಿತು. ಸಂಕ್ಷಿಪ್ತ ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ  ಮೊದಲ ಆವೃತ್ತಿಯ ಮೊದಲ ಪ್ರತಿಯನ್ನು 19ನೇ ಮೇ 1953 ರಂದು ಶಿರಡಿಯ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಹಾನ್ ಸಾಯಿ ಭಕ್ತೆಯಾದ  ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ಅವರಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನೀಡಲಾಯಿತು. 

ಮಾತಾಜಿಯವರು 17ನೇ ಆಗಸ್ಟ್ 1923  ಜನಿಸಿದರು.  ಇವರು ತಮ್ಮ ಜೀವನದುದ್ದಕ್ಕೂ ಸಾಯಿ ತತ್ವವನ್ನು ಪಾಲಿಸಿದ್ದಷ್ಟೇ ಅಲ್ಲದೇ ತಮ್ಮ ಬಳಿ ಬರುತ್ತಿದ್ದ ಅಸಂಖ್ಯಾತ ಸಾಯಿ ಭಕ್ತರಿಗೆ ಬೋಧಿಸುತ್ತಿದ್ದರು.ಇವರು 2004ನೇ ಇಸವಿಯಲ್ಲಿ ಸಿಕಂದರಾಬಾದ್ ನ ಓಲ್ಡ್ ಆಲ್ವಾಲ್ ಪ್ರದೇಶದಲ್ಲಿ ಧ್ಯಾನ ಮಂದಿರ ಹಾಗೂ ಸಾಯಿ ಮಂದಿರವನ್ನು ಪ್ರಾರಂಭಿಸಿದರು. ತಮ್ಮ ಬಳಿ ಪ್ರತಿನಿತ್ಯ ಬರುತ್ತಿದ್ದ ಭಕ್ತರಿಗೆ ಅವರು "ಬಾಬಾರವರಲ್ಲಿ ನಂಬಿಕೆಯಿಡಿ. ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಯಾರೊಡನೆಯೂ ಬೇಡದ ವಿಷಯಗಳ  ಚರ್ಚೆ ಮಾಡಬೇಡಿ.  ನಿಮ್ಮ ತೊಂದರೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಹೋಗಬೇಡಿ. ಅದರ ಬದಲಿಗೆ ನಿಮಗೆ ಸಮಯ ಸಿಕ್ಕಾಗಲೆಲ್ಲಾ ನೀವು ಎಲ್ಲಿದ್ದರೂ ಸರಿಯೇ ಸದಾ ಸಾಯಿಬಾಬಾರವರಿಗೆ ಮಾನಸ ಪೂಜೆಯನ್ನು ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ" ಎಂದು ಬೋಧಿಸುತ್ತಿದ್ದರು. ತಮ್ಮ ಭಕ್ತರ ಅನುಭವಗಳನ್ನು ಅವರು "ಸಾಯಿ ಲೀಲಮ್ಮ - ಭಕ್ತರ ಅನುಭವಗಳು" ಎಂಬ ಪುಸ್ತಕದಲ್ಲಿ  ಹಂಚಿಕೊಂಡಿದ್ದರು. ಆ ಪುಸ್ತಕದಲ್ಲಿ ಅವರು ಶ್ರೀ ಸಾಯಿಬಾಬಾರವರಿಗೆ  ಮಾನಸ ಪೂಜೆಯನ್ನು ಸಲ್ಲಿಸುವುದು ಹೇಗೆ ಎಂದು ತಿಳಿಸಿದ್ದರು. ತಮ್ಮ ಭಕ್ತರ ಕಷ್ಟಗಳನ್ನು ಅವರು ತಮ್ಮ ಮೇಲೆ ಎಳೆದುಕೊಂಡು ಅದನ್ನು ಬಾಬಾರವರ ಬಳಿ ತಿಳಿಸಿ ಅವರ ಕಷ್ಟಗಳನ್ನು ನಿವಾರಿಸುತ್ತಿದ್ದರು

ಸಾಯಿ ಭಕ್ತೆ  ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ಮಾತಾಜಿಯವರು 25ನೇ ಆಗಸ್ಟ್ 2014, ಸೋಮವಾರ ದಂದು ಬೆಳಿಗ್ಗೆ 11:05 ಕ್ಕೆ ಸಿಕಂದರಾಬಾದ್ನ ಓಲ್ಡ್ ಆಲ್ವಾಲ್ ನ ಮಂದಿರ ಮತ್ತು ಸ್ವಗೃಹದಲ್ಲಿ ವಿಧಿವಶರಾದರು. ಮಾತಾಜಿಯವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಶ್ರೀ.ಪ್ರಕಾಶ್ ಎಂಬ  ಮಗ, ಶ್ರೀಮತಿ.ಲಲಿತಾ ಎಂಬ  ಮಗಳು, ಅನೇಕ ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಶಿರಡಿ ಸಾಯಿಬಾಬಾರವರ ನಿತ್ಯ ದಿನಚರಿ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ ಶಿರಡಿ ಸಾಯಿಬಾಬಾರವರ ನಿತ್ಯ ದಿನಚರಿಯನ್ನು ವಿವರಿಸುವುದು ಮುರ್ಖತನದ ಪರಮಾವಧಿಯಾಗುತ್ತದೆ. ಏಕೆಂದರೆ, ಶ್ರೀ ಸಾಯಿಬಾಬಾರವರು ಕಾಲ ಮತ್ತು ವ್ಯಾಪ್ತಿಗಳ ಪರಿಮಿತಿಗಳಿಗೆ ಅತೀತರು. ಆದರೂ, ನಮ್ಮ ಪರಿಮಿತಿಗೆ ತಕ್ಕಂತೆ ಶಿರಡಿಯಲ್ಲಿನ ಬಾಬಾರವರ ದಿನಚರಿಯನ್ನು ತಿಳಿದುಕೊಳ್ಳುವ ಒಂದು ಸಣ್ಣ  ಪ್ರಯತ್ನವನ್ನು ಮಾಡೋಣ.

ಬಾಬಾರವರು ಪ್ರತಿನಿತ್ಯ ಬೆಳಗಿನ ಜಾವ ಸೂರ್ಯೋದಯಕ್ಕೆ ಬಹಳ ಮುಂಚೆಯೇ ಏಳುತ್ತಿದ್ದರು. ನಂತರ ಧುನಿಯ ಪಕ್ಕದಲ್ಲಿದ್ದ ಕಂಬಕ್ಕೆ ಒರಗಿ ಕುಳಿತುಕೊಂಡು ಧ್ಯಾನ ಮಾಡುತ್ತಿದ್ದರು. ಆ ಸಮಯದಲ್ಲಿ ದ್ವಾರಕಾಮಾಯಿಯ ಒಳಗಡೆಗೆ ಹೋಗಿ ಬಾಬಾರವರು ಏನು ಮಾಡುತ್ತಿದ್ದಾರೆಂದು ನೋಡಲು ಯಾರಿಗೂ ಅವಕಾಶವಿರಲಿಲ್ಲ. ಬಾಬಾರವರು ,ಆ ಸಮಯದಲ್ಲಿ ಯಾರನ್ನೂ ಹತ್ತಿರ ಬರಗೊಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಅವರು "ಯಾದೇ ಹಕ್", "ಅಲ್ಲಾ ವಲಿ ಹೇ"  ಹಾಗೂ "ಅಲ್ಲಾ ಮಾಲಿಕ್" ಎಂದು ಮೆಲುದನಿಯಲ್ಲಿ ಹೇಳಿಕೊಳ್ಳುತ್ತಿದ್ದರು. ಅವರು ಹಾಗೆ ಹೇಳಿಕೊಳ್ಳುವಾಗ ಮಧ್ಯದಲ್ಲಿ ಕೆಲವು ಯೋಗಮುದ್ರೆಗಳನ್ನು ಮಾಡುತ್ತಿದ್ದರೆಂದು ಹೇಳಲಾಗುತ್ತದೆ.



ಆ ಸಮಯದಲ್ಲಿ ಕೇವಲ ಅಬ್ದುಲ್ ಬಾಬಾ ಹಾಗೂ ಮಾಧವ ಫಾಸ್ಲೆಯವರು ಮಾತ್ರ ದ್ವಾರಕಾಮಾಯಿಯ ಒಳಗಡೆ ಪ್ರವೇಶಿಸಿ ನೆಲವನ್ನು ಗುಡಿಸಿ, ಸಾರಿಸುತ್ತಿದ್ದರು. ದೀಪದ ಬತ್ತಿಗಳನ್ನು ಸರಿ ಮಾಡಿ ಅದಕ್ಕೆ ಎಣ್ಣೆಯನ್ನು ಹಾಕುತ್ತಿದ್ದರು ಹಾಗೂ ಧುನಿಯ ಹತ್ತಿರ ಕಟ್ಟಿಗೆಗಳನ್ನು ಇರಿಸುತ್ತಿದ್ದರು.

ಬೆಳಗಾಗುತ್ತಿದ್ದಂತೆಯೇ ಭಾಗೋಜಿ ಶಿಂಧೆ ಮಸೀದಿಯನ್ನು ಪ್ರವೇಶಿಸಿ ಬಾಬಾರವರ ಕೈ ಹಾಗೂ ಕಾಲುಗಳನ್ನು ಮೃದುವಾಗಿ ನೀವುತ್ತಿದ್ದರು. 1910ನೇ  ಇಸವಿಯ ಒಂದು ಧನತ್ರಯೋದಶಿಯ ದಿನದಂದು ಅಕ್ಕಸಾಲಿಗನೊಬ್ಬನ ಮಗುವೊಂದು ಬೆಂಕಿಯಲ್ಲಿ ಬೀಳುತ್ತಿದ್ದುದನ್ನು ತಪ್ಪಿಸುವ ಸಲುವಾಗಿ ತಮ್ಮ ಕೈಗಳನ್ನು ಧುನಿಯಲ್ಲಿ ಇರಿಸಿದ್ದರಿಂದ ಅವರ ಕೈ ಸುಟ್ಟುಕೊಂಡಿದ್ದರು.  ಅಂದಿನಿಂದ ಬಾಬಾರವರ ಮಾಹಾಸಮಾಧಿಯವರೆಗೂ ಅನವರತವಾಗಿ ಎಂಟು ವರ್ಷಗಳ ಕಾಲ  ಪ್ರತಿನಿತ್ಯ ಭಾಗೋಜಿ ಶಿಂಧೆಯವರು ಮಸೀದಿಗೆ ಬಂದು ಹಿಂದಿನ ದಿನ ಬಾಬಾರವರ ಕೈಗೆ ಸುತ್ತಿದ್ದ ಪಟ್ಟಿಯನ್ನು ತೆಗೆದು  ಗಾಯವಾಗಿದ್ದ ಸ್ಥಳಕ್ಕೆ ತುಪ್ಪವನ್ನು ಸವರಿ ಚೆನ್ನಾಗಿ ನೀವಿ ಪುನಃ ಹೊಸ ಪಟ್ಟಿಯನ್ನು ಸುತ್ತುತ್ತಿದ್ದರು. ಸ್ವಲ್ಪ ದಿನಗಳ ನಂತರ ಬಾಬಾರವರ ಕೈಗಳಿಗಾಗಿದ್ದ ಗಾಯವು ವಾಸಿಯಾಗಿತ್ತು. ಆದರೆ ಭಾಗೋಜಿ ಶಿಂಧೆಗೆ ತಮ್ಮ ಮೇಲಿದ್ದ ಭಕ್ತಿ ಹಾಗೂ ಪ್ರೀತಿಯನ್ನು ಕಂಡು ಬಾಬಾರವರು ಅವರು ಸೇವೆಯನ್ನು ಮುಂದುವರಿಸಲು ಅನುಮತಿ ನೀಡಿದ್ದರು.ನಿಜ ಹೇಳಬೇಕೆಂದರೆ ಭಾಗೋಜಿ ಶಿಂಧೆಯವರು ಬಹಳ ಅದೃಷ್ಟಶಾಲಿಯೆಂದು ಹೇಳಬೇಕು. 

ಇದಾದ ನಂತರ ಭಾಗೋಜಿ ಶಿಂಧೆಯವರು ಚಿಲುಮೆಯನ್ನು ಸಿದ್ಧಪಡಿಸಿ ತಂದು ಬಾಬಾರವರ ಕೈಗೆ ನೀಡುತ್ತಿದ್ದರು. ಬಾಬಾರವರು ಒಂದೆರಡು ಬಾರಿ ದಮ್ಮು ಎಳೆದು ನಂತರ ಭಾಗೋಜಿಯವರಿಗೆ ಹಿಂತಿರುಗಿಸುತ್ತಿದ್ದರು. ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಸುಮಾರು 7 ರಿಂದ 7.30  ಗಂಟೆಯಾಗುತ್ತಿತ್ತು . ಅಷ್ಟು ಹೊತ್ತಿಗೆ ಭಕ್ತರು ಬಾಬಾರವರ ದರ್ಶನಕ್ಕೆ ಮಸೀದಿಗೆ ಬಂದು ಸೇರುತ್ತಿದ್ದರು. ಆಗ ಬಾಬಾರವರು ಅವರುಗಳಿಗೆ  ಹಿಂದಿನ ರಾತ್ರಿ  ತಮ್ಮಿಂದ ದೂರದಲ್ಲಿದ್ದ ಭಕ್ತರನ್ನು ಹೇಗೆ ತಾವು ರಕ್ಷಿಸಿದರೆಂದು ಹಾಗೂ ಹಿಂದಿನ ರಾತ್ರಿ ಮರಣವನ್ನಪ್ಪಿದವರನ್ನು ಹೇಗೆ ತಾವು ಸ್ವರ್ಗಕ್ಕೆ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ತಲುಪಿಸಿದರೆಂದು ವಿವರವಾಗಿ ತಿಳಿಸುತ್ತಿದ್ದರು. ಆ ದೂರದ ಊರುಗಳಿಂದ ಭಕ್ತರುಗಳು ಬಂದು ಬಾಬಾರವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ  ಹೇಗೆ ಬಾಬಾರವರು ತಮ್ಮನ್ನು ರಕ್ಷಿಸಿದರೆಂದು ಎಲ್ಲರ ಸಮ್ಮುಖದಲ್ಲಿ ವಿವರಿಸಿದಾಗ ಅವರುಗಳಿಗೆ ನಿಜ ವಿಷಯದ ಅರಿವಾಗುತ್ತಿತ್ತು.

ಈ ರೀತಿಯಲ್ಲಿ ಬಾಬಾರವರು ತಮ್ಮ ಬಳಿಗೆ ಬಂದಿದ್ದ ಭಕ್ತರ ಬಳಿ ಮಾತನಾಡುತ್ತಿರುವಾಗ ಮಾಧವ ಫಾಸ್ಲೆ, ತುಕಾರಾಂ ಹಾಗೂ ಇತರ ಸಹಾಯಕರು ಬಕೆಟ್ ಗಳಿಗೆ ನೀರನ್ನು ತುಂಬಿ ಇರಿಸುತ್ತಿದ್ದರು. ಬಾಬಾರವರು ಎಂದೂ ತಮ್ಮ ಹಲ್ಲುಗಳನ್ನು ಉಜ್ಜಿಕೊಂಡಿದ್ದೇ ಇಲ್ಲ.  ಅವರು ಕೇವಲ ತಮ್ಮ ಬಾಯಿ ಮುಕ್ಕಳಿಸಿ ಕೈಕಾಲು ಮುಖವನ್ನು ತೊಳೆದುಕೊಳ್ಳುತ್ತಿದ್ದರು. ಬಾಬಾರವರು  ಎಷ್ಟು ಕೋಮಲವಾಗಿ ತಮ್ಮ ಮುಖವನ್ನು ತೊಳೆದುಕೊಳ್ಳುತ್ತಿದ್ದರೆಂದರೆ ಆ ಸಮಯದಲ್ಲಿ ಪ್ರತಿಯೊಬ್ಬರೂ ಅವರನ್ನು ನೋಡಲು ಇಷ್ಟಪಡುತ್ತಿದ್ದರು. ಆ ಸಮಯದಲ್ಲಿ ಕುಷ್ಟ ರೋಗದಿಂದ ಬಳಲುತ್ತಿದ್ದ ರೋಗಿಗಳು ಕಾದುಕೊಂಡಿದ್ದು ಬಾಬಾರವರು ಬಾಯಿ ಮುಕ್ಕಳಿಸಿ ಉಗುಳಿದ ನೀರನ್ನು ತೆಗೆದುಕೊಂಡು ತಮ್ಮ ಮೈಮೇಲೆ ಆಗಿದ್ದ ಗಾಯಗಳಿಗೆ ಭಕ್ತಿಯಿಂದ ಹಾಕಿಕೊಳ್ಳುತ್ತಿದ್ದರು. ಅಂತಹ ರೋಗಿಗಳ ಗಾಯವು ಅವರಿಗೆ ಬಾಬಾರವರ ಮೇಲಿದ್ದ ಶ್ರದ್ಧೆ ಹಾಗೂ ಭಕ್ತಿಗೆ ತಕ್ಕಂತೆ ವಾಸಿಯಾಗುತ್ತಿತ್ತು.

ಹೀಗೆ ಬಾಬಾರವರು ಮುಖ ತೊಳೆದುಕೊಳ್ಳುತ್ತಿರುವಾಗ ಭಕ್ತರು ರಾಜದಂಡ, ಬೀಸಣಿಗೆ ಹಾಗೂ ಮತ್ತಿತರ ಔಪಚಾರಿಕ ವಸ್ತುಗಳೊಂದಿಗೆ ಕಾಕಡಾ ಆರತಿಯಲ್ಲಿ ಪಾಲ್ಗೊಳ್ಳಲು ದ್ವಾರಕಾಮಾಯಿಗೆ ಆಗಮಿಸುತ್ತಿದ್ದರು. ಬಾಬಾರವರು ಅವರನ್ನು ತಾಯಿ ತನ್ನ ಮಕ್ಕಳನ್ನು ಬರಮಾಡಿಕೊಳ್ಳುವಂತೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಆರತಿಯಾದ ನಂತರ ಭಕ್ತರು ಬಾಬಾರವರಿಂದ ಉಧಿಯನ್ನು ಸ್ವೀಕರಿಸಿ ತಮ್ಮ ನಿತ್ಯ ಕೆಲಸಗಳಿಗೆ ಹೊರಡುತ್ತಿದ್ದರು. ಕೇವಲ ಕಾಕಡಾ ಆರತಿ ಹಾಗೂ ಶೇಜಾರತಿಯನ್ನು ದಿನಬಿಟ್ಟು ದಿನ ಚಾವಡಿಯಲ್ಲಿ ನೆರವೇರಿಸಲಾಗುತ್ತಿತ್ತು. 

ಬಾಬಾರವರು ಪ್ರತಿನಿತ್ಯ ಸ್ನಾನ ಮಾಡುತ್ತಿರಲಿಲ್ಲ. ಫಕೀರರಿಗೆ ನಿತ್ಯ ಸ್ನಾನ ನಿಷಿದ್ಧ ಎಂದು ಹೇಳಲಾಗಿದೆ.   ಬಾಬಾರವರು ಮೊದಲು ಶಿರಡಿಗೆ ಬಂದಾಗ ಅವರು ಲೇಂಡಿ ಉದ್ಯಾನವನದಲ್ಲಿ ಅಥವಾ ಶಿರಡಿ ಗ್ರಾಮದ ಹೊರಗಿದ್ದ ಪೊದೆಗಳ ಹತ್ತಿರ ತಮ್ಮ ಸ್ನಾನವನ್ನು  ಪೂರೈಸುತ್ತಿದ್ದರು. ನಂತರದ ದಿನಗಳಲ್ಲಿ ಅವರು ಮಸೀದಿಯಲ್ಲಿ ಸ್ನಾನ ಮಾಡಲು ಪ್ರಾರಂಭಿಸಿದರು. ಬಾಬಾರವರ ಸಹಾಯಕರು ಅವರಿಗೋಸ್ಕರವಾಗಿ ಎರಡು ತಾಮ್ರದ ಪಾತ್ರೆಗಳಲ್ಲಿ ಬಿಸಿ ನೀರು ಹಾಗೂ ಮತ್ತೆರಡು ತಾಮ್ರದ ಪಾತ್ರೆಗಳಲ್ಲಿ ತಣ್ಣೀರನ್ನು ತಂದಿರಿಸಿ ಮಸೀದಿಯಲ್ಲಿ ಬಾಬಾರವರು ಸ್ನಾನ ಮಾಡುತ್ತಿದ್ದ ಜಾಗದ ಬಳಿಯಿದ್ದ ಪರದೆಗಳನ್ನು ಇಳಿಬಿಡುತ್ತಿದ್ದರು. ಬಾಬಾರವರು ತಮಗೆ ಸರಿ ಎನಿಸಿದಷ್ಟು ಹದವಾಗಿ ತಣ್ಣೀರು ಹಾಗೂ ಬಿಸಿನೀರನ್ನು ಬೆರೆಸಿಕೊಂಡು ನಿಧಾನವಾಗಿ ಸ್ನಾನ ಮಾಡುತ್ತಿದ್ದರು. ಸಾಮಾನ್ಯವಾಗಿ ಬಾಬಾರವರ ಸ್ನಾನದ ಕಾರ್ಯಕ್ರಮ ಸುಮಾರು ಒಂದೂವರೆ ಗಂಟೆಯವರೆಗೆ ನಡೆಯುತ್ತಿತ್ತು. ಸ್ನಾನವಾದ ನಂತರ ಬಾಬಾರವರು ಧುನಿಯ ಮುಂದೆ ನಿಂತುಕೊಳ್ಳುತ್ತಿದ್ದರು. ಆಗ ಅವರ ಅಂತರಂಗಕ್ಕೆ ಅತ್ಯಂತ ಹತ್ತಿರವಾಗಿದ್ದ ಭಕ್ತರು ಅವರ ಬೆನ್ನು, ಕುತ್ತಿಗೆ ಹಾಗೂ ತಲೆಯನ್ನು ಬಟ್ಟೆಯಿಂದ ಒರೆಸುತ್ತಿದ್ದರು. ಬಾಬಾರವರ ಸ್ನಾನದ ನೀರನ್ನು ಭಕ್ತರು ಅತ್ಯಂತ ಪವಿತ್ರವೆಂದು ಭಾವಿಸಿ ತಮ್ಮ ಖಾಯಿಲೆಗಳನ್ನು ಹೋಗಲಾಡಿಸಿಕೊಳ್ಳಲು ಬಳಸುತ್ತಿದ್ದರು.  ಒಮ್ಮೆ ನಾಸಿಕ್ ನಿಂದ ಶಿರಡಿಗೆ ಬಂದಿದ್ದ ಭಕ್ತನಾದ ರಾಮ್ ಜಿ ಎಂಬುವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಬಾಬಾರವರ ಸ್ನಾನದ ನೀರನ್ನು ಕುಡಿದ ತಕ್ಷಣವೇ ಹುಷಾರಾದರು. ಅದಕ್ಕೆ ಕೃತಜ್ಞತೆ ಸಲ್ಲಿಸಲೆಂದು ಅವರು ಬಾಬಾರವರಿಗೆ ಸ್ನಾನ ಮಾಡುವಾಗ ನಿಂತುಕೊಳ್ಳಲು ಅನುಕೂಲವಾಗಲೆಂದು ಒಂದು ಸ್ನಾನದ ಕಲ್ಲನ್ನು ನೀಡಿದ್ದರು. ಈ ಸ್ನಾನದ ಕಲ್ಲನ್ನು ನಾವು ಈಗಲೂ ಶಿರಡಿಗೆ ಭೇಟಿ ನೀಡಿದಾಗ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ಬಾಬಾರವರು ವಾರಕ್ಕೊಮ್ಮೆ ಅಥವಾ ಎಂಟು ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದರು. ಕೆಲವೊಮ್ಮೆಯಂತೂ ಐದಾರು ವಾರಗಳು ಸ್ನಾನ ಮಾಡುತ್ತಲೇ ಇರಲಿಲ್ಲ. ಯಾರಾದರೂ ಭಕ್ತರು ಬಾಬಾರವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು "ನಾನು ಈಗಷ್ಟೇ ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಂದಿದ್ದೇನೆ. ಮತ್ತೆ ಏಕೆ ಸ್ನಾನ ಮಾಡಬೇಕು" ಎಂದು ಅವರನ್ನೇ ಪ್ರಶ್ನಿಸುತ್ತಿದ್ದರು.  ಯಾವಾಗಲೂ ಪರಿಶುದ್ಧರಾಗಿರುವವರಿಗೆ ಸ್ನಾನದ ಅವಶ್ಯಕತೆಯಾದರೂ ಏನಿದೆ? ಅಲ್ಲದೇ, ತಾವು ಇಚ್ಛಿಸಿದ ಮಾತ್ರಕ್ಕೇ  ತಮ್ಮ ಪಾದಗಳಿಂದಲೇ  ಗಂಗೆ ಹರಿಯುವಂತೆ ಮಾಡಿದ ಸಾಕ್ಷಾತ್ ಈಶ್ವರನಿಗೆ ಯಾವ ಸ್ನಾನದ ಅವಶ್ಯಕತೆ ಇಲ್ಲ ಅಲ್ಲವೇ?

ಬಾಬಾರವರು ಸ್ನಾನ ಮಾಡದೇ ಇದ್ದ ದಿನದಂದು ಸಹ ನೋಡಲು ಅಚ್ಚುಕಟ್ಟಾಗಿ ಹಾಗೂ ಶುದ್ಧವಾಗಿ ಕಾಣಿಸುತ್ತಿದ್ದರು. ಅವರು ಸ್ನಾನವಾದ ನಂತರ ಹಸಿರು ಬಣ್ಣದ ಬಟ್ಟೆಯನ್ನು ತೊಟ್ಟುಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಕಫ್ನಿಯನ್ನು ಒಗೆದು ಒಣಗಲೋಸುಗ ಧುನಿಯ ಹತ್ತಿರ ಇರಿಸುತ್ತಿದ್ದರು. ಕಫ್ನಿ ಒಣಗಿದ ನಂತರ ಅದನ್ನು ಮತ್ತೆ ಧರಿಸುತ್ತಿದ್ದರು. ಸ್ನಾನದ ಸಮಯವನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಸಮಯಗಳಲ್ಲೂ ಕಫ್ನಿಯನ್ನು ಧರಿಸುತ್ತಿದ್ದರು. ಅವರ ಕಫ್ನಿಯು ಒರಟಾದ ಬಟ್ಟೆಯಿಂದ ಮಾಡಲ್ಪಟ್ಟಿರುತ್ತಿತ್ತು. ಆ ಕಫ್ನಿಗಳು ತುಂಬಾ ಹಳೆಯದಾಗಿ ಹರಿದು ಹೋದಾಗ ಭಕ್ತರು ಅದನ್ನು ಬದಲಿಸುವಂತೆ ಬಾಬಾರವರನ್ನು ಬೇಡಿಕೊಳ್ಳುತ್ತಿದ್ದರು. ಆಗಷ್ಟೇ ಬಾಬಾರವರು ಹೊಸದನ್ನು ಧರಿಸುತ್ತಿದ್ದರು. ತಾತ್ಯಾ ಒತ್ತಾಯಪೂರ್ವಕವಾಗಿ ಬಾಬಾ ಹಳೆಯ ಕಫ್ನಿಯನ್ನು ಬಿಸಾಡಿ ಹೊಸದನ್ನು ಧರಿಸಿಕೊಳ್ಳುವಂತೆ ಮಾಡುತ್ತಿದ್ದರು. ಅವರು ಬಾಬಾರವರ ಹತ್ತಿರ ಮಾತಾನಾಡುವ ಸಲುವಾಗಿ ಹತ್ತಿರ ಹೋದಂತೆ ಮಾಡಿ "ಬಾಬಾ ಇದೇನಿದು? ನಿಮ್ಮ ಕಫ್ನಿ ಹರಿದಿದೆಯಲ್ಲಾ?" ಎಂದು ಹೇಳುತ್ತಲೇ ಮೊದಲೇ ಹರಿದು ತೂತಾಗಿರುವ ಜಾಗದಲ್ಲಿ ತಮ್ಮ ಬೆರಳನ್ನು ತೋರಿಸಿ ತೂತನ್ನು ಮತ್ತಷ್ಟು ದೊಡ್ಡದಾಗುವಂತೆ ಮಾಡಿ ಅದು ರಿಪೇರಿ ಆಗದಷ್ಟು ಹರಿದುಬಿಡುತ್ತಿದ್ದರು.  ನಂತರ ಅಮಾಯಕರಂತೆ ನಟಿಸುತ್ತಾ "ಬಾಬಾ ನಿಮ್ಮ ಕಫ್ನಿ ರಿಪೇರಿ ಮಾಡಲಾಗದಷ್ಟು ಹರಿದುಹೋಗಿದೆ. ಈ ಕೂಡಲೇ ನೀವು ಅದನ್ನು ಬದಲಾಯಿಸಲೇಬೇಕು" ಎಂದು ಒತ್ತಾಯ ಮಾಡುತ್ತಿದ್ದರು.  ಆಗ ಬಾಬಾರವರಿಗೆ ಹೊಸ ಕಫ್ನಿ ಧರಿಸದೇ ಬೇರೆ ದಾರಿ ಇರಲಿಲ್ಲ. ಆ ಕೂಡಲೇ ಬಾಬಾರವರು ಬಟ್ಟೆಯ ವ್ಯಾಪಾರಿ ಹಾಗೂ ದರ್ಜಿಯಾದ ಕಾಶೀನಾಥ ಶಿಂಪಿಯನ್ನು ಕರೆದು "ಕಾಶೀನಾಥ, ನನಗೆ ಒಂದು ಕಫ್ನಿಯನ್ನು ಹೊಲೆದು ಕೊಡು" ಎಂದು ಹೇಳುತ್ತಿದ್ದರು.  ಕೂಡಲೇ ಕಾಶೀನಾಥ್ ಹೊಸ ಕಫ್ನಿಯನ್ನು ತಂದು ಕೊಡಲು ಅದರ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ಶಿಂಪಿಗೆ ನೀಡುತ್ತಿದ್ದರು. ನಂತರ ಹೊಸ ಕಫ್ನಿಯನ್ನು ಧರಿಸಿ ಹಳೆಯದನ್ನು ಧುನಿಯಲ್ಲಿ ಹಾಕುತ್ತಿದ್ದರು. ಸಾಮಾನ್ಯವಾಗಿ ಬಾಬಾರವರು ಹೊಸ ಕಫ್ನಿಯನ್ನು ಧರಿಸಿದಾಗಲೆಲ್ಲಾ ಮಸೀದಿಗೆ ಬರುತ್ತಿದ್ದ ಬಡ ಫಕೀರರು ಹಾಗೂ ಸಾಧುಗಳಿಗೂ ಸಹ ಹೊಸ ಕಫ್ನಿಯನ್ನು ಹಂಚುತ್ತಿದ್ದರು. ಹಾಗಾಗಿ ಬಾಬಾರವರು ಹೊಸ ಕಫ್ನಿ ಧರಿಸಿದಾಗಲೆಲ್ಲಾ ಅವರುಗಳು ಹಬ್ಬದ ಸಂಭ್ರಮವನ್ನು ಅನುಭವಿಸುತ್ತಿದ್ದರು.  ಒಮ್ಮೆ 1914ನೇ ಇಸವಿಯಲ್ಲಿ ಬಾಬಾರವರು ಫಕೀರರಿಗೆ ಕಫ್ನಿಯನ್ನು ಹಂಚುತ್ತಿದ್ದರು. ಆ ಸಮಯದಲ್ಲಿ ಅಲ್ಲಿಯೇ ನಿಂತಿದ್ದ ನಾರ್ಕೆ ಎಂಬ ಭಕ್ತರಿಗೆ ಬಾಬಾರವರ ಕೈಯಿಂದ ತಮಗೂ ಒಂದು ಕಫ್ನಿಯನ್ನು ಪಡೆಯಬೇಕೆಂಬ ಆಸೆಯಾಯಿತು. ನಾರ್ಕೆಯವರ ಮನಸ್ಸಿನಲ್ಲಿ ಆ ರೀತಿ ಯೋಚನೆ ಸುಳಿಯುತ್ತಿದ್ದಂತೆಯೇ ಬಾಬಾರವರು ಅವರ ಕಡೆ ತಿರುಗಿ "ಇಲ್ಲ. ನೀನು ನನ್ನಿಂದ ಕಫ್ನಿಯನ್ನು ಪಡೆಯುವುದು ಈ ಫಕೀರರಿಗೆ ಒಪ್ಪಿಗೆಯಿಲ್ಲ. ಹಾಗಾಗಿ, ನಾನು ಏನು ತಾನೇ ಮಾಡಲು ಸಾಧ್ಯ?" ಎಂದು ನುಡಿದರು. ಬಾಬಾರವರು ಕೆಲವೊಮ್ಮೆ ಬಾಳಾ ಎಂಬ ಕ್ಷೌರಿಕನನ್ನು ಬರಹೇಳಿ ತಮ್ಮ ಕೇಶ ಮುಂಡನ ಮಾಡಿಸಿಕೊಳ್ಳುತ್ತಿದ್ದರು. ಅಲ್ಲದೇ ಅವನಿಂದ  ತಮ್ಮ ಮೀಸೆಯನ್ನು ಸಹ ಒಪ್ಪ ಮಾಡಿಸಿಕೊಂಡು ಅವನಿಗೆ ಕೈತುಂಬಾ ಹಣವನ್ನು ನೀಡುತ್ತಿದ್ದರು. 

ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಬಾಬಾರವರು ತಮ್ಮ ದೈನಂದಿನ ಭಿಕ್ಷೆಗಾಗಿ ಹೊರಡುತ್ತಿದ್ದರು. ಪ್ರತಿನಿತ್ಯ ಗಣಪತಿ ತಾತ್ಯಾ ಪಾಟೀಲ್  (ಬಾಯಿಜಾಬಾಯಿ), ಅಪ್ಪಾಜಿ ಪಾಟೀಲ್, ಸಖಾರಾಮ್ ಶೆಲ್ಕೆ, ವಾಮನ ಗೋಂದ್ಕರ್ ಮತ್ತು ನಂದೂರಾಮ್ ಮಾರವಾಡಿಯವರ ಮನೆಗಳಿಗೆ ಅವರು  ಭಿಕ್ಷೆಗಾಗಿ ಹೋಗುತ್ತಿದ್ದರು. ಎಲ್ಲಾ ವಿಶ್ವಗಳಿಗೂ ಪೋಷಕರಾದ ಬಾಬಾರವರಿಗೆ ಭಿಕ್ಷೆಯನ್ನು ನೀಡಿ ಪೋಷಿಸುವ ಸುಯೋಗವನ್ನು ಈ ಐವರು ಮಹಾಭಕ್ತರುಗಳು ಹೊಂದಿದ್ದು ಅವರುಗಳ ಅದೃಷ್ಟವಲ್ಲದೇ ಮತ್ತೇನೆಂದು ಹೇಳಬೇಕು. ಬಾಬಾರವರು ಭಿಕ್ಷೆಗೆಂದು ಹೋಗುತ್ತಿದ್ದ ಐದು ಮನೆಗಳಲ್ಲೂ  ಬೇರೆ ಬೇರೆ ರೀತಿಯಲ್ಲಿ ಭಿಕ್ಷೆಯನ್ನು ಬೇಡುತ್ತಿದ್ದರು. ಅವರು "ಅಬಾದ್ ಎ ಅಬಾದ್, ಅಲ್ಲಾ ಭಲಾ ಕರೇಗಾ" ಎಂದು ಹೇಳಿ ಮನೆಯೊಡತಿಯರನ್ನು ಆಶೀರ್ವದಿಸುತ್ತಿದ್ದರು. ಬಾಯಿಜಾಬಾಯಿಯವರ ಮನೆಗೆ ಹೋದಾಗ "ಬಾಯಿಜಾ ಮಾ! ಜೀವನ್ ದೇ! ರೋಟಿ ಲಾವೋ!" ಎಂದು ಬೇಡುತ್ತಿದ್ದರು.  ಅವರು ಅಪ್ಪಾಜಿ ಪಾಟೀಲ್ ಹಾಗೂ ವಾಮನ ಗೋಂದ್ಕರ್ ರವರ ಮನೆಗಳ ಮುಂದೆ ಹೋದಾಗ ಅವರುಗಳ ಹೆಸರನ್ನು ಹಿಡಿದು ಕೂಗಿ ಕರೆದು "ಭಕ್ರಿ ದೇ" ಎಂದು ಬೇಡುತ್ತಿದ್ದರು. ಅವರು ಸಖಾರಾಮ್ ಶೆಲ್ಕೆಯವರ ಮನೆಯ ಮುಂದೆ ಹೋದಾಗ ಅವರ ಹೆಂಡತಿಯನ್ನು ಕೂಗಿ ಕರೆದು "ಇಟ್ಲಾಯಿ ಬಾಯಿ! ರೋಟಿ ಲಾವ್" ಎಂದು ಬೇಡುತ್ತಿದ್ದರು. ಹೀಗೆ ನಾಲ್ಕು ಮನೆಗಳಲ್ಲಿ ಭಿಕ್ಷೆ ಮುಗಿಸಿಕೊಂಡು ನಂತರ ಕೊನೆಯದಾಗಿ ನಂದೂರಾಮ್ ಮಾರವಾಡಿಯವರ ಮನೆಯ ಮುಂದೆ ಹೋಗಿ ನಿಂತುಕೊಂಡು "ನಂದೂರಾಮ್ ಭಕ್ರಿ ದೇ" ಎಂದು ಬೇಡುತ್ತಿದ್ದರು. ಕೆಲವೊಮ್ಮೆ ಅವರ ಪತ್ನಿಯಾದ ರಾಧಾಬಾಯಿಯನ್ನು ಕೂಗಿ ಕರೆದು "ಬೋಪಿಡಿ ಬಾಯಿ, ಭಕ್ರಿ ದೇ" ಎಂದು ಬೇಡುತ್ತಿದ್ದರು. ಮರಾಠಿ  ಭಾಷೆಯಲ್ಲಿ "ಬೋಪಿಡಿ" ಎಂದರೆ "ತೊದಲುವುದು" ಎಂಬ ಅರ್ಥ ಬರುತ್ತದೆ. ನಂದೂರಾಮ್ ರವರ ಹೆಂಡತಿಯಾದ ರಾಧಾಬಾಯಿ ಮಾತನಾಡುವಾಗ ಸ್ವಲ್ಪ ತೊದಲುತ್ತಿದ್ದುದರಿಂದ ಬಾಬಾರವರು ಕೆಲವೊಮ್ಮೆ ಆಕೆಯನ್ನು ಹಾಗೆ ಸಂಬೋಧಿಸುತ್ತಿದ್ದರು. ಕೆಲವೊಮ್ಮೆ ಆಕೆ ಆಹಾರವನ್ನು ತೆಗೆದುಕೊಂಡು ಬರುವುದು ತಡವಾದರೆ  "ಏಕೆ ಅಷ್ಟು ತಡ ಮಾಡುತ್ತಿರುವೆ?" ಎಂದು ಆಕೆಯ ಮೇಲೆ ಹರಿಹಾಯುತ್ತಿದ್ದರು.  ಇನ್ನು ಕೆಲವೊಂದು ದಿನಗಳಂದು ಯಾವುದೇ ವಿಶೇಷ ಹಬ್ಬ ಹರಿದಿನಗಳು ಇಲ್ಲದಿದ್ದರೂ ಸಹ "ಬೋಪಿಡಿ ಬಾಯಿ, ಮಿಠಾಯಿ ಲಾವೋ" ಎಂದು ಹೇಳುತ್ತಿದ್ದರು. ಬಾಬಾರವರು ಹಾಗೆ ಕೇಳಿದಾಗಲೆಲ್ಲಾ ರಾಧಾಬಾಯಿಯವರು ತಾವು ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನೂ ಪಕ್ಕಕ್ಕೆ ಸರಿಸಿ ಬಾಬಾರವರಿಗೆಂದೇ ವಿಶೇಷವಾಗಿ ಪೂರಣ್ ಪೋಳಿ ಎಂಬ ಸಿಹಿ ತಿಂಡಿಯನ್ನು ಮಾಡಿಕೊಂಡು ಬಂದು ಪ್ರೀತಿಯಿಂದ ನೀಡುತ್ತಿದ್ದರು. ಬಾಬಾರವರು ಸ್ವಲ್ಪ ಸಹಿಯನ್ನು ತಮ್ಮ ಬಾಯಿಗೆ ಹಾಕಿಕೊಂಡು ಉಳಿದಿದ್ದನ್ನು ಅಲ್ಲಿದ್ದ ಇತರ ಭಕ್ತರಿಗೆ ಹಂಚುತ್ತಿದ್ದರು. ಬಾಬಾರವರು ತಮ್ಮ ಸಮಾಧಿಯವರೆಗೂ ಕೇವಲ ಈ ಐದು ಮನೆಗಳಿಗೆ ಮಾತ್ರ ಭಿಕ್ಷೆಗೆಂದು ಪ್ರತಿನಿತ್ಯ ಹೋಗುತ್ತಿದ್ದರು ಹಾಗೂ ಅದೇ ಕ್ರಮದಲ್ಲಿ ಹೋಗುತ್ತಿದ್ದರು. ಆದರೆ ಅವರು ಎಷ್ಟು ಬಾರಿ ಭಿಕ್ಷೆಗೆ ಹೋಗುತ್ತಿದ್ದರೆಂದು ನಿರ್ದಿಷ್ಟವಾಗಿ ಹೇಳಲಾಗುತ್ತಿರಲಿಲ್ಲ. ಏಕೆಂದರೆ ಕೆಲವೊಮ್ಮೆ ಬಾಬಾರವರು ಒಂದೇ ದಿನ ಏಳೆಂಟು ಬಾರಿ ಭಿಕ್ಷೆಗೆ ಹೋಗುವ ಪರಿಪಾಠ ಇಟ್ಟುಕೊಂಡಿದ್ದರು. "ಬಾಬಾರವರು ಶಿರಡಿಗೆ ಬಂದ ಪ್ರಾರಂಭದ 3 ವರ್ಷಗಳಲ್ಲಿ ಪ್ರತಿನಿತ್ಯ ಎಂಟು ಬಾರಿ ಭಿಕ್ಷೆಗೆಂದು ಹೋಗುತ್ತಿದ್ದರು. ನಂತರದ 3 ವರ್ಷಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಭಿಕ್ಷೆಗೆ ಹೋಗುತ್ತಿದ್ದರು; ನಂತರದ ಹನ್ನೆರಡು ವರ್ಷಗಳಲ್ಲಿ ದಿನಕ್ಕೆ ಎರಡು ಬಾರಿ ಭಿಕ್ಷೆಗೆ ಹೋಗುತ್ತಿದ್ದರು ಹಾಗೂ ತಾವು ಸಮಾಧಿಯಾಗುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಪ್ರತಿದಿನ ಒಮ್ಮೆ ಮಾತ್ರ ಭಿಕ್ಷೆ ಬೇಡಲು ಹೋಗುತ್ತಿದ್ದರು" ಎಂದು ಶ್ರೀ.ಬಯ್ಯಾಜಿ ಅಪ್ಪಾಕೋತೆ ಪಾಟೀಲರು ಹೇಳುತ್ತಾರೆ.




ಬಾಬಾರವರು ಬಾಯಿಜಾಬಾಯಿಯವರ ಮನೆಗೆ ಭಿಕ್ಷೆಗೆ ತೆರಳಿದಾಗ ಅವರು ಬಾಬಾರವರಿಗೆ ಮನೆಯ ಒಳಗೆ ಬಂದು  ಸ್ವಲ್ಪ ಹೊತ್ತು  ವಿಶ್ರಮಿಸಿಕೊಂಡು ಅಲ್ಲಿಯೇ ಕುಳಿತು ಆಹಾರವನ್ನು ಸ್ವೀಕರಿಸಿ ಬಳಿಕ ಹೋಗುವಂತೆ ಬೇಡಿಕೊಳ್ಳುತ್ತಿದ್ದರು. ಬಾಬಾ ಯಾರ ಮನೆಯ ಒಳಗೆ ಹೋಗುವ ಅಭ್ಯಾಸವನ್ನು ಇಟ್ಟುಕೊಂಡಿರಲಿಲ್ಲ. ಆದರೆ ಬಾಯಿಜಾಬಾಯಿ ಅವರಿಗೆ ತೋರಿಸುತ್ತಿದ್ದ ತಾಯಿಯ ಪ್ರೀತಿಯನ್ನು ನಿರಾಕರಿಸಲು ಸಾಧ್ಯವಾಗದೇ ಕೆಲವೊಮ್ಮೆ  ಅವರ ಮನೆಯ ಹೊರಗಿದ್ದ ಜಗುಲಿಯ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡು ನಂತರ ಮುಂದಿನ ಮನೆಗೆ ಭಿಕ್ಷೆಗೆಂದು  ಹೊರಡುತ್ತಿದ್ದರು. ಬಾಬಾರವರು ಎಷ್ಟು ಬಾರಿ ಬಾಯಿಜಾಬಾಯಿಯ ಮನೆಗೆ ಭಿಕ್ಷೆಗೆಂದು ಹೋದರೂ ಸರಿಯೇ ಅವರೆಂದೂ ಬಾಬಾರವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಅವರು ಉತ್ಸುಕತೆಯಿಂದ ಮನೆಯೊಳಗಿನಿಂದ ಹೊರಗೋಡಿ ಬಂದವರೇ ಸ್ವಲ್ಪ ಉಪ್ಪಿನಕಾಯಿ ಅಥವಾ ಹಪ್ಪಳವನ್ನಾದರೂ ಬಾಬಾರವರ ಭಿಕ್ಷಾ ಜೋಳಿಗೆಯಲ್ಲಿ ಹಾಕುತ್ತಿದ್ದರು. ಬಾಬಾರವರು ಆಕೆಯನ್ನು ತಮ್ಮ ಸಹೋದರಿ ಎಂದು ಕರೆಯುತ್ತಿದ್ದರು. ನಿಜವಾಗಿಯೂ ಹೇಳಬೇಕೆಂದರೆ ಆಕೆ ಪುಣ್ಯವಂತೆಯೇ ಎಂದು ಹೇಳಬೇಕಾಗುತ್ತದೆ. ಪ್ರಾರಂಭದ ದಿನಗಳಲ್ಲಿ ಇಡೀ ಪ್ರಪಂಚವೇ ಬಾಬಾರವರ ಬಗ್ಗೆ ಏನೂ ತಿಳಿಯದೆ ಇರುವಂತಹ ಸಂದರ್ಭದಲ್ಲಿ ಆಕೆ ಬಾಬಾರವರ ಹಿರಿಮೆ ಹಾಗೂ ವೈಭವವನ್ನು ಬಹಳ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಬಾಬಾರವರಿಗೆ ಆಹಾರ ನೀಡದೇ ಅದಕ್ಕೆ ಮೊದಲು ತಾವು ಏನನ್ನೂ ತಿನ್ನುತ್ತಿರಲಿಲ್ಲ. ಆಕೆಗೆ ಬಾಬಾರವರ ಬಗ್ಗೆ ಅಷ್ಟು ಒಳನೋಟ ಇರಬೇಕೆಂದರೆ ಆಕೆ ತಮ್ಮ ಹಿಂದಿನ ಜನ್ಮದಲ್ಲಿ ಅದೆಷ್ಟು ಪುಣ್ಯದ ಕೆಲಸಗಳನ್ನು ಮಾಡಿರಬೇಕು?. ಆ ದಿನಗಳಲ್ಲಿ ಶಿರಡಿಯಲ್ಲಿ ವಾಸವಾಗಿದ್ದ ಹೆಂಗಳೆರೇನೂ ಬಹಳ ಓದಿದವರಲ್ಲ ಅಥವಾ ಸಮಾಜದ ಉನ್ನತ ಮಟ್ಟದ ಜನರಿಂದ ಸುಸಂಸ್ಕೃತರೆಂದು ಪರಿಗಣಿಸಲ್ಪಟ್ಟವರಲ್ಲ. ಆದಾಗ್ಯೂ ಅವರುಗಳು ಬಾಬಾರವರಿಗೆ  ತೋರಿಸುತ್ತಿದ್ದ ಭಕ್ತಿ ಹಾಗೂ ಪ್ರೀತಿಗೆ ನಾವುಗಳು ವಂದನೆಯನ್ನು ಸಲ್ಲಿಸಲೇಬೇಕು!

ಬಾಬಾರವರು ಎರಡನೇ ಬಾರಿ ಶಿರಡಿಗೆ ಬಂದ ಎರಡು ವರ್ಷಗಳ ನಂತರ ಅಂದರೆ 1876ನೇ ಇಸವಿಯಲ್ಲಿ ಅಹಮದ್ ನಗರ ಜಿಲ್ಲೆಯಲ್ಲಿ ಕ್ಷಾಮ ಪರಿಸ್ಥಿತಿ ತಲೆದೋರಿತ್ತು. ಆ ಸಮಯದಲ್ಲಿ ಬಾಬಾರವರು ಶ್ರೀಮಂತರಾಗಿದ್ದ ನಂದೂರಾಮ್ ಮಾರವಾಡಿ ಹಾಗೂ ಬಾಯಜಾಬಾಯಿಯವರ ಮನೆಗಳಲ್ಲಿ ಮಾತ್ರ ಭಿಕ್ಷೆ ಬೇಡುತ್ತಿದ್ದರು. ಆ ಸಮಯದಲ್ಲಿ ಇವರುಗಳ ಮನೆಯಿಂದ ಕೇವಲ ಅರ್ಧ ರೊಟ್ಟಿಯನ್ನು ಮಾತ್ರ ಭಿಕ್ಷೆಯಾಗಿ ಸ್ವೀಕರಿಸುತ್ತಿದ್ದರು.  

ನಂತರದ ದಿನಗಳಲ್ಲಿ ಬಾಬಾರವರ ದೈವತ್ವವನ್ನು ಮನಗಂಡು ಎಲ್ಲರೂ ಗುಂಪು ಗುಂಪಾಗಿ ಶಿರಡಿಗೆ ಬರಲಾರಂಭಿಸಿದರು.   ಅನೇಕ ಶ್ರೀಮಂತ ಭಕ್ತರು ಬಗೆಬಗೆಯಾದ ಭೋಜನ ಪದಾರ್ಥಗಳನ್ನು ಹಾಗೂ ಸಿಹಿ ತಿಂಡಿಗಳನ್ನು ತಂದು ಬಾಬಾರವರ ಮುಂದೆ ಇರಿಸಿದರೂ ಸಹ ಬಾಬಾರವರು ಮೊದಲಿನಂತೆಯೇ ಭಿಕ್ಷೆ ಬೇಡಿ ಅದರಿಂದ ಬಂದಿದ್ದನ್ನೇ ತಿಂದು ಹೊಟ್ಟೆ  ತುಂಬಿಸಿಕೊಳ್ಳುತ್ತಿದ್ದರು. ಭಕ್ತರು  ತಮ್ಮ ಸುತ್ತಲೂ ತಂದಿರಿಸಿದ್ದ ವೈಭವೋಪೇತ ವಸ್ತುಗಳ ಕಡೆ ಕಣ್ಣೆತ್ತಿ ಸಹ ನೋಡುತ್ತಿರಲಿಲ್ಲ. ಈ  ಪ್ರಪಂಚಕ್ಕೆ ಫಕೀರನಾಗಿ ಬಂದ ಬಾಬಾರವರು ತಮ್ಮ ಸಮಾಧಿಯವರೆಗೂ ಫಕೀರನಾಗಿಯೇ ಜೀವಿಸಿದರು. ಅವರು ಎಂದಿಗೂ ತಮಗೊಬ್ಬರಿಗೆಂದು ಆಹಾರವನ್ನು ಬೇಯಿಸಿಕೊಳ್ಳಲಿಲ್ಲ ಅಥವಾ ನಾಳೆಗೆಂದು ಕೂಡಿಡಲಿಲ್ಲ. ಬಾಬಾರವರು ತಮ್ಮ ಅಂತಿಮ ದಿನಗಳಲ್ಲಿ ಅಸ್ವಸ್ಥರಾಗಿ ಮಲಗಿದ್ದಾಗ ಕೂಡ ತಮ್ಮ ಬದಲಿಗೆ ಬೇರೆಯವರನ್ನು ಭಿಕ್ಷೆ ಬೇಡಲು ಕಳುಹಿಸಿ ಅವರು ತಂದ ಆಹಾರವನ್ನೇ ಸಂತೃಪ್ತಿಯಿಂದ ಸ್ವೀಕರಿಸುತ್ತಿದ್ದರು. 

ಬಾಬಾರವರು ಕೆಲವೊಮ್ಮೆ ಮಲಬದ್ಧತೆ ಹಾಗೂ ಕರುಳುಬೇನೆಯಿಂದ ಬಳಲುತ್ತಿದ್ದ್ದರು. ಆಗ ಅವರು ಸೋನಾಮುಖಿ  ಹಾಗೂ ಮತ್ತಿತರ ಎಲೆಗಳಿಂದ ಕಷಾಯವನ್ನು ಮಾಡಿ ಅವರೂ ಕುಡಿದು ಆ ಸಮಯದಲ್ಲಿ ಮಸೀದಿಯಲ್ಲಿದ್ದ ಇತರ ಭಕ್ತರಿಗೂ ಕುಡಿಯಲು ನೀಡುತ್ತಿದ್ದರು. ಅವರು ಕಣ್ಣಿನ ಬೇನೆಯಿಂದ ಬಳಲುತ್ತಿದ್ದಾಗ ಕಪ್ಪು ಮೆಣಸನ್ನು ಚೆನ್ನಾಗಿ ಅರೆದು ಅಂಟಿನಂತೆ ಮಾಡಿ ಅದನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಿದ್ದರು. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಈ ಎರಡು ಖಾಯಿಲೆಗಳನ್ನು ಹೊರತುಪಡಿಸಿ ಅವರು ಬಹಳವೇ ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ಅವರು ಹೀಗೆ ಆಸ್ತಮಾ ಖಾಯಿಲೆಯಿಂದ ನರಳುತ್ತಿದ್ದುದನ್ನು ನೊಡಿ ಅವರ ಸನ್ನಿಹಿತ ಮಹಾಭಕ್ತರಿಗೆ ತಡೆಯಲಾಗುತ್ತಿರಲಿಲ್ಲ.  ಒಮ್ಮೆ ಬಾಬಾರವರು ಆಸ್ತಮಾದಿಂದ ಬಳಲತ್ತಿದ್ದುದನ್ನು ನೋಡಿ ರಘುವೀರ ಪುರಂದರೆ ಎಂಬ ಮಹಾಭಕ್ತರು ಜೋರಾಗಿ ಅಳಲು ಪಾರಂಭಿಸಿದರು. ಆಗ ಬಾಬಾ ಅವರಿಗೆ ಸಮಾಧಾನ ಮಾಡುತ್ತಾ "ಎಲೈ ಸಹೋದರನೇ, ನನಗೆ ಏನಾಗಿದೆಯೆಂದು ತಿಳಿದಿದ್ದೀಯೇ? ಯೋಚನೆ ಮಾಡಬೇಡ. ಸ್ವಲ್ಪವೇ ಸಮಯದಲ್ಲಿ ನನ್ನ ಖಾಯಿಲೆ ಕಡಿಮೆಯಾಗುತ್ತದೆ" ಎಂದು ಹೇಳಿದರು. ಬಾಬಾರವರು ಹುಷಾರಿಲ್ಲವೆಂಬ ಕಾರಣದಿಂದ  ಭಿಕ್ಷೆ ಬೇಡುವುದಕ್ಕೆ ಹೋಗದೇ ಇರುತ್ತಿರಲಿಲ್ಲ. ಅವರಿಗೆ ಬಹಳ ಹುಷಾರಿಲ್ಲದೇ ನಡೆಯಲೂ ಆಗದೇ ಇದ್ದ ಸಮಯದಲ್ಲಿ ಭಕ್ತರು ಅವರ ಕೈಹಿಡಿದುಕೊಂಡು ಐದು ಮನೆಗಳಿಗೆ ಭಿಕ್ಷೆ  ಬೇಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಬಾಬಾರವರಿಗೆ ಬಹಳವೇ ಹುಷಾರಿಲ್ಲದ ಸಮಯದಲ್ಲಿ ಭಕ್ತರೊಬ್ಬರು ಅವರಿಗೆಂದು ಗಾಲಿ ಕುರ್ಚಿಯನ್ನು ನೀಡಿದರು. ನಾವುಗಳು ಈಗಲೂ ಈ ಗಾಲಿ ಕುರ್ಚಿಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಬಾಬಾರವರ ಅವತರಣ ಕಾಲದಲ್ಲಿ ಈ ಗಾಲಿ ಕುರ್ಚಿಯು ಚಾವಡಿಯಲ್ಲಿ ಇತ್ತು. ಬಾಬಾ ಆ ಕುರ್ಚಿಯನ್ನು ಒಮ್ಮೆ ತಮ್ಮ ಕೈಯಿಂದ ಮುಟ್ಟಿ ಪಕ್ಕಕ್ಕೆ ಇರಿಸಿದರು. ಅವರೆಂದೂ ಆ ಗಾಲಿ ಕುರ್ಚಿಯನ್ನು ಉಪಯೋಗಿಸಲೇ ಇಲ್ಲ. ಬಾಬಾರವರಿಗೆ ಬಹಳವೇ ಹುಷಾರಿಲ್ಲದೆ  ಭಿಕ್ಷೆಗೆ ಹೋಗಲು ಆಗದೇ ಇದ್ದ ಸಮಯದಲ್ಲಿ ಮಾತ್ರ  ಅವರಿಗೆ ಬಹಳ ಹತ್ತಿರವಾಗಿದ್ದ ಭಕ್ತರು ಅವರ ಪರವಾಗಿ ಭಿಕ್ಷೆಗೆ ಹೋಗುತ್ತಿದ್ದರು. ಆ ಸುಯೋಗವನ್ನು ಹೊಂದಿದ್ದ ಸಾಯಿ ಭಕ್ತರುಗಳೆಂದರೆ ಶ್ರೀ.ಮಾಧವ ರಾವ್ ದೇಶಪಂಡೆ (ಶ್ಯಾಮ), ಶ್ರೀ.ಬಾಲಕರಾಮ, ಶ್ರೀ.ವಾಮನ ರಾವ್ ಪಟೇಲ್ (ಶ್ರೀ.ಸಾಯಿ ಶರಣಾನಂದ) ಹಾಗೂ ಪ್ರೊ.ಜಿ.ಜಿ.ನಾರ್ಕೆ. 

ಶ್ರೀ ಸಾಯಿ ಶರಣಾನಂದರು ತಮ್ಮ ಅನುಭವಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ: “ಒಮ್ಮೆ ಬಾಲಕರಾಮ ಶಿರಡಿಯಲ್ಲಿ ಇಲ್ಲದಿರುವ ಸಮಯದಲ್ಲಿ ಬಾಬಾರವರ ಮಧ್ಯಾನ್ಹದ ಭಿಕ್ಷೆಯ ಸುತ್ತಿಗೆ ನಾನು ಹೋಗುವ ಸುಯೋಗವನ್ನು ಬಹಳ ದಿನಗಳ ಕಾಲ ಪಡೆದಿದ್ದೆ. ಆಗ ನಾನು ಶ್ರೀ.ಬಾಪು ಸಾಹೇಬ್ ಜೋಗ್ ರವರ ಮನೆಯಿಂದ ಭಿಕ್ಷೆಯನ್ನು ಹಾಗೂ ಇನ್ನೊಬ್ಬರ ಮನೆಯಿಂದ ಹಾಲನ್ನು ತೆಗೆದುಕೊಂಡು  ಬರುತ್ತಿದ್ದೆ" ಎಂದು ಅವರು ಹೇಳುತ್ತಾರೆ. ಶ್ರೀ ಸಾಯಿ ಶರಣಾನಂದರ ಈ ಸುಯೋಗವನ್ನು ನೋಡಿದ ಜಿ.ಜಿ.ನಾರ್ಕೆಯವರಿಗೆ ತಮಗೂ ಕೂಡ ಬಾಬಾರವರಿಗೋಸ್ಕರ ಭಿಕ್ಷೆ ಬೇಡುವ ಸುಯೋಗ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಆಲೋಚನೆ ಮನದಲ್ಲಿ ಬಂದಿತು. ಒಮ್ಮೆ ನಾರ್ಕೆಯವರಿಗೆ ಬಟ್ಟೆಯನ್ನು ಬದಲಿಸಲು ಸಮಯವಾಗದೇ ತಾವು ಯಾವಾಗಲೂ ಹೊರಗೆ ಹೋಗುವಾಗ ಧರಿಸುತ್ತಿದ್ದ ಸೂಟು ಹಾಗೂ ಟೋಪಿಯನ್ನು ಧರಿಸಿ ಮಸೀದಿಗೆ ಬಂದರು. ಅವರನ್ನು ನೋಡಿದ ಕೂಡಲೇ ಬಾಬಾರವರು “ಈ ದಿನ ಈ ಮನುಷ್ಯ ನನ್ನ ಬದಲಿಗೆ ಭಿಕ್ಷೆಗೆ ಹೋಗುತ್ತಾನೆ” ಎಂದು ಹೇಳಿದರು. ನಾರ್ಕೆಯವರು ಅದೇ ಬಟ್ಟೆಗಳನ್ನು ಧರಿಸಿಯೇ ಸಂತೋಷದಿಂದ ಭಿಕ್ಷೆಗೆ ತೆರಳಿದರು. ನಾರ್ಕೆಯವರಿಗೆ ಸುಮಾರು ನಾಲ್ಕು ತಿಂಗಳ ಕಾಲ ಬಾಬಾರವರ ಪರವಾಗಿ ಭಿಕ್ಷೆಯನ್ನು ಬೇಡುವ ಅಪರೂಪದ ಅವಕಾಶ ಪಡೆದಿದ್ದರು. 

ಬಾಬಾರವರು ಭಿಕ್ಷೆಗೆ ಹೋಗುವ ಸಮಯದಲ್ಲಿ ತಮ್ಮ ಭುಜಕ್ಕೆ ಬಟ್ಟೆಯಿಂದ ಮಾಡಿದ ಜೋಳಿಗೆಯನ್ನು ಸಿಕ್ಕಿಸಿಕೊಂಡು ಬಲಗೈಯಲ್ಲಿ ತಗಡಿನ ಪಾತ್ರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ಗಟ್ಟಿ ಪದಾರ್ಧಗಳಾದ ರೊಟ್ಟಿ ಹಾಗೂ ಪಲ್ಯಗಳನ್ನು ಜೋಳಿಗೆಗೆ ಮತ್ತು ಸಾರು, ಸಾಂಬಾರು, ಹಾಲು, ಮೊಸರು  ಮುಂತಾದ ದ್ರವ ಪದಾರ್ಥಗಳನ್ನು ತಗಡಿನ ಪಾತ್ರೆಯಲ್ಲೂ ಹಾಕಿಸಿಕೊಂಡು ಬರುತ್ತಿದ್ದರು. ಅವರೆಂದಿಗೂ ರುಚಿಯ ಕಡೆಗೆ ಗಮನವಿಡುತ್ತಿರಲಿಲ್ಲ. ಅಲ್ಲದೆ ತಮ್ಮ ಬಳಿ ಬರುತ್ತಿದ್ದ ಭಕ್ತರಿಗೂ ರುಚಿಯ ಕಡೆ ಗಮನ ಹರಿಸದಂತೆ ತಿಳಿಸುತ್ತಿದ್ದರು. 

ಬಾಬಾರವರು ಪ್ರತಿನಿತ್ಯ ಭಿಕ್ಷೆಗೆ ತೆರಳುವಾಗ ಒಂದೇ ದಾರಿಯನ್ನು ಬಳಸುತ್ತಿದ್ದರು. ಅವರು ದ್ವಾರಕಾಮಾಯಿಯಿಂದ ಹೊರಟು ಚಾವಡಿ ಮುಂದಿನ ರಸ್ತೆಯನ್ನು ದಾಟಿ ಮೊದಲು ಸಖಾರಾಮ್ ಶೆಲ್ಕೆ ಹಾಗೂ ವಾಮನ ರಾವ್ ಗೋಂದ್ಕರ್ ರವರ ಮನೆಗೆ ಹೋಗುತ್ತಿದ್ದರು. ನಂತರ ಅಲ್ಲಿಂದ ಸ್ವಲ್ಪ ದೂರ ಮುಂದಿದ್ದ ಬಯ್ಯಾಜಿ ಅಪ್ಪಾಜಿ ಪಾಟೀಲ ಮತ್ತು ತಾತ್ಯಾ ಕೋತೆ ಪಾಟೀಲರ ಮನೆಗೆ ಹೋಗುತ್ತಿದ್ದರು. ಕೊನೆಗೆ ದ್ವಾರಕಾಮಾಯಿಯ ಎದುರುಗಡೆ ಇದ್ದ ನಂದೂರಾಮ ಮಾರವಾಡಿಯ ಮನೆಗೆ ಭಿಕ್ಷೆಗೆ ಹೋಗುತ್ತಿದ್ದರು. ಆ ದಿನಗಳಲ್ಲಿ ಬಯ್ಯಾಜಿ ಅಪ್ಪಾಜಿ ಪಾಟೀಲರ ಮನೆಯಿಂದ ಬರುವ ದಾರಿಯಲ್ಲಿ ಸಣ್ಣ  ಕಲ್ಲು ಬಂಡೆಗಳಿದ್ದವು. ಬಾಬಾರವರು ಆ ಸ್ಥಳದಲ್ಲಿ ಸ್ವಲ್ಪ ಸಮಯ ನಿಂತು ತಮಗೆ ಭಿಕ್ಷೆಯಿಂದ ಬಂದ ಆಹಾರದಲ್ಲಿ ಸ್ವಲ್ಪ ಆಹಾರವನ್ನು ಜೋಳಿಗೆಯಿಂದ ತೆಗೆದು  ಅಲ್ಲಿದ್ದ ಕಾಗೆ ಹಾಗೂ ನಾಯಿಗಳಿಗೆ ತಮ್ಮ ಸ್ವಹಸ್ತದಿಂದ ನೀಡುತ್ತಿದ್ದರು. ಅದರ ಗುರುತಿಗಾಗಿ ಅಲ್ಲಿ ಬಾಬಾರವರ ಕಲ್ಲಿನ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿತ್ತು. ಶ್ರೀ ಸಾಯಿಬಾಬಾ ಸಂಸ್ಥಾನದವರು ಪಲ್ಲಕ್ಕಿ ರಸ್ತೆಯ ಅಗಲೀಕರಣ ಕೈಗೆತ್ತಿಕೊಂಡಾಗ ಆ ಪಾದುಕೆಗಳನ್ನು ಶ್ರೀಮತಿ.ವಿನ್ನಿ ಚಿಟ್ಲೂರಿಯವರು ತೆಗೆದುಕೊಂಡು ಹೋಗಿ ಶಿರಡಿಗೆ ಸಮೀಪದಲ್ಲಿರುವ ಕೊರಾಳೆ ಬಾಬಾ ಮಂದಿರದಲ್ಲಿ ಪ್ರತಿಷ್ಟಾಪಿಸಿರುತ್ತಾರೆ. ಬಾಬಾರವರು ತಮ್ಮ ಭಿಕ್ಷೆಯ ಸುತ್ತನ್ನು ಮುಗಿಸಿಕೊಂಡು ದ್ವಾರಕಾಮಾಯಿಗೆ ಹಿಂತಿರುಗಿದ ಕೂಡಲೇ ತಮ್ಮ ಜೋಳಿಗೆಯಿಂದ ಸ್ವಲ್ಪ ಆಹಾರವನ್ನು ಉರಿಯುತ್ತಿರುವ ಧುನಿಗೆ ಹಾಕಿ ಉಳಿದುದನ್ನು ಮಸೀದಿಯ ಒಳಗಡೆ ಇರಿಸಲಾಗಿದ್ದ ಮಣ್ಣಿನ ಕೊಲಂಬಾದಲ್ಲಿ ಹಾಕುತ್ತಿದ್ದರು. ಕೊಲಂಬಾದ ಮೇಲೆ ಏನೂ ಮುಚ್ಚದಿದ್ದ ಕಾರಣ ನಾಯಿ, ಬೆಕ್ಕು, ಇರುವೆ ಹಾಗೂ ನೊಣಗಳು ಅಲ್ಲಿಂದ ಆಹಾರವನ್ನು ತೆಗೆದುಕೊಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆ ಕೊಲಂಬಾದಿಂದ ಯಾರೂ ಬೇಕಾದರೂ ಆಹಾರವನ್ನು ತೆಗೆದುಕೊಳ್ಳಬಹುದಾಗಿತ್ತು. ಬಾಬಾ ಯಾರಿಗೂ ಬೇಡವೆಂದು ಹೇಳುತ್ತಿರಲಿಲ್ಲ. ಮಸೀದಿಯನ್ನು ಗುಡಿಸಿ ಸಾರಿಸಲು ಬರುತ್ತಿದ್ದ ಹೆಂಗಳೆಯರು ಪ್ರತಿನಿತ್ಯ ಏಳೆಂಟು ರೊಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

ಬಾಬಾರವರು ಪ್ರತಿನಿತ್ಯ ಬೆಳಿಗ್ಗೆ 8.30 ರಿಂದ 9.30 ರ ನಡುವೆ ತಪ್ಪದೇ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು. ಅವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಅದೂ ಅವರಿಗೆ ಮನಸ್ಸು ಬಂದಾಗ ಮಾತ್ರ ಕಾಲಿಗೆ ಪಾದರಕ್ಷೆಗಳನ್ನು ಉಪಯೋಗಿಸುತ್ತಿದ್ದರು.  ಅವರು ಮೊದಲು ಮಸೀದಿಯಿಂದ ಹೊರಗೆ ಬಂದು ಹೊರಗಡೆಯಿದ್ದ ಗೋಡೆಗೆ ಒರಗಿಕೊಂಡು ಸ್ವಲ್ಪ ಹೊತ್ತು ನಿಂತುಕೊಳ್ಳುತ್ತಿದ್ದರು. ನಂತರ ಅಲ್ಲಿಂದ ಮಾರುತಿ ಮಂದಿರದ ಬಳಿಗೆ ತೆರಳಿ ಮಂದಿರದ ಒಳಗಿದ್ದ ಹನುಮಂತನನ್ನೇ ದಿಟ್ಟಿಸಿ ನೋಡುತ್ತಾ ಕೈಯಿಂದ ಏನೋ ಸನ್ನೆಗಳನ್ನು ಮಾಡುತ್ತಿದ್ದರು.  ನಂತರ ಗುರುಸ್ಥಾನಕ್ಕೆ ಅಡ್ಡಲಾಗಿದ್ದ ರಸ್ತೆಯ ಬಳಿ ನಿಂತು ಯಾರೊಡನೆಯೋ ಮಾತನಾಡುತ್ತಿರುವಂತೆ ಸ್ವಲ್ಪ ಹೊತ್ತು ನಿಂತಿದ್ದು ನಂತರ ಅಲ್ಲಿಂದ ಮುಂದೆ ಹೋಗುತ್ತಿದ್ದರು. ಗುರುಸ್ಥಾನದ ಹತ್ತಿರದ ಮನೆಗಳಲ್ಲಿ ವಾಸಿಸುತ್ತಿದ್ದ ಭಕ್ತರು ಹಾಗೂ ಆಗಷ್ಟೇ ಶಿರಡಿಗೆ ಬರುತ್ತಿದ್ದ ಭಕ್ತರು ದಾರಿಯಲ್ಲಿಯೇ ಬಾಬಾರವರ ದರ್ಶನ ಮಾಡಿಕೊಳ್ಳುತ್ತಿದ್ದರು. ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತು  ಬಾಬಾರವರು ಮಸೀದಿಯಿಂದ ಹೊರಬರುವುದನ್ನೇ ಕಾಯುತ್ತಿದ್ದರು. ಬಾಬಾರವರು ನಿಧಾನವಾಗಿ ದಾರಿಯಲ್ಲಿ ಸಾಗುತ್ತಾ ಪ್ರತಿಯೊಬ್ಬ ಭಕ್ತರ ಹೆಸರು ಹಿಡಿದು ಕರೆಯುತ್ತಾ ಪ್ರೀತಿಯಿಂದ ನಗುನಗುತಾ ಮಾತನಾಡಿಸಿ ನಂತರವಷ್ಟೇ ಮುಂದೆ ಸಾಗುತ್ತಿದ್ದರು.



ನಂತರ ಅವರು ಎಡಕ್ಕೆ ತಿರುಗಿ ಬಾಲಾಜಿ ಪಿಲಾಜಿ ಗುರವ್ ರವರ ಮನೆಯ ಬಳಿಗೆ ಹೋಗುತ್ತಿದ್ದರು. ಅಲ್ಲಿಂದ ಹೊರಟು ವಿಠಲನ ಮಂದಿರದ ಹತ್ತಿರ ಹೋಗಿ  ಅಲ್ಲಿ ರಸ್ತೆಯನ್ನು ದಾಟಿ ಬಲಕ್ಕೆ ತಿರುಗಿ ಹಳೆಯ ಅಂಚೆ ಕಛೇರಿಯ ಬಳಿಯಿದ್ದ ಕನೀಫನಾಥ ಮಂದಿರಕ್ಕೆ ಹೋಗುತ್ತಿದ್ದರು.  ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಪುನಃ ಬಲಕ್ಕೆ ತಿರುಗಿ ಲೇಂಡಿ ಉದ್ಯಾನವನವನ್ನು ಪ್ರವೇಶಿಸುತ್ತಿದ್ದರು. ಲೇಂಡಿ ಉದ್ಯಾನವನದಲ್ಲಿ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಿದ್ದರು.

ಪ್ರಸ್ತುತ ಲೇಂಡಿ ಉದ್ಯಾನವನದಲ್ಲಿ ಬೇವಿನ ಹಾಗೂ ಔದುಂಬರ ವೃಕ್ಷಗಳಿರುವ ಸ್ಥಳದಲ್ಲಿನ ನೆಲದಲ್ಲಿ ಮೊದಲು ಒಂದು ಸಣ್ಣ ಹಳ್ಳದಂತಿದ್ದು ಅಲ್ಲಿ ನಿರಂತರ ಉರಿಯುತ್ತಿರುವ ನಂದಾ ದೀಪವನ್ನು ಹಚ್ಚಿ ಇರಿಸಲಾಗಿತ್ತು. ಅದರ ಸುತ್ತಲೂ ಸೆಣಬಿನ ಚೀಲಗಳಿಂದ ಪರದೆಯನ್ನು ಮಾಡಿ ಮುಚ್ಚಲಾಗಿತ್ತು. ಬಾಬಾರವರು ಯಾವಾಗಲೂ ನಂದಾದೀಪಕ್ಕೆ ಎದುರಾಗಿ ಕುಳಿತುಕೊಳ್ಳದೆ  ಬದಲಿಗೆ ಬೆನ್ನು ಮಾಡಿಕೊಂಡು ಸ್ವಲ್ಪ ಸಮಯ ಅಲ್ಲಿಯೇ ಕುಳಿತಿರುತ್ತಿದ್ದರು. ಅಬ್ದುಲ್ ಬಾಬಾರವರು ಆ ಸ್ಥಳವನ್ನು ಶುದ್ಧ ಮಾಡಿ ದೀಪಗಳಿಗೆ ಎಣ್ಣೆಯನ್ನು ಹಾಕಿ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಬಾಬಾ ಲೇಂಡಿಯೊಳಗೆ ಬರುತ್ತಿದ್ದಂತೆಯೇ ಅವರು ಎರಡು ಮಡಕೆಗಳಲ್ಲಿ ನೀರು ತುಂಬಿ ಇರಿಸುತ್ತಿದ್ದರು. ಬಾಬಾರವರು ಆ ಮಡಕೆಗಳಿಂದ ನೀರನ್ನು ತಮ್ಮ ಕೈಗೆತ್ತಿಕೊಂಡು ಏನೋ ಸನ್ನೆಗಳನ್ನು ಮಾಡುತ್ತಾ ಎಲ್ಲಾ ದಿಕ್ಕುಗಳಿಗೂ ನೀರನ್ನು ಸಿಂಪಡಿಸುತ್ತಿದ್ದರು. ಬಾಬಾರವರು ಈ ರೀತಿ ಮಾಡುವಾಗ ಅಲ್ಲಿ ಯಾರೂ ಇರಲು ಬಿಡುತ್ತಿರಲಿಲ್ಲ. ಅಬ್ದುಲ್ ಬಾಬಾರವರು ಕೂಡ ಅಲ್ಲಿರುತ್ತಿರಲಿಲ್ಲ. ಅಲ್ಲದೇ ಬಾಬಾರವರೊಂದಿಗೆ ಲೇಂಡಿ ಉದ್ಯಾನವನಕ್ಕೆ ಬರುತ್ತಿದ್ದ ಭಕ್ತರೂ ಸಹ ಉದ್ಯಾನವನದ ಹೊರಗಡೆ ನಿಂತು ಬಾಬಾರವರಿಗಾಗಿ ಕಾಯುತ್ತಿದ್ದರು. 

ಲೇಂಡಿ ಉದ್ಯಾನವನದಲ್ಲಿರುವ ಬೇವಿನ ಹಾಗೂ ಔದುಂಬರ ವೃಕ್ಷಗಳನ್ನು ಸ್ವತಃ ಬಾಬಾರವರೇ ನೆಟ್ಟು ನೀರೆರೆದು ಬೆಳೆಸಿದ್ದರು. ಮೊದಲಿಗೆ ಒಂದು ಗಿಡವು ಬಾಡಿಹೋದಂತೆ ಇತ್ತು. ಆದರೆ ಬಾಬಾರವರು ಅದನ್ನು ತಮ್ಮ  ಅಮೃತ ಹಸ್ತದಿಂದ ನಿತ್ಯ ಪೋಷಣೆ ಮಾಡಿ ಅದು ಚೆನ್ನಾಗಿ ಬೆಳೆಯುವಂತೆ ಮಾಡಿದರು. ಲೇಂಡಿಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ಬಾಬಾರವರು ಬೆಳಿಗ್ಗೆ ಬರುವಾಗ ಯಾವ ದಾರಿಯಲ್ಲಿ ಬಂದರೋ ಅದೇ ದಾರಿಯಲ್ಲಿ ಹಿಂತಿರುಗಿ ಮಸೀದಿಗೆ ವಾಪಸಾಗುತ್ತಿದ್ದರು. ಅವರೆಂದೂ ತಾವು ಹೋಗಿ ಬರುತ್ತಿದ್ದ ಮಾರ್ಗವನ್ನು ಬದಲಿಸುತ್ತಿರಲಿಲ್ಲ. ಬಾಬಾರವರು ತಮ್ಮ ಸಮಾಧಿಯವರೆಗೂ ನಿತ್ಯ ದಿನಚರಿಯನ್ನು ಯಾವುದೇ ಕಾರಣಕ್ಕೂ ಬದಲಿಸದೆ ತಾವು ಪ್ರತಿನಿತ್ಯ ಮಾಡುತ್ತಿದ್ದ ಎಲ್ಲಾ ಕಾರ್ಯಗಳನ್ನೂ ನಿಯಮಿತವಾಗಿ ಮಾಡಿಕೊಂಡು ಬಂದರು. ಆ ಕಾರ್ಯವು ಎಷ್ಟೇ ಸಣ್ಣದ್ದಾಗಿರಲೀ ಅಥವಾ ದೊಡ್ಡ ಕೆಲಸವಾಗಿರಲೀ ಮಾಡುವ ಕ್ರಮವನ್ನು ಬಾಬಾರವರು ಎಂದಿಗೂ ಬದಲಿಸುತ್ತಿರಲಿಲ್ಲ.

ಶಿರಡಿಗೆ ಹರಿದು ಬರುವ ಭಕ್ತರ ಸಂಖ್ಯೆ ಹೆಚ್ಚಾದಂತೆಲ್ಲಾ ಬಾಬಾರವರು ಲೇಂಡಿ ಉದ್ಯಾನವನಕ್ಕೆ ವಿಹಾರಕ್ಕೆ ಬರುವುದು  ಒಂದು ವಿಧ್ಯುಕ್ತ ಹಬ್ಬದ ಮೆರವಣಿಗೆಯಾಗಿ ಮಾರ್ಪಟ್ಟಿತು.ಬಾಬಾರವರು ಮಸೀದಿಯಿಂದ ಲೇಂಡಿ ಉದ್ಯಾನವನಕ್ಕೆ ಹೊರಡುತ್ತಿದ್ದಂತೆ  ಭಾಗೋಜಿ ಶಿಂಧೆ ಅವರ ತಲೆಯ ಮೇಲೆ ವರ್ಣರಂಜಿತವಾದ ಛತ್ರಿಯನ್ನು ಹಿಡಿಯುತ್ತಿದ್ದರು. ನಾನಾ ಸಾಹೇಬ್ ನಿಮೋಣ್ಕರ್ ಮತ್ತು ಬೂಟಿಯವರು ಬಾಬಾರವರ ಬಲ ಹಾಗೂ ಎಡ ಭಾಗಗಳಲ್ಲಿ ನಡೆದುಕೊಂಡು ಅವರೊಂದಿಗೆ ಬರುತ್ತಿದ್ದರು. ಆಗ ಬಾಬಾರವರ ವದನಾರವಿಂದವನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲವೆಂಬತ್ತಿತ್ತು. ಬಾಬಾರವರ ಲೇಂಡಿ ಉದ್ಯಾನವನದ ಮೆರವಣಿಗೆಯ ಈ ಚಿತ್ರವು ಇನ್ನೂ ಪ್ರಚಲಿತದಲ್ಲಿದೆ. 

ಬಾಬಾರವರು ಸುಮಾರು 10 ಗಂಟೆಗೆ ಲೇಂಡಿಯಿಂದ ಮಸೀದಿಗೆ ಹಿಂತಿರುಗುತ್ತಿದ್ದರು. ಆಗಿನಿಂದ 11.30 ರವರೆಗೂ ಬಾಬಾರವರ ರಾಜ ದರ್ಬಾರು ನಡೆಯುತ್ತಿತ್ತು. ಆ ಸಮಯದಲ್ಲಿ ಕೆಲವು  ಭಕ್ತರು ಅವರಿಗಿದ್ದ ಖಾಯಿಲೆ, ಅನುಮಾನಗಳನ್ನು ಬಾಬಾರವರ ಬಳಿ ಹೇಳಿಕೊಂಡರೆ, ಮತ್ತೆ ಕೆಲವು ಭಕ್ತರು ಅವರ ತೊಂದರೆಗಳಿಗೆ ಮಾರ್ಗದರ್ಶನ ನೀಡುವಂತೆ ಕೇಳಿಕೊಳ್ಳುತ್ತಿದ್ದರು. ಇನ್ನೂ ಕೆಲವು ಭಕ್ತರು ತಮ್ಮ ಮನದ ಬಯಕೆಗಳನ್ನು ಪೂರೈಸುವಂತೆ ಕೇಳಿಕೊಳ್ಳುತ್ತಿದ್ದರು.ಆ ಸಮಯದಲ್ಲಿ ಗಾಯಕರು, ನೃತ್ಯಪಟುಗಳು, ಜಾದೂಗಾರರು ಬಂದು ತಮ್ಮ ಪ್ರತಿಭೆಗಳನ್ನು ಬಾಬಾರವರ ಮುಂದೆ ಪ್ರದರ್ಶಿಸಿ ಅವರಿಂದ ಸೂಕ್ತ ಬಹುಮಾನವನ್ನು ಪಡೆಯುತ್ತಿದ್ದರು. ಸಾಮಾನ್ಯವಾಗಿ ಬಾಬಾರವರು ಅವರುಗಳಿಗೆ ಎರಡು ರೂಪಾಯಿಗಳನ್ನು ನೀಡುತ್ತಿದ್ದರು.

ಭಕ್ತರು ಬಾಬಾರವರಿಗೆ ನೀಡಲೆಂದು ಕಾಣಿಕೆಗಳನ್ನು ತಂದಾಗ ಅವರು ಅದನ್ನು ತಮ್ಮ ಕೈಯಿಂದ ಸ್ವೀಕರಿಸಿದಂತೆ ಮುಟ್ಟಿ ನಂತರ ಅದನ್ನು ಆಶೀರ್ವದಿಸಿ ಭಕ್ತರಿಗೆ ಪ್ರಸಾದವೆಂದು ವಾಪಸ್ ನೀಡುತ್ತಿದ್ದರು. ಕೆಲವೊಮ್ಮೆ ಅವರಿಗೆ ನೀಡಿದ್ದನ್ನು ಅಲ್ಲಿದ್ದ ಎಲ್ಲಾ ಭಕ್ತರಿಗೂ ತಮ್ಮ ಕೈಯಾರೆ ಹಂಚುತ್ತಿದ್ದರು. ಬಹಳ ಅಪರೂಪವಾಗಿ ಅವರು ಭಕ್ತರು ತಂದಿದ್ದರಲ್ಲಿ ಸ್ವಲ್ಪವನ್ನು ತಮ್ಮ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಭಕ್ತರು ನೀಡಿದ್ದನ್ನು ಬಾಬಾರವರು ಸ್ವೀಕರಿಸಿದಾಗ ಆ ಭಕ್ತರಿಗೆ ಆಗುತ್ತಿದ್ದ ಆನಂದಕ್ಕೆ ಪಾರವೇ ಇಲ್ಲವೆಂದು ಹೇಳಬಹುದು. ಮಾವಿನ ಹಣ್ಣುಗಳು ಬಿಡುತ್ತಿದ್ದ ಋತುವಿನ ಸಮಯದಲ್ಲಿ ಬಾಬಾರವರು ಸ್ವಲ್ಪ ಹಣ್ಣಿನ ರುಚಿಯನ್ನು ನೋಡಿ ಉಳಿದ ಹಣ್ಣುಗಳನ್ನು ಮಸೀದಿಯಲ್ಲಿ ನೆರೆದಿದ್ದ ಎಲ್ಲಾ ಭಕ್ತರಿಗೂ ನೀಡುವಂತೆ ಆದೇಶಿಸುತ್ತಿದ್ದರು. ಇನ್ನಿತರ ಸಮಯದಲ್ಲಿ ಅವರೇ ಸ್ವತಃ ಮಾವಿನ ಹಣ್ಣುಗಳನ್ನು ಖರೀದಿಸಿ ಅದನ್ನು ಎಲ್ಲರಿಗೂ ಹಂಚುತ್ತಿದ್ದರು. 

ಬಾಬಾರವರು ಭಕ್ತರು ತಮಗೆ ನೀಡುತ್ತಿದ್ದ ಬಹುಪಾಲು ಸಿಹಿ ತಿಂಡಿಗಳನ್ನು ಪ್ರತಿನಿತ್ಯ ಮಸೀದಿಗೆ ಬರುತ್ತಿದ್ದ ಮಕ್ಕಳಿಗೆ ಹಂಚುತ್ತಿದ್ದರು. ಮಕ್ಕಳು ಇಲ್ಲದಿದ್ದ ಸಮಯದಲ್ಲಿ ಯಾರಾದರೂ ಭಕ್ತರು ಸಿಹಿ ತಿಂಡಿಗಳನ್ನು ತಂದ ಪಕ್ಷದಲ್ಲಿ, ಬಾಬಾರವರು ಆ ಸಿಹಿ ತಿಂಡಿಗಳನ್ನು ಪಕ್ಕಕ್ಕೆ ಇರಿಸಿದ್ದು ನಂತರ ಮಕ್ಕಳಿಗೆ ನೀಡುತ್ತಿದ್ದರು. ಬಾಬಾರವರಿಗೆ ಮಕ್ಕಳೆಂದರೆ ಪಂಚಪ್ರಾಣ.ಅವರು ಮಕ್ಕಳನ್ನು ಮೆಲುದನಿಯಲ್ಲಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಯಾರಾದರೂ ಭಕ್ತರು ಅವರೆದುರಿಗೆ ಮಕ್ಕಳನ್ನು ಜೋರು ದನಿಯಲ್ಲಿ ಬೈದರೆ ಅಥವಾ ಹೊಡೆದರೆ ಬಾಬಾರವರು ಸ್ವಲ್ಪವೂ ಸಹಿಸುತ್ತಿರಲಿಲ್ಲ. 

ಮಕ್ಕಳೊಂದಿಗೆ ಮೃದುವಾಗಿ ನಗುನಗುತ್ತಾ ಮಾತನಾಡುತ್ತಿದ್ದ ಬಾಬಾರವರು ದೊಡ್ಡವರೊಂದಿಗೆ ವ್ಯವಹರಿಸುವಾಗ ಬಹಳ ಗಾಂಭೀರ್ಯತೆಯಿಂದ ವರ್ತಿಸುತ್ತಿದ್ದರು. ಬಾಬಾರವರು ಯಾವಾಗಲೂ ಮುಗುಳ್ನತ್ತಿದರೇ ವಿನಃ ಜೋರಾಗಿ ನಗುತ್ತಿರಲಿಲ್ಲ. ಅವರು ಸಂತೋಷವಾಗಿರುವಾಗ ಸಣ್ಣ ನೀತಿ ಕಥೆಗಳನ್ನು ಹೇಳುತ್ತಿದ್ದರು. ಆ ನೀತಿ ಕಥೆಗಳು ಬೇರೆ ಯಾರದೋ ಆಗಿರದೇ ಆ ಸಮಯದಲ್ಲಿ ಮಸೀದಿಯಲ್ಲಿ ನೆರೆದಿರುತ್ತಿದ್ದ ಯಾರೊಬ್ಬ ಭಕ್ತರದ್ದೇ ಆಗಿರುತ್ತಿತ್ತು. ಹಾಗಾಗಿ ಆ ಭಕ್ತರು ಬಾಬಾರವರ ಸರ್ವಜ್ಞತೆಯನ್ನು ಕಂಡು ಆಶ್ಚರ್ಯಚಕಿತರಾಗುತ್ತಿದ್ದರು. ಈ ನೀತಿ ಕಥೆಗಳ ಮುಖಾಂತರ ಬಾಬಾರವರು ತಮ್ಮ ಭಕ್ತರಿಗೆ ಕೆಲವೊಮ್ಮೆ ಬಯ್ದು ಬುದ್ಧಿ ಹೇಳಿದ್ದೂ ಉಂಟು. ಬಾಬಾ ಯಾವ ಭಕ್ತರನ್ನು ಕುರಿತು ಬಯ್ದು ಬುದ್ಧಿ ಹೇಳಿದ್ದರೋ ಆ ಭಕ್ತರಿಗೆ ಮಾತ್ರ ಅದು ಅರ್ಥವಾಗುವಂತೆ ಅವರು ಬೋಧಿಸುತ್ತಿದ್ದರು.ಇತರ ಭಕ್ತರು ಅದು ಬೇರೆ ಯಾರದೋ ಭಕ್ತರ ಈ ಜನ್ಮದ  ಅಥವಾ ಹಿಂದಿನ ಜನ್ಮದ ಕಥೆಯೆಂದು ಭಾವಿಸುತ್ತಿದ್ದರು.  ಇನ್ನು ಕೆಲವೊಮ್ಮೆ ಬಾಬಾರವರು ಹೇಳಿದ ನೀತಿ ಕಥೆಗಳು ಭಕ್ತರು ಒಬ್ಬರೇ ಅಥವಾ ಗುಂಪುಗೂಡಿಕೊಂಡು ಎಷ್ಟೇ ನೆನಪಿಸಿಕೊಳ್ಳಲು ಪ್ರಯತ್ನಪಟ್ಟರೂ ಅವರ  ಮನಸ್ಸಿನಲ್ಲಿ ಉಳಿಯುತ್ತಿರಲೇ ಇಲ್ಲ. ಆಗ  ಪ್ರತಿಯೊಬ್ಬ ಭಕ್ತರೂ ಬೆಕ್ಕಸ ಬೆರಗಾಗುತ್ತಿದ್ದರು. 

11.30ಕ್ಕೆ ಸರಿಯಾಗಿ ಭಕ್ತರಿಗೆ ಮಧ್ಯಾನ್ಹದ ಆರತಿಯ ಸಮಯವಾಯಿತೆಂದು ಸೂಚಿಸಲು ಮಸೀದಿಯಲ್ಲಿದ್ದ ಗಂಟೆಯು ಮೊಳಗುತ್ತಿತ್ತು. ಭಕ್ತರು ಆ ಸಮಯದಲ್ಲಿ ಎಲ್ಲಿ ಇದ್ದರೂ ಸರಿಯೇ ಅಲ್ಲಿಂದ ಅವಸರವಸರವಾಗಿ ಮಸೀದಿಗೆ ಓಡಿ ಬಂದು ಮಧ್ಯಾನ್ಹದ ವೇಳೆಗೆ ಸರಿಯಾಗಿ ನಡೆಯುತ್ತಿದ್ದ ಆರತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಸಮಯದಲ್ಲಿ ಭಕ್ತರು ಬಾಬಾರವರನ್ನು ಪುಷ್ಪ ಹಾಗೂ ಚಂದನಗಳಿಂದ ಪೂಜಿಸುತ್ತಿದ್ದರು. ಆರತಿ ನೆಡೆಯುವ ಸಮಯದಲ್ಲಿ ಹೆಂಗಳೆಯರು ಬಾಬಾರವರ ಮುಂದುಗಡೆ ಯಲ್ಲಿ ಹಾಗೂ ಗಂಡಸರು ಸಭಾಮಂಟಪದಲ್ಲಿ ನಿಂತುಕೊಂಡಿರುತ್ತಿದ್ದರು. ಆ ಸಮಯದಲ್ಲಿ ಬಾಬಾರವರ ವದನಾರವಿಂದವು ಅರುಣೊದಯದ ಕಾಂತಿಯಂತೆ ಬಹಳ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿತ್ತು. ಬಹಳ ಜನ ಸಾಯಿ ಮಹಾಭಕ್ತರು ತಾವು ಬರೆಯುತ್ತಿದ್ದ ಡೈರಿಯಲ್ಲಿ ಆರತಿಯ ಸಮಯದಲ್ಲಿ ಬಾಬಾರವರ ದಿವ್ಯ ತೇಜಸ್ಸನ್ನು ವೀಕ್ಷಿಸಲು ಅವರ  ಎರಡು ಕಣ್ಣುಗಳು ಸಾಲುತ್ತಿರಲಿಲ್ಲವೆಂದು ಬರೆದುಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಾಯಿ ಭಕ್ತರು ಕಾಪರ್ಡೆಯವರ ಡೈರಿಯನ್ನು ನೋಡಬಹುದಾಗಿದೆ.  ಇದರಿಂದ ಬಾಬಾರವರ ಅವತರಣ ಕಾಲದಲ್ಲಿ ನೆಡೆಯುತ್ತಿದ್ದ ಆರತಿಯ ವೈಭವ ಎಷ್ಟಿತ್ತೆಂಬುದನ್ನು ಸಾಯಿ ಭಕ್ತರು ಕಲ್ಪನೆ ಮಾಡಿಕೊಳ್ಳಬಹುದಾಗಿದೆ. 

ಮಧ್ಯಾನ್ಹ ಆರತಿಯಾದ ನಂತರ ಬಾಬಾರವರು ಎಲ್ಲಾ ಭಕ್ತರನ್ನೂ ಆಶೀರ್ವದಿಸಿ, ಉಧಿಯನ್ನು ನೀಡಿ ಮನೆಗೆ ಕಳುಹಿಸಿಕೊಡುತ್ತಿದ್ದರು. ಅವರು ಪ್ರತಿಯೊಬ್ಬ ಭಕ್ತರಿಗೂ ಪ್ರೀತಿಯಿಂದ ಮಾತನಾಡಿಸಿ ಮನೆಗೆ ತೆರಳಿ ಭೋಜನ ಮುಗಿಸಿ ನಂತರ ಮಸೀದಿಗೆ ವಾಪಸ್ ಬರುವಂತೆ ಹೇಳುತ್ತಿದ್ದರು. 

ನಂತರ ಅವರು ತಾವು ತಂದ ಭಿಕ್ಷೆಯನ್ನು ಭಕ್ತರು ತಂದ ಆಹಾರದೊಂದಿಗೆ ಬೆರೆಸಿ ಸುಮಾರು ಹತ್ತರಿಂದ ಹನ್ನೆರಡು ಸಾಯಿ ಭಕ್ತರೊಂದಿಗೆ ಒಟ್ಟಿಗೆ ಕುಳಿತು ಭೋಜನ ಸವಿಯುತ್ತಿದ್ದರು. ಆ ಸಮಯದಲ್ಲಿ ಬಾಬಾರವರ ಎಡಭಾಗದಲ್ಲಿ ತಾತ್ಯಾ ಪಾಟೀಲ, ರಾಮಚಂದ್ರ ದಾದಾ ಪಾಟೀಲ ಮತ್ತು ಬಯ್ಯಾಜಿ ಅಪ್ಪಾ ಪಾಟೀಲರವರು ಕುಳಿತುಕೊಂಡರೆ ಮಾಲೇಗಾವ್ ನ ಫಕೀರನಾದ ಬಡೇಬಾಬಾ, ಶ್ಯಾಮ, ಬೂಟಿ ಮತ್ತು ಕಾಕಾ ಸಾಹೇಬ್ ದೀಕ್ಷಿತ್ ಅವರ ಬಲಗಡೆ ಕುಳಿತುಕೊಳ್ಳುತ್ತಿದ್ದರು. ತಾತ್ಯಾ ಪಾಟೀಲ, ರಾಮಚಂದ್ರ ದಾದಾ ಪಾಟೀಲ ಮತ್ತು ಬಯ್ಯಾಜಿ ಅಪ್ಪಾ ಪಾಟೀಲರವರು ಒಂದೇ ತಟ್ಟೆಯಲ್ಲಿ ಭೋಜನ ಸ್ವೀಕರಿಸಿದರೆ ಬಾಬಾ ಹಾಗೂ ಬಡೇಬಾಬಾ ಹಾಗೂ ಸಾಯಿಬಾಬಾ ಒಬ್ಬರ ತಟ್ಟೆಯಿಂದ ಮತ್ತೊಬ್ಬರು ತೆಗೆದುಕೊಂಡು ತಿನ್ನುತ್ತಿದ್ದರು. ಬಾಬಾ ಎಂದೂ ಒಬ್ಬರೇ ಕುಳಿತು ಮಧ್ಯಾನ್ಹದ ಊಟ ಮಾಡಿದ್ದೇ ಇಲ್ಲ. ಬಡೇಬಾಬಾ ಮಸೀದಿಯಲ್ಲಿ ಇಲ್ಲದಿದ್ದರೆ ಬಾಬಾರವರು ಊಟಕ್ಕೆ ಕುಳಿತು ಭೋಜನ ಸ್ವೀಕರಿಸುತ್ತಲೇ ಇರಲಿಲ್ಲ. 

ಇತರ ಭಕ್ತರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಬಾಬಾರವರ ಎರಡೂ ಬದಿಗಳಲ್ಲಿ ಕುಳಿತುಕೊಂಡು ಎಲ್ಲಾ ನೈವೇದ್ಯಗಳನ್ನು ಚೆನ್ನಾಗಿ ಬೆರೆಸಿ ನೈವೇದ್ಯದ ಪಾತ್ರೆಯನ್ನು ಬಾಬಾರವರ ಮುಂದೆ ಇರಿಸುತ್ತಿದ್ದರು. ಎಲ್ಲರೂ ಊಟಕ್ಕೆ ಕುಳಿತ ನಂತರ ಮಸೀದಿಯ ಮುಂದೆ ಹಾಕಲಾಗಿದ್ದ ಪರದೆಯನ್ನು ಇಳಿಬಿಡಲಾಗುತ್ತಿತ್ತು. ಆ ನಂತರ ಮಸೀದಿಯ ಒಳಗೆ ಹೋಗಲು ಯಾರಿಗೂ ಅನುಮತಿ ಇರಲಿಲ್ಲ. ಬಾಬಾರವರು ತಮ್ಮ ಮುಂದಿದ್ದ ನೈವೇದ್ಯವನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಸ್ವಲ್ಪ ಪ್ರಸಾದವನ್ನು ಹೊರಗಡೆ ಕಾದುಕೊಂಡಿದ್ದ ಭಕ್ತರಿಗೆ ಹಂಚುವಂತೆ ಹೇಳಿ ಕಳುಹಿಸುತ್ತಿದ್ದರು. ನಂತರ ಪಾತ್ರೆಯಲ್ಲಿ ಉಳಿದಿದ್ದ ನೈವೇದ್ಯಕ್ಕೆ ಸ್ವಲ್ಪ ಹಾಲು, ಸಕ್ಕರೆ ಹಾಗೂ ರೊಟ್ಟಿಯನ್ನು ಬೆರೆಸಿ ಚೆನ್ನಾಗಿ ಹಿಸುಕುತ್ತಿದ್ದರು. ನಂತರ ಅದನ್ನು ಮಸೀದಿಯ ಒಳಗಡೆ ಇದ್ದ ಎಲ್ಲಾ ಭಕ್ತರಿಗೂ ಹಂಚುತ್ತಿದ್ದರು. 

ನಂತರ ನಿಮೋಣ್ಕರ್ ಹಾಗೂ ಶ್ಯಾಮರವರು ಮಸೀದಿಯಲ್ಲಿ ಬಾಬಾರವರ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದ ಎಲ್ಲರಿಗೂ ಬಡಿಸುತ್ತಿದ್ದರು. ಯಾವ ಭಕ್ತರಾದರೂ ಒಂದು ಪ್ರತ್ಯೇಕ ಬಗೆಯ ಖಾದ್ಯವನ್ನು ಬಹಳ ಇಷ್ಟಪಟ್ಟಲ್ಲಿ ಬಾಬಾರವರು ಆ ಭಕ್ತರಿಗೆ ಅದೇ ಖಾದ್ಯವನ್ನು ಹೆಚ್ಚು ಬಡಿಸುವಂತೆ ಹೇಳುತ್ತಿದ್ದರು. ಶ್ಯಾಮರವರಿಗೆ ರವೆಯಿಂದ ಮಾಡಿದ ಕಡುಬು ಎಂದರೆ ಪಂಚಪ್ರಾಣ ಎಂದು ತಿಳಿದಿದ್ದ ಬಾಬಾರವರು ಅವರಿಗೆ ಹೆಚ್ಚಾಗಿ ರವೆ ಕಡುಬನ್ನು ನೀಡುತ್ತಿದ್ದರು. ಎಂ.ಡಬ್ಲ್ಯೂ. ಪ್ರಧಾನ್  ರವರು ಆ ಸುಂದರ ಸಂದರ್ಭವನ್ನು ಈ ರೀತಿ ವಿವರಿಸುತ್ತಾರೆ:  “ನಾನು ಬಾಬಾರವರೊಂದಿಗೆ ಮಸೀದಿಯಲ್ಲಿ ಆಗಾಗ್ಗೆ ಭೋಜನ ಸ್ವೀಕರಿಸುತ್ತಿದ್ದೆ. ಸ್ವತಃ ಬಾಬಾರವರೇ ತಮ್ಮ ಕೈಯಾರೆ ನಮ್ಮ ತಟ್ಟೆಯ ತುಂಬಾ ಭೋಜನವನ್ನು ಬಡಿಸುತ್ತಿದ್ದರು. ಬಾಬಾರವರು ನನಗೆ ಬಡಿಸಿದ್ದರಲ್ಲಿ ಸ್ವಲ್ಪವನ್ನು ತೆಗೆದು ನನ್ನ ಮನೆಗೆ ಕಳುಹಿಸುತ್ತಿದ್ದೆ. ಅದು ನಮ್ಮ ಮನೆಯವರಿಗೆಲ್ಲಾ ಸಾಕಾಗುತ್ತಿತ್ತು. ಊಟವಾದ ನಂತರ ಬಾಬಾರವರು ಎಲ್ಲರಿಗೂ ಹಣ್ಣನ್ನು ತಿನ್ನಲು ನೀಡುತ್ತಿದ್ದರು. ನನ್ನ ಮಗನಾದ ಬಾಬುವಿಗೆ ಬೇಯಿಸಿದ ಆಹಾರ ಇಷ್ಟವಿಲ್ಲವೆಂದು ಮನಗಂಡಿದ್ದ ಬಾಬಾ ಅವನಿಗೆ ಹಣ್ಣು ತಿನ್ನಲು ನೀಡುತ್ತಿದ್ದರು" ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. 

ಕೆಲವೊಮ್ಮೆ ಮನಸ್ಸು ಬಂದಾಗ ಬಾಬಾರವರೇ ಸ್ವತಃ ಅಡಿಗೆ ಮಾಡಿ ತಮ್ಮ ಕೈಯಾರೆ ಭಕ್ತರಿಗೆ ಬಡಿಸುತ್ತಿದ್ದರು. ಮಸೀದಿಯಲ್ಲಿ ಒಂದು ಚಿಕ್ಕ ಹಾಗೂ ಮತ್ತೊಂದು ದೊಡ್ಡ ಹಂಡೆಯಿತ್ತು. ಅದರಲ್ಲಿ ಸುಮಾರು ಐವತ್ತರಿಂದ ನೂರು ಜನರಿಗೆ ಅಡಿಗೆ ಮಾಡಿ ಬಡಿಸಬಹುದಾಗಿತ್ತು. ಬಾಬಾ  ಅಡಿಗೆ ಮಾಡಲು ಮನಸ್ಸು ಮಾಡಿದಾಗ ಅವರೇ ಮಾರುಕಟ್ಟೆಗೆ ಹೋಗಿ ಎಲ್ಲಾ ಪದಾರ್ಥಗಳನ್ನೂ ತಾವೇ ತರುತ್ತಿದ್ದರು. ಅಲ್ಲದೇ ಅವರೇ ಒಲೆ ಹೊತ್ತಿಸಿ, ತರಕಾರಿಗಳನ್ನು ಹೆಚ್ಚಿ ಅಡಿಗೆ ಮಾಡುತ್ತಿದ್ದರು. ಇಂದಿಗೂ ಮಸೀದಿಗೆ ಹೋದರೆ ಬಾಬಾರವರು ಅಡುಗೆ ಮಾಡಲು ಬಳಸುತ್ತಿದ್ದ ಒಲೆಯನ್ನು ನೋಡಬಹುದು. ಅವರು ಕೆಲವೊಮ್ಮೆ ಸಿಹಿ ಅನ್ನ, ಪಲಾವ್ ಅಥವಾ ಮಾಂಸ ಮಿಶ್ರಿತ ಪಲಾವ್ ತಯಾರಿಸುತ್ತಿದ್ದರು. ಅವರು ತಮ್ಮ ಕೈಯನ್ನು ಕುದಿಯುತ್ತಿರುವ ಹಂಡೆಯೊಳಗೆ ಹಾಕಿ ಕಲಕುತ್ತಿದ್ದರು. ಆಶ್ಚರ್ಯವೆಂದರೆ ಅವರ ಕೈ ಸುಡುತ್ತಿರಲಿಲ್ಲ. ಕೆಲವೊಮ್ಮೆ ಮಾಂಸದ ಸಾರನ್ನು ತಯಾರಿಸಿ ಅದರಲ್ಲಿ ರೊಟ್ಟಿಯನ್ನು ಹಾಕುತ್ತಿದ್ದರು. ಇನ್ನು ಕೆಲವು ಸಲ ಅವರು ಗಂಜಿಯನ್ನು ತಯಾರಿಸಿ ಅದನ್ನು ಮಜ್ಜಿಗೆಯೊಂದಿಗೆ ಭಕ್ತರಿಗೆ ಬಡಿಸುತ್ತಿದ್ದರು. ಇಲ್ಲವೇ ಗೋಧಿಯನ್ನು ಅರೆದು ಧುನಿಯ ಅಗ್ನಿಯ ಸಹಾಯದಿಂದ ಅದರಲ್ಲಿ ಹೇರಳವಾಗಿ ರೊಟ್ಟಿಯನ್ನು ತಯಾರು ಮಾಡಿ ಬಡಿಸುತ್ತಿದ್ದರು. ಆ ರೊಟ್ಟಿಗಳು ಬಹಳ ದೊಡ್ಡ ಗಾತ್ರದ್ದಾಗಿರುತ್ತಿತ್ತು ಹಾಗೂ ಒಂದು ರೊಟ್ಟಿಯನ್ನು ತಿಂದರೆ ಸಾಕು ಬಹಳ ಹೊಟ್ಟೆ ಹಸಿದವನ ಹಸಿವನ್ನೂ ನೀಗಿಸುತ್ತಿತ್ತು. 

ಬಾಬಾರವರು ಸಸ್ಯಾಹಾರಿಗಳಿಗೆ ಎಂದೂ  ಮಾಂಸಾಹಾರವನ್ನು ನೀಡುತ್ತಿರಲಿಲ್ಲ. ಆಹಾರವನ್ನು ತಯಾರಿಸಿದ ನಂತರ ಮೌಲ್ವಿಯನ್ನು ಕರೆದು ಅವರ ಕೈಯಲ್ಲಿ ಆ ಆಹಾರವನ್ನು ದೇವರಿಗೆ ಅರ್ಪಣೆ  ಮಾಡಿಸಿ ನಂತರ ಅದರಲ್ಲಿ ಸ್ವಲ್ಪ ಆಹಾರವನ್ನು ತಾತ್ಯಾ ಹಾಗೂ ಮಹಾಳಸಾಪತಿಯವವರ ಮನೆಗೆ ಕಳುಹಿಸುತ್ತಿದ್ದರು. ನಂತರ ಉಳಿದ ಆಹಾರವನ್ನು ಮಸೀದಿಯಲ್ಲಿದ್ದ ಎಲ್ಲಾ ಭಕ್ತರಿಗೂ ಹಂಚುತ್ತಿದ್ದರು. ಆದರೆ 1910ನೇ ಇಸವಿಯ ನಂತರದಿಂದ ಶಿರಡಿಗೆ ಭೇಟಿ ನೀಡುತ್ತಿದ್ದ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಭಕ್ತರೇ ಎಲ್ಲಾ ರೀತಿಯ ಪದಾರ್ಥಗಳನ್ನು ಅರ್ಪಿಸಲು ಪ್ರಾರಂಭಿಸಿದ ಮೇಲೆ ಬಾಬಾರವರು ಮಸೀದಿಯಲ್ಲಿ ಅಡುಗೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಭಕ್ತರು ಬಾಬಾರವರಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದ ಆಹಾರವು ಪ್ರತಿದಿನ 150-200 ಭಕ್ತರಿಗೆ ಸಾಕಾಗುತ್ತಿತ್ತು.

ಮಸೀದಿಯಲ್ಲಿ ಎಲ್ಲಾ ಭಕ್ತರ ಊಟವಾದ ಮೇಲೆ ಸಗುಣ ಮೇರು ನಾಯಕ್ ಮಸೀದಿಯನ್ನು ಶುಭ್ರಗೊಳಿಸುತ್ತಿದ್ದರು. ಬಾಬಾ ತಮ್ಮ ಸ್ಥಳದಲ್ಲಿ ಕುಳಿತುಕೊಂಡ ನಂತರ ಸಗುಣ ಮೇರು ನಾಯಕ್ ರವರು ಬಾಬಾರವರಿಗೆ ವಿಳ್ಳೆಯದೆಲೆ ಹಾಗೂ ಅಡಿಕೆಯನ್ನು ಒಂದು ಲೋಟಾ ನೀರು ಹಾಗೂ ಎರಡು ರೂಪಾಯಿ ದಕ್ಷಿಣೆಯೊಂದಿಗೆ ನೀಡುತ್ತಿದ್ದರು. 

ಮಧ್ಯಾನ್ಹ ಊಟವಾದ ನಂತರ ಮಸೀದಿಯ ಒಳಗೆ ಯಾರಿಗೂ ಉಳಿದುಕೊಳ್ಳಲು ಬಿಡುತ್ತಿರಲಿಲ್ಲ. ಬಾಬಾರವರು ಎಲ್ಲಾ ಭಕ್ತರನ್ನೂ ಹೊರಗೆ ಕಳುಹಿಸಿ ಮಧ್ಯಾನ್ಹ  1.00 ರಿಂದ  2.30 ರವರೆಗೆ ಒಂಟಿಯಾಗಿರುತ್ತಿದ್ದರು. ಬಾಬಾರವರ ಬಳಿ ಒಂದು ಇಟ್ಟಿಗೆಯಿದ್ದು ಅದನ್ನು ಅವರು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಅವರು ಆ ಇಟ್ಟಿಗೆಯು ತಮ್ಮ ಗುರುವಿನ ಪ್ರಸಾದವೆಂದು ಎಲ್ಲರಿಗೂ ಹೇಳುತ್ತಿದ್ದರು. ಅವರು ನಿದ್ರಿಸುವಾಗ ತಮ್ಮ ತಲೆಯನ್ನು ಆ ಇಟ್ಟಿಗೆಯ ಮೇಲೆ ಇರಿಸಿಕೊಂಡು ಮಲಗಿಕೊಳ್ಳುತ್ತಿದ್ದರು. ಅವರು ಕುಳಿತುಕೊಂಡಿದ್ದಾಗ  ಆ ಇಟ್ಟಿಗೆಯನ್ನು ತಮ್ಮ ಬಲಭಾಗದಲ್ಲಿ ಇಟ್ಟುಕೊಂಡು ತಮ್ಮ ಬಲಗೈಯನ್ನು ಅದರ ಮೇಲೆ ಇರಿಸಿಕೊಂಡು ಕುಳಿತುಕೊಳ್ಳುತ್ತಿದ್ದರು. ಬಾಬಾರವರು ಬೆಳಗಿನ ಹೊತ್ತು ಎಂದೂ ಮಲಗಿಕೊಳ್ಳುತ್ತಿರಲಿಲ್ಲ ಹಾಗೂ ಕುಳಿತುಕೊಂಡಾಗ ಗೋಡೆಗೆ ಬೆನ್ನು ಮಾಡುತ್ತಿರಲಿಲ್ಲ. ಅವರು ಯಾರಿಗೂ ಕಾಣದಂತೆ ಒಬ್ಬರೇ ಕುಳಿತುಕೊಂಡು ತಮ್ಮ ಬಳಿಯಿದ್ದ ಹಳೆಯ ಗೋಣಿ ಚೀಲವನ್ನು ಹೊರತೆಗೆಯುತ್ತಿದ್ದರು. ಆ ಗೋಣಿ ಚೀಲದಲ್ಲಿ ಹಳೆಯದಾಗಿದ್ದ ನಾಲ್ಕು ಆಣೆ, ಎರಡೂವರೆ ಆಣೆ, ಒಮ್ಂದು ಪೈಸೆ ಮತ್ತಿತರ ಕೆಲವು ನಾಣ್ಯಗಳಿರುತ್ತಿದ್ದವು. (ಆಗಿನ ಕಾಲದಲ್ಲಿ ಒಂದು ರೂಪಾಯಿ ಹದಿನಾರು ಆಣೆಗೆ ಸಮನಾಗಿತ್ತು). ಬಾಬಾರವರು ಆ ನಾಣ್ಯಗಳನ್ನು ಹೊರತೆಗೆದು ಒಂದೊಂದನ್ನೂ ಚೆನ್ನಾಗಿ ಉಜ್ಜುತ್ತಾ  “ಇದು ನಾನಾ ದು; ಇದು ಕಾಕನದು; ಇದು ಸುಮ್ಯನದು; ಇದು ದಾಮ್ಯನದು" ಎಂದು ಹೇಳುತ್ತಿದ್ದರು. ಆ ಸಮಯದಲ್ಲಿ ಬಾಬಾರವರಿಗೆ ಯಾರಾದರೂ ಬರುವ ಸಪ್ಪಳವಾದಂತೆ ಅನುಭವವಾದಲ್ಲಿ ಅವರು ಕೂಡಲೇ ಆ ನಾಣ್ಯಗಳನ್ನೂ ವಾಪಸ್ ಗೋಣಿಚೀಲದಲ್ಲಿ ಮುಚ್ಚಿಡುತ್ತಿದ್ದರು. ಆ ನಾಣ್ಯಗಳು ಏನನ್ನು ಸೂಚಿಸುತ್ತಿದ್ದವು ಹಾಗೂ ಬಾಬಾ ಆ ನಾಣ್ಯಗಳನ್ನು  ಏಕೆ ಆ ರೀತಿ ಉಜ್ಜುತ್ತಿದ್ದರು ಎಂಬುದು ಯಾರೂ ತಿಳಿಯದ ರಹಸ್ಯವಾಗಿತ್ತು. ಬಾಬಾರವರು ಯಾರಿಗೂ ಈ ನಾಣ್ಯದ ವಿಷಯವನ್ನು ತಿಳಿಸಿರಲಿಲ್ಲ. ಅಲ್ಲದೇ ಬಾಬಾರವರು ಈ ರೀತಿ ಏಕಾಂತದಲ್ಲಿದ್ದಾಗ ತಮ್ಮ ಹಳೆಯದಾಗಿ ಹರಿದುಹೋಗಿ ತೂತಾಗಿದ್ದ  ಕಫ್ನಿಯನ್ನು ರಿಪೇರಿ ಮಾಡಿಕೊಳ್ಳುತ್ತಿದ್ದರು.  

ಬಾಬಾರವರು ಪುನಃ ಮಧ್ಯಾನ್ಹ 2.30 ಕ್ಕೆ ಲೇಂಡಿ ಉದ್ಯಾನವನಕ್ಕೆ ಹೋಗಿ ಬರುತ್ತಿದ್ದರು. ಲೇಂಡಿಯಿಂದ ಹಿಂತಿರುಗಿದ ನಂತರ ಮಸೀದಿಯಲ್ಲಿ ದರ್ಬಾರು ನಡೆಸುತ್ತಿದ್ದರು.  ದರ್ಬಾರು ಮುಗಿಸಿದ ನಂತರ ಸಾಯಂಕಾಲದ ಸಮಯದಲ್ಲಿ ಮಸೀದಿಯ ಮುಂದಿದ್ದ ಸಭಾಮಂಟಪದಲ್ಲಿ ನಡೆದಾಡುತ್ತಿದ್ದರು. ನಂತರ ಮಸೀದಿಯ ಹೊರಗೋಡೆಯ ಪಕ್ಕದಲ್ಲಿದ್ದ ಗೋಡೆಗೆ ಒರಗಿ ನಿಂತುಕೊಂಡು ಹೋಗಿಬರುತ್ತಿದ್ದ ಶಿರಡಿಯ ಗ್ರಾಮಸ್ಥರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೆಲವೊಮ್ಮೆ ಅವರಾಡುತ್ತಿದ್ದ ಸಾಂಕೇತಿಕ ಮಾತುಗಳು ಯಾರಿಗೂ ಅರ್ಥವಾದೇ ಬದಲಿಗೆ ಅವರೊಬ್ಬರಿಗೆ ತಿಳಿದಿರುತ್ತಿತ್ತು. ಅವರು "ಹತ್ತು ಹಾವುಗಳು ಹೊರಟು ಹೋಯಿತು. ಇನ್ನೂ ಅನೇಕ ಹಾವುಗಳು ಬರುತ್ತವೆ", "ವ್ಯಾಪಾರಿಗಳು ಮತ್ತು ಎಣ್ಣೆ ಮಾರುವವರು ನನಗೆ ತುಂಬಾ ತೊಂದರೆ ನೀಡಿದ್ದಾರೆ. ನಾನು ಈ ಮಸೀದಿಯಲ್ಲಿ ಇನ್ನು ಹೆಚ್ಚು ಕಾಲ ಇರಲಾರೆ. ನಾನು ಇಲ್ಲಿಂದ ದೂರ ಹೋಗುತ್ತೇನೆ" ಎಂದು ನುಡಿಯುತ್ತಿದ್ದರು. ಕೆಲವೊಮ್ಮೆ ಇದ್ದಕ್ಕಿದ್ದಂತೆ ಅವರು ಮಸೀದಿ ಹಾಗೂ ಶಿರಡಿಯನ್ನು ಬಿಟ್ಟು ಹೊರಟು ಬಿಡುತ್ತಿದ್ದರು. ಬಾಬಾರವರು ಹಾಗೆ ಮಾಡಿದಾಗ ಭಕ್ತರು ಬಂದು ತಾತ್ಯಾರವರಿಗೆ ವಿಷಯ ತಿಳಿಸಲು ಅವರು ಓಡಿ ಬಂದು ಬಾಬಾರವರಿಗೆ "ಬಾಬಾ ನಿಮಗೆ ತೊಂದರೆ ನೀಡಿದವರಿಗೆ ನಾನು ಶಿಕ್ಷೆ ನೀಡುತ್ತೇನೆ. ನೀವು ಶಿರಡಿಯನ್ನು ಬಿಟ್ಟು ಹೋಗಲು ನಾನು ಬಿಡುವುದಿಲ್ಲ. ಏನೇ ಆಗಲಿ ಇಂದು ನೀವು ಹೊರಡಬೇಡಿ. ನೀವು ಹೊರಡುವ ಬಗ್ಗೆ ನಾಳೆ ನೋಡೋಣ” ಎಂದು ಸಮಾಧಾನ ಮಾಡುತ್ತಿದ್ದರು. ತಾವು ಶಿರಡಿಯನ್ನು ಬಿಟ್ಟು ಹೋಗುತ್ತೇನೆಂದು  ಏಕೆ ಹೆದರಿಸಿದರೆಂಬ ವಿಷಯ ಬಾಬಾರವರೊಬ್ಬರಿಗೇ ತಿಳಿದಿರುತ್ತಿತ್ತು.  ಹೀಗೆ ತಾತ್ಯಾ ಬಾಬಾರವರ ಮನ ಒಲಿಸುವುದರಲ್ಲಿ ಯಶಸ್ವಿಯಾದ ನಂತರ ಬಾಬಾ ಮಸೀದಿಯಲ್ಲಿ ಕುಳಿತು ಏನೂ ಆಗಲೇ ಇಲ್ಲವೆಂಬಂತೆ  ಭಕ್ತರೊಡನೆ ಮಾತುಕತೆ ನೆಡೆಸುತ್ತಿದ್ದರು. ಬಾಬಾರವರು ಹಾಗೆ ಮಸೀದಿಯ ಹೊರಗೆ ನಿಂತು ಭಕ್ತರೊಡನೆ ಮಾತನಾಡುತ್ತಿದ್ದ ಸ್ಥಳದಲ್ಲಿ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಅದನ್ನು ಈಗಲೂ ಭಕ್ತರು ನೋಡಬಹುದಾಗಿದೆ. ಈ ಪಾದುಕೆಗಳನ್ನು ಬಾಬಾರವರು ಕೈಗಳನ್ನು ಇರಿಸುತ್ತಿದ್ದ ಗೋಡೆಯ ಕೆಳಗೆ ಸ್ಥಾಪಿಸಲಾಗಿದೆ. ಬಾಬಾರವರು  ಬಾಬಾರವರು ಕೆಲವೊಮ್ಮೆ ಈ ಸ್ಥಳದಲ್ಲಿ ನಿಂತು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರೆಂದು ಹೇಳಲಾಗುತ್ತದೆ. 

ಬಾಬಾರವರು ಮಸೀದಿಗೆ ಅಂಟಿಕೊಂಡಂತೆ ಇದ್ದ ರಸ್ತೆಯಲ್ಲಿ ಸಂಜೆಯ ಸಮಯದಲ್ಲಿ ನಡೆದಾಡುತ್ತಿದ್ದರು. ಆ ಸಮಯದಲ್ಲಿ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡಿರುತ್ತಿದ್ದರು. ಬಾಬಾರವರು ನಿಧಾನವಾಗಿ ಹೆಜ್ಜೆ ಹಾಕುತ್ತಾ ಪ್ರತಿಯೊಬ್ಬ ಭಕ್ತರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. 

ಸಾಯಂಕಾಲ 6 ರಿಂದ 6.30 ರ ಸಮಯದಲ್ಲಿ ಬಾಬಾರವರಿಗೆ ಸಂಜೆಯ ಧೂಪಾರತಿಯನ್ನು ಮಾಡಲಾಗುತ್ತಿತ್ತು. ಆರತಿಯ ನಂತರ ಬಾಬಾರವರು ಮತ್ತೆ ದರ್ಬಾರು ನೆಡೆಸುತ್ತಿದ್ದರು. ಆಗ ಭಕ್ತರು ಬಾಬಾರವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಅವರಿಂದ ಸಮಂಜಸವಾದ ಉತ್ತರ ಹಾಗೂ ಅವರ ಆಶೀರ್ವಾದವನ್ನು ಪಡೆಯುತ್ತಿದ್ದರು. 

ಬಾಬಾರವರು ತಮ್ಮ ಬಳಿಗೆ ಬರುತ್ತಿದ್ದ ಭಕ್ತರಿಂದ ದಕ್ಷಿಣೆಯನ್ನು ಕೇಳಿ ಪಡೆಯುತ್ತಿದ್ದರು. ಪ್ರತಿ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಬಾಬಾರವರು ತಾವು ಆ ದಿನ ಪಡೆದ ಎಲ್ಲಾ ದಕ್ಷಿಣೆಯನ್ನು ಮಸೀದಿಯಲ್ಲಿ ಇದ್ದ ಎಲ್ಲಾ ಭಕ್ತರಿಗೂ ಹಂಚಿಬಿಡುತ್ತಿದ್ದರು. ಬಾಬಾರವರು ಈ ರೀತಿಯಲ್ಲಿ ದಾನ-ಧರ್ಮವನ್ನು  ತಮ್ಮ ಜೀವನ ಪೂರ್ತಿ ಮಾಡಿದರು. ಅವರು ಪ್ರತಿಯೊಬ್ಬ ಭಕ್ತರಿಗೂ ತಾವು ಮೊದಲೇ ನಿಗದಿಪಡಿಸಿದಷ್ಟು ಹಣವನ್ನು ನೀಡುತ್ತಿದ್ದರು. ಭಕ್ತರು ಆ ಹಣವನ್ನು ತಮಗೆ ಬರುತ್ತಿದ್ದ ಸಂಬಳವೆಂದು ಭಾವಿಸುತ್ತಿದ್ದರು. ಅವರು ಬಡೇ ಬಾಬಾರವರಿಗೆ 55 ರೂಪಾಯಿ, ತಾತ್ಯಾರವರಿಗೆ 35 ರೂಪಾಯಿ, ಜಾಂಟೆ ಮುಸ್ಲಿಮನಿಗೆ 7 ರೂಪಾಯಿ, ಬಯ್ಯಾಜಿ ಅಪ್ಪಾ ಕೋತೆ  ಪಾಟೀಲ, ಭಾಗೋಜಿ ಶಿಂಧೆ ಮತ್ತು ರಾಮಚಂದ್ರ ದಾದಾ ಪಾಟೀಲರಿಗೆ 4 ರೂಪಾಯಿಗಳನ್ನು ನೀಡುತ್ತಿದ್ದರು. ಹೀಗೆ ಬಾಬಾರವರು ಇನ್ನೂ ಅನೇಕ ಭಕ್ತರಿಗೆ ಹಣ ನೀಡುತ್ತಿದ್ದರು. ರಾಮಚಂದ್ರ ದಾದಾ ಪಾಟೀಲರು ತಾವು ಪಡೆದ ನಾಲ್ಕು ರೂಪಾಯಿಗಳಿಗೆ ಬದಲಾಗಿ ಬಾಬಾರವರಿಗೆ ನಾಲ್ಕು ಕಲ್ಲು ಸಕ್ಕರೆಯ ತುಂಡುಗಳನ್ನು ನೀಡುತ್ತಿದ್ದರು. ಬಾಬಾರವರು ಹೊಸದಾಗಿ ಮದುವೆಯಾಗಿ ತಮ್ಮ ದರ್ಶನ ಹಾಗೂ ಆಶೀರ್ವಾದವನ್ನು ಪಡೆಯಲು ಬರುತ್ತಿದ್ದ ದಂಪತಿಗಳಿಗೆ ತಲಾ ಒಂದು ರೂಪಾಯಿಗಳನ್ನು ನೀಡಿ ಆಶೀರ್ವದಿಸುತ್ತಿದ್ದರು. ರಾಮನವಮಿ ಹಾಗೂ ಇತರ ಉತ್ಸವದ ಸಂದರ್ಭಗಳಲ್ಲಿ ದಾದಾ ಕೇಳ್ಕರ ಹಾಗೂ ಬಡೇ ಬಾಬಾರವರಿಗೆ ಎರಡು ಕಂತೆ ಒಂದು ರೂಪಾಯಿಯ  ನೋಟುಗಳನ್ನು ನೀಡಿ ಎಲ್ಲರಿಗೂ ಹಂಚುವಂತೆ ತಿಳಿಸುತ್ತಿದ್ದರು. ಅನೇಕ ಫಕೀರರು ಹಾಗೂ ಭಿಕ್ಷುಕರು ಭಕ್ತರು ಬಾಬಾರವರಿಗೆ ನೀಡುತ್ತಿದ್ದ ಆಹಾರವನ್ನು ತಿಂದು ತಮ್ಮ ಜೀವನ ನಡೆಸುತ್ತಿದ್ದರು. ಬಾಬಾರವರು ಅವರುಗಳಿಗೆ ಪ್ರತಿನಿತ್ಯ ತಲಾ ಇಪ್ಪತೈದು ಪೈಸೆಗಳನ್ನು ನೀಡುತ್ತಿದ್ದರು. ಪ್ರತಿದಿನ ಸಂಜೆಯ ಸಮಯದಲ್ಲಿ ಕೀರ್ತನಕಾರರು, ಚಿತ್ರ ಕಲಾವಿದರು, ನೃತ್ಯಪಟುಗಳು ಹಾಗೂ ಇನ್ನಿತರರು ಬಂದು ತಮ್ಮ ಕಲೆಯನ್ನು ಬಾಬಾರವರ ಮುಂದೆ ಪ್ರದರ್ಶಿಸಿ ಅವರಿಂದ ಎರಡು ರೂಪಾಯಿಗಳನ್ನು ಆಶೀರ್ವಾದಪೂರ್ವಕವಾಗಿ ಸ್ವೀಕರಿಸಿ ಹೋಗುತ್ತಿದ್ದರು. 

ಈ ಪ್ರಕ್ರಿಯೆಗಳೆಲ್ಲಾ ಮುಗಿದ ನಂತರ ತಾತ್ಯಾ ಪಾಟೀಲರು ರೊಟ್ಟಿ ಮತ್ತು ಹಾಲನ್ನು ಬಾಬಾರವರ ರಾತ್ರಿ ಭೋಜನಕ್ಕೆಂದು ತರುತ್ತಿದ್ದರು.  ಬಾಬಾರವರು ಅದರಿಂದ ಸ್ವಲ್ಪವೇ ಆಹಾರವನ್ನು ತೆಗೆದುಕೊಂಡು ಉಳಿದುದನ್ನು ಭಕ್ತರಿಗೆ ಪ್ರಸಾದವೆಂದು ನೀಡುತ್ತಿದ್ದರು. ಆಗ ಬಾಬಾರವರು ತಾತ್ಯಾರವರಿಗೆ 35 ರೂಪಾಯಿಗಳನ್ನು ನೀಡುತ್ತಿದ್ದರು.  ಆ  ದಿನ ಬಾಬಾರವರು ದ್ವಾರಕಾಮಾಯಿಯಲ್ಲಿ ನಿದ್ರಿಸುತ್ತಿದ್ದ ಪಕ್ಷದಲ್ಲಿ  ಭಕ್ತರೆಲ್ಲರೂ ಅವರಿಂದ ಆಶೀರ್ವಾದ ಹಾಗೂ ಉಧಿಯನ್ನು ಪಡೆದುಕೊಂಡು ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಮಹಾಳಸಾಪತಿ ಹಾಗೂ ತಾತ್ಯಾರವರನ್ನು ಬಿಟ್ಟು ಮತ್ಯಾರಿಗೂ  ರಾತ್ರಿಯ ವೇಳೆ ಮಸೀದಿಯಲ್ಲಿ ಸಾಯಿಬಾಬಾರವರೊಂದಿಗೆ ಮಲಗಲು ಬಾಬಾರವರು ಅನುಮತಿ ನೀಡುತ್ತಿರಲಿಲ್ಲ.     

ಒಮ್ಮೆ ಶಿರಡಿ ಗ್ರಾಮದಲ್ಲಿ ಭಯಂಕರವಾದ ಬಿರುಗಾಳಿ ಹಾಗೂ ಮಳೆ ಸುರಿಯಿತು. ಮಸೀದಿಯು ಹಳೆಯದಾಗಿದ್ದರಿಂದ ಭಕ್ತರು ಬಾಬಾರವರಿಗೆ ಚಾವಡಿಯಲ್ಲಿ ನಿದ್ರಿಸುವಂತೆ ಬೇಡಿಕೊಂಡರು. ಅವರುಗಳು ಎಷ್ಟೇ ಒತ್ತಾಯ ಮಾಡಿದರೂ ಬಾಬಾರವರು ಬಡಪಟ್ಟಿಗೆ ಒಪ್ಪಲಿಲ್ಲ. ಆಗ ನಾರಾಯಣ ತೇಲಿ ಎಂಬ ಭಕ್ತರೊಬ್ಬರು ಬಾಬಾರವರನ್ನು ಅನಾಮತ್ತಾಗಿ ಎತ್ತಿ ತಮ್ಮ ಹೆಗಲ ಮೇಲೆ ಹಾಕಿಕೊಂಡು ಬಾಬಾರವರು ಕೋಪದಿಂದ ಕಿರುಚಿಕೊಳ್ಳುತ್ತಿದ್ದರೂ ಲೆಕ್ಕಿಸದೇ ಅವರನ್ನು ಚಾವಡಿಗೆ ಕರೆತಂದರು. ಹಾಗಾಗಿ ಬಾಬಾರವರು ಆ ರಾತ್ರಿ ಚಾವಡಿಯಲ್ಲೇ ನಿದ್ರಿಸಿದರು. ಆ ದಿನದಿಂದ ಬಾಬಾರವರು ದಿನ ಬಿಟ್ಟು ದಿನ ಚಾವಡಿಯಲ್ಲಿ ನಿದ್ರಿಸಲು ಪ್ರಾರಂಭಿಸಿದರು. 

ಬಾಬಾರವರು ಚಾವಡಿಯ ಬಲಭಾಗದಲ್ಲಿ ಮಲಗುತ್ತಿದ್ದರು. ಚಾವಡಿಯ ಎಡ ಭಾಗದಲ್ಲಿ ಕೆಲವು ಭಕ್ತರು ಮಲಗಿಕೊಳ್ಳುತ್ತಿದ್ದರು. ಈ ಎರಡೂ ಭಾಗಗಳ  ನಡುವೆ ಕಬ್ಬಿಣದ ಸರಪಳಿಯನ್ನು ಹಾಕಿ ಬೇರ್ಪಡಿಸಲಾಗಿತ್ತು. ಬಾಬಾರವರು ಚಾವಡಿಯಲ್ಲಿ ಮಲಗುತ್ತಿದ್ದ ದಿನದಂದು ದೊಡ್ಡ ಉತ್ಸವವೇ ನಡೆಯುತ್ತಿತ್ತು. ರಾಧಾಕೃಷ್ಣ ಮಾಯಿ ಹಾಗೂ ಅಬ್ದುಲ್ ಬಾಬಾರವರು ಮಸೀದಿಯಿಂದ ಚಾವಡಿಯವರೆಗಿನ ರಸ್ತೆಯನ್ನು ಚೆನ್ನಾಗಿ ನೀರಿನಿಂದ ತೊಳೆದು ಶುಭ್ರಗೊಳಿಸಿ ಧೂಳು ಮೇಲೆಳದಂತೆ ನೋಡಿಕೊಳ್ಳುತ್ತಿದ್ದರು. ನಂತರ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ವಿವಿಧ ಬಗೆಯ  ರಂಗೋಲಿಯನ್ನು ಹಾಕಿ ಅಲಂಕರಿಸಲಾಗುತ್ತಿತ್ತು. ಬಾಬಾರವರು ನಡೆದು ಬರುತ್ತಿದ್ದ ಹಾದಿಯಲ್ಲಿ ಬಟ್ಟೆಯನ್ನು ಹಾಸಿ ಅವರಿಗೆ ರಾಜ ಮರ್ಯಾದೆ ನೀಡಲಾಗುತ್ತಿತ್ತು. ಇಷ್ಟೆಲ್ಲಾ ವ್ಯವಸ್ಥೆ ಮಾಡಿದ ನಂತರ ತಾತ್ಯಾರವರು ಮಸೀದಿಗೆ ಬಂದು  ಬಾಬಾರವರಿಗೆ ಎಬ್ಬಿಸಿ ಚಾವಡಿಗೆ ಹೊರಡಲು ತಯಾರಾಗುವಂತೆ  ಹೇಳುತ್ತಿದ್ದರು. ಆದರೆ ಬಾಬಾ ಅಲ್ಲಿಂದ ಮೇಲೆಳುತ್ತಿರಲಿಲ್ಲ. ಆಗ ತಾತ್ಯಾರವರು ತಮ್ಮ ಕೈಗಳನ್ನು ಬಾಬಾರವರ ತೋಳಿನ ಸುತ್ತಲೂ ಹಾಕಿದವರೇ ಅವರನ್ನು ಎಬ್ಬಿಸಿ ನಿಲ್ಲಿಸುತ್ತಿದ್ದರು. ಬಾಬಾರವರು ಹೊರಡುತ್ತಿದ್ದಂತೆ ಅವರ ಭುಜದ ಮೇಲೆ ಚಿನ್ನದ ಬಣ್ಣದ ಕಸೂತಿಯಿರುವ ಶಾಲನ್ನು ಹೊದಿಸುತ್ತಿದ್ದರು. ತಾತ್ಯಾರವರು ಬಾಬಾರವರ ಎಡಗಡೆಯಲ್ಲಿ ಹಾಗೂ ಮಹಾಳಸಾಪತಿಯವರು ಬಾಬಾರವರ ಬಲಗಡೆಯಲ್ಲಿ ನಡೆದುಕೊಂಡು ಚಾವಡಿಯವರೆಗೂ ಬರುತ್ತಿದ್ದರು. ಬಾಬಾರವರು ದ್ವಾರಕಾಮಾಯಿಯಿಂದ ಹೊರಡುವ ಮೊದಲು ಧುನಿಗೆ ಬೇಕಾದ ಕಟ್ಟಿಗೆಯನ್ನು ತಮ್ಮ ಬಲಗಾಲಿನಿಂದ ಹಾಕಿ ಉರಿಯುವಂತೆ ಮಾಡಿ, ತಮ್ಮ ಬಲಗೈನಿಂದ ದೀಪವನ್ನು ಆರಿಸಿ ನಂತರವಷ್ಟೇ ಚಾವಡಿಗೆ ಹೊರಡುತ್ತಿದ್ದರು. ತಾತ್ಯಾರವರು ಬಾಬಾರವರ ಎಡಗೈಯನ್ನೂ ಹಾಗೂ ಮಹಾಳಸಾಪತಿಯವರು ಬಾಬಾರವರ ಬಲಗೈಯನ್ನೂ ಹಿಡಿದುಕೊಂಡು ಅವರನ್ನು ಚಾವಡಿಗೆ ಕರೆತರುತ್ತಿದ್ದರು. 

ಬಾಬಾರವರು ದ್ವಾರಕಾಮಾಯಿಯ ಮೆಟ್ಟಿಲುಗಳನ್ನು ಇಳಿಯುತ್ತಿರುವಾಗ ಬಾಲಾಜಿ ಪಿಲಾಜಿ ಗುರವ್ ಶೆಹನಾಯ್ ವಾದ್ಯವನ್ನು ಬಾರಿಸುತ್ತಿದ್ದರು. ಭಕ್ತರೆಲ್ಲರೂ ಸೇರಿಕೊಂಡು ಭಜನೆ ಮಾಡಲು ಪ್ರಾರಂಭಿಸುತ್ತಿದ್ದರು. ಸುಂದರವಾಗಿ ಶೃಂಗರಿಸಿಕೊಂಡ ಶ್ಯಾಮಕರ್ಣ ಎಂಬ ಹೆಸರಿನ ಕುದುರೆಯು ಮೆರವಣಿಗೆಯ ಮುಂದಾಳತ್ವವನ್ನು ವಹಿಸಿಕೊಳ್ಳುತ್ತಿತ್ತು  ಅದರ ಹಿಂದೆಯೇ ಬಾಬಾರವರ ಪವಿತ್ರ  ಪಾದುಕೆಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ತರಲಾಗುತ್ತಿತ್ತು. ಮೆರವಣಿಗೆಯು ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ನೋಡಲು ಕಣ್ಣುಗಳಿಗೆ ಹಬ್ಬದಂತ್ತಿತ್ತು.  ಒಂದು ಕಡೆ ಸಂಗೀತ ವಾದ್ಯಗಳ ಮೊಳಗುವಿಕೆ, ಮತ್ತೊಂದು ಕಡೆ ಭಕ್ತರ ಭಜನೆ ಹಾಗೂ ಇನ್ನೊಂದು ಕಡೆ "ಸಾಯಿನಾಥ್ ಮಹಾರಾಜ್ ಕೀ ಜೈ" ಎಂಬ ಜಯಕಾರಗಳು ಮುಗಿಲನ್ನು ಮುಟ್ಟುತ್ತಿದ್ದವು. ಬ್ರಹ್ಮಾಂಡದ ರಾಜನಂತೆ ರಾಜಗಾಂಭೀರ್ಯದಿಂದ  ಬಾಬಾರವರು ಹೆಜ್ಜೆ ಹಾಕಿ ನೆಲಹಾಸುಗಳ ಮೇಲೆ ನೆಡೆದು ಬರುತ್ತಿದ್ದರೆ ಭಕ್ತರು ಅವರ ಮೇಲೆ ಹೂವುಗಳು ಹಾಗೂ ಬಣ್ಣದ ಪುಡಿಗಳನ್ನು ಎರೆಚುತ್ತಿದ್ದರು. ಬಾಬಾರವರು ನಿಧಾನವಾಗಿ ನಡೆಯುತ್ತಲೇ ಎಲ್ಲಾ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿಯನ್ನು ಹರಿಸಿ ಆಶೀರ್ವದಿಸುತ್ತಿದ್ದರು. ಬಾಬಾರವರ ತಲೆಯ ಮೇಲೆ ಬಣ್ಣದ ಕಸೂತಿಯನ್ನು ಮಾಡಿರುವ ಛತ್ರಿಯನ್ನು ಬಾಪು ಸಾಹೇಬ್ ಜೋಗ್ ರವರು ಹಿಡಿದು ಆಗಾಗ್ಗೆ ತಿರುಗಿಸುತ್ತಿದ್ದರು. ಬಾಬಾರವರು ಚಾವಡಿಯ ಹತ್ತಿರ ಬಂದ ಕೂಡಲೇ ಮಾರುತಿ ಮಂದಿರದ ಕಡೆಗೆ ತಿರುಗಿಕೊಂಡು ಅತೀಂದ್ರಿಯ ಚಿನ್ಹೆಗಳನ್ನು ಮಾಡುತ್ತಾ ತಮ್ಮ ಕೈಗಳನ್ನು ಆಡಿಸುತ್ತಿದ್ದರು. ಸಾಯಿಬಾಬಾರವರನ್ನು ಸ್ವಾಗತಿಸುವ ಸಲುವಾಗಿ ಚಾವಡಿಯನ್ನು ಬಣ್ಣ ಬಣ್ಣದ ದೀಪಗಳು ಹಾಗೂ ಕನ್ನಡಿಗಳಿಂದ ಶೃಂಗರಿಸಲಾಗಿರುತ್ತಿತ್ತು. ಬಾಬಾರವರು ಚಾವಡಿಯನ್ನು ತಲುಪಿದ ನಂತರ ತಾತ್ಯಾ ಮೊದಲು ಒಳಗೆ ಹೋಗಿ ಬಾಬಾರವರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನವನ್ನು ಸಿದ್ಧಪಡಿಸಿ ಅವರಿಗೆ ನಿಲುವಂಗಿಯನ್ನು ತೊಡಿಸುತ್ತಿದ್ದರು. ಆಗ ನಾನಾ ಸಾಹೇಬ್ ನಿಮೋಣ್ಕರ್  ರವರು ಬಾಬಾರವರ ತಲೆಯ ಮೇಲೆ ಛತ್ರಿಯನ್ನು ಹಿಡಿದು ತಿರುಗಿಸುತ್ತಿದ್ದರು. ಬಾಬಾರವರು ಬಾಗಿಲಿಗೆ ಎದುರಾಗಿ ಕುಳಿತುಕೊಳ್ಳುತ್ತಿದ್ದರು. ಜೋಗ್ ರವರು ಬಾಬಾರವರ ಪಾದಗಳನ್ನು ಬೆಳ್ಳಿಯ ತಟ್ಟೆಯಲ್ಲಿ ಇರಿಸಿ ಕಾಲುಗಳನ್ನು ತೊಳೆದು, ಚಂದನವನ್ನು ಲೇಪಿಸಿ ಅವರಿಗೆ ವಿಳ್ಳೆಯದೆಲೆ ಹಾಗೂ ಅಡಿಕೆಯನ್ನು ನೀಡುತ್ತಿದ್ದರು. ನಂತರ ಭಕ್ತರು ಬಾಬಾರವರ ಪಾದಗಳಿಗೆ ಎರಗಿ ಪ್ರಣಾಮಗಳನ್ನು ಸಲ್ಲಿಸುತ್ತಿದ್ದರು. ನಂತರ ಶ್ಯಾಮರವರು ಚಿಲುಮೆಯನ್ನು ಹೊತ್ತಿಸಿ ಬಾಬಾರವರಿಗೆ ನೀಡುತ್ತಿದ್ದರು. ಬಾಬಾರವರು ಆ ಚಿಲುಮೆಯನ್ನು ಒಂದೆರಡು ಬಾರಿ ಸೇದಿ ನಂತರ ಅದನ್ನು ಮಹಾಳಸಾಪತಿಯವರಿಗೆ ನೀಡುತ್ತಿದ್ದರು. ನಂತರ ಆ ಚಿಲುಮೆಯನ್ನು ಅಲ್ಲಿದ್ದ ಇತರ ಎಲ್ಲಾ  ಭಕ್ತರು ತೆಗೆದುಕೊಂಡು  ಸೇದುತ್ತಿದ್ದರು. ಕೊಂಡಾಜಿ ಕೆಲವು ವಿಳ್ಳೆಯದೆಲೆ ಹಾಗೂ ಅಡಿಕೆಯನ್ನು ಬಾಬಾರವರಿಗೆ ಅರ್ಪಿಸುತ್ತಿದ್ದರು. ಸಾಯಿಬಾಬಾರವರು ಸ್ವಲ್ಪವೇ ತಿಂದು ಉಳಿದುದನ್ನು ಅಲ್ಲಿದ್ದ ಭಕ್ತರಿಗೆ ನೀಡುತ್ತಿದ್ದರು. ನಂತರ ಚಾವಡಿಯಲ್ಲಿ ಶೇಜಾರತಿ ನಡೆಯುತ್ತಿತ್ತು. ಶೇಜಾರತಿಯಾದ ನಂತರ ಭಕ್ತರು ಬಾಬಾರವರ ಅಪ್ಪಣೆ ಪಡೆದು ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು. ಅಂತೆಯೇ ಬಾಬಾರವರು ಎಲ್ಲರಿಗೂ ಮನೆಗೆ ಹೋಗಲು ಅಪ್ಪಣೆ ನೀಡುತ್ತಿದ್ದರು. ಆದರೆ, ತಾತ್ಯಾರನ್ನು ಹತ್ತಿರಕ್ಕೆ ಕರೆದು  “ನೀನು ಈಗ ಹೋಗಲೇ ಬೇಕಾದಲ್ಲಿ ಹೋಗು. ಆದರೆ ರಾತ್ರಿ ಬಂದು ನನ್ನ ಯೋಗಕ್ಷೇಮ ನೋಡಿಕೋ” ಎಂದು ಹೇಳುತ್ತಿದ್ದರು. ತಾತ್ಯಾ ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿ ಬಾಬಾರವರ ಅಪ್ಪಣೆ ಪಡೆದು ಹೊರಡುತ್ತಿದ್ದರು. 

ಇಡೀ ಬ್ರಹ್ಮಾಂಡದ ನಾಯಕರಾಗಿ ವಿಶ್ವವನ್ನೇ ಕಾಪಾಡುತ್ತಿರುವ ಸಾಯಿಬಾಬಾರವರು ಮಾನವ ರೂಪವನ್ನು ಧಾರಣೆ ಮಾಡಿರುವುದರಿಂದ ಪ್ರಕೃತಿಯ ನಿಯಮವನ್ನು ಪಾಲಿಸಬೇಕಾಗಿರುವುದರಿಂದ ನಮಗೆ ನಿದ್ರಿಸಿದಂತೆ ಕಾಣಿಸುತ್ತಾರೆ.ಆದರೆ ನಿಜವಾಗಿ ಹೇಳಬೇಕೆಂದರೆ ಅವರು ಸದಾ ಎಚ್ಚರವಾಗಿ ತಮ್ಮ ದಯಾಪೂರಿತ ದೃಷ್ಟಿಯನ್ನು ನಮ್ಮ ಮೇಲೆ ಹರಿಸುತ್ತಲೇ ಇರುತ್ತಾರೆ. ಅವರು ತಮ್ಮ ಮಕ್ಕಳಂತೆ ನಮ್ಮ ಮೇಲೆ ದಯೆ ತೋರಿ ಎಂದೆಂದಿಗೂ ಕಾಪಾಡುತ್ತಾರೆ. (ಆಧಾರ:ಸಾಯಿ ಪಥಂ  ಪತ್ರಿಕೆ - ಮೇ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ 2001).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, June 17, 2014

ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ- ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿನಾಥ ಆಸ್ಪತ್ರೆಯು ಶ್ರೀ ಸಾಯಿಬಾಬಾ ಸಂಸ್ಥಾನ ಹಾಗೂ ಶಿರಡಿಯ ಲಯನ್ಸ್ ಕ್ಲಬ್ ನ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ 244 ರೋಗಿಗಳು ಪ್ರಯೋಜನ ಪಡೆಯುವುದರೊಂದಿಗೆ ಅತ್ಯಂತ ಯಶಸ್ವಿಯಾಯಿತು ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸುದ್ಧಿಗಾರರಿಗೆ ತಿಳಿಸಿದರು. 

ಶ್ರೀ ಸಾಯಿನಾಥ ಆಸ್ಪತ್ರೆಯು ಇದೇ ತಿಂಗಳ  4ನೇ ಜೂನ್ 2014 ರಿಂದ 6ನೇ ಜೂನ್ 2014 ರವರೆಗೆ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಿತ್ತು.  ಶಿರಡಿ ಸುತ್ತಮುತ್ತಲಿನ ಹಳ್ಳಿಗಳ ಒಟ್ಟು 244 ಅರ್ಹ ಹಾಗೂ ಬಡ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಅವರಲ್ಲಿ ಅಗತ್ಯವಿದ್ದ 108 ಬಡ ರೋಗಿಗಳಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಶ್ರೀ ಸಾಯಿನಾಥ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಸುನೀಲ್ ಸೊಂಟಕ್ಕೆಯವರು ಮಾಡಿದರು. ಅಲ್ಲದೇ ನಂತರ ನೆಡೆದ ಸಮಾರಂಭವೊಂದರಲ್ಲಿ ಅಗತ್ಯವಿರುವ  ರೋಗಿಗಳಿಗೆ ಶಿರಡಿಯ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಉಚಿತ ಕನ್ನಡಕದ ವಿತರಣೆಯನ್ನು ಮಾಡಲಾಯಿತು. ಶಿರಡಿ ಲಯನ್ಸ್ ಕ್ಲಬ್ ನ ಸದಸ್ಯರುಗಳಾದ ಡಾ.ಏಕನಾಥ್ ಗೋಂಡ್ಕರ್, ಶ್ರೀ.ವಸಂತ್ ಕದಂ ಹಾಗೂ ಶ್ರೀ.ವಿಶಾಲ್ ತಿಡಕೆಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.  

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಶ್ರೀ ಸಾಯಿನಾಥ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ ರಾವ್, ಡಾ.ಸಂಜಯ್ ಪಟಾರೆ, ಡಾ.ಸುನೀಲ್ ಸೊಂಟಕ್ಕೆ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಹಗಲು ರಾತ್ರಿ ಈ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಪಟ್ಟಿದ್ದರಿಂದ ಶಿಬಿರವು ಅತ್ಯಂತ ಯಶಸ್ವಿಯಾಗಿ ಸುಸಂಪನ್ನಗೊಂಡಿತು ಎಂದು ಶ್ರೀ.ಸೋನಾವಾನೆಯವರು ತಿಳಿಸಿದರು

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ